ಕೇಂದ್ರ ಬಜೆಟ್ 2021; ಮಾಜಿ ಸಿಎಂ ಕುಮಾರಸ್ವಾಮಿ ಹೇಳುವುದೇನು?
ಬೆಂಗಳೂರು, ಫೆಬ್ರುವರಿ 01: "ಎಲ್ಲದರ ಬೆಲೆಯನ್ನೂ ಏರಿಸಿರುವ ಕೇಂದ್ರ ಸರ್ಕಾರ ತನ್ನದು ಆತ್ಮನಿರ್ಭರ ಭಾರತ ರೂಪಿಸುವ ಬಜೆಟ್ ಎಂದು ಹೇಳಿಕೊಂಡು ಆತ್ಮವಂಚನೆಯ ಮಾತುಗಳನ್ನಾಡುತ್ತಿದೆ" ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.
ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡನೆ ಮಾಡಿದ್ದು, ಇದಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಇಷ್ಟು ಬೆಲೆ ಏರಿಕೆಗಳನ್ನು ಕಂಡಿರುವ ಭಾರತ ಆತ್ಮನಿರ್ಭರತೆ ಸಾಧಿಸಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ. ಮುಂದೆ ಓದಿ...
"ಬೆಲೆ ಏರಿಕೆಗಳನ್ನು ಸರ್ಕಾರ ಸಮರ್ಥಿಸಿಕೊಳ್ಳುತ್ತಿದೆ"
ಡೀಸೆಲ್, ಪೆಟ್ರೋಲ್ ಬೆಲೆ ಈಗಾಗಲೇ ಏರಿಕೆಯಾಗಿದೆ. ಅದರ ಜೊತೆಗೆ ಈಗ ಅವುಗಳ ಮೇಲೆ ಕೃಷಿ ಸೆಸ್ ಅನ್ನೂ ವಿಧಿಸಲಾಗಿದೆ. ಇದರ ಪರಿಣಾಮ ಏನಾಗಲಿದೆ ಎಂದು ಕೇಂದ್ರ ಯೋಚಿಸಿದಂತೆ ಇಲ್ಲ. ಏರಿಕೆಗಳನ್ನು ಸಮರ್ಥಿಸಿಕೊಳ್ಳುತ್ತಲೇ ಬಂದಿದೆ ಎಂದು ದೂರಿದ್ದಾರೆ.
ಕೇಂದ್ರ ಬಜೆಟ್ 2021: ಸಿಎಂ ಯಡಿಯೂರಪ್ಪ ಪ್ರತಿಕ್ರಿಯೆ
"ರಕ್ಷಣೆಗೆ ಮಾತ್ರ ಕೃಷಿ ಕ್ಷೇತ್ರದ ನೆರವು ಪಡೆದಿದೆ"
ಒಂದೆಡೆ ರೈತರನ್ನು ದೇಶದ್ರೋಹಿಗಳೆಂದು ಬಿಂಬಿಸುವ ಸರ್ಕಾರ ತನ್ನ ರಕ್ಷಣೆಗೆ ಮಾತ್ರ ಕೃಷಿ ಕ್ಷೇತ್ರದ ನೆರವು ಪಡೆದಂತಿದೆ. ಕೃಷಿ ಸೆಸ್ ನಿಂದ ಸಂಗ್ರಹವಾಗುವ ಹಣವನ್ನು ಕೃಷಿ ರಂಗದ ಅಭಿವೃದ್ಧಿಗೆ ಬಳಸಲಾಗುತ್ತದೆಯೇ ಎಂಬುದರ ವಿವರಣೆಯೇ ಬಜೆಟ್ ನಲ್ಲಿಲ್ಲ ಎಂದು ಆರೋಪಿಸಿದ್ದಾರೆ.
"ಮತ್ತೊಂದು ಆರ್ಥಿಕ ವಿಷಮ ಪರಿಸ್ಥಿತಿಗೆ ಕಾರಣ"
2020-21ರಲ್ಲಿ 9.5% ಮತ್ತು 2022ರಲ್ಲಿ 6.8% ವಿತ್ತೀಯ ಕೊರತೆ ಇರುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಇದು ಒಂದು ಅರ್ಥವ್ಯವಸ್ಥೆಯಲ್ಲಿನ ಭೀಕರ ಪರಿಸ್ಥಿತಿ ಎನ್ನಬಹುದು. ಈ ಕೊರತೆಯನ್ನು ಸರ್ಕಾರ ಎಲ್ಲಿಂದ ತುಂಬಿಸಿಕೊಳ್ಳುತ್ತದೆ? ಇದರ ಪರಿಹಾರಕ್ಕಾಗಿ ನೋಟು ಪ್ರಿಂಟ್ ಮಾಡಲು ಆಗುವುದಿಲ್ಲ. ಭಾರಿ ಪ್ರಮಾಣದ ವಿತ್ತೀಯ ಕೊರತೆ ನೀಗಿಸಿಕೊಳ್ಳಲು ಕೇಂದ್ರ ಮುಂದಿನ ದಿನಗಳಲ್ಲಿ ಬ್ಯಾಂಕ್ಗಳಲ್ಲಿನ ಸಂಪನ್ಮೂಲವನ್ನು ಅಕ್ಷರಶಃ ದೋಚಲು ಆರಂಭಿಸುತ್ತದೆ. ಇದು ಮತ್ತೊಂದು ಆರ್ಥಿಕ ವಿಷಮ ಪರಿಸ್ಥಿತಿಗೆ ಕಾರಣವಾಗುತ್ತದೆ. ಅದರ ಪರಿಣಾಮ ಸಾಮಾನ್ಯ ಜನರ ಮೇಲೆ ಆಗುತ್ತದೆ. ಜನರ ಶೋಷಣೆಗೆ ಇದು ಕಾರಣವಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆತ್ಮ ನಿರ್ಭರ ಬಜೆಟ್ ಅಲ್ಲ ಆತ್ಮ ಬರ್ಬರ ಬಜೆಟ್; ಸಿದ್ದರಾಮಯ್ಯ
"ಕೇಂದ್ರ ಸರ್ಕಾರದ ಘನ ಕಾರ್ಯ ಯಾವುದು?"
15ನೇ ಹಣಕಾಸು ಆಯೋಗದ ಪ್ರಕಾರ ರಾಜ್ಯಗಳು ಶೇ. 41ರಷ್ಟು ತೆರಿಗೆ ಪಾಲು ಹೊಂದಿರುವುದಾಗಿಯೂ, ಅದನ್ನು ಕೇಂದ್ರ ಸರ್ಕಾರ ಒಪ್ಪಿರುವುದಾಗಿಯೂ ಹಣಕಾಸು ಸಚಿವರು ತಿಳಿಸಿದ್ದಾರೆ. ಆದರೆ, ರಾಜ್ಯಗಳ ಪಾಲನ್ನು ಕೇಂದ್ರ ಸರ್ಕಾರ ಈವರೆಗೆ ಸರಿಯಾಗಿ ನೀಡಿಲ್ಲ. ಪಾಲನ್ನು ತೋರಿಸುವುದು, ಪಾಲು ನೀಡದೇ ವಂಚಿಸುವುದು ಕೇಂದ್ರ ಪಾಲಿಸಿಕೊಂಡು ಬಂದ ಪರಿಪಾಠ. ಹೋದಲ್ಲಿ ಬಂದಲ್ಲಿ ಅಭಿವೃದ್ಧಿಯ ಮಂತ್ರ ಜಪಿಸುವ ಕೇಂದ್ರ ಸರ್ಕಾರ ಮುಂದಿನ ವರ್ಷ ₹12 ಲಕ್ಷ ಕೋಟಿ ಸಾಲ ಮಾಡುವುದಾಗಿ ಹೇಳಿಕೊಂಡಿದೆ. ಯಾಕೆ ಇಷ್ಟು ದೊಡ್ಡ ಮೊತ್ತದ ಸಾಲ? ಈ ಬಗ್ಗೆ ಸರ್ಕಾರದ ಬಳಿ ವಿವರಣೆಗಳೇನಾದರೂ ಇದೆಯೇ? ಈ ಸಾಲದಿಂದ ಆಗಬಹುದಾದ ಘನವಾದ, ಪ್ರಮುಖವಾದ ಕಾರ್ಯವಾದರೂ ಏನು ಎಂಬುದನ್ನು ಕೇಂದ್ರ ಸರ್ಕಾರ ಹೇಳುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.
"ಉಚಿತ ಲಸಿಕೆಯನ್ನು ನೀಡಬೇಕಿತ್ತು"
ಈ ಬಾರಿ ಬಜೆಟ್ ನಲ್ಲಿ ಹಣಕಾಸು ಸಚಿವರು ಕೊರೊನಾ ಸೋಂಕಿನ ಲಸಿಕೆಗಾಗಿ ₹35 ಸಾವಿರ ಕೋಟಿ ನೀಡುವುದಾಗಿಯೂ, ಬೇಕಿದ್ದರೆ ಇನ್ನಷ್ಟು ನೀಡುವುದಾಗಿಯೂ ಘೋಷಿಸಿದ್ದಾರೆ. ಇತರ ದೇಶಗಳಿಗೆ ಲಸಿಕೆ ಕಳುಹಿಸುತ್ತಿರುವುದಾಗಿಯೂ ಹೇಳಿದ್ದಾರೆ. ಈ ಎಲ್ಲ ಬಣ್ಣನೆಗಳನ್ನು ಬಿಟ್ಟು ಕೇಂದ್ರ ಸರ್ಕಾರ 130 ಕೋಟಿ ಜನರಿಗೆ ಉಚಿತ ಲಸಿಕೆಯನ್ನು ಖಚಿತ ಮಾಡಬೇಕಿತ್ತು. ಆದರೆ, ಸರ್ಕಾರ ಬಣ್ಣನೆಯಲ್ಲಿ ಮಾತು ಮುಗಿಸಿದೆ ಎಂದು ದೂರಿದ್ದಾರೆ.
Recommended Video