ಸಂಪುಟ ವಿಸ್ತರಣೆ ಹಿನ್ನೆಲೆ ಸಚಿವ ಶ್ರೀರಾಮುಲು ಟೆಂಪಲ್ ರನ್
ಬೆಂಗಳೂರು, ಜ. 28: ಡಿಸಿಎಂ ಹುದ್ದೆಯ ಆಕಾಂಕ್ಷಿ, ಆರೋಗ್ಯ ಸಚಿವ ಶ್ರೀರಾಮುಲು ಅವರು ತಿರುಪತಿ ತಿಮ್ಮಪ್ಪನ ಮೊರೆ ಹೋಗಿದ್ದಾರೆ. ಸಧ್ಯದಲ್ಲಿಯೇ ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಸಂಪುಟ ಪುನರ್ ರಚನೆ ಆಗಲಿದೆ ಎಂಬ ಮಾಹಿತಿಯಿದ್ದು, ಸಚಿವ ಶ್ರೀರಾಮುಲು ಅವರು ಉಪ ಮುಖ್ಯಮಂತ್ರಿ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ಕಾರಣವಾಗಿದ್ದು ವಾಲ್ಮಿಕಿ ಸಮುದಾಯದ ಮತ್ತೊಬ್ಬ ನಾಯಕ, ಮಾಜಿ ಸಚಿವ ರಮೆಶ್ ಜಾರಕಿಹೊಳಿ ಅವರು ಕೂಡ ಡಿಸಿಎಂ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಇದೀಗ ಇಬ್ಬರೂ ಪ್ರಬಲ ನಾಯಕರ ಮಧ್ಯೆ ಪೈಪೋಟಿ ಶುರುವಾಗಿದೆ.
ವೆಂಕೇಶ್ವರನಿಗೆ ವಿಶೇಷ ಪೂಜೆ, ಪ್ರಾರ್ಥನೆ ಮಾಡಿದ ಶ್ರೀರಾಮುಲು
ತಿರುಪತಿ ತಿರುಮಲ ದೇವಸ್ಥಾನಕ್ಕೆ ತೆರಳಿರುವ ಆರೋಗ್ಯ ಸಚಿವ ಶ್ರೀರಾಮುಲು ಶ್ರೀವೆಂಕಟೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಿನ್ನೆ ಆಂಧ್ರಪ್ರದೇಶಕ್ಕೆ ತೆರಳಿದ್ದ ಶ್ರೀರಾಮುಲು ಇಂದು ತಿರುಪತಿ ತಿಮ್ಮಪ್ಪ ಸನ್ನಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿದರು.
ಡಿಸಿಎಂ: ರಮೇಶ್ ಜಾರಕಿಹೊಳಿ Vs ಶ್ರೀರಾಮುಲು, ಹೈಕಮಾಂಡ್ ಒಲವು ಯಾರತ್ತ?
ಶೀಘ್ರವಾಗಿ ಸಂಪುಟ ವಿಸ್ತರಣೆ ಆಗಲಿದ್ದು, ಮತ್ತೆರಡು ಸಮುದಾಯಗಳಿಗೆ ಡಿಸಿಎಂ ಹುದ್ದೆಗಳನ್ನು ಕೊಡಲಾಗುತ್ತಿದೆ ಎಂಬ ಮಾಹಿತಿಯಿದೆ. ಆದರಿಂದಲೇ ಶ್ರೀರಾಮುಲು ಅವರು ದೇವರ ಮೊರೆ ಹೋಗಿದ್ದಾರೆ ಎನ್ನಲಾಗಿದೆ.
ಇಬ್ಬರು ನಾಯಕರಲ್ಲಿ ಯಾರಿಗೆ ಒಲಿಯಲಿದೆ ಡಿಸಿಎಂ ಹುದ್ದೆ?
ಬೆಳಗಾವಿ ರಾಜಕಾರಣದ ಖದರ್ನ್ನು ತೋರಿಸುವ ಮೂಲಕ ಮೈತ್ರಿ ಸರ್ಕಾರದ ಪತನಕ್ಕೆ ಮಾಜಿ ಸಚಿವ ರಮೆಶ್ ಜಾರಕಿಹೊಳಿ ಕಾರಣರಾಗಿದ್ದರು. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಂದ ಶಾಸಕರನ್ನು ಸೆಳೆದು ಬಿಜೆಪಿಗೆ ಬರುವಂತೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಹಾಗಾಗಿ ಸಿಎಂ ಯಡಿಯೂರಪ್ಪ ಅವರ ಒಲವು ಸಹಜವಾಗಿಯೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಮೇಲಿದೆ.
ಇನ್ನು ಆರೋಗ್ಯ ಸಚಿವ ಶ್ರೀರಾಮುಲು ಕೂಡ ಬಿಜೆಪಿಯಲ್ಲಿ ವಾಲ್ಮೀಕಿ ಸಮುದಾಯದ ಪ್ರಶ್ನಾತೀತ ನಾಯಕ. ಮೊದಲ ಬಾರಿ ಬಿಜೆಪಿ ಸರ್ಕಾರ ಅಧಿಕಾರಿಕ್ಕೆ ಬರಲು ಕಾರಣವಾಗಿದ್ದು ಇದೇ ಶ್ರೀರಾಮುಲು ಅವರು. ಮುಂದಿನ ದಿನಗಳಲ್ಲಿ ಇಡೀ ಸಮುದಾಯದ ಮತಗಳನ್ನು ಬಿಜೆಪಿಗೆ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವಿರುವ ವಾಲ್ಮೀಕಿ ಸಮುದಾಯದ ನಾಯಕರೆಂದೆ ಶ್ರೀರಾಮುಲು ಬಿಂಬಿತರಾಗಿದ್ದಾರೆ. ಸಿಎಂ ಯಡಿಯೂರಪ್ಪ ಅವರಿಗೆ ಶ್ರೀರಾಮುಲು ಕೂಡ ಆಪ್ತರು. ಆದರಿಂದಲೇ ಹೈಕಮಾಂಡ್ ಒಲವು ಶ್ರೀರಾಮುಲು ಅವರ ಮೇಲೆ ಹೆಚ್ಚಿದೆ
ವಾಲ್ಮೀಕಿ ಸಮುದಾಯಕ್ಕೆ ಡಿಸಿಎಂ ಹುದ್ದೆ ಕೊಡಲು ಸ್ವಾಮೀಜಿ ಆಗ್ರಹ
ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಅವರನ್ನು ಆರೋಗ್ಯ ಸಚಿವ ಶ್ರೀರಾಮುಲು ಅವರು ನಿನ್ನೆ ಭೇಟಿ ಮಾಡಿ ಚರ್ಚೆ ಮಾಡಿದ್ದರು. ಆ ಸಂದರ್ಭದಲ್ಲಿ ವಾಲ್ಮೀಕಿ ಸಮುದಾಯಕ್ಕೆ ಡಿಸಿಎಂ ಸ್ಥಾನ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದ ಪ್ರಸನ್ನಾನಂದಪುರಿ ಸ್ವಾಮೀಜಿ, ಸಮುದಾಯಕ್ಕೆ ಒಂದು ಅವಕಾಶ ಮಾಡಿಕೊಡಿ ಎಂದು ಮುಖ್ಯಮಂತ್ರಿಗಳನ್ನು ಕೇಳಿದ್ದೇನೆ. ಶ್ರೀರಾಮುಲು ಮತ್ತು ರಮೇಶ್ ಜಾರಕಿಹೊಳಿ ಇಬ್ಬರೂ ನಮ್ಮ ಸಮುದಾಯದ ಎರಡು ಕಣ್ಣುಗಳು. ಇಬ್ಬರಲ್ಲಿ ಯಾರಿಗಾದರೂ ಒಬ್ಬರಿಗೆ ಅವಕಾಶ ಮಾಡಿಕೊಡಲಿ. ಇಬ್ಬರಿಗೆ ಡಿಸಿಎಂ ಹುದ್ದೆ ಕೊಡುವುದು ಸಾಧ್ಯವಾಗುವುದಿಲ್ಲ, ಒಬ್ಬರಿಗೆ ಕೊಡಬೇಕು. ನಮ್ಮ ಸಮುದಾಯಕ್ಕೆ ಅವಕಾಶ ಮಾಡಿಕೊಡಲಿ ಎಂದು ಹೇಳಿಕೆ ಕೊಟ್ಟಿದ್ದರು.
ಡಿಸಿಎಂ ಹುದ್ದೆಗೆ ಪಟ್ಟು ಹಿಡಿದಿದ್ದ ರಾಮುಲು, ಜಾರಕಿಹೊಳಿಗೆ ಭಾರೀ ಹಿನ್ನಡೆ
ಶ್ರೀರಾಮುಲು ಮನವೊಲಿಸಲು ಸಿಎಂಗೆ ಹೈಕಮಾಂಡ್ ಸೂಚನೆ
ಡಿಸಿಎಂ ಹುದ್ದೆಯ ವಿಚಾರವಾಗಿ ಶ್ರೀರಾಮುಲು ಅವರೊಂದಿಗೆ ಮಾತನಾಡಲು ಬಿಜೆಪಿ ಹೈಕಮಾಂಡ್ ಸೂಚಿಸಿದೆ ಎಂಬ ಮಾಹಿತಿಯಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕರ ಅಸ್ತಿತ್ವಕ್ಕೆ ಬರಲು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರಮುಖ ಕಾರಣತರ್ಕರು. ಹಾಗಾಗಿ ಮುಂದೆ ಇದಕ್ಕಿಂತ ದೊಡ್ಡ ಹುದ್ದೆಯೂ ಶ್ರೀರಾಮುಲು ಅವರಿಗೆ ದೊರೆಯಬಹುದು ಎಂಬ ಭರವಸೆಯನ್ನು ಹೈಕಮಾಂಡ್ ಕೊಟ್ಟಿದೆ. ಜೊತೆಗೆ ತಾಳ್ಮೆಯಿಂದ ಇರುವಂತೆ ಶ್ರೀರಾಮುಲು ಅವರಿಗೆ ತಿಳಿಹೇಳಿ ಎಂದು ಬಿಜೆಪಿ ಹೈಕಮಾಂಡ್ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಸೂಚಿಸಿದೆ ಎನ್ನಲಾಗಿದೆ.