ರಾಜ್ಯದಲ್ಲಿ ವರುಣನ ಅಬ್ಬರ: ಸಿಡಿಲಿಗೆ 17 ಕುರಿ, 2 ಜಾನುವಾರು ಸಾವು; ಇಂದು ಕೂಡಾ ಮಳೆಯಾಗುವ ಸಾಧ್ಯತೆ
ಬೆಂಗಳೂರು, ಮಾರ್ಚ್ 30: ರಾಜ್ಯದ ಹಲವು ಜಿಲ್ಲೆಗಳಲ್ಲಿ ಸೋಮವಾರ ರಾತ್ರಿಯವರೆಗೂ ವರುಣ ಅಬ್ಬರಿಸಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸಿಡಿಲಿಗೆ 17 ಕುರಿಗಳು ಸಾವನ್ನಪ್ಪಿದ್ದು, ಹಾವೇರಿ ಜಿಲ್ಲೆಯಲ್ಲಿ ಎತ್ತು, ಆಕಳು ಸಾವನ್ನಪ್ಪಿವೆ.
ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಮೇಲಿನ ಭಾಗಗಳಲ್ಲಿ ಮಳೆ ಸುರಿದಿದ್ದು, ಶಿರಸಿ, ಮುಂಡಗೋಡ ಭಾಗಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ವರುಣನ ಅಬ್ಬರಕ್ಕೆ ಜನಜೀವನ ತತ್ತರಿಸಿ ಹೋಗಿದೆ.
ಹವಾಮಾನ ವರದಿ: ರಾಜ್ಯದಲ್ಲಿಎಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು ಜೋರು?
ಮುಂಡಗೋಡದ ಸಿಂಗನಳ್ಳಿಯಲ್ಲಿ ಸಿಡಿಲು ಬಡಿದು 17 ಕುರಿಗಳು ಸಾವನ್ನಪ್ಪಿದ್ದು, ಕುರಿಗಾಯಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಕುರಿಗಳು ಮಾನು ನಾಗು ಶಳಕೆ ಎಂಬುವವರಿಗೆ ಸೇರಿದ್ದು, ಸಿಂಗನಳ್ಳಿ ಗ್ರಾಮದ ಹೊಲದಲ್ಲಿ ಮೇಯುತಿದ್ದ ವೇಳೆ ಸಿಡಿಲು ಬಡಿದು ಸಾವನ್ನಪ್ಪಿವೆ. ಮುಂಡಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಶುಂಠಿ, ಭತ್ತ ಕೊಯ್ಲು ಮಾಡಿದ್ದ ರೈತರಿಗೆ ಸಂಕಷ್ಟ
ಇನ್ನು ಮಲೆನಾಡು ಪ್ರದೇಶದಲ್ಲಿಯೂ ಮಳೆ ಅಬ್ಬರಿಸಿದ್ದರಿಂದ ಮಲಜೋಳ ಬೆಳೆದಿದ್ದ ರೈತರ ಮುಖದಲ್ಲಿ ಮಂದಹಾಸ ಮೂಡಿದ್ದು, ಅಕಾಲಿಕ ಮಳೆಯಿಂದ ಶುಂಠಿ, ಭತ್ತ ಕೊಯ್ಲು ಮಾಡಿದ್ದ ರೈತರಿಗೆ ಸಂಕಷ್ಟ ಎದುರಾಗಿದೆ. ಹವಾಮಾನ ಇಲಾಖೆ ಮಾರ್ಚ್ 30ರ ವರೆಗೆ ಮಳೆಯಾಗುವ ಮುನ್ನೆಚ್ಚರಿಕೆ ನೀಡಿದೆ.
ಹಾವೇರಿ ಜಿಲ್ಲೆಯಲ್ಲಿ ಸುರಿದ ಮಳೆಯ ಅಬ್ಬರಕ್ಕೆ ಶಿಗ್ಗಾಂವಿ ತಾಲ್ಲೂಕಿನ ಶಿಂಗಾಪುರ ಗ್ರಾಮದಲ್ಲಿ ಸಿಡಿಲು ಬಡಿದು ಒಂದು ಎತ್ತು ಮತ್ತು ಒಂದು ಆಕಳು ಸಾವನ್ನಪ್ಪಿದೆ. ರೈತ ಶಿವನಗೌಡ ಪಾಟೀಲ್ ಅವರಿಗೆ ಸೇರಿದ ಎತ್ತು ಮತ್ತು ಆಕಳು ಸಾವನ್ನಪ್ಪಿವೆ. ಮರದ ಕೆಳಗೆ ಕಟ್ಟಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಬಂಕಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಬೆಳಗ್ಗೆಯಿಂದಲೂ ಮೋಡಕವಿದ ವಾತವರಣ
ಮಲೆನಾಡಿನ ಚಿಕ್ಕಮಗಳೂರಿನಲ್ಲಿ ಸಹ ಮಳೆರಾಯ ಅಬ್ಬರಿಸಿ ಬೊಬ್ಬಿರಿದಿದ್ದು, ಕಳಸ ಸುತ್ತಮುತ್ತ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ಮಧ್ಯಾಹ್ನ 3 ಗಂಟೆಯ ನಂತರ ವರುಣನ ಅಬ್ಬರ ಜೋರಾಗಿದ್ದು, ಕಳಸ, ಹೊರನಾಡು, ಹಳ್ಳುವಳ್ಳಿ, ಹಿರೇಬೈಲು ಸುತ್ತಮುತ್ತ ಭಾರೀ ಮಳೆಯಾಗಿದೆ. ಬೆಳಗ್ಗೆಯಿಂದಲೂ ಮೋಡಕವಿದ ವಾತವರಣವಿತ್ತು. ಬಿಸಿಲಿನಿಂದ ಬಳಲಿದ್ದ ಜನರಿಗೆ ಮಧ್ಯಾಹ್ನದ ವೇಳೆಗೆ ವರುಣದೇವ ತಂಪೆರೆದಿದ್ದಾನೆ. ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ.
ಮಾರ್ಚ್ 30ರ ವರೆಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಏಕಾಏಕಿ ಸುರಿದ ಮಳೆ ಹಲವು ಜಿಲ್ಲೆಗಳಲ್ಲಿ ಸಾಕಷ್ಟು ಅವಾಂತರ ಸೃಷ್ಟಿಸಿದೆ.
ಹವಾಮಾನ ವರದಿ
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿದ್ದು, ಇಂದು ಮಧ್ಯಾಹ್ನದ ಹೊತ್ತಿಗೆ ಸೂರ್ಯ ನೆತ್ತಿ ಮೇಲೆ ಬರುತ್ತಿದ್ದಂತೆ ಶಾಖ ಹೆಚ್ಚಾಗಲಿದೆ. ಇಂದು ಸಹ ಮಲೆನಾಡು, ಕರಾವಳಿ, ಉತ್ತರ ಒಳನಾಡಿನ ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Recommended Video
ಎಲ್ಲೆಲ್ಲಿ ಎಷ್ಟು ತಾಪಮಾನ
ಮೇ ಅಂತ್ಯದವರೆಗೂ ತಾಪಮಾನದಲ್ಲಿ ಕೊಂಚ ಪ್ರಮಾಣದಲ್ಲಿ ಏರಿಕೆಯಾಗಲಿದ್ದು, ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಯಾದಗಿರಿ, ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ 41 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಯಚೂರಿನಲ್ಲಿ ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.