ಕರಾವಳಿ, ಮಲೆನಾಡಿನಲ್ಲಿ ಐದು ದಿನ ಮಳೆ ಆರ್ಭಟ ಸಾಧ್ಯತೆ
ಬೆಂಗಳೂರು, ಜೂನ್ 21: ಮುಂದಿನ ಐದು ದಿನಗಳಲ್ಲಿ ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮಳೆ ಆರ್ಭಟ ಜೋರಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಶುಕ್ರವಾರ ರಾಜ್ಯದ ವಿವಿಧೆಡೆ ಮುಂಗಾರು ಚುರುಕುಗೊಂಡಿದೆ. ಮಲೆನಾಡು ಮತ್ತು ಕರಾವಳಿಯಲ್ಲಿ ನಿರೀಕ್ಷಿತ ಮಳೆಯಾಗುತ್ತಿಲ್ಲ. ಮುಂದಿನ ಐದು ದಿನಗಳಲ್ಲಿ ಮಳೆ ಈ ಭಾಗಗಳತ್ತ ಕರುಣೆ ತೋರಿಸುವ ನಿರೀಕ್ಷೆಯಿದೆ. ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು ಮತ್ತು ಬೆಂಗಳೂರು ನಗರ ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಆದರೆ, ಐದು ದಿನಗಳ ಬಳಿಕ ಮತ್ತೆ ಮುಂಗಾರು ಕ್ಷೀಣಗೊಳ್ಳಲಿದೆ.
ದೇಶದಲ್ಲಿ 2030ರ ಹೊತ್ತಿಗೆ ಶೇ.40ರಷ್ಟು ಮಂದಿಗೆ ಕುಡಿಯೋಕು ನೀರಿರೊಲ್ಲ
ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳಲ್ಲಿ 65 ಮಿಮೀಗೂ ಅಧಿಕ ಮಳೆಯಾಗುವ ನಿರೀಕ್ಷೆಯಿದೆ. ಕರಾವಳಿಯ ಎಲ್ಲ ಜಿಲ್ಲೆಗಳಲ್ಲಿಯೂ ಭಾರಿ ಮಳೆಯಾಗಲಿದೆ.
ಜೂನ್ 23ರಿಂದ 24ರವರೆಗೆ ಕರಾವಳಿಯಲ್ಲಿ ಅಲ್ಲಲ್ಲಿ ವಿಪರೀತ ಮಳೆಯಾಗಲಿದೆ. ಮಲೆನಾಡು ಮತ್ತು ದಕ್ಷಿಣ ಒಳನಾಡಿನ ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆ ಆರ್ಭಟಿಸಲಿದ್ದು, 115 ಮಿಮೀಗೂ ಅಧಿಕ ಮಳೆಯಾಗಲಿದೆ.
ಚೆನ್ನೈನಲ್ಲಿ ಇನ್ನೂ ಒಂದು ದಿನ ಮಳೆ, ಬಳಿಕ ಮತ್ತೆ ಒಣಹವೆ ಮುಂದುವರಿಕೆ
ಜೂನ್ 24ರಂದು ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಗ್ರಾಮಾಂತರ, ಮಂಡ್ಯ, ಚಾಮರಾಜನಗರ ಮತ್ತು ಮೈಸೂರಿನಲ್ಲಿ 65 ಮಿಮೀಯಷ್ಟು ಮಳೆ ಸುರಿಯಲಿದೆ. ಜೂನ್ 25ರಂದು ಮಳೆ ರಾಜ್ಯದಾದ್ಯಂತ ವಿಸ್ತರಿಸಲಿದೆ. ಆದರೆ, ಬಳಿಕ ಮಳೆ ತೀರಾ ದುರ್ಬಲಗೊಳ್ಳಲಿದೆ. ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ವಾಡಿಕೆಗಳಿಂದಲೂ ತೀರಾ ಕಡಿಮೆ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೈಸೂರು, ಧಾರವಾಡ, ಯಾದಗಿರಿ ಜಿಲ್ಲೆಯ ವಿವಿಧೆಡೆ ಶುಕ್ರವಾರ ಮಳೆಯಾಗಿದೆ. ಜೂನ್ ಅಂತ್ಯಕ್ಕೆ ಶೇ 25ರಷ್ಟು ಮಳೆಗಾಲ ಮುಗಿಯಬೇಕು. ಆದರೆ, ರಾಜ್ಯದಲ್ಲಿ ಜೂನ್ 14ರಂದು ಮುಂಗಾರು ಪ್ರವೇಶಿಸಿದ್ದರೂ, ಇನ್ನೂ ಮಳೆಗಾಲದ ಲಕ್ಷಣ ಕಾಣಿಸುತ್ತಿಲ್ಲ.