ನಿಖಿಲ್ ಕಲ್ಯಾಣ: ಯುವರಾಜನ ರಾಜಕೀಯಕ್ಕೆ ಮತ್ತೊಂದು ಅಡಿಗಲ್ಲು
ಬೆಂಗಳೂರು, ಮಾ. 02: ರಾಮನಗರ ಹಾಗೂ ಚನ್ನಪಟ್ಟಣ ಕ್ಷೇತ್ರಗಳ ಮಧ್ಯದಲ್ಲಿ ಪುತ್ರನ ವಿವಾಹ ಮಾಡುವ ಮೂಲಕ ಎರಡೂ ಕ್ಷೇತ್ರಗಳ ಜನರನ್ನು ಭಾವನಾತ್ಮಕವಾಗಿ ಸೆಳೆಯಲು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮುಂದಾಗಿದ್ದಾರೆ. ರಾಮನಗರದ ಜಾನಪದ ಲೋಕದಲ್ಲಿ ಪುತ್ರನ ಮದುವೆ ಮಾಡಲು ಎಚ್ಡಿಕೆ ನಿರ್ಧರಿಸಿದ್ದು, ಮದುವೆ ಎಂಬ ಭಾವನಾತ್ಮಕ ವಿಚಾರದ ಮೂಲಕ ರಾಮನಗರ ಹಾಗೂ ಚನ್ನಪಟ್ಟಣ ಕ್ಷೇತ್ರಗಳಲ್ಲಿ ನಿಖಿಲ್ ಕುಮಾರಸ್ವಾಮಿ ಅವರಿಗೆ ರಾಜಕೀಯ ಭದ್ರ ಬುನಾದಿ ಹಾಕುವ ಗುರಿ ಹೊಂದಲಾಗಿದೆ.
ಎರಡೂ ಕ್ಷೇತ್ರಗಳ ಜನರನ್ನು ಮಾಜಿ ಸಿಎಂ ಕುಮಾರಸ್ವಾಮಿ ಅವರು ಮದುವೆಗೆ ಆಹ್ವಾನಿಸುತ್ತಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರ ಮದುವೆಗೆ ಬರುವ ಎರಡೂ ಕ್ಷೇತ್ರಗಳ ಜನರಿಗೆ ವಿಶೇಷ ಉಡುಗೊರೆ ಕೊಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ನಿಖಿಲ್ ಮದುವೆ ಜವಾಬ್ದಾರಿಯನ್ನು ಕಾರ್ಯಕರ್ತರಿಗೇ ವಹಿಸಿದ ಎಚ್ಡಿಕೆ
ಇದಕ್ಕಾಗಿ ಈಗಾಗಲೇ ಆಯಾ ಕ್ಷೇತ್ರಗಳ ಮುಖಂಡರೊಂದಿಗೆ ಚರ್ಚಿಸಿ ಎಲ್ಲ ಕುಟುಂಬಗಳ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ರಾಮನಗರ ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳನ್ನು ಜೆಡಿಎಸ್ ಪಕ್ಷಕ್ಕೆ ಮತ್ತಷ್ಟು ಭದ್ರಕೋಟೆ ಮಾಡುವುದು, ಅಲ್ಲಿ ಮದುವೆ ಮಾಡುತ್ತಿರುವುದರ ಉದ್ದೇಶ ಎಂದೇ ಹೇಳಲಾಗುತ್ತಿದೆ.
ಎರಡೂ ಕ್ಷೇತ್ರಗಳ ಜನರಿಗೆ ಭಾವನಾತ್ಮಕ ಉಡುಗೊರೆ
ನಿಖಿಲ್ ಕುಮಾರಸ್ವಾಮಿ ಹಾಗೂ ವಿಜಯನಗರ ಶಾಸಕ ಕೃಷ್ಣಪ್ಪ ಅವರ ಅಣ್ಣನ ಮೊಮ್ಮಗಳು ರೇವತಿ ಅವರ ವಿವಾಹ ನಿಶ್ಚಿತಾರ್ಥ ಬೆಂಗಳೂರಿನ ಹೋಟೆಲ್ ತಾಜ್ವೆಸ್ಟೆಂಡ್ನಲ್ಲಿ ನಡೆದಿತ್ತು. ಏಪ್ರೀಲ್ 17ರಂದು ನಿಖಿಲ್-ರೇವತಿ ವಿವಾಹ ನಡೆಯಲಿದ್ದು, ಮದುವೆಗೆ ಬಂದು ಹಾರೈಸುವ ಕ್ಷೇತ್ರಗಳ ಜನತೆಗೆ ವಿಶೇಷ ಉಡುಗೋರೆ ಕೊಡಲು ಎಚ್ಡಿಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ 70 ಸಾವಿರ ಕುಟುಂಬಗಳು, ರಾಮನಗರ ಕ್ಷೇತ್ರದಲ್ಲಿ 68 ಸಾವಿರ ಕುಟುಂಬಗಳಿವೆ ಎಂದು ಮಾಹಿತಿ ಕಲೆ ಹಾಕಲಾಗಿದೆ. ಆ ಎಲ್ಲ ಕುಟುಂಬಗಳಿಗೂ ಉಡುಗೊರೆ ಕೊಡಲು ತೀರ್ಮಾನ ಮಾಡಲಾಗಿದ್ದು, ವಿಶೇಷ ಉಡುಗೊರೆ ಸಿದ್ದವಾಗುತ್ತಿವೆ.
ಆಮಂತ್ರಣ ಪತ್ರಿಕೆಯೊಂದಿಗೆ ಉಡುಗೊರೆ ಹಂಚಿಕೆ
ಮದುವೆಗೆ ಆಮಂತ್ರಿಸಲು 8 ಲಕ್ಷ ಲಗ್ನಪತ್ರಿಕೆಗಳನ್ನು ಮುದ್ರಿಸಲಾಗಿದೆ. ಸುಮಾರು ಒಂದೂವರೆ ಲಕ್ಷ ಕುಟುಂಬಗಳಿಗೆ ಲಗ್ನಪತ್ರಿಕೆ ಜೊತೆಗೆ ಉಡುಗೊರೆ ಕೊಡಲಾಗುತ್ತದೆ. ಪ್ರತಿ ಕುಟುಂಬಕ್ಕೆ ಸೀರೆ, ಪಂಚೆ, ಶರ್ಟ್ ಹಾಗೂ ಶಲ್ಯ ಆಮಂತ್ರಣ ಪತ್ರಿಕೆಯೊಂದಿಗೆ ಮೊದಲೇ ಕೊಡಲಾಗುತ್ತದೆ. ಜೊತೆಗೆ ಅರಿಶಿನ, ಕುಂಕುಮದ ಭರಣಿಗಳನ್ನು ಉಡುಗೊರೆ ರೂಪದಲ್ಲಿ ಕೊಡಲಾಗುತ್ತದೆ ಎನ್ನಲಾಗಿದೆ.
ಜಾತ್ಯತೀತವಾಗಿ ಎಲ್ಲ ಸಮುದಾಯದ ಜನರಿಗೂ ಉಡುಗೊರೆ ಕೊಡಲು ತೀರ್ಮಾನ ಮಾಡಲಾಗಿದೆ. ಮುಸಲ್ಮಾನ, ಕ್ರಿಶ್ಚಿಯನ್ ಧರ್ಮಿಯರಿಗೆ ಸೀರೆ, ಪ್ಯಾಂಟ್, ಶರ್ಟ್ ಉಡುಗೊರೆಯನ್ನು ಲಗ್ನಪತ್ರಿಕೆ ಜೊತೆಗೆ ತಲುಪಿಸಲಾಗುತ್ತದೆ. ರಾಮನಗರ, ಚನ್ನಪಟ್ಟಣ ಕ್ಷೇತ್ರಗಳ ಜನತೆಗೆ ವಿಶೇಷ ಉಡುಗೊರೆ ನೀಡುವ ಮೂಲಕ ಜನರಿಗೆ ಭಾವನಾತ್ಮಕವಾಗಿ ಹತ್ತಿರವಾಗಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರಿಗೆ ರಾಜಕೀಯ ವೇದಿಕೆ ರೂಪಿಸಲು ಎಚ್ಡಿಕೆ ಸಿದ್ಧತೆ ನಡೆಸಿದ್ದಾರೆ. ಒಂದು ಮನೆಗೆ ಉಡುಗೊರೆ ಕೊಡಲು ಸುಮಾರು 3 ಸಾವಿರ ರೂಪಾಯಿಯಾಗುತ್ತದೆಂದು ಅಂದಾಜಿಸಲಾಗಿದೆ.
ನಿಖಿಲ್ ಲಗ್ನ ಪತ್ರಿಕೆಯಲ್ಲಿ ಎಚ್ಡಿಕೆ ಭಾವುಕ ಸಂದೇಶವೇನಿದೆ?
ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ?
ಮುಂದಿನ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಸ್ಪರ್ಧೆ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಜೊತೆಗೆ ಚನ್ನಪಟ್ಟಣ ಕ್ಷೇತ್ರದಿಂದ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಸ್ಪರ್ಧೆ ಮಾಡಲಿದ್ದಾರೆ ಎಂಬ ಮಾಹಿತಿಯಿದೆ. ಹೀಗಾಗಿ ಎರಡೂ ಕ್ಷೇತ್ರಗಳನ್ನು ಕುಟುಂಬದಂತೆ ನೋಡಿಕೊಳ್ಳುವುದು ಎಚ್ಡಿಕೆ ಯೋಜನೆ.
ಹಿಂದೆ ಮಂಡ್ಯ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ ಬಿಜೆಪಿಯ ರಾಜಕೀಯ ತಂತ್ರಗಾರಿಕೆಯಿಂದ ಜೆಡಿಎಸ್ಗೆ ಹಿನ್ನಡೆಯಾಗಿತ್ತು. ಹೀಗಾಗಿ ರಾಜಕೀಯ ತಂತ್ರಗಾರಿಕೆಗಿಂತ ಭಾವನಾತ್ಮಕವಾಗಿ ಮತದಾರರನ್ನು ಸೆಳೆಯುವುದು, ಆ ಮೂಲಕ ಎರಡೂ ಕ್ಷೇತ್ರಗಳಲ್ಲಿ ಹಿಡಿತ ಇಟ್ಟುಕೊಳ್ಳುವುದು ಜೆಡಿಎಸ್ ಗುರಿ.
ಜಾನಪದ ಲೋಕದಲ್ಲಿ 'ಸಪ್ತಪದಿ ಮಂಟಪ'
ಏಪ್ರೀಲ್ 17 ರಂದು ರಾಮನಗರದ ಜಾನಪದ ಲೋಕದಲ್ಲಿ ನಡೆಯುವ ಮದುವೆಗೆ 'ಸಪ್ತಪದಿ ಮಂಟಪ' ಸಿದ್ಧವಾಗುತ್ತಿದೆ. 8 ಲಕ್ಷಲಗ್ನಪತ್ರಿಕೆಗಳನ್ನು ಮುದ್ರಣ ಮಾಡಿರುವುದರ ಆಧಾರದ ಮೇಲೆ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಮದುವೆಯ ದಿನ 4 ರೀತಿಯ ಸಿಹಿ ಸೇರಿದಂತೆ ಭಕ್ಷ್ಯಭೋಜನವನ್ನು ಬಳೆಪೇಟೆ ವೆಂಕಟೇಶ್ ಅವರು ತಯಾರಿಸಲಿದ್ದಾರೆ. ಮದುವೆಯ ದಿನ ಊಟ ಬಡಿಸಲು ಒಂದು ಸಾವಿರ ಮಂದಿ ಅಡುಗೆ ಸಹಾಯಕರನ್ನ ನೇಮಿಸಲಾಗುತ್ತಿದೆ.
ದಕ್ಷಿಣ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಮೀರಿಸಿ ಬಿಜೆಪಿ ಇತ್ತೀಚೆಗೆ ಬೆಳೆಯುತ್ತಿದೆ. ಇದರ ನೇರ ಪರಿಣಾಮ ಜೆಡಿಎಸ್ ಭದ್ರಕೋಟೆ ಮೇಲಾಗಿದೆ. ಹೀಗಾಗಿಯೇ ಇಂಥದ್ದೊಂದು ಪ್ರಯತ್ನ ನಡೆಯುತ್ತಿದೆ ಎನ್ನಲಾಗಿದೆ.