ಜುಲೈ 14ರವರೆಗೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆ
ಬೆಂಗಳೂರು, ಜುಲೈ 10: ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಚುರುಕುಗೊಂಡಿದ್ದು, ಜುಲೈ 14ರವರಗೆ ವಿವಿಧೆಡೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಕದ್ರಾ, ಹೊಸನಗರ, ಕೊಲ್ಲೂರು, ಗೋಕರ್ಣ, ಭಟ್ಕಳ, ಹೊನ್ನಾವರ, ಕಾರ್ಕಳ, ಜಮಖಂಡಿ, ಭಾಗಮಂಡಲ, ಸೊರಬ, ಮೂಡಿಗೆರೆ, ಮದ್ದೂರು, ಕುಂದಾಪುರ, ಮಾಲೂರು, ಬಂಗಾರಪೇಟೆ, ದೇವನಹಳ್ಳಿ, ಕನಕಪುರ, ಹುಕ್ಕೇರಿ, ಸಾಗರ, ಚಿಂತಾಮಣಿ, ಗೌರಿಬಿದನೂರು, ಹಾಗೂ ಕುಣಿಗಲ್ನಲ್ಲಿ ಮಳೆಯಾಗಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಶುಕ್ರವಾರ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆಯಾಗಬಹುದು.
ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಕೊಡಗು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆ: 3 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಆಗುತ್ತಿರುವುದರಿಂದ ಕಾರವಾರ, ಅಂಕೋಲಾ ಭಾಗದಲ್ಲಿ ಪ್ರವಾಹ ಬಂದೊದಗಿದೆ. ಏಕಾಏಕಿ ಸುರಿದ ಮಳೆ ಭಾರೀ ಪ್ರಮಾಣದಲ್ಲಿ ಅವಾಂತರ ಸೃಷ್ಟಿಸಿದೆ.
ಅಂಕೋಲಾ ತಾಲೂಕಿನ ಅವರ್ಸಾ, ಹಟ್ಟಿಕೇರಿ, ಕೇಣಿ, ಹಾರವಾಡ ಹೀಗೆ ವಿವಿಧ ಗ್ರಾಮಗಳಲ್ಲಿ ಮನೆಗೆ ನೀರು ನುಗ್ಗಿ ಭಾರೀ ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ಮನೆಯಲ್ಲಿ ಇದ್ದ ಲಕ್ಷಾಂತರ ರೂ ಮೌಲ್ಯದ ವಸ್ತುಗಳು ಮಳೆ ನೀರಿನಲ್ಲಿ ನೆಂದು ಹಾಳಾಗಿವೆ. ಸುಮಾರು ಐವತ್ತಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ಹಾನಿ ಸಂಭವಿಸಿದೆ.