ಉತ್ತರ ಕರ್ನಾಟಕದಾದ್ಯಂತ ಮತ್ತೆ ವರುಣನ ಆರ್ಭಟ
ಬೆಂಗಳೂರು, ಅಕ್ಟೋಬರ್ 11: ಉತ್ತರ ಕರ್ನಾಟಕಾದ್ಯಂತ ಮತ್ತೆ ವರುಣನ ಅಬ್ಬರ ಆರಂಭವಾಗಿದೆ. ಬೆಳಗಾವಿ ಬಳಿಕ ಇದೀಗ ರಾಯಚೂರಿನಲ್ಲಿ ವಿಪರೀತ ಮಳೆಯಾಗುತ್ತಿದ್ದು, 12 ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಮಲೆನಾಡು, ಉತ್ತರ ಕನ್ನಡ, ಉತ್ತರ ಕರ್ನಾಟಕ ಭಾಗದಲ್ಲಿ ಮತ್ತೆ ಮಳೆ ಆರಂಭವಾಗಿದೆ. ಅಕ್ಟೋಬರ್ ಅಂತ್ಯದವರೆಗೂ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಭಾರಿ ಮಳೆ ಮುನ್ಸೂಚನೆ: ಕರ್ನಾಟಕದ 23 ಜಿಲ್ಲೆಗಳಿಗೆ ಅಲರ್ಟ್
ಸುಮಾರು 12 ಗ್ರಾಮಗಳ ರಸ್ತೆ ಸಂಪರ್ಕ ಕಡಿತವಾಗಿದ್ದು, ಹಳ್ಳದ ಪಕ್ಕದ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ. ಹಾಗೆಯೇ ಜಿಲ್ಲೆಯಾದ್ಯಂತ ಬೆಳಿಗ್ಗೆಯಿಂದ ಮಳೆ ಮುಂದುವರಿದಿದೆ. ಜಮಖಂಡಿ, ಬಸವನ ಬಾಗೇವಾಡಿ, ಮುದ್ದೇಬಿಹಾಳ, ಹುನಗುಂದ, ಅಥಣಿಯಲ್ಲಿ ಭಾರಿ ಮಳೆಯಾಗಿದೆ.
ಮಸ್ಕಿ ಕಿರು ಜಲಾಶಯದಿಂದ ನೀರು
ಜಿಲ್ಲೆಯಾದ್ಯಂತ ಭಾರೀ ಮಳೆ ಹಿನ್ನೆಲೆ ಬಹುದಿನದ ಬಳಿಕ ಮಸ್ಕಿ ಕಿರು ಜಲಾಶಯ ತುಂಬಿದ್ದು, ಜಲಾಶಯದ ನಾಲ್ಕು ಗೇಟುಗಳಿಂದ ನೀರು ಹೊರಕ್ಕೆ ಬಿಡಲಾಗುತ್ತಿದೆ. ಆದ್ದರಿಂದ ಜಿಲ್ಲೆಯ 12 ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ.
2 ಸಾವಿರ ಕ್ಯೂಸೆಕ್ಗೂ ಅಧಿಕ ಪ್ರಮಾಣದ ನೀರು
ಮಸ್ಕಿ ಕಿರುಜಲಾಶಯ ತುಂಬಿದದ್ದರಿಂದ 2000 ಕ್ಯೂಸೆಕ್ಗೂ ಅಧಿಕ ಪ್ರಮಾಣದ ನೀರು ಹೊರ ಬಿಡಲಾಗುತ್ತಿದೆ. ಆದ್ದರಿಂದ ಹಳ್ಳದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಎರಡು ಸೇತುವೆ ಮುಳುಗಡೆಯಾಗಿದೆ. ಕಡಬೂರು- ಹಿರೇಕಡಬೂರು ಮಧ್ಯದ ಸೇತುವೆ, ಮಾರಲದಿನ್ನಿ- ಮಾರಲದಿನ್ನಿ ತಾಂಡ ಮಧ್ಯದ ಸೇತುವೆ ಮುಳುಗಡೆಗೊಂಡಿದ್ದು, ಸೇತುವೆ ಮೇಲೆ ಸಂಚಾರ ಸ್ಥಗಿತಗೊಂಡಿದೆ.
ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಎರಡು ವಾರ ಮಳೆಯ ಅಬ್ಬರ
ಬೆಂಗಳೂರಲ್ಲೂ ಮಳೆ ಮುಂದುವರಿಕೆ
ಮುಂದಿನ ಎರಡು ದಿನಗಳ ಕಾಲ ಬೆಂಗಳೂರಿನಲ್ಲೂ ಮಳೆ ಮುಂದುವರೆಯಲಿದ್ದು, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಒಂದೈದು ನಿಮಿಷ ಮಳೆ ಹೊಯ್ದರೂ ಸಾಕು ಇಡೀ ರಸ್ತೆಯ ತುಂಬೆಲ್ಲಾ ನೀರು ತುಂಬಿಕೊಂಡು ಕೆರೆಯಂತಾಗಿಬಿಡುತ್ತದೆ.
ಬೆಂಗಳೂರಲ್ಲಿ ಅಕ್ಟೋಬರ್ ಆರಂಭದಿಂದಲೂ ಮಳೆ ಹೆಚ್ಚು
ಅಕ್ಟೋಬರ್ ತಿಂಗಳ ಆರಂಭದಿಂದಲೂ ರಾಜ್ಯದಲ್ಲಿ ಅಧಿಕ ಮಳೆಯಾಗುತ್ತಿದೆ. ಕರಾವಳಿ ಭಾಗದಲ್ಲಿ ಸಾಧಾರಣ ಮಳೆಯಾಗಿದೆ ಬೆಂಗಳೂರು ಸೇರಿ ದಕ್ಷಿಣ ಭಾಗದಲ್ಲಿ ಭಾರೀ 77 ಮಿಮೀ ಮಳೆಯಾಗಿದೆ. ಇದು ಸಾಮಾನ್ಯಕ್ಕಿಂತ ಶೇ.63 ರಷ್ಟು ಹೆಚ್ಚಾಗಿದೆ. ಬೆಳಗಾವಿ ಧಾರವಾಡ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ 61 ಮಿ.ಮೀ ಮಳೆಯಾಗಿದ್ದು, ಶೇ.39ರಷ್ಟು ಮಳೆ ಹೆಚ್ಚಾಗಿದೆ.