ಮುಂದಿನ ಐದು ವರ್ಷಕ್ಕೆ ಎಚ್ಡಿಕೆಯೇ ಸಿಎಂ : ಸಿಎಸ್ ಪುಟ್ಟರಾಜು
ಬೆಂಗಳೂರು, ಮೇ 20: ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿದ್ದರೂ, ಕುಮಾರಸ್ವಾಮಿ ಅವರು ಪೂರ್ಣಾವಧಿ ಸಿಎಂ ಆಗಿರುವುದಿಲ್ಲ ಎಂಬ ಸುದ್ದಿಯನ್ನು ಮೇಲುಕೋಟೆ ಶಾಸಕ ಸಿ.ಎಸ್. ಪುಟ್ಟರಾಜು ಅವರು ತಳ್ಳಿಹಾಕಿದ್ದಾರೆ.
ಮುಂದಿನ ಐದು ವರ್ಷ ಎಚ್.ಡಿ.ಕುಮಾರಸ್ವಾಮಿಯವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಪುಟ್ಟರಾಜು ಹೇಳಿದರು.
ಬೆಂಗಳೂರಿನ ಲೀ ಮೆರಿಡಿಯನ್ ಹೋಟೆಲ್ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಐದು ವರ್ಷ ಎಚ್ಡಿಕೆ ಸಿಎಂ ಎಂದು ನಿರ್ಧಾರವಾಗಿದೆ. ಹಂಚಿಕೆ ಮಾತೇ ಬಂದಿಲ್ಲ. ಇದರಿಂದ ಎರಡೂವರೆ ವರ್ಷ ಮಾತ್ರ ಹೆಚ್ಡಿಕೆ ಸಿಎಂ ಎಂಬ ಪ್ರಸ್ತಾವ ಸುಳ್ಳು ಎಂದಿದ್ದಾರೆ.
ಸಿಎಂ ಸ್ಥಾನ ಹಂಚಿಕೆ ಆಗಿದೆ ಎನ್ನುವುದು ಊಹಾಪೋಹ. ಮುಂದಿನ ಐದು ವರ್ಷ ಹೆಚ್.ಡಿ.ಕುಮಾರಸ್ವಾಮಿಯವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಮೇಲುಕೋಟೆ ಶಾಸಕ ಸಿ.ಎಸ್. ಪುಟ್ಟರಾಜು ಸ್ಪಷ್ಟಪಡಿಸಿದ್ದಾರೆ.
ಈ ನಡುವೆ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್. ರಾಜು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಹಾಗೂ ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಇಂದು ನಿಯೋಜಿತ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನಿವಾಸಕ್ಕೆ ಭೇಟಿ ಕೊಟ್ಟು ಸಮಾಲೋಚಿಸಿದ್ದಾರೆ.