ಸದನಕ್ಕೆ ಸಿಎಂ ಗೈರು, ಟ್ವೀಟ್ ಮೂಲಕ ಕುಟುಕಿದ ಬಿಜೆಪಿ
ಬೆಂಗಳೂರು, ಜುಲೈ 23 : ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮಂಗಳವಾರದ ಕಲಾಪಕ್ಕೆ ಗೈರಾಗಿದ್ದಾರೆ. ಪ್ರತಿಪಕ್ಷ ಬಿಜೆಪಿ ಮುಖ್ಯಮಂತ್ರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಟ್ವೀಟ್ ಮಾಡಿದೆ.
ಮಂಗಳವಾರ ಬೆಳಗ್ಗೆ 10 ಗಂಟೆಗೆ ಕರ್ನಾಟಕ ವಿಧಾನಸಭೆ ಕಲಾಪ ಆರಂಭವಾಗಿದೆ. ವಿಶ್ವಾಸಮತದ ಮೇಲೆ ಚರ್ಚೆಗಳು ನಡೆಯುತ್ತಿವೆ. ಆದರೆ, ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಇಲ್ಲಿಯ ತನಕ ವಿಧಾನಸೌಧಕ್ಕೆ ಆಗಮಿಸಿಲ್ಲ.
Live Updates ರಾಜೀನಾಮೆ ಪತ್ರ ಹರಿದುಹಾಕಿದ್ದು ನಿಜ: ಡಿಕೆ ಶಿವಕುಮಾರ್
ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಬೆಳಗ್ಗೆಯಿಂದ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿದ್ದಾರೆ. ಸಚಿವರಾದ ಡಿ. ಕೆ. ಶಿವಕುಮಾರ್, ಎಂ. ಬಿ. ಪಾಟೀಲ್ ಹೋಟೆಲ್ಗೆ ತೆರಳಿ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿ ವಿಧಾನಸೌಧಕ್ಕೆ ವಾಪಸ್ ಆಗಿದ್ದಾರೆ.
ವಿಧಾನಸೌಧಕ್ಕೆ ಇನ್ನೂ ಆಗಮಿಸದ ಸಿಎಂ ಎಚ್.ಡಿ.ಕುಮಾರಸ್ವಾಮಿ!
"ವಿಧಾನಸಭೆ ಕಲಾಪ ಆರಂಭವಾಗಿದೆ. ಆದರೆ, ಸಿಎಂ ಎಚ್. ಡಿ. ಕುಮಾರಸ್ವಾಮಿ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರ ಸಂದೇಶ ಸ್ಪಷ್ಟವಾಗಿದೆ. ಅವರು ಲೂಟಿ ಮಾಡುವುದನ್ನು ಮುಂದುವರೆಸಿದ್ದಾರೆ. ತೆರಿಗೆದಾರರ ಹಣವನ್ನು ವ್ಯರ್ಥ ಮಾಡುತ್ತಿದ್ದಾರೆ. ಅವರು ಮತ್ತು ಅವರ ಪಕ್ಷ ಕರ್ನಾಟಕದ ಜನರಿಗೆ ಉತ್ತರ ನೀಡಬೇಕು" ಎಂದು ಬಿಜೆಪಿ ಟ್ವೀಟರ್ ಮೂಲಕ ಆಗ್ರಹಿಸಿದೆ.
ಸೋಮವಾರ ರಾತ್ರಿ 11.45ಕ್ಕೆ ಕಲಾಪವನ್ನು ಮಂಗಳವಾರ ಬೆಳಗ್ಗೆ 10 ಗಂಟೆಗೆ ಮುಂದೂಡಲಾಗಿತ್ತು. ಕಲಾಪ ಆರಂಭವಾದಾಗ ಎಚ್. ಡಿ. ಕುಮಾರಸ್ವಾಮಿ ಎಚ್. ಡಿ. ದೇವೇಗೌಡರ ನಿವಾಸದಲ್ಲಿದ್ದರು. ಅಲ್ಲಿಂದ ನೇರವಾಗಿ ಅವರು ತಾಜ್ ವೆಸ್ಟ್ ಎಂಡ್ ಹೋಟೆಲ್ಗೆ ತೆರಳಿದರು.
ಸದನದಲ್ಲಿ ಬಿಜೆಪಿ ಯಾಮಾರುತ್ತಿದೆಯಾ, ಕಾದು ನೋಡುವ ತಂತ್ರವಾ?
ಇಂದು ಸಂಜೆ 6 ಗಂಟೆಯೊಳಗೆ ವಿಶ್ವಾಸಮತದ ಮೇಲಿನ ಚರ್ಚೆ ಪೂರ್ಣಗೊಂಡು ಮತಕ್ಕೆ ಹಾಕಬೇಕು ಎಂದು ಸ್ಪೀಕರ್ ರಮೇಶ್ ಕುಮಾರ್ ಸೋಮವಾರವೇ ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಇದಕ್ಕೆ ಸಮ್ಮತಿ ಸೂಚಿಸಿದ್ದಾರೆ.