ಉತ್ತರಾಖಂಡದಲ್ಲಿ ಮಳೆ; 60 ಕನ್ನಡಿಗರು ಸುರಕ್ಷಿತ
ಬೆಂಗಳೂರು, ಅಕ್ಟೋಬರ್ 20; ಉತ್ತರಾಖಂಡದಲ್ಲಿ ಸುರಿಯುತ್ತಿರುವ ಮಳೆ ಅವಾಂತರ ಸೃಷ್ಟಿಸಿದೆ. ಇದುವರೆಗೂ 46 ಜನರು ಮೃತಪಟ್ಟಿದ್ದು, 11 ಜನರು ನಾಪತ್ತೆಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಲೇ ಇದೆ. ವಿವಿಧ ರಾಜ್ಯಗಳ ಜನರು, ಯಾತ್ರಾರ್ಥಿಗಳು ಮಳೆಯ ಕಾರಣ ಅಲ್ಲೇ ಸಿಲುಕಿದ್ದಾರೆ.
ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ವಿವಿಧ ರಾಜ್ಯಗಳಿಂದ ಉತ್ತರಾಖಂಡಕ್ಕೆ ಪ್ರವಾಸ ಹೋಗಿದ್ದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕರ್ನಾಟಕದಿಂದ 60 ಯಾತ್ರಿಗಳು ಮಳೆಯ ಕಾರಣ ಅಲ್ಲಿ ಸಿಲುಕಿಕೊಂಡಿದ್ದಾರೆ. ಕರ್ನಾಟಕದಿಂದ ಉತ್ತರಾಖಂಡದ ಚಾರ್ಗಾಂಗ್, ಗಂಗಾಘಾಟ್, ಸೂನ್ನಲ್ಲಿ ಕೆಲವು ಕನ್ನಡಿಗರು ಸಿಲುಕಿದ್ದಾರೆ. 60 ಕನ್ನಡಿಗರು ಅಲ್ಲಿ ಸಿಲುಕಿದ್ದು, ಸದ್ಯಕ್ಕೆ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಮಳೆ ಅಬ್ಬರ; 119 ಅಡಿ ತಲುಪಿದ ಕೆಆರ್ಎಸ್ ನೀರಿನ ಮಟ್ಟ
ವಿದ್ಯುತ್ ಕಡಿತ, ಮೊಬೈಲ್ ಟವರ್ಗಳಿಗೆ ಹಾನಿಯಾದ ಹಿನ್ನಲೆಯಲ್ಲಿ ಎಲ್ಲರೂ ಸಂಪರ್ಕಿಸಲು ಸಾಧ್ಯವಾಗಿಲ್ಲ. ಇದುವರೆಗೂ 60 ಜನರು ಕರ್ನಾಟಕ ಸರ್ಕಾರದ ಸಹಾಯವಾಣಿಗೆ ಕರೆ ಮಾಡಿದ್ದು ಸುರಕ್ಷಿತವಾಗಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ. ಉತ್ತರಾಖಂಡದಲ್ಲಿ ಮಳೆಯ ಅಬ್ಬರ ಕಡಿಮೆಯಾಗುತ್ತಿದೆ. ಆದರೆ ಗುಡ್ಡ ಕುಸಿತದ ಕಾರಣ ಹಲವಾರು ಕಡೆ ರಸ್ತೆಗಳು ಬಂದ್ ಆಗಿವೆ. ರಸ್ತೆಯಲ್ಲಿ ವಾಹನ ಸಂಚಾರ ಆರಂಭವಾದ ಬಳಿಕ ಎಲ್ಲರೂ ಕರ್ನಾಟಕಕ್ಕೆ ವಾಪಸ್ ಆಗಲಿದ್ದಾರೆ.
ಉತ್ತರಾಖಂಡ ಮಳೆ: ಜನಜೀವನ ಅಸ್ತವ್ಯಸ್ತ, ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ
ಸಹಾಯವಾಣಿ ಆರಂಭ; ಉತ್ತರಾಖಂಡ ರಾಜ್ಯದಲ್ಲಿ ಉಂಟಾಗಿರುವ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಕರ್ನಾಟಕದ ಪ್ರಯಾಣಿಕರು, ಯಾತ್ರಿಕರನ್ನು ಕರೆತರಲು ರಾಜ್ಯ ಸರ್ಕಾರವು ಸಹಾಯ ಕೇಂದ್ರವನ್ನು ಆರಂಭಿಸಿದೆ. ಪ್ರವಾಹ ಪೀಡಿತ ಸ್ಥಳಗಳಲ್ಲಿ ಸಿಲುಕಿರುವವರ ಕುಟುಂಬದವರು, ಈ ಸಹಾಯವಾಣಿಯನ್ನು ಸಂಪರ್ಕಿಸಿ ನೆರವು ಪಡೆಯಬಹುದು ಎಂದು ಕಂದಾಯ ಇಲಾಖೆ ಹೇಳಿದೆ.
ಉತ್ತರಾಖಂಡ ಮಳೆ: ಮೃತರ ಸಂಖ್ಯೆ 34 ಕ್ಕೆ ಏರಿಕೆ, ಸಂತ್ರಸ್ತರಿಗೆ ಪರಿಹಾರ ಘೋಷಿಸಿದ ಸಿಎಂ
ಕರ್ನಾಟಕ ರಾಜ್ಯ ತುರ್ತು ನಿರ್ವಹಣಾ ಕೇಂದ್ರದ 080 -1070 ಹಾಗೂ 080-2234 0676 ಸಂಖ್ಯೆಗೆ ಕರೆ ಮಾಡಿ ಜನರು ನೆರವು ಪಡೆಯಬಹುದು. ಈ ಸಹಾಯವಾಣಿ 24*7 ಕಾರ್ಯನಿರ್ವಹಿಸಲಿದ್ದು, ಯಾವುದೇ ಸಮಯದಲ್ಲಿ ಕರೆ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
46 ಜನರು ಸಾವು; ಮೂರು ದಿನಗಳಿಂದ ಉತ್ತರಾಖಂಡದಲ್ಲಿ ಸುರಿಯುತ್ತಿರುವ ಮಳೆ ಭಾರೀ ಅನಾಹುತವನ್ನು ಸೃಷ್ಟಿ ಮಾಡಿದೆ. ರಾಜ್ಯ ಸರ್ಕಾರದ ಬುಧವಾರದ ಮಾಹಿತಿಯಂತೆ 46 ಜನರು ಇದುವರೆಗೂ ಮೃತಪಟ್ಟಿದ್ದು, 11 ಜನರು ನಾಪತ್ತೆಯಾಗಿದ್ದಾರೆ.
ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಕುಮಾನ್ ಪ್ರದೇಶದಲ್ಲಿ ಬುಧವಾರ ಮಳೆಯಿಂದ ಆದ ಹಾನಿಯನ್ನು ಪರಿಶೀಲನೆ ನಡೆಸಿದರು. ರಾಜ್ಯದಲ್ಲಿ ಅತಿ ಹೆಚ್ಚು ಹಾನಿಗೊಳಗಾದ ಪ್ರದೇಶದಲ್ಲಿ ಕುಮಾನ್ ಸಹ ಒಂದಾಗಿದೆ.
ಮಾಧ್ಯಮಗಳ ಜೊತೆ ಮಾತನಾಡಿದ ಮುಖ್ಯಮಂತ್ರಿಗಳು, "ಹಲವು ಜಿಲ್ಲೆಗಳಲ್ಲಿ ಅಪಾರವಾದ ಹಾನಿಯಾಗಿದೆ. ಸಹಜ ಸ್ಥಿತಿಗೆ ಮರಳಲು ಕೆಲವು ಸಮಯ ಬೇಕಾಗುತ್ತದೆ. ತುರ್ತು ಕಾರ್ಯಗಳಿಗಾಗಿ ಪ್ರತಿ ಜಿಲ್ಲೆಗೆ 10 ಕೋಟಿ ರೂ. ಅನುದಾನ ನೀಡಲಾಗಿದೆ" ಎಂದು ಹೇಳಿದರು.
ಭಾರತೀಯ ಹವಾಮಾನ ಇಲಾಖೆ ಬುಧವಾರದಿಂದ ರಾಜ್ಯದಲ್ಲಿ ಮಳೆಯ ಅರ್ಭಟ ಕಡಿಮೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಸಾಧಾರಣ ಮಳೆ ಮುಂದುವರೆಯಲಿದ್ದು, ಮುಂದಿನ ಮಳೆ ಮಳೆ ಕಡಿಮೆಯಾಗಲಿದೆ ಎಂದು ಹೇಳಿದೆ.
ಮಳೆಯಿಂದ ಹಾನಿಗೊಳಗಾದ ಪ್ರದೇಶದಲ್ಲಿ ಸೇನೆ, ಹಲವು ಎನ್ಡಿಆರ್ಎಫ್ ತಂಡಗಳು, ಸ್ಥಳೀಯ ರಕ್ಷಣಾ ತಂಡಗಳು ಕಾರ್ಯ ನಿರ್ವಹಣೆ ಮಾಡುತ್ತಿವೆ. ವಿವಿಧ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಬಂದ್ ಆಗಿವೆ. ರಸ್ತೆ ಸಂಚಾರ ಸುಗಮಗೊಳಿಸುವುದು, ವಿದ್ಯುತ್ ವ್ಯವಸ್ಥೆ ಸರಿಪಡಿಸಲು ಸರ್ಕಾರ ಆದ್ಯತೆ ನೀಡಿದೆ.
ಮಳೆಯಿಂದಾಗಿ ಮೃತಪಟ್ಟ ವ್ಯಕ್ತಿಗಳ ಕುಟುಂಬ ಸದಸ್ಯರಿಗೆ 4 ಲಕ್ಷ ರೂ. ಪರಿಹಾರವನ್ನು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಘೋಷಣೆ ಮಾಡಿದ್ದಾರೆ. ರಕ್ಷಣಾ ಕಾರ್ಯಕ್ಕೆ ಕೇಂದ್ರ ಸರ್ಕಾರ ಸಹ ನೆರವು ನೀಡಿದ್ದು, ರಾಜ್ಯ ಸರ್ಕಾರದ ಜೊತೆ ನಿರಂತರ ಸಂಪರ್ಕದಲ್ಲಿದೆ.