ಕರ್ನಾಟಕದಲ್ಲಿ ಮುಂಗಾರು ಮಳೆ ಆರಂಭ; ಜೂ. 26ರ ತನಕ ಮಳೆ
ಬೆಂಗಳೂರು, ಜೂನ್ 23: ಕರ್ನಾಟಕದ ಕೆಲವು ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಕರಾವಳಿ ಜಿಲ್ಲೆಗಳಲ್ಲಿ ಅಧಿಕ ಮಳೆ ದಾಖಲಾಗಿದ್ದು, ಜೂನ್ 26ರ ತನಕ ಕರಾವಳಿ ಭಾಗದಲ್ಲಿ ಭಾರೀ ಮಳೆ ಮುನ್ಸೂಚನೆ ನೀಡಲಾಗಿದೆ.
ಭಾರತೀಯ ಹವಾಮಾನ ಇಲಾಖೆ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಗುಡುಗು ಸಹಿತ ಜೋರು ಮಳೆ ಅಬ್ಬರಿಸಲಿದೆ ಎಂದು ಹೇಳಿದೆ. ಈ ಮೂರು ಜಿಲ್ಲೆಗಳಿಗೆ ಗುರುವಾರದಿಂದ 4 ದಿನ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಜೂನ್ 26ರ ನಂತರ ಕರಾವಳಿಯಲ್ಲಿ ಭಾಗದಲ್ಲಿ ಮಳೆ ಆರ್ಭಟ ತುಸು ಇಳಿಕೆ ಆಗಲಿದೆ. ಉತ್ತರ ಒಳನಾಡಿನ ಭಾಗದಲ್ಲಿ ಭಾರೀ ಮಳೆ ಆಗುವ ಸಾಧ್ಯತೆ ಇದೆ. ಪ್ರತಿ ಗಂಟೆಗೆ ಸುಮಾರು 40 ರಿಂದ 50 ಕಿ. ಮೀ. ವೇಗದಲ್ಲಿ ಗಾಳಿ ಬೀಸಲಿದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.
ಉತ್ತಮ ಮಳೆ; ಕರಾವಳಿ ಭಾಗದಲ್ಲಿ ಬುಧವಾರ ಉತ್ತಮ ಮಳೆ ಸುರಿದಿದೆ. ಭಟ್ಕಳ, ಹೊನ್ನಾವರ, ಸಿದ್ಧಾಪುರ, ಹಳಿಯಾಳ, ಕುಮಟಾ ಪ್ರದೇಶಗಳಲ್ಲಿ ಧಾರಕಾರವಾಗಿ ಮಳೆಯಾಗಿದೆ. ಕಾರವಾರ, ಶಿರಸಿ, ಅಂಕೋಲಾದ ಕೆಲವು ಕಡೆ ಆಗಾಗ ಸಾಧಾರಣ ಮಳೆ ಆಗಿದೆ. ಮೋಡ ಕವಿದ ಮತ್ತು ತಂಪು ವಾತಾವರಣವಿತ್ತು. ಕುಮಟಾ ಹಾಗೂ ಹಳಿಯಾಳದಲ್ಲಿ ತಲಾ ಒಂದು ಮನೆಗೆ ಮಳೆಯಿಂದ ಹಾನಿಯಾಗಿದೆ.
ಕರಾವಳಿ ಭಾಗ; ಉಡುಪಿ, ದಕ್ಷಿಣ ಕನ್ನಡದ ಕೆಲವು ಭಾಗದಲ್ಲಿ ಬುಧವಾರ ಆಗಾಗ ಜೋರು ಮಳೆ ಸುರಿದ ಬಗ್ಗೆ ವರದಿಯಾಗಿದೆ. ಬೆಳಗ್ಗೆಯಿಂದಲೂ ಮೋಡ ಮುಸುಕಿದ ವಾತಾವರಣವಿತ್ತು. ಆಗಾಗ ವೇಗದ ಗಾಳಿ ಸಹಿತ ವರ್ಷಧಾರೆಯ ಸಿಂಚನವಾಗಿದೆ. ಉಡುಪಿಯ ಮರ್ಣೆ ಗ್ರಾಮದಲ್ಲಿ ಮನೆ ಮೇಲ್ಛಾವಣಿ ಕುಸಿದಿದೆ. ಶಿರೂರಿನಲ್ಲಿ 8.5 ಸೆಂ.ಮೀ. ಮಳೆ ದಾಖಲಾಗಿದೆ. ಹೀಗೆ ಮಳೆ ಮುಂದುವರಿದರೆ ಸಮುದ್ರದ ಅಲೆಗಳ ದೈತ್ಯ ರೂಪ ಪಡೆದು ಕಡಲ್ಕೊರೆತ ಉಂಟಾಗುವ ಆತಂಕವೂ ಇದೆ.
ಚಿಕ್ಕಮಗಳೂರು ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಉತ್ತಮ ಮಳೆ ದಾಖಲಾಗಿದೆ. ಮೂಡಿಗೆರೆ, ಕೊಪ್ಪ, ಕಳಸ, ಆಲ್ದೂರು, ತೆರಿಕೆರೆ ಸೇರಿದಂತೆ ಕೆಲವು ಕಡೆ ಮಳೆ ಸುರಿದು ಸಂಚಾರಕ್ಕೆ ತೊಂದರೆ ಉಂಟಾಗಿತ್ತು.
ಕೊಡಗಿನ ಗೋಣಿಕೊಪ್ಪಲು, ಪೊನ್ನಂಪೇಟೆ, ಹುದಗೇರಿ, ಬಿ.ಶೆಟ್ಟಿಗೆರಿ ಮತ್ತು ಹಾತೂರು ಸುತ್ತಮುತ್ತಲೂ ಸಾಧಾರಣದಿಂದ ಉತ್ತಮ ಮಳೆಯಾಗಿದೆ. ರಸ್ತೆ ಸೇರಿದಂತೆ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನಿಂತಿತ್ತು.
2 ದಿನ ಯೆಲ್ಲೋ ಅಲರ್ಟ್; ಉತ್ತರ ಒಳನಾಡಿನ ಹುಬ್ಬಳ್ಳಿ, ಬೆಳಗಾವಿ ಸುತ್ತಮುತ್ತ ಬುಧವಾರ ಸಾಧಾರಣ ಮಳೆ ಯಾದರೆ, ಇನ್ನು ಕೆಲವೆಡೆ ಮೋಡ ಮುಸುಕಿದ ವಾತಾವರಣ ಇದ್ದು, ಅಲ್ಲಲ್ಲಿ ಸೋನೆ ಮಳೆ ಬಿದ್ದಿದೆ.
ಬೀದರ್, ಕಲಬುರಗಿ, ರಾಯಚೂರು, ಬೆಳಗಾವಿ, ಬಾಗಲಕೋಟೆ, ಧಾರವಾಡ, ವಿಜಯಪುರ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಜೂ.25 ಮತ್ತು ಜೂ.26 ರಂದು ಗುಡುಗು ಸಹಿತ ಭಾರೀ ಮಳೆ ನಿರೀಕ್ಷೆ ಇದೆ. ಎರಡು ದಿನ 'ಯೆಲ್ಲೋ ಅಲರ್ಟ' ಎಚ್ಚರಿಕೆ ನೀಡಲಾಗಿದೆ. ಈ ಭಾಗದಲ್ಲಿ ಈಗಾಗಲೇ ಕೃಷಿ ಚಟುವಟಿಕೆಗಳು ಆರಂಭವಾಗಿವೆ.