ಖರ್ಗೆ ಅವರನ್ನು ಸಿಎಂ ಮಾಡಿ ಎಂದಿದ್ದೆ, ಆದರೆ ಅವರು ಒಪ್ಪಲಿಲ್ಲ!
ಬೆಂಗಳೂರು, ಅ. 23: ಉಪ ಚುನಾವಣೆಯ ಸಂದರ್ಭದಲ್ಲಿ ಒಂದೊಂದಾಗಿ ರಾಜಕೀಯ ಗುಟ್ಟುಗಳು ಹೊರಗೆ ಬರುತ್ತಿವೆ. ಕಳೆದ ವಿಧಾನಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳ ಕುರಿತು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಶಿರಾ ಉಪ ಚುನಾವಣೆ ಪ್ರಚಾರದಲ್ಲಿ ಮಾತನಾಡಿದ್ದಾರೆ. ಪುತ್ರ ಎಚ್ ಡಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ನಾನು ಒಪ್ಪಿರಲಿಲ್ಲ ಎಂಬ ಸ್ಪೋಟಕ ಹೇಳಿಕೆಯನ್ನು ಕೊಟ್ಟಿದ್ದಾರೆ.
ಆದರೆ ದೇವೇಗೌಡರು ಸೂಚಿಸಿದ್ದ ಕಾಂಗ್ರೆಸ್ ನಾಯಕರನ್ನು ರಾಜ್ಯದ ಮುಖ್ಯಮಂತ್ರಿ ಮಾಡಲು ಕಾಂಗ್ರೆಸ್ ಹೈಕಮಾಂಡ್ ಒಪ್ಪಲಿಲ್ಲವಂತೆ. ಕೊನೆಗೆ ವಿಧಿಯಿಲ್ಲದೆ ನಾನು ಕಾಂಗ್ರೆಸ್ ಹೈಕಮಾಂಡ್ ಹೇಳಿದ್ದನ್ನು ಒಪ್ಪಿಕೊಂಡೆ ಎಂದು ಅವರು ಚುನಾವಣಾ ಪ್ರಚಾರದಲ್ಲಿ ಹೇಳಿದ್ದಾರೆ. ಆ ಮೂಲಕ ಈಗ ಕಾಂಗ್ರೆಸ್ ಪಕ್ಷದಲ್ಲಿ ಸಂಚಲನ ಉಂಟಾಗುವ ಸಾಧ್ಯೆತಗಳಿವೆ. ಹಾಗಾದರೆ ಮಾಜಿ ಪ್ರಧಾನಿ ದೇವೇಗೌಡರು ರಾಜ್ಯದ ಮುಖ್ಯಮಂತ್ರಿ ಹುದ್ದೆಗೆ ಸೂಚಿಸಿದ ಆ ನಾಯಕ ಯಾರು? ಕಾಂಗ್ರೆಸ್ ಹೈಕಮಾಂಡ್ ಯಾಕೆ ದೇವೇಗೌಡರ ಸಲಹೆಯನ್ನು ಒಪ್ಪಲಿಲ್ಲ? ಮುಂದೆ ಓದಿ!
ಕಾಂಗ್ರೆಸ್ನವರೇ ಸಿಎಂ ಆಗಲಿ ಎಂದಿದ್ದೆ
ಕಳೆದ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಬಳಿಕ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಗುಲಾಮ್ ನಬಿ ಆಜಾದ್ ಹಾಗೂ ಈಗ ರಾಜಸ್ಥಾನದ ಮುಖ್ಯಮಂತ್ರಿ ಆಗಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ನಮ್ಮ ಮನೆಗೆ ಬಂದಿದ್ದರು. ನಮೆಗೆ ಬಂದಾಗ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದರು. ಆದರೆ ಅವರ ಸಲಹೆಗೆ ನಾನು ಒಪ್ಪಿರಲಿಲ್ಲ. ನಾನು ಕಾಂಗ್ರೆಸ್ ನಾಯಕರನ್ನೇ ಮುಖ್ಯಮಂತ್ರಿ ಹುದ್ದೆಗೆ ಸೂಚಿಸಿದ್ದೆ ಎಂದು ದೇವೇಗೌಡರು ಪ್ರಚಾರದಲ್ಲಿ ಹೇಳಿದರು.
ಆರ್ಆರ್ ನಗರದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ತಂತ್ರಗಾರಿಕೆಗೆ ಉಳಿದವರು ತತ್ತರ!
ಖರ್ಗೆ ಅವರ ಹೆಸರು ಸೂಚಿಸಿದ್ದೆ
ಮನೆಗೆ ಬಂದಿದ್ದ ಕಾಂಗ್ರೆಸ್ ನಾಯಕರಿಗೆ ಕುಮಾರಸ್ವಾಮಿ ಸದ್ಯ ಮುಖ್ಯಮಂತ್ರಿ ಆಗುವುದು ಬೇಡ. ಹಿರಿಯರಾದ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಿ ಎಂದು ಹೇಳಿದ್ದೆ. ಆಗ ಆಜಾದ್ ಹಾಗೂ ಗೆಹ್ಲೊಟ್ ಅವರು, ಇಲ್ಲಾ ಸರ್ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿ ಅಂತ ನಾವು ತೀರ್ಮಾನ ಮಾಡಿದ್ದೇವೆ ಎಂದರು. ಅವರು ತೀರ್ಮಾನ ಮಾಡಿಕೊಂಡೇ ಬಂದಮೇಲೆ ನಾನೆಷ್ಟು ಹೇಳಬಹುದು ಎಂದು ದೇವೇಗೌಡರು ಭಾಷಣದಲ್ಲಿ ಪ್ರಶ್ನೆ ಮಾಡಿದರು.
ನಮ್ಮ ಮೇಲೆ ಈಗ ಇಲ್ಲಸಲ್ಲದ ಆರೋಪ
ಈಗ ಸುಖಾಸುಮ್ಮನೆ ನಮ್ಮ ಮೇಲೆಯೇ ಸಲ್ಲದ ಆರೋಪಗಳನ್ನು ರಾಜ್ಯದ ಕೆಲವು ನಾಯಕರು ಮಾಡುತ್ತಿದ್ದಾರೆ. ನಾನೇ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಸಿಎಂ ಮಾಡಿ ಎಂದು ಸಲಹೆ ಮಾಡಿದ್ದೆ. ಆದರೆ ಅದನ್ನು ಕಾಂಗ್ರೆಸ್ ಹೈಕಮಾಂಡ್ ತಿರಸ್ಕರಿಸಿತ್ತು. ಆ ಮೇಲೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದು ಎಂದು ಕಾಂಗ್ರೆಸ್ ಜೊತೆಗಿನ ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ನಡೆದಿದ್ದನ್ನು ದೇವೇಗೌಡರು ಮೊದಲ ಬಾರಿ ಬಹಿರಂಗಪಡಿಸಿದರು.
ಲೋಕಸಭಾ ಚುನಾವಣೇಲಿ ದೇವೇಗೌಡರು ಸೋತಿದ್ಯಾಕೆ? ಸಿದ್ದರಾಮಯ್ಯ ಹೇಳಿದ ಸತ್ಯ!
Recommended Video
ದಿ. ಮಾಜಿ ಶಾಸಕ ಸತ್ಯನಾರಾಯಣ ವ್ಯಕ್ತಿತ್ವ
ಕೆಲವು ದಿನಗಳ ಹಿಂದೆ ರಾಷ್ಟ್ರೀಯ ಪಕ್ಷವೊಂದು ದಿ. ಮಾಜಿ ಶಾಸಕ ಸತ್ಯನಾರಾಯಣ ಅವರಿಗೆ ಆಮಿಷ ಒಡ್ಡಿತ್ತು. ಆದರೆ ಅದಕ್ಕೆ ತಲೆಬಾಗದೆ ಪಕ್ಷದ ಜೊತೆ ನಿಂತ ಮಹಾನ್ ವ್ಯಕ್ತಿ ಅವರು. ಅಂಥವರ ಶ್ರೀಮತಿ ಅವರು ವಿಧಾನಸಭೆಗೆ ಹೋಗಲೇಬೇಕು. ಅವರು ಶಾಸಕರಾಗಲು ಶಿರಾ ಜನತೆಯ ಆಶೀರ್ವಾದ ಬೇಕು. ದಯಮಾಡಿ ಈ ಬಾರಿ ಅಮ್ಮಾಜಮ್ಮ ಅವರನ್ನು ಗೆಲ್ಲಿಸಬೇಕೆಂದು ತಮ್ಮಲ್ಲಿ ಪ್ರಾರ್ಥಿಸುತ್ತೇನೆ ಎಂದು ದೇವೇಗೌಡರು ಪ್ರಚಾರ ಭಾಷಣವನ್ನು ಮುಗಿಸಿದರು.