ಸಿಎಂ ಯಡಿಯೂರಪ್ಪ ಅವರು ಸತ್ಯದ ಪರ ನಿಂತಿದ್ದಾರೆ: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ
ಬೆಂಗಳೂರು, ಏ. 19: ಲಾಕ್ಡೌನ್ ಮಧ್ಯೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಪುತ್ರ ನಿಖೀಲ್ ಕುಮಾರಸ್ವಾಮಿ ಅವರು ವಿವಾಹ ನಡೆದಿದೆ. ಕೊರೊನಾ ವೈರಸ್ ಹಾಗೂ ಮೊದಲ ಹಂತದ ಲಾಕ್ಡೌನ್ಗೆ ಮೊದಲೇ ಅವರ ವಿವಾಹ ನಿಗದಿಯಾಗಿತ್ತು. ಮೊದಲೆ ನಿಗದಿಯಾದಂತೆ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ವಿವಾಹವನ್ನು ರೇವತಿ ಅವರೊಂದಿಗೆ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಮಾಡಿದೆ. ರಾಮನಗರದ ಸಮೀಪ ಕೇತಗಾನಹಳ್ಳಿಯ ತೋಟದ ಮನೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ವಿವಾಹ ನಡೆದಿದೆ.
ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ವಿವಾಹದ ಕುರಿತು ನಡೆದಿದ್ದ ಚರ್ಚೆಗಳಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಬಸವಣ್ಣನ ವಚನ ಹೇಳುವ ಮೂಳಕ ತಿರುಗೇಟು ಕೊಟ್ಟಿದ್ದಾರೆ.
ಸುವರ್ಣ ಅವಕಾಶ ಕೈಚೆಲ್ಲಿ ಲಾಕ್ಡೌನ್ ಪಾಲಿಸಿ ಸರಳ ವಿವಾಹ
ನನ್ನ ಒಡನಾಡಿಗಳು, ನನ್ನ ಹಿತೈಷಿಗಳು, ನನ್ನ ಜನ, ನನ್ನ ಕಾರ್ಯಕರ್ತರು ಇವರೆಲ್ಲರೊಂದಿಗೆ ಶುಭ ಸಮಾರಂಭವೊಂದರಲ್ಲಿ ಒಟ್ಟಿಗೆ ಸೇರಲು ವೈಯಕ್ತಿಕವಾಗಿ ನನಗೆ ಇದ್ದ ಒಂದೇ ಒಂದು ಸುವರ್ಣ ಅವಕಾಶವನ್ನು ಕೈಚೆಲ್ಲಿ ನಿಖಿಲ್ ವಿವಾಹವನ್ನು ಲಾಕ್ಡೌನ್ ನಿಯಮಗಳನ್ನು ಪಾಲಿಸಿ ಸರಳವಾಗಿ ಮಾಡಿದ್ದೇವೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಲಾಕ್ಡೌನ್ ಮಧ್ಯೆ ಪುತ್ರನ ವಿವಾಹ; ಭಾವುಕರಾದ ಮಾಜಿ ಸಿಎಂ ಕುಮಾರಸ್ವಾಮಿ!
ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಕ್ಷೇತ್ರಗಳ ಜನರು ನಿಖಿಲ್ ವಿವಾಹದಲ್ಲಿ ಭಾಗವಹಿಸಲು ಅನಕೂಲವಾಗುವಂತೆ ರಾಮನಗರ ಹಾಗೂ ಚನ್ನಪಟ್ಟಣಗಳಿಗೆ ಸಮೀಪದಲ್ಲಿ ಮಾಡಲು ಕುಮಾರಸ್ವಾಮಿ ನಿರ್ಣಯಿಸಿದ್ದರು. ಆದರೆ ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಕೇವಲ ಕುಟುಂಬದ ಸದಸ್ಯರು ಮಾತ್ರ ವಿವಾಹದಲ್ಲಿ ಭಾಗವಹಿಸಿದ್ದರು.
ಯಡಿಯೂರಪ್ಪ ಸತ್ಯದ ಪರ ನಿಂತಿದ್ದಾರೆ ಎಂದ ಎಚ್ಡಿಕೆ
ಪುತ್ರನ ವಿವಾಹದ ನಡೆದ ಚರ್ಚೆಗಳಿಗೆ ಸ್ವತಃ ಮಾಜಿ ಸಿಎಂ ಕುಮಾರಸ್ವಾಮಿ ಅವರು ಟ್ವೀಟರ್ನಲ್ಲಿ ಸ್ಪಷ್ಟನೆ ಒಟ್ಟಿದ್ದಾರೆ. 'ನನ್ನ ಪುತ್ರ ನಿಖಿಲ್ ವಿವಾಹದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡರೂ, ನಿಯಮ ಪಾಲಿಸಿದರೂ ಇದ್ಯಾವುದೂ ಪಾಲನೆ ಆಗಿಲ್ಲ ಎಂಬ ಚರ್ಚೆಗಳು ನಡೆದವು. ರಾಜಕೀಯ ದ್ವೇಷಕ್ಕಾಗಿ ಶುಭ ಸಮಾರಂಭದ ವಿಷಯದಲ್ಲೂ ವಿಷ ಕಾರುವ ಮನಸ್ಥಿತಿಗಳು ರಾರಾಜಿಸಿದವು. ಆದರೆ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇವೆಲ್ಲವನ್ನೂ ನಿರಾಕರಿಸುವ ಮೂಲಕ ಸತ್ಯದ ಪರ ನಿಂತಿದ್ದಾರೆ' ಎಂದು ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಧನ್ಯವಾದಗಳನ್ನು ಹೇಳಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಅವರ ವಿವಾಹದಲ್ಲಿ ಸಮಾಜಿಕ ಅಂತರ ಕಾಯ್ದುಕೊಂಡು, ಅತ್ಯಂತ ಕಡಿಮೆ ಜನರು ಭಾಗಿಯಾಗುವ ಮೂಲಕ ಲಾಕ್ಡೌನ್ ನಿಯಮಗಳಿಗೆ ಅನುಗುಣವಾಗಿ ವಿವಾಹ ನಡೆದಿದೆ ಎಂದು ಯಡಿಯೂರಪ್ಪ ಅವರು ಹೇಳಿಕೆ ಕೊಟ್ಟಿದ್ದರು.
ಯಡಿಯೂರಪ್ಪ ಅವರಿಗೆ ಧನ್ಯವಾದ ಹೇಳಿದ ಎಚ್ಡಿಕೆ
ರಾಜ್ಯರಾಜಕಾರಣದ ದೊಡ್ಡ ಕುಟುಂಬ ಸರಳವಾಗಿ ವಿವಾಹ ಸಮಾರಂಭ ಮಾಡಿದೆ ಎಂದೂ ಯಡಿಯೂರಪ್ಪ ಅವರು ಸಹೃದಯದ ಮಾತುಗಳನ್ನಾಡಿರುವುದಕ್ಕೆ ಅವರಿಗೆ ಮನದಾಳದ ಧನ್ಯವಾದಗಳು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಹೇಳಿದ್ದಾರೆ.
ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಯಡಿಯೂರಪ್ಪ ಅವರು, ಅವರ ಕುಟುಂಬ ಅತ್ಯಂತ ದೊಡ್ಡ ಕುಟುಂಬ. ಸರ್ಕಾರದಿಂದ ಅನುಮತಿ ಪಡೆದು ಮದುವೆ ಮಾಡಿದ್ದಾರೆ. ಅನುಮತಿಯಂತೆ ಅತ್ಯಂತ ಕಡಿಮೆ ಜನರು ಭಾಗವಹಿಸಿದ್ದರು. ಯಾವುದೇ ನಿಯಮಗಳ ಉಲ್ಲಂಘನೆ ಆಗಿಲ್ಲ. ಲಾಕ್ಡೌನ್ ಪಾಲಿಸಿದ್ದಕ್ಕೆ ಕುಮಾರಸ್ವಾಮಿ ಅವರಿಗೆ ಅಭಿನಂದನೆಗಳು ಎಂದಿದ್ದರು.
ಮನೆಯೊಳಗಿನ ಕಿಚ್ಚು ನೆರೆಮನೆಯ ಸುಡದು ಕೂಡಲಸಂಗಮದೇವಾ
ನಿಖಿಲ್ ವಿವಾಹದಲ್ಲೂ ರಾಜಕೀಯ ಹುಡುಕಿದ ಸಾಮಾಜಿಕ ಮಾಧ್ಯಮದ ಕೆಲವು ಹುಳುಕು ಮನಸ್ಸಿನ ಮಂದಿ ತಮ್ಮ ಮನದಲ್ಲಿರುವ ವಿಷ ಕಾರಿಕೊಂಡಿದ್ದಾರೆ.
ಅವರೆಲ್ಲರೂ ಶರಣರ ಈ ಮಾತನ್ನು ನೆನಪಲ್ಲಿಟ್ಟುಕೊಳ್ಳಬೇಕು ಎಂದು ಕುಮಾರಸ್ವಾಮಿ ಬಸವಣ್ಣನವರ ವಚನವನ್ನು ಹೇಳಿದ್ದಾರೆ.
"ಮನದ ಕೋಪ ತನ್ನ ಅರಿವಿನ ಕೇಡು
ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ
ನೆರೆಮನೆಯ ಸುಡದು ಕೂಡಲಸಂಗಮದೇವಾ" ಎಂದು ವಿವಾಹ ವಿರೋಧಿಸಿ ಮಾತನಾಡಿದ್ದವರಿಗೆ ತಿರುಗೇಟು ಕೊಟ್ಟಿದ್ದಾರೆ.