ಶಿರಾದಲ್ಲಿ ನಾಮಪತ್ರ ಸಲ್ಲಿಸುವಾಗ ಕುಡಿಸಿ ಮಲಗಿಸಿದ್ದಾರೆ!
ಬೆಂಗಳೂರು, ಅ. 19: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಕೆಆರ್ ಪೇಟೆಯಂತೆ ಶಿರಾದಲ್ಲಿಯೂ ಜೆಡಿಎಸ್ ಪಕ್ಷವನ್ನು ಮುಗಿಸುತ್ತೇನೆ ಎಂದು ಸಿಎಂ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಹೇಳುತ್ತಿದ್ದಾರೆ. ಅದೇ ಉತ್ಸಾಹದಲ್ಲಿ ಬೆಂಗಳೂರಿನಿಂದ ಪಾಪದ ಹಣವನ್ನು ತೆಗೆದುಕೊಂಡು ಹೋಗಿ ಶಿರಾದಲ್ಲಿ ಕುಳಿತಿದ್ದಾರೆ. ಆದರೆ ಅದೇ ದುಡ್ಡನ್ನು ತೆಗೆದುಕೊಂಡು ಹೋಗಿ ಪ್ರವಾಹದಿಂದ ತತ್ತರಿಸಿ ಬೀದಿಯಲ್ಲಿ ಇರುವ ಜನರಿಗೆ ಕೊಡಬೇಕಿತ್ತು ಎಂದು ಕುಮಾರಸ್ವಾಮಿ ಹೇಳಿಕೆ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಆದರೆ ವಿಜಯೇಂದ್ರ ಅವರು ಅದನ್ನು ಮಾಡಿಲ್ಲ. ಬದಲಿಗೆ ತಮ್ಮದೇ ಪಕ್ಷದ ಜನರಿಗೆ ಕುಡಿಸಿ ಬೀದಿ ಬೀದಿಯಲ್ಲಿ ಮಲಗಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ವೇಳೆಯಲ್ಲಿ ಶಿರಾದಲ್ಲಿ ಯುವಕರಿಗೆ ಕುಡಿಸಿ, ಕಂಡ-ಕಂಡಲ್ಲಿ ರಸ್ತೆಯಲ್ಲೇ ಮಲಗಿಸಿದ್ದಾರೆ. ಇದೇ ಇವರ ಸಾಧನೆ ಎಂದು ಕುಮಾರಸ್ವಾಮಿ ಅವರು ಟೀಕಿಸಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಅಷ್ಟೊಂದು ಪ್ರವಾಹದಿಂದ ಸಮಸ್ಯೆ ಉಂಟಾಗಿದೆಯಲ್ಲ? ಅವರ ಕಷ್ಟ ಸುಖ ಕೇಳಲು ಕನಿಷ್ಠ ಸೌಜನ್ಯಕ್ಕಾದರೂ ಹೋಗಿದ್ದೀರಾ? ಉತ್ತರ ಕರ್ನಾಟಕ ಭಾಗದ ಜನರು ನನ್ನನ್ನು ಕೈ ಬಿಟ್ಟಿದ್ದರು. ನನಗೆ ಇಷ್ಟೆಲ್ಲಾ ನೋವು ಇದ್ದರೂ, ಆ ಭಾಗದ ಜನರ ಕಷ್ಟಗಳಿಗೆ ನಾನು ಸ್ಪಂದಿಸುತ್ತಿದ್ದೇನೆ ಎಂದರು.
ಜಾತಿಗಣತಿ ಬಗ್ಗೆ ಸಿದ್ದರಾಮಯ್ಯ ಆಗ ಮಾತಾಡಿಲ್ಲ!
ಸಮ್ಮಿಶ್ರ ಸರ್ಕಾರದಲ್ಲಿ ಸಮನ್ವಯ ಸಮತಿ ಅಧ್ಯಕ್ಷರಾಗಿ ಸಿದ್ದರಾಮಯ್ಯ ಇದ್ದರು. ಒಂದೂ ದಿನವೂ ಸಮೀಕ್ಷೆ ವಿಚಾರ ಚರ್ಚೆಯೇ ಮಾಡಿಲ್ಲ. ಕಾಂಗ್ರೆಸ್ ಪಕ್ಷದ ಮಂತ್ರಿಗಳು ಈ ಬಗ್ಗೆ ಕನಿಷ್ಟ ಪ್ರಸ್ತಾಪವನ್ನೂ ಮಾಡಿಲ್ಲ. ಈಗ ಯಾಕೆ ಸುಳ್ಳು ಹೇಳ್ತಾರೆ? ಬೇರೆ ವಿಷಯ ಅವರ ಬಳಿ ಇಲ್ಲ. ಹೀಗಾಗಿ ನನ್ನ ಮೇಲೆ ವೃಥಾ ಅಪಾದನೆ ಮಾಡುತ್ತಿದ್ದಾರೆ ಎಂದರು.
ಸಿದ್ದರಾಮಯ್ಯ ಅವರಿಗೆ ರಾಜಕೀಯ ತೆವಲು
ಜಾತಿ ಸಮೀಕ್ಷೆ ಬಿಡುಗಡೆಗೆ ನಾನೇಕೆ ಬೇಡ ಎನ್ನಲಿ? ರಾಜಕೀಯ ತೆವಲಿಗೆ ಸಿದ್ದರಾಮಯ್ಯ ಅವರು ಈಗ ಏನೇನೊ ಮಾತನಾಡುವುದು ಬೇಡ. ಸಮೀಕ್ಷೆ ಅವರಿಗೆ ನಿನ್ನೆ ರಾತ್ರಿ ಕನಸು ಬಿದ್ದಿತ್ತಾ? ನನ್ನ ಮೇಲೆ ಆರೋಪ ಮಾಡಲು ಅವರಿಗೆ ವಿಷಯಗಳು ಇಲ್ಲ. ಹೀಗಾಗಿ ಹಳೆಯದನ್ನೇ ಮತ್ತೆ ಕೆದಕಿಕೊಂಡು ಹೊರಟಿದ್ದಾರೆ ಎಂದು ಸಿದ್ದರಾಮಯ್ಯ ಅವರ ಮೇಲೆ ಎಚ್ಡಿಕೆ ಆಕ್ರೋಶ ವ್ಯಕ್ತಪಡಿಸಿದರು.
ಈಗ ಮತ್ತೆ ಹಿಂದುಳಿದವರ ಮೇಲೆ ಪ್ರೀತಿ ಬಂದಿದೆ
ಈಗ ಹಿಂದುಳಿದವರ ಬಗ್ಗೆ ಸಿದ್ದರಾಮಯ್ಯ ಅವರಿಗೆ ಈಗ ಮತ್ತೆ ಪ್ರೀತಿ ಬಂದಿದೆ. ನಿಮ್ಮ ತೆವಲಿಗೆ ಸಮಾಜಗಳನ್ನು ನನ್ನ ವಿರುದ್ಧ ಎತ್ತಿಕಟ್ಟಿದ್ದೀರಿ ಎಂಬುದು ನನಗೆ ಗೊತ್ತಿದೆ. ಆ ಮೂಲಕ ರಾಜಕೀಯ ತೆವಲು ತೀರಿಸಿಕೊಳ್ಳಲು ಹೊರಟಿದ್ದೀರೀ, ಅದು ಬಹಳ ದಿನ ನಡೆಯೊದಿಲ್ಲ. ನನ್ನ ಬಗ್ಗೆ ಮಾತಾಡುವಾಗ ಎಚ್ಚರ ಇಟ್ಟುಕೊಂಡು ಮಾತನಾಡಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮೇಲೆ ಎಚ್ಡಿಕೆ ಮತ್ತೊಮ್ಮ ಹರಿಹಾಯ್ದರು.
Recommended Video
ಅಂದೇ ಬೆಂಬಲ ವಾಪಾಸ್ ಪಡೆಯಬೇಕಾಗಿತ್ತು
ಸಿದ್ದರಾಮಯ್ಯನವರೇ, ಈಗ ಮಾತನಾಡುತ್ತಿದ್ದೀರಲ್ಲ? ಆಗ ನಿಮಗೆ ಜವಾಬ್ದಾರಿ ಇರಲಿಲ್ಲವಾ? ಜಾತಿ ಸಮೀಕ್ಷೆಗೆ ನಾನು ವಿರೋಧ ಮಾಡಿದ್ದರೇ ಅಂದೇ ಬೆಂಬಲ ವಾಪಸ್ ಪಡೆಯಬೇಕಿತ್ತು. ಈಗ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ನಮೋ ನಮೋ ಅಂತಿದ್ದೀರಾ? ನಿಮಗೆ ನನ್ನ ಭಯ ಇದೆ. ಜನರಿಂದ ಮತ್ತೆ ಮೇಲೆ ಬರುತ್ತೇನೆ ಎಂಬ ಮುನ್ಸೂಚನೆ ಅವರಿಗೆ ಇದೆ. ಈಗ ನನಗೆ ಹಿನ್ನಡೆ ಆಗಿರಬಹುದು. ಆದರೆ ಈ ರಾಜ್ಯದ ಜನ ಜಾತಿ-ಭೇದ ಮರೆತು ಮತ್ತೆ ಕುಮಾರಸ್ವಾಮಿ ಬೇಕು ಅನ್ನೊ ದಿನಗಳು ಬರುತ್ತವೆ ಎಂದು ಕುಮಾರಸ್ವಾಮಿ ಭರವಸೆ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಕಣ್ಣಿಗೆ ಕಾಣುತ್ತಿಲ್ಲ, ಅವರಿಗೆ ಜೆಡಿಎಸ್ ಪಕ್ಷ ಮಾತ್ರ ಕಾಣುತ್ತಿದೆ. ಅವರಿಗೆ ಜೆಡಿಎಸ್ ಪಕ್ಷವನ್ನು ಮುಗಿಸಬೇಕು ಅಂತಿದೆ. ಯಾಕೆಂದರೆ ಅವರನ್ನು ಬೆಳೆಸಿದ ಪಕ್ಷ ನಮ್ಮದು. ನಾವು ಅವರನ್ನು ಬೆಳೆಸಿದೆವಲ್ಲ? ಆ ತಪ್ಪಿಗೆ ನಮ್ಮನ್ನು ಮುಗಿಸಬೇಕು.