Breaking: ಕರ್ನಾಟಕದ 8 ಜಿಲ್ಲೆಗಳಲ್ಲಿ ಆ.12ರ ತನಕ ಭಾರೀ ಮಳೆ
ಬೆಂಗಳೂರು ಆಗಸ್ಟ್ 10: ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ಬುಧವಾರ ಸೇರಿ ಮೂರು ದಿನ ಗುಡುಗು ಸಹಿತ ಸಾಧಾರಣದಿಂದ ಭಾರೀ ಮಳೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿ ಕರ್ನಾಟಕ ಭಾಗದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಆಗಸ್ಟ್ 12ರವರೆಗೆ ಸಾಧಾರಣದಿಂದ ಭಾರೀ ಪ್ರಮಾಣದ ಗುಡುಗು ಸಹಿ ಮಳೆ ಅಬ್ಬರಿಸುವ ಸಾಧ್ಯತೆ ಇದೆ.
ಇದೇ ಅವಧಿಯಲ್ಲಿ ಮಲೆನಾಡು ಭಾಗದ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಮತ್ತು ಉತ್ತರ ಒಳನಾಡಿನ ಬೆಳಗಾವಿ ಜಿಲ್ಲೆಗಳ ಹಲವು ಕಡೆಗಳಲ್ಲಿ ಸುಮಾರು 11.5 ಸೆಂ.ಮೀಟರ್ ತನಕ ಮಳೆ ಆಗುವ ಸೂಚನೆ ನೀಡಲಾಗಿದೆ. ಕಳೆದ ಒಂದು ವಾರಕ್ಕೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಮಳೆ ಅಬ್ಬರ ಇಳಿಕೆ ಆಗಿದೆ.
3 ದಿನ ಯೆಲ್ಲೋ ಅಲರ್ಟ್; ಕರ್ನಾಟಕದ ಎಂಟು ಜಿಲ್ಲೆಗಳಿಗೆ ಮುಂದಿನ ಮೂರು ದಿನ 'ಯೆಲ್ಲೋ ಅಲರ್ಟ್' ಎಚ್ಚರಿಕೆ ಕೊಡಲಾಗಿದೆ. ಉಳಿದಂತೆ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಅಷ್ಟಾಗಿ ಬಿಸಿಲುಕಂಡು ಬರುವುದಿಲ್ಲ. ಆಗಾಗ ಕೆಲವು ಕಡೆಗಳಲ್ಲಿ ಸಾಮಾನ್ಯ ಇಲ್ಲವೇ ತುಂತುತು ಮಳೆ ಆಗುವ ಸಾಧ್ಯತೆ ಇದೆ. ಇದರ ಹೊರತು ಭಾರೀ ಮಳೆ ಆಗುವಷ್ಟು ಗಮನಾರ್ಹ ಬದಲಾವಣೆಗಳು ವಾತಾವರಣದಲ್ಲಿ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ 24 ಗಂಟೆಯಲ್ಲಿ ಕರಾವಳಿ, ಮಲೆನಾಡು ಸೇರಿದಂತೆ ಒಳನಾಡು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಉತ್ತಮ ಮಳೆ ದಾಖಲಾಗಿದೆ. ಇನ್ನೂ ರಾಜ್ಯದ ಗರಿಷ್ಠ ತಾಪಮಾನ ಬಳ್ಳಾರಿ, ಹಂಪಿ, ಹಾಸನ ಜಿಲ್ಲೆಗಳಲ್ಲಿ ತಲಾ 30 ಡಿಗ್ರಿ ಸೆಲ್ಸಿಯಸ್ಉಷ್ಣಾಂಶ ದಾಖಲಾಗಿದೆ.
ಅದೇ ರೀತಿ ರಾಜ್ಯದ ಕನಿಷ್ಠ ತಾಪಮಾನ ಮಡಿಕೇರಿಯಲ್ಲಿ 17.2 ಡಿಗ್ರಿ ಸೆಲ್ಸಿಯಸ್, ಬೆಂಗಳೂರು ಎಚ್ಎಎಲ್ ಏರ್ಪೋರ್ಟ್ ಪ್ರದೇಶದಲ್ಲಿ 17.5ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.