ರಾಜ್ಯದಲ್ಲಿ ವರುಣಾಘಾತ: ಬೆಳೆ ನಾಶ-ರೈತ ಸಮೂಹ ಕಂಗಾಲು
ಬೆಂಗಳೂರು ನವೆಂಬರ್ 21: ರಾಜ್ಯದಲ್ಲಿ ವರುಣನ ಮುನಿಸಿಗೆ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಇನ್ನೇರಡು ದಿನ ರಾಜ್ಯದಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕಳೆದ ಕೆಲ ದಿನಗಳಿಂದ ಬೆಂಬಿಡದೆ ಸುರಿದ ಮಳೆಗೆ ಕೆಲ ಜಿಲ್ಲೆಗಳಲ್ಲಿ ಬೆಳೆ ನಾಶವಾಗಿದ್ದು ರೈತರು ಕಂಗಲಾಗಿದ್ದಾರೆ. ಬರಿದಾಗಿದ್ದ ನದಿಗಳು ತುಂಬಿ ಪ್ರವಾಹದಂತೆ ಹರಿದು ಜಮೀನಿಗೆ ನುಗ್ಗಿ ರೈತರು ಕಷ್ಟಪಟ್ಟು ಬೆಳೆದ ಬೆಳೆ ನೀರು ಪಾಲಾಗಿದೆ.
ಇದರಿಂದಾಗಿ ರೈತರು ಬೆಳೆ ಪರಿಹಾರ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಕೋಲಾರ, ಚಿತ್ರದುರ್ಗ, ರಾಮನಗರ, ದಾವಣಗೆರೆಯಲ್ಲಿ ಅಧಿಕ ಮಳೆಯಾಗಿದ್ದು ರೈತರ ಪಾಡು ಕೇಳುವವರು ಇಲ್ಲದಂತಾಗಿದೆ. ವರ್ಷವಿಡೀ ಕಷ್ಟಪಟ್ಟು ಬೆಳೆದ ಬೆಳೆ ಕಣ್ಣೆದುರು ನಾಶವಾಗುವುದನ್ನ ಕಂಡು ಬೆಳೆಗಾರರು ಕಣ್ಣೀರಾಗುತ್ತಿದ್ದಾರೆ. ಒಂದೆಡೆ ಬರಿದಾದ ನದಿಗಳು ತುಂಬಿದ ಸಂತಸ ಇನ್ನೊಂದೆಡೆ ಆಣೆಕಟ್ಟುಗಳು ಒಡೆದು ಮಳೆ ನೀರು ನುಗ್ಗುವ ಭೀತಿ ಎದುರಾಗಿದೆ.
ಭಾನುವಾರ ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ದಾವಣಗೆರೆ ಜಿಲ್ಲೆಗಳಲ್ಲಿ ಮಳೆ ಮುಂದುವರೆಯಲಿದೆ. ಕೆಲವು ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಲಿದ್ದು, ಇನ್ನೂ ಕೆಲವು ಕಡೆ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗಾಳಿಯ ವೇಗ ಪ್ರತಿ ಗಂಟೆಗೆ 40-50 ಕಿ. ಮೀ. ಇರಲಿದ್ದು, ಅದು 60 ಕಿ. ಮೀ. ತನಕ ಸಹ ತಲುಪುವ ನಿರೀಕ್ಷೆ ಇದೆ.
ಕೋಲಾರದಲ್ಲಿ ರೈತರು ಕಂಗಾಲು
ಕೋಲಾರದಲ್ಲಿ ಮಳೆಯ ಅಬ್ಬರಕ್ಕೆ ರೈತರು ಕಂಗಾಲಾಗಿದ್ದಾರೆ. ಕಳೆದ ಕೆಲವು ದಿನಗಳಲ್ಲಿಂದ ಸುರಿಯುತ್ತಿರುವ ಭಾರೀ ಮಳೆ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಲಕ್ಷಾಂತರ ನಷ್ಟವನ್ನು ಅನುಭವಿಸುವಂತ ಸ್ಥಿತಿ ನಿರ್ಮಾಣವಾಗಿದೆ. ವರುಣಾಘಾತಕ್ಕೆ ಅಪಾರ ಬೆಳೆ ನಾಶವಾಗಿದ್ದು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತ ಪರಿಸ್ಥಿತಿ ಎದುರಾಗಿದೆ. ಮಳೆಯ ಅನಾಹುತಕ್ಕೆ ಸಿಕ್ಕಿ ಹಲವೆಡೆ ಸಂಪೂರ್ಣ ತೋಟಗಳು ನಾಶವಾಗಿವೆ. ಅಧಿಕ ಮಳೆಗೆ ಮಳೆ ನೀರು ಜಮೀನಿನಲ್ಲಿ ನಿಂತು ಲಕ್ಷಾಂತರ ರೂಪಾಯಿ ಟೊಮ್ಯಾಟೋ ಜಮೀನನಲ್ಲೇ ಕೊಳೆಯುತ್ತಿದೆ. ನಿರಂತರ ಸುರಿದ ಮಳೆಗೆ ಟೊಮ್ಯಾಟೋ ಗಿಡದಲ್ಲೇ ಕೊಳೆತು ಹೋಗಿದೆ. ಸುಮಾರು ಏಳು ಹೆಕ್ಟರ್ ಪ್ರದೇಶದಲ್ಲಿ ಬೆಳೆ ನಾಶವಾಗಿದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ. ಇತಿಹಾಸದಲ್ಲೇ ಅತೀ ಹೆಚ್ಚು ಬೆಳೆ ದಾಖಲಾಗಿದ್ದು ಅಪಾರ ಬೆಳೆ ನಾಶವಾಗಿದೆ. ಟೊಮ್ಯಾಟೊ ಬೆಳೆ ಕೈತಪ್ಪಿ ಹೋಗಿದ್ದರಿಂದ ರೈತರು ಆತಂಕದಲ್ಲಿದ್ದಾರೆ. ಮಳೆ ರೈತರ ಜೀವನ ಮೇಲೆ ದೊಡ್ಡ ಹೊಡೆತ ಕೊಟ್ಟಿದ್ದು ಬೆಳೆಗೆ ಪರಿಹಾರ ನೀಡುವಂತೆ ರೈತರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಬೆಳೆ ನಾಶದಿಂದಾಗಿ ರಾಜ್ಯದಲ್ಲಿ ತರಕಾರಿ ಮತ್ತು ಸೊಪ್ಪುಗಳ ಬೆಲೆ ಅಧಿಕಗೊಂಡಿದೆ. ಗ್ರಾಹಕರ ಕೈಗೆಟುಕದ ರೀತಿಯಲ್ಲಿ ತರಕಾರಿ ಬೆಲೆ ಅಧಿಕಗೊಂಡಿದೆ.
ದಾವಣಗೆರೆ; ಮಳೆಯ ಹೊಡೆತಕ್ಕೆ ಅನ್ನದಾತರು ಕಂಗಾಲು
ಚಿತ್ರದುರ್ಗದಲ್ಲಿ ಜಮೀನು ಜಲಾವೃತ
ಚಿತ್ರದುರ್ಗದಲ್ಲಿ ಅಧಿಕ ಮಳೆಗೆ ಜಮೀನುಗಳು ಜಲಾವೃತಗೊಂಡಿವೆ. ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಮೊಳಕಾಲ್ಮೂರಿನ ತಾಲೂಕಿನ ಗ್ರಾಮಗಳಲ್ಲಿ ಶೇಂಗಾ, ಹಾನಗಲ್ನಲ್ಲಿ ಅಪಾರ ಮೆಣಸಿನಕಾಯಿ ನೀರು ಪಾಲಾಗಿದೆ. ಬೆಳೆ ಕಳೆದುಕೊಂಡ ರೈತರು ಬೆಳೆ ಪರಿಹಾರಕ್ಕೆ ಆಗ್ರಹಿಸಿದ್ದಾರೆ. ಇನ್ನೂ ಚಿತ್ರದುರ್ಗದಲ್ಲಿ ಚಿನ್ನಹಗರಿ ಹಳ್ಳ ಹಾಗೂ ಮೊಳಕಾಲ್ಮೂರು ಗಂಗಮ್ಮನ ಹಳ್ಳಿ ಜಲಪಾತ ಎರಡು ವರ್ಷದ ಬಳಿಕ ತುಂಬಿ ಹರಿಯುತ್ತಿದೆ. ಬಯಲು ಸೀಮೆಯಲ್ಲಿ ಹಳ್ಳ ಹಾಗೂ ಜಲಪಾತ ಉಕ್ಕಿ ಹರಿಯುತ್ತಿದ್ದು ಪರಿಸರ ಪ್ರಿಯರು ನೋಡಲು ಆಗಮಿತ್ತಿದ್ದಾರೆ.ಕೋಟೆ ನಾಡು ಚಿತ್ರದುರ್ಗದಲ್ಲಿ ತೆಂಗಿನ ಗೌರಸಮುದ್ರ ಕೆರೆ ಕೋಡಿ ಬಿದ್ದಿತ್ತು. ಸದ್ಯ ತುಂಬಿ ಹರಿದು ಬೆಳೆ ನಾಶವಾಗಿದೆ.
ಕರ್ನಾಟಕ; ನವೆಂಬರ್ 23ರ ಬಳಿಕ ತಗ್ಗಲಿದೆ ಮಳೆ ಆರ್ಭಟ
ರಾಮನಗರ ಮಂಚೇನಹಳ್ಳಿ ಕೆರೆ ರಿಪೇರಿ
ಮಂಚನಬೆಲೆ ಜಲಾಶಯಕ್ಕೆ ಒಳಹರಿವು ಹೆಚ್ಚಾಗುತ್ತಿದ್ದು ಜಲಾಶಯದ ನೀರಿನ ಮಟ್ಟ ಗರಿಷ್ಟ ಮಟ್ಟವನ್ನು ತಲುಪಿರುತ್ತದೆ. ಆದರೆ ಮಂಚಿನಬೆಲೆ ಡ್ಯಾಂ ಸೋರುತ್ತಿರುವುತ್ತಿರುವುದರಿಂದ ಸ್ಥಳೀಯರಲ್ಲಿ ಆತಂಖ ಹೆಚ್ಚಾಗಿದೆ. ಹೀಗಾಗಿ ಸ್ವತ: ಸ್ಥಳೀಯರು ರಾತ್ರೋ ರಾತ್ರಿ ಡ್ಯಾಂ ರೀಪೇರಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಟ್ರ್ಯಾಕ್ಟರ್ ಹಾಗೂ ಜೆಸಿಬಿ ತಂದು ಮರಳು ತುಂಬಿದ ಚೀಲಗಳಿಂದ ಕೆರೆ ಕಟ್ಟೆ ರಿಪೇರಿ ಮಾಡಿದ್ದಾರೆ.
ಚಿತ್ರದುರ್ಗ ವಿಶೇಷ; ಕೈಕೊಟ್ಟ ಮಳೆ, ಸ್ಪಿಂಕ್ಲರ್ ಮೊರೆ ಹೋದ ರೈತ
ದಾವಣೆಗೆರೆ ಮಳೆ ನಿಂತರೂ ನಿಲ್ಲದೆ ಪ್ರವಾಹ
ದಾವಣೆಗೆರೆಯಲ್ಲಿ ಮಳೆ ನಿಂತರೂ ಪ್ರವಾಹ ನಿಲ್ಲುತ್ತಿಲ್ಲ. ಸಾವಿರಾರು ಎಕರೆ ಅಡಿಕೆ ತೋಟದಲ್ಲಿ ನೀರು ನಿಂತು ರೈತರಿಗೆ ದೊಡ್ಡ ಸಮಸ್ಯೆ ಎದುರಾಗಿದೆ. ಅಡಿಕೆ ತೋಟಗಳಲ್ಲಿ ಮೊಣಕಾಲುವರೆಗೆ ನೀರು ನಿಂತು ನದಿಗಳಂತಾಗಿವೆ. ಚನ್ನಗಿರಿಯ ಸೋಮಶೇಟ್ಟಿ ಹಳ್ಳಿಯಲ್ಲಿ ಬಹುತೇಕ ಅಡಿಕೆ ತೋಟಗಳು ಜಲಾವೃತವಾಗಿದ್ದಯ ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ. "ನಿರಂತರ ಮಳೆಗೆ ಗಿಡದಲ್ಲೇ ಅಡಿಕೆ ಕೊಳೆತು ಹೋಗುತ್ತಿದೆ. ಕೆಲ ಅಡಿಕೆ ನೆಲಸಮವಾಗಿದೆ. ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ನೀರು ನಿಂತು ಅಡಿಕೆ ಕೆಳಗಿಳಿಸಲು ಸಾಧ್ಯವಾಗದಂತ ಸ್ಥಿತಿ ಇದೆ. ಉತ್ತಮ ದರ ಇದ್ದರೂ ಕೂಡ ಅಡಿಕೆ ಮಾರಾಟಕ್ಕೆ ತೊಂದರೆಯುಂಟಾಗಿದೆ. ಜೊತೆಗೆ ತೆಂಗಿನ ಕಾಯಿ ಕೂಡ ಹಾಳಾಗಿದೆ" ಸ್ಥಳೀಯ ರೈತರೊಬ್ಬರು ಹೇಳಿಕೊಂಡಿದ್ದಾರೆ. ಸಾಸ್ವೆಹಳ್ಳಿ, ಹುಣಸೇಹಳ್ಳಿಯಲ್ಲಿ ಮಳೆ ಹಾಗೂ ಗಾಳಿಗೆ 50 ರೈತರ 120 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಮೆಕ್ಕೆಜೋಳ ನೆಲಕಚ್ಚಿದೆ. ಜಗಳೂರು, ಚನ್ನಗಿರಿ, ಹೊನ್ನಾಳಿ, ನ್ಯಾಮತಿ, ಮಾಯಕೊಂಡ ಸೇರಿದಂತೆ ಹಲವೆಡೆ ಬೆಳೆದಿದ್ದ ಹತ್ತು ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶದ ಬೆಳೆ ಹಾನಿಗೀಡಾಗಿದೆ.
ಇನ್ನೂ ದಾವಣಗೆರೆಯಲ್ಲಿ ಏಕಕಾಲಕ್ಕೆ 30ಕ್ಕೂ ಹೆಚ್ಚು ಕೆರೆಗಳು ಭರ್ತಿಯಾಗಿವೆ ಎಂದು ಅಂದಾಜಿಸಲಾಗಿದೆ. ಸುಮಾರು ಮೂವತ್ತು ವರ್ಷಗಳ ಬಳಿಕ ಈ ಕೆರೆಗಳು ತುಂಬಿರುವುದನ್ನ ಸ್ಥಳೀಯರು ಹೇಳಿಕೊಂಡಿದ್ದಾರೆ. ಚನ್ನಗಿರಿ ಕೆರೆಗಳು ತುಂಬಿ ಹರಿಯುತ್ತಿವೆ. ಆರು ಕೆರೆಗಳು ಜಲಪಾದಂತೆ ಉಕ್ಕಿ ಕರಿಯುತ್ತಿವೆ. ಹೆಚ್ಚಿನ ಪ್ರಮಾಣದಲ್ಲಿ ಜಮೀನಿಗೆ ನೀರು ಹರಿದು ಹೋಗುತ್ತಿವೆ. ಸಾವಿರಾರು ಎಕ್ಕರೆ ಬೆಳೆ ಹಾಳಾಗಿದೆ. ಜೊತೆಗೆ ಹಿಂದೆಂದು ಕಾಣದ ಜಲಪಾತದ ಅದ್ಬುತ ದೃಶ್ಯವನ್ನು ನೋಡಲು ಸುತ್ತಲು ಗ್ರಾಮಸ್ಥರು ಆಗಮಿಸುತ್ತಿದ್ದಾರೆ.
Recommended Video