ವಿಜಯೇಂದ್ರಗೆ ಟಿಕೆಟ್ ನಕಾರ; ಬಿಜೆಪಿಗೆ ತಿರುಗುಬಾಣ ಎಂದ ಕುಮಾರಸ್ವಾಮಿ
ಮೈಸೂರು, ಮೇ 25: ಮಾಜಿ ಸಿಎಂ ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ಬಿಜೆಪಿ ಎಂಎಲ್ಸಿ ಟಿಕಟ್ ನೀಡದಿರುವುದು ಬಿಜೆಪಿಗೆ ತಿರುಗುಬಾಣವಾಗುವ ಲಕ್ಷಣಗಳು ಕಾಣುತ್ತಿದೆ. ಇದರಿಂದ ಬೇರೆ ಪಕ್ಷಕ್ಕೆ ಲಾಭ ನಷ್ಟದ ಪ್ರಶ್ನೆ ಇಲ್ಲ. ಆದರೆ ಸರ್ಕಾರದ ಮೇಲೆ ಇದು ಗಂಭೀರ ಪರಿಣಾಮ ಬೀರಬಹುದು ಎಂದು ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.
ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರಿಗೆ ಮೇಲ್ಮನೆ ಟಿಕೆಟ್ ತಪ್ಪಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು, ಯಾವುದೇ ತತ್ವದ ಕಥೆ ಹೇಳಿ ಟಿಕೆಟ್ ಕೊಟ್ಟಿಲ್ಲ ಎಂದು ಅವರು ಅವರು ಬುಧವಾರ ಮೈಸೂರಿನಲ್ಲಿ ಅಭಿಪ್ರಾಯಪಟ್ಟಿದ್ದಾರೆ.
Breaking: ವಿಜಯೇಂದ್ರಗೆ ಸಿಗದ ಎಂಎಲ್ಸಿ ಟಿಕೆಟ್: ಯಡಿಯೂರಪ್ಪ ಹೇಳಿದ್ದೇನು?
ವಿಜಯೇಂದ್ರ ಅವರಿಗೆ ಟಿಕೆಟ್ ನಿರಾಕರಣೆ ವಿಚಾರ ಆಡಳಿತದ ಮೇಲೂ ಕೆಟ್ಟ ಪರಿಣಾಮ ಬೀರುವ ಲಕ್ಷಣ ಕಾಣುತ್ತಿದೆ. ಬಿಜೆಪಿಯಲ್ಲಿ ಗುಂಪುಗಾರಿಕೆಗೆ ಇನ್ನು ಹೆಚ್ಚು ಅವಕಾಶವಾಗಬಹುದು ಎಂದು ಹೇಳಿದರು.
ಅಷ್ಟಮಂಗಲ ಪ್ರಶ್ನೆಗಿಂತ ಕೇಶವ ಕೃಪಾದಲ್ಲಿ ತೀರ್ಮಾನವಾಗುತ್ತದೆ:
ಮಂಗಳೂರಿನಲ್ಲಿ ನಡೆಯುತ್ತಿರುವ ಅಷ್ಟಮಂಗಲ ಪ್ರಶ್ನೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಅಷ್ಟಮಂಗಲ ಪ್ರಶ್ನೆಗಿಂತ ಎಲ್ಲಾ ತೀರ್ಮಾನ ಆಗುವುದು ಕೇಶವ ಕೃಪಾದಲ್ಲಿ. ಅಲ್ಲಿಂದ ಬರುವ ಸಂದೇಶಗಳನ್ನು ಬಿಜೆಪಿಯವರು ಪಾಲಿಸುತ್ತಾರೆ ಎಂದು ಟೀಕಿಸಿದ್ದಾರೆ.
ಇನ್ನೂ ಒಂದು ವರ್ಷ ಈ ತರದ ಬೆಳವಣಿಗೆಗಳು ನಡೆಯುತ್ತಿರುತ್ತವೆ. ದೇಶದ ಶಾಂತಿ, ಸಾಮರಸ್ಯ ಮತ್ತಷ್ಟು ಹದಗೆಡುವ ಆತಂಕ ಎದುರಾಗಿದೆ ಎಂದು ಹೆಚ್ಡಿಕೆ ಕಳವಳ ವ್ಯಕ್ತಪಡಿಸಿದರು.
ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿಚಾರದಲ್ಲಿ ಜೆಡಿಎಸ್ ನಿಲುವು ಏನು ಎಂಬ ಕುರಿತು ಪ್ರತಿಕ್ರಿಯಿಸಿದ ಅವರು, ಅದರ ಬಗ್ಗೆ ಆತುರ ಮಾಡುವುದು ಏನಿದೆ? ದೇವರು ಕನಸಿನಲ್ಲೇನಾದರೂ ಬಂದು ನನ್ನ ಮೂಲ ಸ್ಥಾನ ಇಲ್ಲಿದೆ ಅಂತ ಹೇಳಿದ್ದಾನೆಯೇ? ಅದನ್ನು ಸರಿಪಡಿಸಿ ಅಂತ ಕೇಳಿದ್ದರಾ ದೇವರು, ಇದನ್ನು ನೋಡಿದರೆ ಮತ್ತೊಂದು ವಿವಾದ ಶುರು ಆಗುವ ಲಕ್ಷಣ ಇದೆ ಎಂದರು.
ಟಿಪ್ಪು ತನ್ನ ಆಡಳಿತದ ಕಾಲದಲ್ಲಿ ಹಲವು ಹಿಂದೂ ದೇವಾಲಯಗಳಿಗೆ ಭೂಮಿ ದಾನ ಮಾಡಿದ್ದ. ಇದು ಆ ಸಮಾಜಕ್ಕೆ ಕನಸ್ಸಿಗೆ ಬರುತ್ತದೆ. ಆಗ ಆ ಸಮಾಜಕ್ಕೆ ಭೂಮಿ ಬಿಟ್ಟುಕೊಡ್ತಿರಾ?. ಹಲವು ದೇವಾಲಯಗಳಿಗೆ ಟಿಪ್ಪು ಭೂಮಿ ನೀಡಿರೋ ಉದಾಹರಣೆ ಇದೆ. ಆವರೂ ಕೂಡಾ ಬಂದು ಕೇಳಿದ್ರೆ ನೀವು ಕೊಡ್ತಿರಾ?.
ಇದನ್ನು ಬಿಟ್ಟು ಜನರ ಬದುಕನ್ನು ನೋಡಿ ಎಂದು ಹೇಳಿದರು.
ಶಾಸಕರಾದ ಅಶ್ವಿನ್ ಕುಮಾರ, ವಿಧಾನ ಪರಿಷತ್ ಸದಸ್ಯ ಶ್ರೀಕಂಠೇಗೌಡ ಮುಂತಾದವರು ಹಾಜರಿದ್ದರು.