ಬಿಎಸ್ವೈ ಸರಕಾರದ ಸಾಮರ್ಥ್ಯವನ್ನೇ ಪ್ರಶ್ನಿಸುವಂತೆ ಮಾಡಿದ ಶ್ರೀರಾಮುಲು ಹೇಳಿಕೆ
ದೇಶದಲ್ಲೇ ಕೊರೊನಾ ನಿರ್ವಹಣೆಯಲ್ಲಿ ಮಾದರಿ ರಾಜ್ಯದಂತಿದ್ದ ಕರ್ನಾಟಕ, ಕೊರೊನಾ ಸೋಂಕಿತರ ಹಾಟ್ ಸ್ಪಾಟ್ ಆಗುವತ್ತ ಸಾಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ದಿನವೊಂದಕ್ಕೆ ಹೊಸ ಸೋಂಕಿತರ ಸಂಖ್ಯೆ ನಾಲ್ಕರ ಗಡಿ ದಾಡುತ್ತಿದೆ.
Recommended Video
ಕೊರೊನಾ ನಿರ್ವಹಣೆಯಲ್ಲಿ ಯಾವುದೇ ಲೋಪದೋಷವಾಗಬಾರದು ಎನ್ನುವ ಕಾರಣಕ್ಕಾಗಿ ಸಿಎಂ ಯಡಿಯೂರಪ್ಪ ಹೊಸಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ. ರಾಜಧಾನಿಗೆ ಅಷ್ಟ ದಿಕ್ಪಾಲಕರನ್ನಾಗಿ ಎಂಟು ಸಚಿವರು ಮತ್ತು ಅಷ್ಟೇ ಸಂಖ್ಯೆಯ ಐಎಎಸ್ ಅಧಿಕಾರಿಗಳನ್ನು ನೇಮಿಸಿದ್ದಾರೆ.
ಕೊರೊನಾ ನಿಯಂತ್ರಣ: ದೇವರೆ ನಮ್ಮನ್ನು ಕಾಪಾಡಬೇಕು ಎಂದ ಆರೋಗ್ಯ ಸಚಿವ
ಕೊರೊನಾ ಉಸ್ತುವಾರಿಯನ್ನೂ ನಾಲ್ಕು ಸಚಿವರಿಗೆ ಹಂಚಿದ್ದಾಗಿದೆ. ಆದರೂ, ಪರಿಸ್ಥಿತಿ ನಿಯಂತ್ರಣಕ್ಕೆ ಬರದೇ ಇರುವುದು ಒಂದು ಕಡೆಯಾದರೆ, ಅಂಬುಲೆನ್ಸ್, ಬೆಡ್ ಸಮಸ್ಯೆ, ಖಾಸಗಿ ಆಸ್ಪತ್ರೆಗಳ ಅಸಹಕಾರವನ್ನು ಹತ್ತಿಕ್ಕುವಲ್ಲಿ ಸರಕಾರ ವಿಫಲವಾಗುತ್ತಾ ಸಾಗುತ್ತಿದೆ.
ಪಾಸಿಟಿವ್ ಸುದ್ದಿ: ಶೀಘ್ರ ಬರಲಿದೆ ಆಕ್ಸ್ಫರ್ಡ್ ಕೊವಿಡ್ ಲಸಿಕೆ
ಈಗಾಗಲೇ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಐವತ್ತು ಸಾವಿರ, ಮೃತ ಪಟ್ಟವರ ಸಂಖ್ಯೆ ಒಂದು ಸಾವಿರ ಸನಿಹದಲ್ಲಿದೆ. ಮುಂದಿನ ದಿನಗಳಲ್ಲಿ ಇದು ಗಣನೀಯವಾಗಿ ಏರಿಕೆಯಾಗುತ್ತದೆ ಎನ್ನುವ ತಜ್ಞರ ಎಚ್ಚರಿಕೆಯ ನಡುವೆ, ಆರೋಗ್ಯ ಸಚಿವ ಶ್ರೀರಾಮುಲು ಹೇಳಿಕೆ, ಸರಕಾರದ ಸಾಮರ್ಥ್ಯವನ್ನು ಪ್ರಶ್ನಿಸುವಂತಿದೆ.
ಸಾರ್ವಜನಿಕರಿಗೆ ಧೈರ್ಯ ತುಂಬಬೇಕಾದ ಸಚಿವರಿಂದಲೇ ಇಂತಹ ಹೇಳಿಕೆ ಎಷ್ಟು ಸರಿ?
ಹಲವು ಎಚ್ಚರಿಕೆಯ ನಡುವೆಯೂ ಖಾಸಗಿ ಆಸ್ಪತ್ರೆಗಳು ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡದೇ ಇರುವುದು ಒಂದು ಕಡೆ. ಇನ್ನೊಂದು ಕಡೆ, ಕೊರೊನಾ ನಿರ್ವಹಣೆಯ ವೈದ್ಯಕೀಯ ಉಪಕರಣ ಖರೀದಿಯಲ್ಲಿ ಸರಕಾರ ಅಕ್ರಮ ಎಸಗಿದೆ ಎನ್ನುವ ಆರೋಪದ ಇನ್ನೊಂದೆಡೆ. ಈ ಸಮಯದಲ್ಲಿ, ಸಾರ್ವಜನಿಕರಿಗೆ ಧೈರ್ಯ ತುಂಬಬೇಕಾದ ಸಚಿವರೇ ಈ ರೀತಿ ಹೇಳಿಕೆ ನೀಡಿರುವುದು ಸಾರ್ವಜನಿಕ ವಲಯದಲ್ಲಿ ಭಯ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.
ದೇವರೇ ನಮ್ಮನ್ನು ಕಾಪಾಡಬೇಕು, ಸಚಿವ ಶ್ರೀರಾಮುಲು
ಚಿತ್ರದುರ್ಗದಲ್ಲಿ ಮಾತನಾಡುತ್ತಿದ್ದ ಆರೋಗ್ಯ ಸಚಿವ ಬಿ.ಶ್ರೀರಾಮುಲು, "ಕೊರೊನಾ ವೈರಸ್ ನಿಯಂತ್ರಣ ಯಾರ ಕೈಯಲ್ಲಿ ಇದೆ ಹೇಳಿ? ಇವತ್ತು ದೇವರೇ ನಮ್ಮನ್ನು ಕಾಪಾಡಬೇಕು. ಸಚಿವರ ನಡುವೆ ಹೊಂದಾಣಿಕೆ ಇಲ್ಲ, ಸರ್ಕಾರ ವಿಫಲವಾಗಿದೆ ಎಂಬ ಏನೇ ಆರೋಪಗಳು ಇರಬಹುದು, ಆದರೆ ಬಡ ಜನರ ಬದುಕು ಮುಖ್ಯ. ಕಾಂಗ್ರೆಸ್ ನವರು ನೋಡಿಕೊಂಡು ಮಾತನಾಡಬೇಕು" ಎಂದು ಶ್ರೀರಾಮುಲು ಹೇಳಿದ್ದರು.
ಆರೋಗ್ಯ ಸಚಿವರು ಈಗಲೇ ಕೈಚೆಲ್ಲಿ ಕೂತಿದ್ದಾರಾ
ರಾಜ್ಯದಲ್ಲಿ ಕೊರೊನಾ ಸೋಂಕಿತರಿಗೆ ಪರೀಕ್ಷೆ ಸರಿಯಾದ ಸಮಯಕ್ಕೆ ಆಗುತ್ತಿಲ್ಲ. ಜೊತೆಗೆ, ಪರೀಕ್ಷಾ ವರದಿ ಬರುವುದಕ್ಕೂ 3-4 ದಿನಗಳು ಆಗುತ್ತಿವೆ. ಮುಂದಿನ ದಿನಗಳಲ್ಲಿ ಸಂಖ್ಯೆ ಹೆಚ್ಚಾಗಲಿದೆ ಎಂದು ತಜ್ಞರು ಈಗಾಗಲೇ ಎಚ್ಚರಿಕೆಯನ್ನು ನೀಡಿದ್ದಾರೆ. ಇಂತಹ ಸಂದರ್ಭದಲ್ಲಿ, ಆರೋಗ್ಯ ಸಚಿವರು ಈಗಲೇ ಕೈಚೆಲ್ಲಿ ಕೂತಿದ್ದಾರಾ ಎನ್ನುವ ಪ್ರಶ್ನೆ, ಶ್ರೀರಾಮುಲು ಹೇಳಿಕೆಯಿಂದ ಮೂಡುವಂತೆ ಮಾಡಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ
ಶ್ರೀರಾಮುಲು ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ಹೀಗಿತ್ತು,"ದೇವರೇ ಕಾಪಾಡಬೇಕು ಎನ್ನುವ ಹೇಳಿಕೆಯನ್ನು ನೀಡಿದ್ದಾರೆ. ಇದರಿಂದ ಬಿಎಸ್ವೈ ಸರಕಾರ ಯಾವ ರೀತಿ ಪರಿಸ್ಥಿತಿಯನ್ನು ನಿಭಾಯಿಸುತ್ತದೆ ಎಂದು ಅರ್ಥ ಮಾಡಿಕೊಳ್ಳಬಹುದು. ಇಂತಹ ಸರಕಾರ ಯಾತಕ್ಕಾಗಿ ಬೇಕು"ಎಂದು ಡಿಕೆಶಿ ಹೇಳಿದ್ದಾರೆ.