ಬಿಜೆಪಿ ಪಾದಯಾತ್ರೆಯನ್ನು ಸ್ವಾಗತಿಸಿದ ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು, ಜುಲೈ 26 : ಕರ್ನಾಟಕದಲ್ಲಿ ರೈತರ ಸಾಲ ಮನ್ನಾ ವಿಚಾರದಲ್ಲಿ ರಾಜಕೀಯ ನಡೆಯುತ್ತಿದೆ. ಪ್ರತಿಪಕ್ಷ ಬಿಜೆಪಿ ಸಂಪೂರ್ಣ ಸಾಲಮನ್ನಾ ಮಾಡುವಂತೆ ಒತ್ತಾಯಿಸಿ ರಾಮನಗರದಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸುತ್ತಿದೆ.
ಬಿಜೆಪಿ ಪಾದಯಾತ್ರೆ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗುರುವಾರ ಪ್ರತಿಕ್ರಿಯೆ ನೀಡಿದ್ದು, 'ಬಿಜೆಪಿ ಪಾದಯಾತ್ರೆಯನ್ನು ಸ್ವಾಗತಿಸುತ್ತೇನೆ. ಕನಿಷ್ಠ ಪಕ್ಷ ರೈತರ ಪರವಾಗಿ ಹೋರಾಟ ಮಾಡುತ್ತಿದ್ದಾರೆ. ನಾನು ರೈತರ ಸಾಲ ಮನ್ನಾ ಮಾಡಿದ್ದೇನೆ. ಅದಕ್ಕಾಗಿ ಅವರು ನನ್ನನ್ನು ಅಭಿನಂದಿಸಬೇಕು' ಎಂದರು.
ಅಂಕಿ-ಅಂಶ: ಒಟ್ಟು ಎಷ್ಟು ರೈತರ ಎಷ್ಟು ಮೊತ್ತದ ಸಾಲಮನ್ನಾ ಆಗಲಿದೆ
ಕರ್ನಾಟಕ ಬಿಜೆಪಿ ಗುರುವಾರ ಕುಮಾರಸ್ವಾಮಿ ಅವರ ತವರು ಜಿಲ್ಲೆ ರಾಮನಗರದಿಂದ ಬೆಂಗಳೂರಿನ ತನಕ ಪಾದಯಾತ್ರೆ ಆರಂಭಿಸಿದೆ. ಒಟ್ಟು ಮೂರು ದಿನಗಳ ಕಾಲ ಪಾದಯಾತ್ರೆ ನಡೆಯಲಿದ್ದು, 48 ಕಿ.ಮೀ. ಪಾದಯಾತ್ರೆಯಲ್ಲಿ ಸುಮಾರು 3 ಸಾವಿರ ರೈತರು ಪಾಲ್ಗೊಳ್ಳಲಿದ್ದಾರೆ.
ರೈತರ ಸಾಲ ಮನ್ನಾ ನಿಯಮಗಳೇನು? ಇಲ್ಲಿದೆ ಮಾಹಿತಿ
ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ. ಮೊದಲ ಬಜೆಟ್ನಲ್ಲಿ ಅವರು ರೈತರ 34 ಸಾವಿರ ಕೋಟಿ ಬೆಳೆ ಸಾಲ ಮನ್ನಾ ಮಾಡಿದ್ದರು. ಬಳಿಕ 10,700 ಕೋಟಿ ಸಾಲ ಮನ್ನಾಡಿದ್ದರು. ಒಟ್ಟು 44,700 ಕೋಟಿ ಸಾಲವನ್ನು ಮಾಡಿದ್ದಾರೆ.
ಆದರೆ, ಕರ್ನಾಟಕ ಬಿಜೆಪಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡಿ ಎಂದು ಪಾದಯಾತ್ರೆ ನಡೆಸುತ್ತಿದೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪಾದಯಾತ್ರೆಗೆ ಗೈರಾಗಿದ್ದು, ಅವರು ಚಿಕಿತ್ಸೆಗಾಗಿ ಜಿಂದಾಲ್ಗೆ ದಾಖಲಾಗಿದ್ದಾರೆ.