ಮಂಡ್ಯದಲ್ಲಿ ಸುರಿದ ಭಾರೀ ಮಳೆಗೆ ಭತ್ತದ ಬೆಳೆ ನಾಶ
ಮಂಡ್ಯ, ನವೆಂಬರ್, 06 : ಭಾರೀ ಮಳೆಗೆ ಕೆರೆ-ಕುಂಟೆಗಳು ಕೋಡಿ ಒಡೆದು ಕೃಷಿ ಭೂಮಿಗೆ ನೀರು ನುಗ್ಗಿದ ಪರಿಣಾಮ ಅಪಾರ ಬೆಳೆ ನಾಶವಾಗಿರುವ ಘಟನೆ ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಗುರುವಾರ ನಡೆದಿದೆ.
ಮೈಸೂರು ಜಿಲ್ಲೆಯ ಚಿಕ್ಕಕೆರೆಯಲ್ಲಿ ಕೋಡಿ ಉಂಟಾದ ಪರಿಣಾಮ ನೀರು ಸುತ್ತಮುತ್ತಲಿನ ಭತ್ತದ ಗದ್ದೆಗಳಿಗೆ ನುಗಿದ್ದು, ಬೆಳೆ ನೆಲಕಚ್ಚಿದೆ. ಗ್ರಾಮದ ರಾಮಶೆಟ್ಟಿ, ದೇವೇಗೌಡ ಇತರೆ ರೈತರಿಗೆ ಸೇರಿದ ಭತ್ತದ ಗದ್ದೆಗಳು ಜಲಾವೃತವಾಗಿದ್ದು, ರೈತರು ಕಣ್ಣೀರು ಸುರಿಸುತ್ತಿದ್ದಾರೆ.[ಮದ್ದೂರಿನಲ್ಲಿ ಪ್ರವಾಹ ನೋಡಲು ಮುಗಿಬಿದ್ದ ಜನ!]
ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಚಿಕ್ಕಕೆರೆ ಸಂಪೂರ್ಣ ತುಂಬಿದೆ. ಇದರಿಂದ ಕೆರೆಯ ಕಟ್ಟೆ ಶಿಥಿಲವಾಗಿದೆ. ಇದರಿಂದ ಕೆರೆಯಿಂದ ಒಮ್ಮೆಲೆ ನೀರು ಹರಿದು ಬಂದಿದೆ. ನೀರು ಸೋರಿಕೆಯಾಗುತ್ತಿರುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಗ್ರಾಮಸ್ಥರು ತಿಳಿಸಿದ್ದಾರೆ. ಆದರೆ ದುರಸ್ತಿ ಕಾರ್ಯ ನಡೆಯದ ಕಾರಣ ಕೆರೆಯ ಕಟ್ಟೆ ಒಡೆದು ನೀರು ಹೊರ ಬಂದಿದೆ.[ಬರಡಾಗಿದ್ದ ಶಿಂಷಾ ನದಿಗೆ ಮತ್ತೆ ಜೀವಕಳೆ ತಂದ ಮಳೆ]
ಕೆರೆಯ ದುರಸ್ಥಿ ಕಾರ್ಯ ಕೈಗೊಳ್ಳಲು ಅಧಿಕಾರಿಗಳು ಹಿಂದೇಟು ಹಾಕಿದ ಪರಿಣಾಮ ಕೆರೆಯ ನೀರು ತಗ್ಗು ಪ್ರದೇಶದಲ್ಲಿರುವ ಭತ್ತದ ಗದ್ದೆಗಳಿಗೆ ನುಗ್ಗಿ ಸಂಪೂರ್ಣ ನಾಶವಾಗಿದೆ.