ಕುಂಭಮೇಳದಿಂದ ಕರ್ನಾಟಕಕ್ಕೆ ವಾಪಸ್ಸಾದವರಿಗೆ RT-PCR ಪರೀಕ್ಷೆ ಕಡ್ಡಾಯ
ನವದೆಹಲಿ, ಏಪ್ರಿಲ್ 15: ಕೊರೊನಾವೈರಸ್ ಎರಡನೇ ಅಲೆ ನಡುವೆ ನಡೆಯುತ್ತಿರುವ ಕುಂಭಮೇಳದಲ್ಲಿ ಸೋಂಕಿನ ಹರಡುವಿಕೆ ಆತಂಕ ಹೆಚ್ಚಾಗುತ್ತಿದೆ. ಹರಿದ್ವಾರದಿಂದ ಕರ್ನಾಟಕಕ್ಕೆ ವಾಪಸ್ ಆಗುವ ಯಾತ್ರಿಕರಿಗೆ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಟ್ವೀಟ್ ಮಾಡಿದ್ದಾರೆ.
"ಹರಿದ್ವಾರದಲ್ಲಿ ನಡೆಯುತ್ತಿರುವ ಪವಿತ್ರ ಕುಂಭಮೇಳದಲ್ಲಿ ಪಾಲ್ಗೊಂಡು ರಾಜ್ಯಕ್ಕೆ ಮರಳುವ ಯಾತ್ರಿಗಳು ವಾಪಸ್ಸಾದ ಬಳಿಕ ಕಡ್ಡಾಯವಾಗಿ ತಮ್ಮ ಮನೆಗಳಲ್ಲಿ ಪ್ರತ್ಯೇಕಗೊಂಡು ಕೊರೊನಾ ಪರೀಕ್ಷೆಗೆ ಒಳಪಡಬೇಕು. ಕೊರೊನಾ ಪರೀಕ್ಷೆ ವರದಿಯಲ್ಲಿ ನೆಗಟೀವ್ ಬಂದ ನಂತರವಷ್ಟೇ ಯಾತ್ರಿಕರು ತಮ್ಮ ಎಂದಿನ ಕಾರ್ಯಗಳಲ್ಲಿ ತೊಡಗಬೇಕೆಂದು ಮನವಿ ಮಾಡುತ್ತೇನೆ" ಎಂದು ಸಚಿವ ಡಾ. ಕೆ ಸುಧಾಕರ್ ಟ್ವೀಟ್ ಮಾಡಿದ್ದಾರೆ.
ಕೊರೊನಾವೈರಸ್ ಹೆಚ್ಚಿಸುವ ಆತಂಕ ಸೃಷ್ಟಿಸಿದ ಕುಂಭಮೇಳ!
ಹರಿದ್ವಾರದ ಕುಂಭಮೇಳದಲ್ಲಿ ಭಾಗವಹಿಸಿದ ಯಾತ್ರಿಕರಲ್ಲಿ ಕೊರೊನಾವೈರಸ್ ಸೋಂಕು ಕಂಡು ಬರುತ್ತಿರುವ ಹಿನ್ನೆಲೆ ಕರ್ನಾಟಕ ಸರ್ಕಾರ ಹೊಸ ನಿಯಮವನ್ನು ಜಾರಿಗೊಳಿಸಿದೆ. ಶಾಹಿ ಸ್ನಾನ್ ಮುಗಿಸಿ ಮರಳಿದ ಪ್ರತಿಯೊಬ್ಬರು ಕಡ್ಡಾಯವಾಗಿ ಕೊವಿಡ್-19 ಸೋಂಕಿನ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಆದೇಶಿಸಲಾಗಿದೆ.
ಹರಿದ್ವಾರದಲ್ಲಿ ಶಾಹಿ ಸ್ನಾನ್ ಮತ್ತು ಕೊರೊನಾವೈರಸ್:
ಬುಧವಾರ ಒಂದೇ ದಿನ ಹರಿದ್ವಾರದಲ್ಲಿ 525 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಹರಿದ್ವಾರದಲ್ಲಿ ಕಳೆದ ಐದು ದಿನಗಳಲ್ಲಿ 2167 ಜನರಿಗೆ ಸೋಂಕು ಪತ್ತೆಯಾಗಿದೆ. ಹರಿದ್ವಾರದಲ್ಲಿ ಏಪ್ರಿಲ್ 14ರಂದು ಲಕ್ಷಾಂತರ ಜನರು ಶಾಹಿ ಸ್ನಾನ್(ಪುಣ್ಯ ಸ್ನಾನ) ಮಾಡಿದರು. ಸೋಮವಾರದ ಅಂಕಿ-ಅಂಶಗಳಿಗೆ ಹೋಲಿಸಿ ನೋಡಿದರೆ ಈವರೆಗೂ 32 ಲಕ್ಷ ಭಕ್ತಾದಿಗಳು ಗಂಗಾ ನದಿಯಲ್ಲಿ ಪುಣ್ಯಸ್ನಾನ ಮಾಡಿದ್ದಾರೆ. ಬುಧವಾರವೊಂದೇ ದಿನ 9 ಲಕ್ಷ ಜನರು ಗಂಗೆಯಲ್ಲಿ ಮಿಂದೆದಿದ್ದಾರೆ ಎಂದು ಆಡಳಿತ ಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹರಿದ್ವಾರದಲ್ಲಿ ನಡೆಯುತ್ತಿರುವ ಪವಿತ್ರ ಕುಂಭಮೇಳದಲ್ಲಿ ಪಾಲ್ಗೊಂಡು ರಾಜ್ಯಕ್ಕೆ ಮರಳುವ ಯಾತ್ರಿಗಳು ವಾಪಸ್ಸಾದ ಬಳಿಕ ಕಡ್ಡಾಯವಾಗಿ ತಮ್ಮ ಮನೆಗಳಲ್ಲಿ ಪ್ರತ್ಯೇಕಗೊಂಡು ಕೊರೊನಾ ಪರೀಕ್ಷೆಗೆ ಒಳಪಡಬೇಕು. ಕೊರೊನಾ ಪರೀಕ್ಷೆ ವರದಿಯಲ್ಲಿ ನೆಗಟೀವ್ ಬಂದ ನಂತರವಷ್ಟೇ ಯಾತ್ರಿಕರು ತಮ್ಮ ಎಂದಿನ ಕಾರ್ಯಗಳಲ್ಲಿ ತೊಡಗಬೇಕೆಂದು ಮನವಿ ಮಾಡುತ್ತೇನೆ. pic.twitter.com/uDIhexR8aL
— Dr Sudhakar K (@mla_sudhakar) April 15, 2021
ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿನ ಸ್ಫೋಟ:
Recommended Video
ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ 11265 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 1094912ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಒಂದೇ ದಿನ 38 ಜನರು ಮಹಾಮಾರಿಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 13046ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 4364 ಸೋಂಕಿತರು ಗುಣಮುಖರಾಗಿದ್ದಾರೆ. ಕರ್ನಾಟಕದಲ್ಲಿ ಒಟ್ಟು 996367 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದಾರೆ. ಇದರ ಹೊರತಾಗಿ ರಾಜ್ಯದಲ್ಲಿ 85480 ಸಕ್ರಿಯ ಪ್ರಕರಣಗಳಿವೆ.