'ಜೆಡಿಎಸ್ ತಂಟೆಗೆ ಬಂದವರು ಬೀದಿ ಪಾಲಾಗಿದ್ದಾರೆ': ಕುಮಾರಸ್ವಾಮಿ
ಬೆಂಗಳೂರು, ಮೇ 10: "ಪಕ್ಷಕ್ಕೆ ಡ್ಯಾಮೇಜ್ ಮಾಡಿದರೆ ಅಥವಾ ನಮ್ಮ ತಂಟೆಗೆ ಬಂದರೆ ಅವರೇ ಬೀದಿಪಾಲಾಗುತ್ತಾರೆ" ಎಂದು ಅಸಮಾಧಾನಿತರ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.
ನೆಲಮಂಗಲ ಸಮೀಪದಲ್ಲಿ ನಡೆಯುವ ಜನತಾ ಜಲಧಾರೆ ಸಮಾವೇಶ ನಡೆಯುವ ಮೈದಾನದಲ್ಲಿ ಸುದ್ದಿಗೋಷ್ಠಿಯಲ್ಲಿ ಕುಮಾರಸ್ವಾಮಿ ಮಾತನಾಡಿದರು.
ಕುಮಾರಸ್ವಾಮಿ, ಜೆಡಿಎಸ್ ತೊರೆಯಲು ಮುಂದಾಗಿರುವ ಹಾಗೂ ಪಕ್ಷದ ವಿರುದ್ಧ ಮಾತನಾಡುತ್ತಿರುವವರಿಗೆ ಎಚ್ಚರಿಕೆಯನ್ನು ಈ ಸಂದರ್ಭದಲ್ಲಿ ನೀಡಿದರು. "ಕೆಲವರು ಪಕ್ಷಕ್ಕೆ ಡ್ಯಾಮೇಜ್ ಮಾಡುತ್ತಿದ್ದಾರೆ. ಪಕ್ಷಕ್ಕೆ ಹಾನಿ ಮಾಡಲು ಹೋದರೆ ಅವರೇ ಬೀದಿಪಾಲಾಗುತ್ತಾರೆ. ಅದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಬಿ.ಎಲ್ ಶಂಕರ್ ಕಾಂಗ್ರೆಸ್ ಗೆ ಹೋಗಿ ಏನಾದರು? ಇಪ್ಪತ್ತು ವರ್ಷವಾಯಿತು, ಅಲ್ಲಿ ಏನಾಗಿದ್ದಾರೆ" ಕುಮಾರಸ್ವಾಮಿ ಪ್ರಶ್ನಿಸಿದರು.
Breaking; ಕೋಡಿಹಳ್ಳಿ ಸ್ವಾಮೀಜಿ ಭವಿಷ್ಯ, ಎಚ್ಡಿಕೆ ಮಾತು ಎರಡು ಒಂದೇ!
ಪಕ್ಷಕ್ಕೆ ಯಾರೂ ಅನಿವಾರ್ಯವಲ್ಲ. ಪಕ್ಷವೇ ಹೊಸ ನಾಯಕತ್ವವನ್ನು ಹುಟ್ಟು ಹಾಕಲಿದೆ ಎಂದು ಕುಮಾರಸ್ವಾಮಿ ಮಾರ್ಮಿಕವಾಗಿ ನುಡಿದರು. ಕಾಂಗ್ರೆಸ್, ಬಿಜೆಪಿ ಈ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್ ಬಗ್ಗೆ ಭಯ ಇದೆ. ಅದೇ ಕಾರಣಕ್ಕೆ ನಮ್ಮ ಪಕ್ಷವನ್ನೇ ಟಾರ್ಗೆಟ್ ಮಾಡುತ್ತಿವೆ ಎಂದು ಅವರು ಎಚ್ಡಿಕೆ ವಾಗ್ದಾಳಿ ನಡೆಸಿದರು.
ಎಲ್ಲಿ ಕುಟುಂಬ ರಾಜಕಾರಣ ಇಲ್ಲ ಹೇಳಿ? ಎಲ್ಲಾ ಪಕ್ಷಗಳಲ್ಲೂ ಇದೆಯಲ್ಲಾ ಎಂದ ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಕುಟುಂಬದಲ್ಲಿ ಬೇರೆ ಯಾರೂ ರಾಜಕೀಯದಲ್ಲಿ ಇಲ್ಲವೇ? ಅವರು ಏನು ಕೆಲಸ ಮಾಡಿದ್ದಾರೆ. ಸತೀಶ್ ಜಾರಕಿಹೊಳಿ, ಯಡಿಯೂರಪ್ಪ, ಉದಾಸಿ, ಜೊಲ್ಲೆ ಕುಟುಂಬದಲ್ಲಿ ಇಲ್ಲವೇ? ಎಲ್ಲರಿಗೂ ನಮ್ಮ ಕುಟುಂಬದ ಮೇಲೆಯೇ ಕಣ್ಣು ಎಂದು ತಿರುಗೇಟು ನೀಡಿದರು.
ಪಿಎಸ್ಐ ಹಗರಣ: ಆರೋಪ ಮಾಡುವವರು ದಾಖಲೆ ಮುಂದಿಟ್ಟು ಮಾತಾಡಲಿ: ಸಿಎಂ ಬೊಮ್ಮಾಯಿ
ಮರಿತಿಬ್ಬೇಗೌಡ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ
ನಿಖಿಲ್ ಕುಮಾರಸ್ವಾಮಿ ಸೋಲಿಗೆ ಕುಟುಂಬದವರ ನಿರ್ಧಾರವೇ ಕಾರಣ ಎಂಬ ಮರಿತಿಬ್ಬೇಗೌಡ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, "ನಾನು ಕಾರ್ಯಕರ್ತರಿಂದಾಗಿ ನಿಖಿಲ್ ಸೋಲು ಅನುಭವಿಸಿದ ಅಂತಾ ಹೇಳಿದ್ದೀನಾ? ನಾನು ಎಲ್ಲೂ ಕಾರ್ಯಕರ್ತರ ವಿರುದ್ಧ ಆಪಾದನೆ ಮಾಡಿಲ್ಲ. ಚುನಾವಣೆ ನಡೆದು ಮೂರು ವರ್ಷಗಳಾಗಿವೆ. ಈಗ ಯಾಕೆ ಆ ವಿಚಾರದ ಬಗ್ಗೆ ಚರ್ಚಿಸಬೇಕು. ನಿಖಿಲ್ ಅವರಿಗೆ ನಾನೇ ಚುನಾವಣೆಗೆ ನಿಲ್ಲಬೇಡ, ಒತ್ತಡಗಳಿಗೆ ಮಣಿಯಬೇಡ ಅಂತಾ ಹೇಳಿದ್ದೆ" ಎಂದು ಕುಮಾರಸ್ವಾಮಿ ಹೇಳಿದರು.
ಜಿಲ್ಲೆಯ ಎಂಟು ಕ್ಷೇತ್ರಗಳ ಶಾಸಕರ ಒತ್ತಾಯದ ಕಾರಣ ನಿಖಿಲ್ ಸ್ಪರ್ಧಿಸಿದರು
"ಆದರೆ, ಮಂಡ್ಯ ಜಿಲ್ಲೆಯ ಎಂಟು ಕ್ಷೇತ್ರಗಳ ಶಾಸಕರ ಒತ್ತಾಯದ ಕಾರಣ ನಿಖಿಲ್ ಸ್ಪರ್ಧಿಸಿದರು. ಶಾಸಕರ ಒತ್ತಾಯಕ್ಕೆ ತಲೆಬಾಗಿ ನಿಲ್ಲಿಸಬೇಕಾಯಿತು. ಮರಿತಿಬ್ಬೇಗೌಡ ಮಾತನಾಡಿರುವುದನ್ನು ಗಮನಿಸಿದ್ದೇನೆ. ನಮ್ಮ ಪಕ್ಷಕ್ಕೆ ಅವರು ಎಷ್ಟು ಹಣ ಸಂದಾಯ ಮಾಡಿದ್ದಾರೆ? ನಮ್ಮ ಪಕ್ಷದ ಅಭ್ಯರ್ಥಿಯಾಗಿದ್ದಾಗ ಎಷ್ಟು ಹಣ ನೀಡಿದ್ದಾರೆ? ಯಾವ ನಾಯಕರಿಗೆ ಹಣ ಸಂದಾಯ ಮಾಡಿದ್ದರು. ಅವರು ಹಣವನ್ನು ಕುಮಾರಸ್ವಾಮಿಗೆ ಕೊಟ್ಟರೋ? ದೇವೇಗೌಡರಿಗೆ ಕೊಟ್ಟರೋ? ಇಲ್ಲವೇ ಜನತಾದಳದ ಅಕೌಂಟ್ ಗೆ ಕೊಟ್ಟಿದ್ದಾರೋ? ಅವರ ಚುನಾವಣಾ ಖರ್ಚು ವೆಚ್ಚಕ್ಕೆ ಪಕ್ಷದಿಂದ ಎಷ್ಟು ಕೊಟ್ಟಿದ್ದೇವೆ. ಇದೆಲ್ಲದರ ಬಗ್ಗೆ ಅವರು ಸತ್ಯ ಹೇಳುತ್ತಾರಾ" ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ನಮ್ಮ ಪಕ್ಷವನ್ನು ಮುಗಿಸೋದೆ ಎರಡೂ ಪಕ್ಷಗಳ ಅಜೆಂಡಾ
"ಈ ರೀತಿಯ ಕ್ಷುಲ್ಲಕವಾದ ಹೇಳಿಕೆಗಳ ಬಗ್ಗೆ ಜನರೇ ತೀರ್ಮಾನಿಸುತ್ತಾರೆ. ಎರಡೂ ರಾಷ್ಟ್ರೀಯ ಪಕ್ಷಗಳ ಅಜೆಂಡಾ ನಮ್ಮ ಪಕ್ಷವನ್ನು ಮುಗಿಸುವುದು. ಪಕ್ಷವನ್ನು ಉಳಿಸಲು ನಾವು ಹಲವು ಸಲ ತಲೆ ಕೊಟ್ಟಿದ್ದೇವೆ. ಹಳೇ ಮೈಸೂರು ಭಾಗದಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಭಯ ಇದೆ. ನಮ್ಮ ಪಕ್ಷವನ್ನು ಮುಗಿಸೋದೆ ಎರಡೂ ಪಕ್ಷಗಳ ಅಜೆಂಡಾ. ಹಾಗಾಗಿಯೇ ನಮ್ಮ ಪಕ್ಷದವರನ್ನು ಸೆಳೆಯುತ್ತಿದ್ದಾರೆ. ಆದರೆ, ಕಾರ್ಯಕರ್ತರು ಹೋಗಬೇಕಲ್ಲವೇ" ಎಂದು ಕುಮಾರಸ್ವಾಮಿ ತಿರುಗೇಟು ನೀಡಿದರು.
ಮೇಕೆದಾಟು ಪಾದಯಾತ್ರೆ ಸಂಪೂರ್ಣ ರಾಜಕೀಯ ಕಾರಣಕ್ಕಾಗಿ ನಡೆದಿರೋದು
"ನಾನು ಎರಡನೇ ಭಾರಿ ಸಿಎಂ ಆಗಿದ್ದಾಗ ಕಾಂಗ್ರೆಸ್ ನ ಮಹಾನುಭಾವರು ನೀರಾವರಿ ಸಚಿವರಾಗಿದ್ದರು. ನೀರಾವರಿ ಯೋಜನೆಗಳ ಬಗ್ಗೆ ಕೇಳಿದಾಗ, ನಾನು ನೀರಾವರಿ ಸಚಿವ ಇದಕ್ಕೆ ಮಧ್ಯಪ್ರವೇಶಿಸಬೇಡಿ ಎನ್ನುತ್ತಿದ್ದರು. ಮೇಕೆದಾಟು ಪಾದಯಾತ್ರೆ ಸಂಪೂರ್ಣ ರಾಜಕೀಯ ಕಾರಣಕ್ಕಾಗಿ ನಡೆದಿರೋದು. ಐದು ವರ್ಷ ಕಾಂಗ್ರೆಸ್ ಸರ್ಕಾರ ಇದ್ದಾಗ ಯಾಕೆ ಮಾಡಲಿಲ್ಲ" ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.