'ಗೌಡ್ರು ಒಪ್ಪಿದ್ರೆ ನಾನು ಚುನಾವಣೆಗೆ ಸ್ಪರ್ಧಿಸುವೆ'
ಬೇಲೂರು, ಏ.7: ಜೆಡಿಎಸ್ ವರಿಷ್ಠ, ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಚ್ ಡಿ ದೇವೇಗೌಡ ಅವರ ಪರ ಮಗ ಎಚ್ ಡಿ ರೇವಣ್ಣ ಅವರ ಕುಟುಂಬ ಬಿರುಸಿನ ಪ್ರಚಾರ ಕೈಗೊಂಡಿದೆ. ಹೊಳೆನರಸೀಪುರ, ಬೇಲೂರು ತಾಲೂಕುಗಳಲ್ಲಿ ಸೊಸೆ ಭವಾನಿ ರೇವಣ್ಣ ಅವರು ಸೋಮವಾರ ಪ್ರಚಾರ ನಡೆಸಿದ್ದಲ್ಲದೆ, ರಾಜಕೀಯ ಪ್ರವೇಶದ ಇಂಗಿತ ವ್ಯಕ್ತಪಡಿಸಿದರು.
ಭವಾನಿ ರೇವಣ್ಣ ಅವರು ಸೋಮವಾರ ಬೇಲೂರು ತಾಲೂಕಿನ ಅಂಗಡಿಹಳ್ಳಿ, ಇಬ್ಬೀಡು ಮುಂತಾದ ಗ್ರಾಮಗಳಲ್ಲಿ ದೇವೇಗೌಡರ ಪರ ಮತಯಾಚನೆ ಮಾಡಿದರು. ಹಾಸನ ಲೋಕಸಭಾ ಕ್ಷೇತ್ರದಲ್ಲಿ ದೇವೇಗೌಡರು ಈಗಾಗಲೇ ಗೆದ್ದಿದ್ದಾರೆ. ಜನರ ಪ್ರೀತಿ ವಿಶ್ವಾಸ ನಮ್ಮ ಕುಟುಂಬದ ಮೇಲೆ ಸದಾ ರಕ್ಷೆ ನೀಡಲಿದೆ ಎಂದು ಹೇಳಿದರು.
ಚುನಾವಣೆಗೆ ಸ್ಪರ್ಧೆ? : ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಒಪ್ಪಿಗೆ ನೀಡಿದರೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧ ಎಂದು ಇದೇ ಸಂದರ್ಭದಲ್ಲಿ ಭವಾನಿ ರೇವಣ್ಣ ಅವರು ಘೋಷಿಸಿದರು. ನನ್ನ ಮಗ ಪ್ರಜ್ವಲ್ ರೇವಣ್ಣನದ್ದು ರಾಜಕೀಯ ಪ್ರವೇಶವಾಗಿದೆ ಎಂದರು. ವಾರ್ ವಾರ್ ಗಿತ್ತಿಯರ ನಡುವಿನ ಮುನಿಸು, ಪ್ರಜ್ವಲ್ ಭವಿಷ್ಯ, ಮತಯಾಚನೆ ಸಂದರ್ಭದ ವಿವರ ಮುಂದಿದೆ...
ಪ್ರಜ್ವಲ್ ಚುನಾವಣೆ ಸ್ಪರ್ಧೆ ಯಾವಾಗ?
ಪ್ರಜ್ವಲ್ ರೇವಣ್ಣ ಈಗಾಗಲೇ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡಿದ್ದಾನೆ. ನಿಖಿಲ್ ಗೌಡಗೆ ರಾಜಕೀಯ ಪ್ರವೇಶದ ಇಚ್ಛೆ ಇಲ್ಲ. ನಿಖಿಲ್ ಕಾರ್ಯಕ್ಷೇತ್ರ ಏನಿದ್ದರೂ ರಾಮನಗರಕ್ಕೆ ಸೀಮಿತ ಎಂದರು. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಪ್ರಜ್ವಲ್ ಅವರು ಪ್ರಚಾರ ಮಾಡುವ ಮೂಲಕ ಜನರೊಡನೆ ಬೆರೆತು ಅವರ ಕಷ್ಟ ಸುಖಗಳಿಗೆ ನೆರವಾಗುತ್ತಿದ್ದಾರೆ ಎಂದರು.
ವಾರ್ ವಾರ್ ಗಿತ್ತಿಯವರ ನಡುವೆ ಕದನ?
ನನ್ನ ವಾರಗಿತ್ತಿ ಅನಿತಾ ಕುಮಾರಸ್ವಾಮಿ ಅವರ ಜತೆ ನನಗೆ ಯಾವುದೇ ವೈಮನಸ್ಯ ಇಲ್ಲ. ನಮ್ಮ ಕುಟುಂಬ ಒಟ್ಟಾಗಿದ್ದೇವೆ. ರಾಜಕೀಯವಾಗಿ ಹಾಗೂ ಕೌಟುಂಬಿಕ ಬಾಂಧವ್ಯವಾಗಲಿ ನಮಗೆ ಅಡ್ಡಿ ಬಂದಿಲ್ಲ ಎಂದು ಭವಾನಿ ರೇವಣ್ಣ ಹೇಳಿದರು.
ಪ್ರಜ್ವಲ್ ಭವಿಷ್ಯದ ಚಿಂತೆ,ನಿಖಿಲ್ ಗೌಡ ಪ್ರವೇಶ ಸಾಧ್ಯವೇ?
'ನಿಖಿಲ್ ಗೌಡ ರಾಜಕೀಯಕ್ಕಿಲ್ಲ... ರೇವಣ್ಣನ ಪುತ್ರ ಪ್ರಜ್ವಲ್'ಗೆ ರಾಜಕೀಯದಲ್ಲಿ ಆಸಕ್ತಿ ಹೆಚ್ಚು ಇದ್ದು, ಆತ ಈ ಕ್ಷೇತ್ರಕ್ಕೆ ಬಂದರೂ ಬರಬಹುದು' ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಹೇಳಿದ ಮಾತುಗಳನ್ನೇ ಭವಾನಿ ರೇವಣ್ಣ ಅವರು ಇಂದು ಪುನರುಚ್ಚರಿಸಿದರು.
ಪ್ರಜ್ವಲ್ ರೇವಣ್ಣಗೆ ರಾಜಕೀಯ ಅನುಭವ ಏನಿದೆ?
ಪ್ರಜ್ವಲ್ ಅವರು ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸಕಲೇಶಪುರ ಹಾಗೂ ಬೇಲೂರುಗಳಲ್ಲಿ ಯುವಕರ ಸಭೆ ನಡೆಸುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಧುಮುಕುವ ಸುಳಿವು ನೀಡಿದ್ದರು. ಈ ಮುನ್ನ ತಮ್ಮ ತಾಯಿ ಭವಾನಿ ಅವರನ್ನು ಬೇಲೂರು ಕ್ಷೇತ್ರದಲ್ಲಿ ಕಣಕ್ಕಿಳಿಸಲು ಇನ್ನಿಲ್ಲದ ಸಾಹಸ ಪಟ್ಟು ಒಂದು ಹಂತದ ಗೆಲುವು ಸಾಧಿಸಿದ್ದರು.
ಆದರೆ, ಅಂತಿಮ ಕ್ಷಣದಲ್ಲಿ ದೇವೇಗೌಡರ ಮಧ್ಯ ಪ್ರವೇಶದಿಂದ ವಿಚಿತ್ರ ತಿರುವು ಪಡೆಯಿತು. ಕಗ್ಗಂಟ್ಟಾಗಿದ್ದ ಬೇಲೂರು ವಿಧಾನಸಭಾ ಟಿಕೆಟ್ ಹಂಚಿಕೆಯನ್ನು ಗೌಡ್ರು ಇಟ್ಟ ನಡೆ ಅವರ ನಿಷ್ಠಾವಂತನನ್ನು ಕಳೆದುಕೊಳ್ಳುವಂತೆ ಮಾಡಿತು. ಮನೆ ಸೊಸೆ ಮುನಿಸಿಗೂ ಕಾರಣವಾಗಿತ್ತು.ಪ್ರಜ್ವಲ್ ರೇವಣ್ಣ ರಾಜಕೀಯ ಪ್ರವೇಶ ಯಾವಾಗ?
ಇಂದಲ್ಲ ನಾಳೆ ಪ್ರಜ್ವಲ್ ರೇವಣ್ಣ ಅವರ ಅಧಿಕೃತ ಪ್ರವೇಶ ಖಚಿತ. ಈಗಾಗಲೇ ಜೆಡಿಎಸ್ ಪರ ಹಲವಾರು ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಪ್ರಜ್ವಲ್ ಅವರಿಗೆ ಇಂದಿನ ಯುವ ಪೀಳಿಗೆಯನ್ನು ಆಕರ್ಷಿಸುವ ಹುಮ್ಮಸ್ಸಿದೆ. ವಿಪಕ್ಷಗಳ ಹುಳುಕನ್ನು ಎತ್ತಿ ತೋರಿಸುತ್ತಾ, ದೇವೇಗೌಡರ ಬದುಕನ್ನು ಎಲ್ಲರಿಗೂ ಸಾರುತ್ತಾ, ಜೆಡಿಎಸ್ ಹೇಗೆ ಜನ ಸಾಮಾನ್ಯರ ನೋವು ನಲಿವಿಗೆ ಸ್ಪಂದಿಸುತ್ತಿದೆ ಎಂದು ಪ್ರಜ್ವಲ್ ಫೌಂಡೇಷನ್ ಮೂಲಕ ಸಾರುತ್ತಾ ಬಂದಿದ್ದಾರೆ.
ಸೋದರ ಸೂರಜ್(ಚಿತ್ರದಲ್ಲಿ ಬಲತುದಿ) ಗಿಂತ ಹಾಗೂ ಕಸಿನ್ ನಿಖಿಲ್ ಗಿಂತ ರಾಜಕೀಯವಾಗಿ ಪ್ರಜ್ವಲ್ ಉತ್ತಮ ಭವಿಷ್ಯ ಕಂಡುಕೊಳ್ಳುವ ಸಾಧ್ಯತೆಯೂ ಇದೆ.