ದೇವೇಗೌಡ್ರು ರಾಜಕೀಯ ಉತ್ತುಂಗಕ್ಕೇರಿದ ಹಿಂದಿನ ಶಕ್ತಿಯ ಬಗ್ಗೆ ಎಚ್ಡಿಕೆ ವಿವರಣೆ
ರಾಮನಗರ, ನ 27: ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ್ರಿಗೆ ದಶಕಗಳ ರಾಜಕೀಯದ ಅನುಭವಿದ್ದರೂ, ರಾಜಕೀಯದಲ್ಲಿ ಉತ್ತುಂಗಕ್ಕೆ ಏರಲು ಸಾಧ್ಯವಾಗಿರಲಿಲ್ಲ, ಅದು ನೆರವೇರಿದ್ದು ಒಂದು ಜಮೀನು ಖರೀದಿಯ ನಂತರ.
ಬಿಡದಿಯಲ್ಲಿ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ದೇವೇಗೌಡ್ರು ಮೊದಲು ರಾಜ್ಯದ ಮುಖ್ಯಮಂತ್ರಿಯಾಗಿದ್ದು, ಇದಾದ ನಂತರ ಪ್ರಧಾನಿಯಾಗಿದ್ದಕ್ಕೆ ಕಾರಣವಾದ ಅಂಶದ ಬಗ್ಗೆ ವಿವರಣೆಯನ್ನು ನೀಡಿದ್ದಾರೆ.
'ಪ್ರತಿ ಚುನಾವಣೆ ಬಂದಾಗಲೂ ಕಾಂಗ್ರೆಸ್ ನಾಯಕರಿಗೆ ಜೆಡಿಎಸ್ ಜ್ವರ'
ಜಿಲ್ಲೆಯ, ಬಿಡದಿ ಹೋಬಳಿಯ ಕೇತಗಾನಹಳ್ಳಿಯ ವಾರ್ಡ್ 7ರಲ್ಲಿ ಶ್ರೀ ಗ್ರಾಮ ದೇವತೆಯ ಪ್ರತಿಷ್ಠಾಪನೆ, ನೂತನ ದೇವಾಲಯದ ಸಂಪ್ರೋಕ್ಷಣೆ ಹಾಗೂ ಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಭಾಗಿಯಾಗಿದ್ದರು.
ಈ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಸ್ಫಟಿಕಪುರಿ ಮಹಾಸಂಸ್ಥಾನ ಮಠದ ನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅವರು ಭಾಗವಹಿಸಿದ್ದರು.
'ಕೆಪಿಸಿಸಿ ಅಧ್ಯಕ್ಷ ಡಿಕೆಶಿಯವರೇ ಸಿದ್ದರಾಮಯ್ಯನವರ ಮೌನ ತುಂಬಾ ಅಪಾಯಕಾರಿ'
ದೇವೇಗೌಡ್ರಿಗೆ ಐವತ್ತು ವರ್ಷಗಳ ರಾಜಕೀಯ ಅನುಭವ
"ದೇವೇಗೌಡ್ರಿಗೆ ಐವತ್ತು ವರ್ಷಗಳ ಅನುಭವವಿದ್ದರೂ, ರಾಜಕೀಯದಲ್ಲಿ ದೊಡ್ದ ಹುದ್ದೆಗೆ ಏರಲಾಗಿರಲಿಲ್ಲ, ಬಿಡದಿಯ ಕೇತಗಾನಹಳ್ಳಿಯಲ್ಲಿ ಜಮೀನು ಖರೀದಿಸಿದ ನಂತರ ಇದೆಲ್ಲಾ ಸಾಧ್ಯವಾಯಿತು. ಈ ಜಮೀನು ತೆಗೆದುಕೊಂಡ ನಂತರ ದೇವೇಗೌಡ್ರು ಮೊದಲು ಮುಖ್ಯಮಂತ್ರಿಯಾದರು, ಅದಾದ ನಂತರ ಪ್ರಧಾನ ಮಂತ್ರಿಯಾದರು" ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಕೇತಗಾನಹಳ್ಳಿಯಲ್ಲಿ ಜಮೀನು ಮತ್ತು ತೋಟವನ್ನು ನಾವು ಹೊಂದಿದ್ದೇವೆ
"ಕೇತಗಾನಹಳ್ಳಿಯಲ್ಲಿ ಜಮೀನು ಮತ್ತು ತೋಟವನ್ನು ನಾವು ಹೊಂದಿದ್ದೇವೆ, ಹಾಗಾಗಿ ನಾವು ಕೂಡಾ ಇದೇ ಗ್ರಾಮದವರಾಗಿದ್ದೇವೆ. ಈ ಜಮೀನು ಖರೀದಿಸಿದ ನಂತರ ದೇವೇಗೌಡ್ರು, ರಾಮನಗರ ಚುನಾವಣೆಯಲ್ಲಿ ಗೆಲುವನ್ನು ಸಾಧಿಸಿದರು. ಅದಾದ ಮೇಲೆ, ರಾಜಕೀಯದಲ್ಲಿ ಉತ್ತುಂಗಕ್ಕೆ ಹೋದರು, ಹಾಗಾಗಿ ಈ ಜಮೀನು ಮತ್ತು ಈ ಮಣ್ಣು ನಮಗೆ ಪುಣ್ಯಭೂಮಿ" ಎಂದು ಕುಮಾರಸ್ವಾಮಿ ಹೇಳಿದರು.
ಇತ್ತೀಚೆಗೆ ಇಲ್ಲಿಂದಲೇ ಜೆಡಿಎಸ್ ಕಾರ್ಯಾಗಾರವನ್ನು ನಡೆಸಿತ್ತು
"ವೈಯಕ್ತಿಕವಾಗಿ ನನಗೂ ಇದು ಪುಣ್ಯಭೂಮಿ, ನಾನು ಕೂಡಾ ಎರಡು ಬಾರಿ ಮುಖ್ಯಮಂತ್ರಿಯಾದೆ. ಹಾಗಾಗಿ, ಭವಿಷ್ಯದಲ್ಲಿ ಇಲ್ಲಿಂದ ಎಲ್ಲಾ ರಾಜಕೀಯ ಚಟುವಟಿಕೆಯನ್ನು ನಡೆಸುತ್ತೇವೆ. ನನಗೆ ಮುಂದೆ ರಾಜಕೀಯದಲ್ಲಿ ಎಷ್ಟೇ ದೊಡ್ಡ ಸ್ಥಾನಮಾನ ಸಿಕ್ಕಿದರೂ ಬಿಡದಿಯ ಕೇತಗಾನಹಳ್ಳಿಯ ತೋಟದಲ್ಲೇ ಇರುವೆ"ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಇತ್ತೀಚೆಗೆ ಇಲ್ಲಿಂದಲೇ ಜೆಡಿಎಸ್ ಕಾರ್ಯಾಗಾರವನ್ನು ನಡೆಸಿತ್ತು.
ಕುಮಾರಸ್ವಾಮಿ ಖಾರವಾಗಿ ಸರಕಾರವನ್ನು ಪ್ರಶ್ನಿಸಿದರು
"ಮಳೆಯಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹಾನಿ ಸಂಭವಿಸಿದೆ, ಸರಕಾರ ಕೂಡಲೇ ಸ್ಪಂದಿಸಬೇಕು. ಈಗಾಗಲೇ ಮುಖ್ಯಮಂತ್ರಿಗಳು ಹಾಗೂ ಪ್ರತಿಪಕ್ಷ ನಾಯಕರು ಭೇಟಿ ನೀಡಿದ್ದಾರೆ. ಬರೀ ಭೇಟಿ ನೀಡಿದರೆ ಸಾಲದು, ಸರಕಾರ ಕೂಡಲೇ ಪರಿಹಾರ ಬಿಡುಗಡೆ ಮಾಡಬೇಕು. ಕೇವಲ NDRF ನಿಯಮಗಳನ್ನು ಹೇಳುತ್ತಾ ಕೂತರೆ ಪ್ರಯೋಜನವಿಲ್ಲ. ಅಲ್ಪ ಪ್ರಮಾಣದ ಪರಿಹಾರದಿಂದ ಜನರಿಗೇನು ಉಪಯೋಗ" ಎಂದು ಕುಮಾರಸ್ವಾಮಿ ಖಾರವಾಗಿ ಸರಕಾರವನ್ನು ಪ್ರಶ್ನಿಸಿದರು.