ಫಲಿತಾಂಶಕ್ಕೆ ಮುನ್ನಾ ಮೈತ್ರಿ ಕೋಟೆ ಭದ್ರಪಡಿಸಲು ಮುಂದಾದ ಎಚ್ಡಿಕೆ
ಬೆಂಗಳೂರು, ಮೇ 05: ಚುನಾವಣೆ ಫಲಿತಾಂಶ ಹತ್ತಿರವಾಗುತ್ತಿದ್ದಂತೆ ಮೈತ್ರಿ ಸರ್ಕಾರಕ್ಕೆ ಪತನದ ಭೀತಿ ಎದುರಾಗುತ್ತಿರುವಂತಿದೆ. ಗುಪ್ತಚರ ಇಲಾಖೆಯ ವರದಿಗಳು, ಬಿಜೆಪಿ ಮುಖಂಡರ ಹೇಳಿಕೆಗಳು ಮತ್ತು ನಡವಳಿಕೆಗಳು ಈ ಆತಂಕವನ್ನು ಸೃಷ್ಠಿಸುತ್ತಿವೆ.
ಆದರೆ ಸರ್ಕಾರವು ಪತನವಾಗುವುದನ್ನು ಯಾವುದೇ ಕಾರಣಕ್ಕೆ ತಪ್ಪಿಸಲು ಮೈತ್ರಿ ಮುಖಂಡರು ಪಣತೊಟ್ಟಿದ್ದಾರೆ. ಈ ಒಂದು ವರ್ಷದ ಅವಧಿಯಲ್ಲಿ ಬಿಜೆಪಿಯು ಒಡ್ಡಿದ್ದ ಸವಾಲುಗಳನ್ನು ಅವರು ಸಮರ್ಥವಾಗಿ ಎದುರಿಸಿದ್ದಾರೆ. ಆದರೆ ಈ ಬಾರಿ ಚುನಾವಣಾ ಫಲಿತಾಂಶ ಮೈತ್ರಿ ಸರ್ಕಾರಕ್ಕೆ ಹೆಚ್ಚಿನ ಆತಂಕ ತಂದೊಡ್ಡುವ ಅಪಾಯ ಕಾಣುತ್ತಿದೆ.
ಕನ್ನಡಿಗರಿಗೆ ಉದ್ಯೋಗ ಟ್ವಿಟರ್ ಅಭಿಯಾನಕ್ಕೆ ಎಚ್ಡಿಕೆ ಬೆಂಬಲ
ಆದರೆ ಈ ಬಾರಿಯೂ ಸಹ ಮೈತ್ರಿ ಸರ್ಕಾರವನ್ನು ಉಳುಸಿಕೊಳ್ಳಲು ನಾಯಕರು ಸಿದ್ಧರಾಗಿದ್ದು, ಸಿಎಂ ಕುಮಾರಸ್ವಾಮಿ ಅವರೇ ಮುಂದಾಳತ್ವ ವಹಿಸಿ ಶಾಸಕರ ಭಿನ್ನಮತ ಹೋಗಲಾಡಿಸಿ ವಿಶ್ವಾಸಗಳಿಸಿಕೊಳ್ಳುವ ಕಾರ್ಯಕ್ಕೆ ಮುಂದಾಗುತ್ತಿದ್ದಾರೆ.
ದೇವೇಗೌಡ ಅವರ ಸಲಹೆ ಮೇರೆಗೆ ಕುಮಾರಸ್ವಾಮಿ ಅವರು ಈ ಕಾರ್ಯಕ್ಕೆ ಕೈ ಹಾಕಿದ್ದಾರೆ ಎನ್ನಲಾಗಿದ್ದು, ಮೈತ್ರಿ ಪಕ್ಷದ ಎಲ್ಲ ಶಾಸಕರೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಲಿದ್ದಾರೆ.
ಭಿನ್ನಮತ ಶಮನಕ್ಕೆ ಸಿಎಂ ಯತ್ನ
ಮೇ 08 ರ ಬಳಿಕ ಸಿಎಂ ಕುಮಾರಸ್ವಾಮಿ ಅವರು ಎಲ್ಲ ಶಾಸಕರೊಂದಿಗೆ ಸರಣಿ ಸಭೆಗಳನ್ನು ನಡೆಸಿ ಪ್ರತಿಯೊಬ್ಬರ ಬೇಡಿಕೆಗಳನ್ನು ತಾವೇ ಕೇಳಿ ಬಗೆಹರಿಸುವ ವಿಶ್ವಾಸ ನೀಡಲಿದ್ದಾರೆ, ಆ ಮೂಲಕ ಭಿನ್ನಮತಗಳನ್ನು ಶಮನ ಮಾಡಿ ಶಾಸಕರು 'ಆಪರೇಷನ್' ಗೆ ಒಳಗಾಗದಂತೆ ತಡೆಯುವ ಯೋಜನೆ ಹಾಕಿಕೊಂಡಿದ್ದಾರೆ.
ಭಿನ್ನಮತೀಯ ಶಾಸಕರು ಹಲವರಿದ್ದಾರೆ
ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ನಾಗೇಂದ್ರ, ಆನಂದ್ ಸಿಂಗ್, ಬಿಸಿ.ಪಾಟೀಲ್, ಸುಧಾಕರ್ ಇನ್ನೂ ಕೆಲವು ಶಾಸಕರಿಗೆ ಅಸಮಾಧಾನ ಇನ್ನೂ ಶಮನವಾಗಿಲ್ಲ, ಚುನಾವಣಾ ಫಲಿತಾಂಶ ಮೈತ್ರಿಯ ವಿರುದ್ಧ ಬಂದಲ್ಲಿ ಈ ಶಾಸಕರ ಅಸಮಾಧಾನ ಸ್ಫೋಟಗೊಳ್ಳುವ ಆತಂಕ ಮೈತ್ರಿ ನಾಯಕರಿಗೆ ಇರುವ ಕಾರಣದಿಂದಲೇ ಕುಮಾರಸ್ವಾಮಿ ಅವರು ಫಲಿತಾಂಶಕ್ಕೆ ಮುನ್ನವೇ ಇವರನ್ನೆಲ್ಲಾ ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದಾರೆ.
ಮಂಡ್ಯ ಫಲಿತಾಂಶ, ಮತ್ತೊಂದು ಸಮೀಕ್ಷೆಗೆ ಸೂಚನೆ ಕೊಟ್ಟರೇ ಕುಮಾರಸ್ವಾಮಿ?
ಮೇ 8 ರಿಂದ ಸರಣಿ ಸಭೆ
ಮೇ 8 ರಿಂದ ಪ್ರತಿದಿನ 8-10 ಶಾಸಕರೊಂದಿಗೆ ಕುಮಾರಸ್ವಾಮಿ ಅವರು ಸಭೆ ನಡೆಸಲಿದ್ದಾರೆ, ಪ್ರತಿಯೊಬ್ಬ ಶಾಸಕರ ಬಳಿಯೂ ಪ್ರತ್ಯೇಕವಾಗಿ ಮಾತನಾಡಲಿದ್ದಾರೆ, ಶಾಸಕರ ರಾಜಕೀಯ ಭಿನ್ನಾಭಿಪ್ರಾಯ, ಕ್ಷೇತ್ರ ಸಮಸ್ಯೆ, ಅನುದಾನ ಹಂಚಿಕೆ ಎಲ್ಲದರ ಬಗ್ಗೆಯೂ ಚರ್ಚೆಯನ್ನು ನಡೆಸಿ ಭರವಸೆಗಳನ್ನು ನೀಡಲಿದ್ದಾರೆ.
ದೇವೇಗೌಡ ಸಲಹೆ ಮೇರೆಗೆ ಕಾರ್ಯ
ಎಲ್ಲ ಶಾಸಕರನ್ನು ವಿಶೇಷವಾಗಿ ಕಾಂಗ್ರೆಸ್ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಈ ಸಭೆ ನಡೆಸಲಾಗುತ್ತಿದೆ. ಈ ಉತ್ತಮ ಕಾರ್ಯಕ್ಕೆ ಮುಂದಾಗಿರುವುದರ ಹಿಂದೆ ದೇವೇಗೌಡ ಅವರ ಸಲಹೆ ಕೆಲಸ ಮಾಡಿದೆ ಎಂದು ಹೇಳಲಾಗುತ್ತಿದೆ. ಈ ಸಭೆಯು ಕುಮಾರಸ್ವಾಮಿ ಅವರಿಗೆ ಶಾಸಕರಲ್ಲಿ ವರ್ಚಸ್ಸನ್ನು ಹೆಚ್ಚಿಸುವ ನಿರೀಕ್ಷೆಯೂ ಇದೆ.
ಸುಮಲತಾ ಹಿಂದೆ ಬಿದ್ದಿದೆ ಗುಪ್ತಚರ ಇಲಾಖೆ, ಚಲನವಲನದ ಮೇಲೆ ನಿಗಾ?
ಕೋಟೆ ಭದ್ರಪಡಿಸಿಕೊಳ್ಳಲು ಮುಂದಾದ ಎಚ್ಡಿಕೆ
ಚುನಾವಣೆ ಫಲಿತಾಂಶ ಮೈತ್ರಿ ನಾಯಕರು ಊಹಿಸಿದಂತೆ ಬರುತ್ತಿಲ್ಲವೆಂಬ ಅನುಮಾನ ಇದೆ. ಫಲಿತಾಂಶ ಏರು-ಪೇರಾಗಿ ಬಿಜೆಪಿ ಮೇಲುಗೈ ಆದರೆ, ಈಗಾಗಲೇ ಅಸಮಾಧಾನ ಹೊಂದಿರುವ ಶಾಸಕರನ್ನು ಬಿಜೆಪಿಯತ್ತ ಸೆಳೆಯುವುದು ಅವರಿಗೆ ಅನುಕೂಲವಾಗುತ್ತದೆ. ಹಾಗಾಗಿ ಫಲಿತಾಂಶದ ಮುನ್ನವೇ ಕೋಟೆಯನ್ನು ಭದ್ರಪಡಿಸಿಕೊಳ್ಳಲು ಕುಮಾರಸ್ವಾಮಿ ಅವರು ಮುಂದಾಗಿದ್ದಾರೆ.