ಕೆ.ಸಿ.ವೇಣುಗೋಪಾಲ್ ಭೇಟಿ ಮಾಡಿದ ಎಚ್.ಡಿ.ಕುಮಾರಸ್ವಾಮಿ!
ಬೆಂಗಳೂರು, ಜನವರಿ 18 : ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೆ.ಸಿ.ವೇಣುಗೋಪಾಲ್ ಭೇಟಿಯಾಗಿದ್ದಾರೆ. ವಿವಿಧ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿರುವ ಮುಖ್ಯಮಂತ್ರಿಗಳು ಇವುಗಳ ನಡುವೆಯೇ ಭೇಟಿ ಆಗಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಶುಕ್ರವಾರ ಬೆಳಗ್ಗೆ ಬೆಂಗಳೂರಿನ ಕುಮಾರಕೃಪ ಅತಿಥಿಗೃಹದಲ್ಲಿ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರನ್ನು ಎ.ಚ್.ಡಿ.ಕುಮಾರಸ್ವಾಮಿ ಭೇಟಿಯಾದರು. ಮಂಡ್ಯಕ್ಕೆ ತೆರಳಿರುವ ಮುಖ್ಯಮಂತ್ರಿಗಳು ಆ ಕಾರ್ಯಕ್ರಮದ ನಡುವೆಯೇ ವೇಣುಗೋಪಾಲ್ ಭೇಟಿಯಾದರು.
ಶಾಸಕಾಂಗ ಸಭೆಗೆ ಗೈರಾಗಬೇಡಿ : ಸಿದ್ದರಾಮಯ್ಯ ಖಡಕ್ ಎಚ್ಚರಿಕೆ!
ಇಂದು ಮಧ್ಯಾಹ್ನ 3.30ಕ್ಕೆ ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಈ ಸಭೆಗೂ ಮುನ್ನ ನಡೆದಿರುವ ಈ ಭೇಟಿ ಕುತೂಹಲಕ್ಕೆ ಕಾರಣವಾಗಿದೆ. ಬಂಡಾಯ ಶಾಸಕರ ನಡೆ ಕುರಿತು ಕುಮಾರಸ್ವಾಮಿ ವೇಣುಗೋಪಾಲ್ ಅವರ ಜೊತೆ ಚರ್ಚೆ ನಡೆಸಿದರು.
ಇಂದಿನ 'ಕೈ' ಶಾಸಕಾಂಗ ಸಭೆ ರಾಜಕೀಯ ದಿಕ್ಕು ಬದಲಿಸುತ್ತಾ?
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳದಿದ್ದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಶಾಸಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಆದರೆ, ಮೂರರಿಂದ 5 ಶಾಸಕರು ಸಭೆಗೆ ಗೈರು ಹಾಜರಾಗುವ ಸಾಧ್ಯತೆ ಇದೆ.
ಒಂದು ವೇಳೆ ಸಮ್ಮಿಶ್ರ ಸರಕಾರ ಬಿದ್ದರೆ ಶ್ರೇಯಸ್ಸು ಯಾರಿಗೆ ಸಲ್ಲಬೇಕು?
ಎಚ್.ಡಿ.ಕುಮಾರಸ್ವಾಮಿ ಹೇಳಿಕೆ
ಕೆ.ಸಿ.ವೇಣುಗೋಪಾಲ್ ಭೇಟಿ ಬಳಿಕ ಮಾತನಾಡಿದ ಕುಮಾರಸ್ವಾಮಿ ಅವರು, 'ನಾನು ಎರಡು ದಿನ ಬೆಂಗಳೂರಿನಲ್ಲಿ ಇರುವುದಿಲ್ಲ. ಇಂದು ಸಂಜೆ ಕೋಲ್ಕತ್ತಾಗೆ ಹೋಗಬೇಕು. ನಂತರ ವೈಯಕ್ತಿಕ ಕೆಲಸಗಳಿವೆ. ಆದ್ದರಿಂದ, ಬೆಂಗಳೂರಿನಲ್ಲಿದ್ದ ವೇಣುಗೋಪಾಲ್ ಅವರನ್ನು ಭೇಟಿಯಾಗಿದ್ದೇನೆ' ಎಂದು ಸ್ಪಷ್ಟಪಡಿಸಿದರು.
ಉಮೇಶ್ ಜಾಧವ್ ಗೈರು?
ಬಂಡಾಯ ಬಣದಲ್ಲಿ ಗುರುತಿಸಿಕೊಂಡಿರುವ ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಉಮೇಶ್ ಜಾಧವ್ ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜರಾಗುವ ಸಾಧ್ಯತೆ ಇದೆ. ಉಮೇಶ್ ಜಾಧವ್ ಇನ್ನೂ ಮುಂಬೈನಲ್ಲಿಯೇ ಇದ್ದು, ಬೆಂಗಳೂರಿಗೆ ಇಂದು ಆಗಮಿಸುವ ಸಾಧ್ಯತೆ ಕಡಿಮೆ ಇದೆ.
ಕೆಪಿಸಿಸಿಯಿಂದ ಮಾಹಿತಿ
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಉಮೇಶ್ ಜಾಧವ್ ಸಹೋದರ ರಾಮಚಂದ್ರ ಜಾಧವ್ ಅವರಿಗೆ ಕರೆ ಮಾಡಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಉಮೇಶ್ ಜಾಧವ್ ಅವರು ಪಾಲ್ಗೊಳ್ಳುವಂತೆ ತಿಳಿಸಬೇಕು ಎಂದು ಮಾಹಿತಿ ನೀಡಿದ್ದಾರೆ.
ಬಳ್ಳಾರಿ ಗ್ರಾಮಾಂತರ ಶಾಸಕ
ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಅವರು ನ್ಯಾಯಾಲಯದ ವಿಚಾರಣೆ ಇರುವ ಕಾರಣ ಶಾಸಕಾಂಗ ಪಕ್ಷದ ಸಭೆಗೆ ಗೈರಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಈಗ ನ್ಯಾಯಾಲಯ ವಿಚಾರಣೆಯನ್ನು ಫೆ.18ಕ್ಕೆ ಮುಂದೂಡಿದೆ. ಆದ್ದರಿಂದ, ಮಧ್ಯಾಹ್ನ ನಡೆಯುವ ಸಭೆಗೆ ಹಾಜರಾಗುವ ಸಾಧ್ಯತೆ ಇದೆ.
ಬಿಜೆಪಿ ತಿಪ್ಪರಲಾಗ ಹಾಕಿದರೂ ಸರ್ಕಾರ ಬೀಳಲ್ಲ
'ಬಿಜೆಪಿಯವರು ಯಡಿಯೂರಪ್ಪ ನೇತೃತ್ವದಲ್ಲಿ ರೆಸಾರ್ಟ್ನಲ್ಲಿ ಮಜಾ ಮಾಡುತ್ತಿದ್ದಾರೆ. ಇನ್ನೊಂದು ಎರಡು ದಿನ ಅಲ್ಲೇ ಇರಲಿ ಬಿಡಿ. ಅವರು ತಿಪ್ಪರಲಾಗ ಹಾಕಿದರೂ ಸರ್ಕಾರ ಬೀಳಲ್ಲ. ಸಿಎಲ್ಪಿ ಸಭೆಗೆ ಯಾರು ಬರುತ್ತಾರೆ?, ಯಾರು ಬರಲ್ಲ ಎಂದು ಸಭೆಯ ಬಳಿಕ ನೀವೇ ನೋಡಿ' ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕುಮಾರಕೃಪ ಅತಿಥಿ ಗೃಹದಲ್ಲಿ ಹೇಳಿದರು.