ದೇವೇಗೌಡರು 4 ಜನರ ಮೇಲೆ ಹೋಗೋ ದಿನ ದೂರವಿಲ್ಲ: ರಾಜಣ್ಣನಿಗೆ ಸುಧಾಕರ್ ಸಲಹೆಯೇನು?
ಬೆಂಗಳೂರು, ಜುಲೈ 01: ಮಾಜಿ ಪ್ರಧಾನಮಂತ್ರಿ ಎಚ್. ಡಿ. ದೇವೇಗೌಡ ನಾಲ್ಕು ಜನರ ಹೆಗಲ ಮೇಲೆ ಹೋಗುವ ಕಾಲ ಇನ್ನು ದೂರವಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಮಾಜಿ ಶಾಸಕ ಕೆ. ಎನ್. ರಾಜಣ್ಣ ವಿರುದ್ಧ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಮಾಜಿ ಪ್ರಧಾನಿ ಹಾಗೂ ಹಿರಿಯ ರಾಜಕೀಯ ಮುತ್ಸದಿ ಎಚ್. ಡಿ. ದೇವೇಗೌಡರ ಬಗ್ಗೆ ಮಾಜಿ ಶಾಸಕ ಕೆ. ಎನ್. ರಾಜಣ್ಣ ನೀಡಿರುವ ಹೇಳಿಕೆ ಅತ್ಯಂತ ಖಂಡನೀಯವಾಗಿದೆ. ಎಚ್ಡಿಡಿ ಈ ನಾಡಿನ ಮತ್ತು ದೇಶದ ಆಸ್ತಿ. ಅವರು ಈ ವಯಸ್ಸಿನಲ್ಲಿಯೂ ನಡೆಸುತ್ತಿರುವ ಹೋರಾಟ ಮಾದರಿಯಾಗಿದೆ," ಎಂದು ಡಾ ಕೆ ಸುಧಾಕರ್ ಟ್ವೀಟ್ ಮಾಡಿದ್ದಾರೆ.
ದೇವೇಗೌಡರು 4 ಜನರ ಹೆಗಲ ಮೇಲೆ ಹೋಗುವ ಕಾಲ ಹತ್ತಿರವಿದೆ: ರಾಜಣ್ಣ ವಿವಾದಾತ್ಮಕ ಹೇಳಿಕೆ
ದೇಶದ ಪ್ರಧಾನಮಂತ್ರಿ ಆಗಿದ್ದ ಮೊದಲ ಕನ್ನಡಿಗರು ಎಂಬ ಖ್ಯಾತಿ ಹೊಂದಿರುವ ಎಚ್. ಡಿ. ದೇವೇಗೌಡರ ಕುರಿತು ಕೆ. ಎನ್. ರಾಜಣ್ಣ ನೀಡಿರುವ ಹೇಳಿಕೆಯ ಸುತ್ತ ಏನೆಲ್ಲಾ ಬೆಳವಣಿಗೆಗಳು ಆಗಿವೆ. ಅವರ ಹೇಳಿಕೆಯ ಹಿಂದಿನ ಚರ್ಚೆ ಹೇಗಿತ್ತು?, ದೇವೇಗೌಡರ ಬಗ್ಗೆ ರಾಜಣ್ಣ ಆಡಿದ ಮಾತಿಗೆ ಕುಮಾರಣ್ಣ ಕೊಟ್ಟ ತಿರುಗೇಟಿನ ಕುರಿತು ಒಂದು ವರದಿ ಇಲ್ಲಿದೆ ನೋಡಿ.
ಸಾರ್ವಜನಿಕ ಕ್ಷಮೆಯಾಚನೆಗೆ ಸುಧಾಕರ್ ಆಗ್ರಹ
"ಮಾಜಿ ಪ್ರಧಾನಮಂತ್ರಿ ಎಚ್. ಡಿ. ದೇವೇಗೌಡರ ಬಗ್ಗೆ ಕೆ. ಎನ್. ರಾಜಣ್ಣ ನೀಡಿರುವ ಹೇಳಿಕೆಯು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ. ಸಾರ್ವಜನಿಕ ಜೀವನದಲ್ಲಿರುವ ಕೆ. ಎನ್. ರಾಜಣ್ಣ ಕೂಡಲೇ ಸಾರ್ವಜನಿಕವಾಗಿ ಕ್ಷಮೆ ಕೇಳುವ ಮೂಲಕ ತಮ್ಮ ವ್ಯಕ್ತಿತ್ವವನ್ನು ಉಳಿಸಿಕೊಳ್ಳಬೇಕು," ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಟ್ವೀಟ್ ಮಾಡಿದ್ದಾರೆ.
ರಾಜಣ್ಣ ನೀಡಿದ ಯಾವ ಹೇಳಿಕೆ ವಿವಾದದ ಬೆಂಕಿ ಹೊತ್ತಿಸಿತು?
"ಮಾಜಿ ಪ್ರಧಾನಮಂತ್ರಿ ದೇವೇಗೌಡರು ಈಗ ಇಬ್ಬರ ಹೆಗಲ ಮೇಲೆ ಕೈ ಹಾಕಿಕೊಂಡು ನಡೆದಾಡುತ್ತಿದ್ದಾರೆ. ಅವರು ನಾಲ್ವರ ಮೇಲೆ ಹೋಗುವ ಕಾಲ ಇನ್ನೂ ದೂರದಲ್ಲಿ ಇಲ್ಲ," ಎಂದು ಮಾಜಿ ಶಾಸಕ ಕೆ. ಎನ್. ರಾಜಣ್ಣ ವಿವಾದಾತ್ಮಕ ಹೇಳಿಕೆ ನೀಡಿದ್ದರು. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕಾವಣದಾಲದಲ್ಲಿ ನಡೆದ ಖಾಸಗಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ದೇವೇಗೌಡರ ಬಗ್ಗೆ ವಿವಾದದ ಕಿಡಿ ಹೊತ್ತಿಸುವಂತಹ ಹೇಳಿಕೆಯೊಂದನ್ನು ನೀಡಿದರು.
ಇದೇ ನನ್ನ ಕೊನೆಯ ಚುನಾವಣೆ ಎಂದ ಕೆಎನ್ ರಾಜಣ್ಣ
"ಈಗ ನನ್ನ ವಯಸ್ಸು 72. ಇದೊಂದು ಬಾರಿ ಚುನಾವಣೆಗೆ ನಿಲ್ಲುತ್ತೇನೆ. ಮುಂದಿನ ಬಾರಿ ನೀವೇ ನಿಂತುಕೊಳ್ಳಿ ಎಂದರೂ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಅಂದು ನನಗೆ ನಡೆದಾಡುವುದಕ್ಕೂ ಆಗುವುದು ಸಂದೇಹವಾಗುತ್ತದೆ. ನಾನು ಯಾವುದೇ ಕಾರಣಕ್ಕೂ ಶೋಕಿಗಾಗಿ ರಾಜಕಾರಣವನ್ನು ಮಾಡುವುದಿಲ್ಲ. ಈ ಬಾರಿ ನಾನು ಚುನಾವಣೆ ಗೆದ್ದರೆ, ನೀವೇ ಚುನಾವಣೆಯನ್ನು ಗೆದ್ದಂತೆ ಆಗುತ್ತದೆ. ನಾನು ನಾಮಮಾತ್ರಕ್ಕೆ ಶಾಸಕನಾಗಿ ಇರುತ್ತೇನೆ, ನಿಮ್ಮ ಸಮಸ್ಯೆಗಳ ಬಗ್ಗೆ ನೀವೇ ಅಧಿಕಾರಿಗಳನ್ನು ಪ್ರಶ್ನೆ ಮಾಡಬಹುದು," ಎಂದು ಹೇಳಿಕೆ ನೀಡಿದ್ದರು.
ಕೆಎನ್ ರಾಜಣ್ಣನಿಗೆ ಎಚ್ಚರಿಕೆ ಕೊಟ್ಟ ಕುಮಾರಣ್ಣ
ದೇವೇಗೌಡರ ಬಗ್ಗೆ ಕೆಎನ್ ರಾಜಣ್ಣ ನೀಡಿರುವ ಹೇಳಿಕೆಯು ಅವನ ಸಂಸ್ಕೃತಿಯನ್ನು ತೋರಿಸುತ್ತದೆ. ಈ ಮೊದಲು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ ಸಂದರ್ಭದಲ್ಲಿ ಅವರನ್ನು ಗೆಲ್ಲಿಸುವುದಕ್ಕೆ ಇದೇ ದೇವೇಗೌಡರು ಬೇಕಾಗಿತ್ತು. ಆದರೆ ಇಂದು ಅವರ ವಿರುದ್ಧವೇ ಇಂಥ ಹೇಳಿಕೆಯನ್ನು ನೀಡುತ್ತಿದ್ದಾರೆ. ನಾನು ಅವರನ್ನು ಕ್ಷಮೆ ಕೇಳಿ ಎಂದು ಹೇಳುವುದಿಲ್ಲ, ಆದರೆ ಎಚ್ಚರ ಎಂದು ಹೇಳುವುದಕ್ಕೆ ಬಯಸುತ್ತೇನೆ," ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
Recommended Video