ಕರ್ನಾಟಕದ 16 ಜಿಲ್ಲೆಗಳಲ್ಲಿ ಮತ್ತೆ ವರುಣನ ಆರ್ಭಟ
ಬೆಂಗಳೂರು, ಅಕ್ಟೋಬರ್ 21: ಒಂದು ಕಡೆ ಭೀಮೆ ಪ್ರವಾಹದ ಮಟ್ಟ ಇಳಿಮುಖವಾಗುತ್ತಿದೆ,ಆದರೆ ಮತ್ತೊಂದು ಕಡೆ ಉತ್ತರ ಕರ್ನಾಟಕದಲ್ಲಿ ಮತ್ತೆ ಮಳೆ ಆರಂಭವಾಗಿರುವುದು ಜನರಲ್ಲಿ ಆತಂಕ ಮೂಡಿಸಿದೆ.
ಹವಾಮಾನ ಇಲಾಖೆ ಮುನ್ಸೂಚನೆ ನೀಡಿದಂತೆ ಉತ್ತರ ಕರ್ನಾಟಕ ಭಾಗದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ರಾಯಚೂರು, ಕಲಬುರಗಿ, ಗದಗ, ಧಾರವಾಡ, ಕೊಪ್ಪಳ,ಬಳ್ಳಾರಿ, ಹಾವೇರಿ, ಮಧ್ಯ ಕರ್ನಾಟಕ ಭಾಗದ ದಾವಣಗೆರೆ, ಚಿತ್ರದುರ್ಗ ಹಾಗೂ ಉತ್ತರ ಕನ್ನಡ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮಳೆಯಾಗಿದೆ.
ಪ್ರವಾಹಪೀಡಿತ 4 ಜಿಲ್ಲೆಗಳಲ್ಲಿ ಅ.21ಕ್ಕೆ ಸಿಎಂ ವೈಮಾನಿಕ ಸಮೀಕ್ಷೆ
ಬೆಂಗಳೂರು ಜಿಲ್ಲೆಗಳಲ್ಲಿ ಮಳೆಯಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಬೆಳಗಿನ ಜಾವ ಆರಂಭವಾದ ಮಳೆ ಸಂಜೆಯವರೆಗೂ ಮುಂದುವರೆದಿದ್ದರೆ, ಬಳ್ಳಾರಿ ಹಾಗೂ ಗದಗದಲ್ಲಿ ಸಮಾರು ಒಂದೂವರೆ ಗಂಟೆ ಕಾಲ ಧಾರಾಕಾರ ಮಳೆ ಸುರಿದಿದೆ.
ಎಲ್ಲೆಲ್ಲಿ ಯೆಲ್ಲೋ ಅಲರ್ಟ್ ಘೋಷಣೆ
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಮತ್ತು ಗಾಳಿಯ ತೀವ್ರತೆ ಮುಂದುವರಿದ ಪರಿಣಾಮ ರಾಜ್ಯದ ವಿವಿಧೆಡೆ ಅಕ್ಟೋಬರ್ 23ರವರೆಗೆ ಸಾಧಾರಣದಿಂದ ಭಾರಿ ಮಳೆ ಬೀಳುವ ನಿರೀಕ್ಷೆ ಇದೆ. ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ನಿರೀಕ್ಷೆ ಇದೆ. ಉತ್ತರ ಒಳನಾಡು, ದಕ್ಷಿಣ ಒಳನಾಡು ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ನೀಡಲಾಗಿದೆ.
1.70 ಲಕ್ಷ ಕ್ಯೂಸೆಕ್ ಒಳಹರಿವು
ಕಲಬುರಗಿ ಜಿಲ್ಲೆಯ ಅಫಜಲ್ಪುರ ತಾಲೂಕಿನ ಸೊನ್ನ ಜಲಾಶಯದಿಂದ ಸದ್ಯ 1.70 ಲಕ್ಷ ಕ್ಯೂಸೆಕ್ ನೀರನ್ನು ಭೀಮಾ ನದಿಗೆ ಹರಿಸಲಾಗುತ್ತಿದೆ. ಎರಡು ದಿನಗಳ ಹಿಂದೆ ಈ ಜಲಾಶಯದಿಂದ 3 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿದುಬರುತ್ತಿದ್ದು,ಭೀಮಾ ನದಿಯ ಅಬ್ಬರಕ್ಕೆ ಕಲಬುರಗಿ, ಯಾದಗಿರಿ,ವಿಜಯಪುರ ಜಿಲ್ಲೆಗಳಲ್ಲಿ ಈಗಾಗಲೇ 43 ಸಾವಿರಕ್ಕೂ ಹೆಚ್ಚು ಮಂದಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಂಡಿದ್ದಾರೆ. ಇದೀಗ ಪ್ರಹಾದ ಮಟ್ಟ ಇಳಿಮುಖವಾಗುತ್ತಿದೆ.
ತುಂಬಿನಿಂತ ರಸ್ತೆಗಳು
ನಗರದಲ್ಲಿ ಮಂಗಳವಾರ ಸುರಿದ ಧಾರಾಕಾರ ಮಳೆಗೆ ಮಲ್ಲತ್ತಹಳ್ಳಿ, ರಾಜರಾಜೇಶ್ವರಿನಗರ,ವಿಶ್ವೇಶ್ವರ ಲೇಔಟ್, ಗೋವಿಂದರಾಜನಗರ ಸೇರಿದಂತೆ ಹಲವು ಪ್ರದೇಶಗಳು ಜಲಾವೃತಗೊಂಡಿದ್ದವು. ಮೈಸೂರು ರಸ್ತೆಯ ಬಿಜಿಎಸ್ ಮೇಲ್ಸೇತುವೆ ಮೇಲ್ಭಾಗದಲ್ಲಿ ಭಾರಿ ಪ್ರಮಾಣದ ನೀರು ಶೇಖರಣೆಯಾಗಿ ವಾಹನ ಸವಾರರು ಪರದಾಡುವಂತಾಯಿತು. ವಿಜಯನಗರ, ವಿಲ್ಸನ್ ಗಾರ್ಡನ್, ನಾಯಂಡಹಳ್ಳಿ ಜಂಕ್ಷನ್, ಮೆಜೆಸ್ಟಿಕ್, ಕೆಆರ್ ಮಾರುಕಟ್ಟೆ, ಕಾರ್ಪೊರೇಷನ್, ಶಾಂತಿನಗರ ಸೇರಿದಂತೆ ಹಲವು ರಸ್ತೆಗಳ ಮೇಲೆ ಎರಡು ಅಡಿಗೂ ಹೆಚ್ಚು ನೀರು ಕಂಡುಬಂತು.
ಮುಂದಿನ 2 ದಿನ ಭಾರಿ ಮಳೆ
ಮುಂದಿನ ಎರಡು ದಿನಗಳ ಕಾಲ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೀದರ್, ಬೆಳಗಾವಿ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿಯಲ್ಲಿ ಮಳೆಯಾಗಲಿದೆ.
Recommended Video