ಒಂದು ಸ್ಥಾನ, ಐವರು ಔಟ್, ಆರು ಮಂದಿ ಇನ್, ಎಚ್ಡಿಕೆ ಪ್ಲ್ಯಾನ್
ಬೆಂಗಳೂರು, ಜುಲೈ04: ಕರ್ನಾಟಕದ ಕೈ-ತೆನೆ ಸರ್ಕಾರ ಆಷಾಢದಲ್ಲಿ ಬಂಡಾಯ, ಭಿನ್ನಮತದ ಗಾಳಿಗೆ ಸಿಲುಕಿ ಅತ್ತಿಂದಿತ್ತ ಹಾರಾಡಿ, ಸೂತ್ರ ಹರಿದ ಗಾಳಿಪಟವಾಗದಂತೆ ಜೋಪಾನ ಮಾಡುವ ಯತ್ನದಲ್ಲಿ ಜೆಡಿಎಸ್ -ಕಾಂಗ್ರೆಸ್ ವರಿಷ್ಠರು ತೊಡಗಿದ್ದಾರೆ.
ಸದ್ಯಕ್ಕೆ ಶಾಸಕರ ಸರಣಿ ರಾಜೀನಾಮೆ ಭೀತಿಯನ್ನು ಎದುರಿಸುತ್ತಿರುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮೇರಿಲ್ಯಾಂಡಿನಿಂದಲೇ ತಮ್ಮ ಕಾರ್ಯತಂತ್ರ ರೂಪಿಸುತ್ತಿದ್ದು, ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಎಲ್ಲಾ ರೀತಿಯಿಂದ ಸಜ್ಜಾಗಿದ್ದಾರೆ.
ಶಾಸಕರ ರಾಜೀನಾಮೆ, ಸದನದಲ್ಲಿ ಅವಿಶ್ವಾಸ ನಿರ್ಣಯ ಮಂಡನೆಯಾದರೆ ಏನು ಮಾಡಬೇಕು ಎಂಬೆಲ್ಲ ತಲೆನೋವನ್ನು ಸ್ಪೀಕರ್ ರಮೇಶ್ ಕುಮಾರ್ ನಿಭಾಯಿಸುತ್ತಿದ್ದಾರೆ. ಇನ್ನೊಂದೆಡೆ, ಅತೃಪ್ತ, ಬಂಡಾಯವೆದ್ದ, ಭಿನ್ನಮತೀಯರನ್ನು ಶಮನಗೊಳಿಸಲು ಕುಮಾರಸ್ವಾಮಿ ಅವರು ಮತ್ತೊಂದು ಅಸ್ತ್ರ ಪ್ರಯೋಗಿಸಲು ಸಿದ್ಧರಾಗಿದ್ದು, ಅಮೆರಿಕದಿಂದ ಬೆಂಗಳೂರಿಗೆ ಬಂದ ಕೂಡಲೇ ಪ್ರಯೋಗಿಸಲಿದ್ದಾರೆ.
ಸ್ಪೀಕರ್ ರಮೇಶ್ ಕುಮಾರ್ ಕೈಲಿದೆ ಜೆಡಿಎಸ್ -ಕಾಂಗ್ರೆಸ್ ಸರ್ಕಾರದ ಭವಿಷ್ಯ
ಈ ನಡುವೆ, ಬೆಂಗಳೂರಿಗೆ ಬಂದ ಬಳಿಕ ಮತ್ತೊಮ್ಮೆ ಸಚಿವ ಸಂಪುಟ ವಿಸ್ತರಣೆ ಮಾಡುವ ಸಾಹಸಕ್ಕೆ ಕುಮಾರಸ್ವಾಮಿ ಕೈ ಹಾಕಲಿದ್ದು, ಈ ಬಾರಿ ಹಲವು ಅಚ್ಚರಿ ಕಾದಿದೆ ಎಂದು ರಾಜಕೀಯ ಪಡಸಾಸಲೆಯಲ್ಲಿ ಗುಸುಗುಸು ಕೇಳಿ ಬಂದಿದೆ.
ರಾಜೀನಾಮೆ ನೀಡಿದ ಇಬ್ಬರು ಕೂಡಾ ರಾಜಿಯಾದರೆ?
ಮತ್ತೊಂದೆಡೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಆನಂದ್ ಸಿಂಗ್, ಮಾಧ್ಯಮಗಳ ಮುಂದೆ ರಾಜೀನಾಮೆ ಪತ್ರ ಹಿಡಿದು ನಿಂತ ರಮೇಶ್ ಜಾರಕಿಹೊಳಿ ಜೊತೆ ಖುದ್ದು ಕುಮಾರಸ್ವಾಮಿ ಅವರು ಸಮಾಲೋಚನೆ ನಡೆಸಿ ಮನ ಓಲೈಕೆ ಮಾಡುತ್ತಿದ್ದಾರೆ. ಜುಲೈ 7ರ ಬೆಳಗ್ಗೆಯೇ ಪ್ರವಾಸ ಮುಗಿಸಿ ಹಿಂತಿರುಗುತ್ತೇನೆ, ತಕ್ಷಣವೇ ನಿಮ್ಮನ್ನು ಭೇಟಿ ಯಾಗಿ ಸಮಸ್ಯೆ ಪರಿಹರಿಸುತ್ತೇನೆ ತಾಳ್ಮೆಯಿಂದಿರಿ ಎಂದು ಈ ಶಾಸಕರಿಗೆ ಭರವಸೆ ನೀಡಿದ್ದಾರೆ ಎಂಬ ಸುದ್ದಿಯಿದೆ.
ಸಂಪುಟಕ್ಕೆ ಆರು ಹೊಸ ಮುಖಗಳು ಎಂಟ್ರಿ
ಅಮೆರಿಕ ಪ್ರವಾಸದಿಂದ ಹಿಂತಿರುಗುತ್ತಿದ್ದಂತೆ ಸಂಪುಟ ವಿಸ್ತರಣೆಗೆ ಚಾಲನೆ ನೀಡಲಿರುವ ಕುಮಾರಸ್ವಾಮಿ ಅವರು ಆರು ಹೊಸ ಮುಖಗಳಿಗೆ ಸಂಪುಟದಲ್ಲಿ ಅವಕಾಶ ಮಾಡಿಕೊಡಲು ತೀರ್ಮಾನಿಸಿದ್ದಾರೆ. ಆಪರೇಷನ್ ಕಮಲದ ಮೂಲಕ ಸರ್ಕಾರ ಉರುಳಿಸಲು ಸತತವಾಗಿ ಯತ್ನಿಸಿ ವಿಫಲವಾಗಿರುವ ಬಿಜೆಪಿ ತಂತ್ರಕ್ಕೆ ಈ ರೀತಿ ಪ್ರತಿತಂತ್ರ ಹೂಡಿದ್ದಾರೆ. ಈ ಮೂಲಕ ಸರ್ಕಾರ ಉಳಿಸಲು ಕಾಂಗ್ರೆಸ್-ಜೆಡಿಎಸ್ ನ ಐವರು ಸಚಿವರು ಸ್ವಯಂ ಪ್ರೇರಿತರಾಗಿ ತಮ್ಮ ಸ್ಥಾನ ತ್ಯಜಿಸಲಿದ್ದಾರೆ. ಸದ್ಯ ಸಂಪುಟದಲ್ಲಿ ಖಾಲಿಯಿರುವ ಒಂದು ಸ್ಥಾನ ಸೇರಿದಂತೆ 6 ಮಂದಿಯನ್ನು ಸೇರಿಸಿಕೊಳ್ಳಲಾಗುತ್ತದೆ.
ಇಲ್ಲಿನ ಬೆಳವಣಿಗೆ ಬಗ್ಗೆ ಕಾಲ ಕಾಲಕ್ಕೆ ಮಾಹಿತಿ
ಅಮೆರಿಕ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಲ್ಲಿಂದಲೇ ತಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ, ಕಾಂಗ್ರೆಸ್ ನಾಯಕ, ಸಮನ್ವಯ ಸಮಿತಿ ಮುಖ್ಯಸ್ಥ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಉಪಮುಖ್ಯಮಂತ್ರಿ ಜಿ. ಪರಮೇಶ್ವರ್, ಸಚಿವ ಡಿಕೆ ಶಿವಕುಮಾರ್ ಸೇರಿದಂತೆ ಸಂಪುಟದ ಹಿರಿಯ ಸಹೋದ್ಯೋಗಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಇಲ್ಲಿನ ಬೆಳವಣಿಗೆಗಳ ಮಾಹಿತಿಯನ್ನು ಪಡೆದುಕೊಂಡು ಯಾವ ನಡೆ ಇಡಬೇಕು ಎಂಬುದನ್ನು ಅರಿತು ಮುನ್ನಡೆಯುತ್ತಿದ್ದಾರೆ.
ಮಂತ್ರಿ ಸ್ಥಾನದ ಭರವಸೆಗೆ ಭಿನ್ನಮತ ಶಮನ?
ಮಾಹಿತಿ ಆಧರಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಅತೃಪ್ತ ಶಾಸಕರ ಜೊತೆ ಸಮಾಲೋಚನೆ ನಡೆಸಿ, ಅವರ ಮನವೊಲಿಕೆ ಪ್ರಯತ್ನ ಮಾಡುತ್ತಿದ್ದಾರೆ. ಕೆಲವರಿಗೆ ಮಂತ್ರಿ ಸ್ಥಾನದ ಭರವಸೆ ಸಿಗುತ್ತಿದ್ದಂತೆ, ಸಿಎಂ ಮಾತಿಗೆ ಒಪ್ಪಿಗೆ ಸೂಚಿಸಿದ್ದಾರೆ ಎಂಬ ಸುದ್ದಿಯಿದೆ. ಮುಖ್ಯವಾಗಿ ರಾಜೀನಾಮೆ ನೀಡುವವರ ಪಟ್ಟಿಯಲ್ಲಿದ್ದಬಳ್ಳಾರಿಯ ನಾಗೇಂದ್ರ ಅವರು ಬಹಿರಂಗವಾಗಿ ಹೇಳಿಕೆ ನೀಡಿದ್ದು, ನಾನು ಬಿಜೆಪಿ ಸೇರುವುದಿಲ್ಲ, ಸಚಿವ ಸ್ಥಾನದ ಭರವಸೆ ಸಿಕ್ಕಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಿಗಮ ಮಂಡಳಿ ನೇಮಕಾತಿ ಮುಂದುವರೆಯಲಿದೆ.
ಜೆಡಿಎಸ್ ಪಕ್ಷದ ಕೋಟಾದಲ್ಲಿ ಶಾಸಕರು ಸೇರಿ ಒಟ್ಟು 9 ಮಂದಿಗೆ ನಿಗಮ-ಮಂಡಳಿ ಅಧ್ಯಕ್ಷ ಹುದ್ದೆಯನ್ನು ನೀಡಲಾಗಿದೆ. 2ನೇ ಕಂತಿನಲ್ಲಿ ಇನ್ನುಳಿದ ನೇಮಕಾತಿಗಳನ್ನು ಪೂರ್ಣಗೊಳಿಸಲು ಜೆಡಿಎಸ್ ಮುಂದಾಗಿದೆ. ಈ ಮೂಲಕ ಅಸಮಾಧಾನಗೊಂಡಿರುವ ಶಾಸಕರನ್ನು ಸಮಾಧಾನ ಪಡಿಸಲು ಪ್ರಯತ್ನ ನಡೆಸಲಾಗುತ್ತದೆ.
ಒಂದು ಕಡೆ ಪಕ್ಷ ಸಂಘಟನೆಗೆ ಒತ್ತು ಕೊಟ್ಟು ಹೊಸ ಅಧ್ಯಕ್ಷರು, ಕಾರ್ಯಾಧ್ಯಕ್ಷರನ್ನು ನೇಮಕ ಮಾಡಿರುವ ಜೆಡಿಎಸ್ ಮತ್ತೊಂದು ಕಡೆ ಶಾಸಕರಿಗೆ ಅಧಿಕಾರ ನೀಡಲು ಮುಂದಾಗಿದೆ. ಈ ಮೂಲಕ ಎಲ್ಲರನ್ನೂ ಸಕ್ರಿಯವಾಗಿಸಿ ಸರ್ಕಾರ ನಡೆಸಿಕೊಂಡು ಹೋಗಲು ಬಯಸಿದೆ.