ಸಾರಿಗೆ ಸಂಸ್ಥೆ ನೌಕರರಿಗೆ ಮಾನ್ಯತೆ ನೀಡಿ: ಸಿಎಂಗೆ ಎಚ್ಡಿಕೆ ಪತ್ರ
ಬೆಂಗಳೂರು, ಜನವರಿ 30: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ (ಕೆಎಸ್ಆರ್ಟಿಸಿ) ಕೆಲಸ ಮಾಡುತ್ತಿರುವ ನೌಕರರನ್ನು ಪೂರ್ಣ ಪ್ರಮಾಣದ ಸರ್ಕಾರಿ ನೌಕರರೆಂದು ಪರಿಗಣಿಸಿ ಅವರಿಗೆ ಸೂಕ್ತ ಸವಲತ್ತು ಮತ್ತು ವೇತನ ನೀಡುವಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪತ್ರ ಬರೆದಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರನ್ನು ಪೂರ್ಣ ಪ್ರಮಾಣದ ಸರ್ಕಾರಿ ನೌಕರರೆಂದು ಪರಿಗಣಿಸಿ 2020-21 ಸಾಲಿನ ಆಯವ್ಯಯದಲ್ಲಿ ಸೂಕ್ತ ವೇತನ ಸವಲತ್ತುಗಳನ್ನು ಘೋಷಿಸುವ ಬಗ್ಗೆ ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರವನ್ನು ಕುಮಾರಸ್ವಾಮಿ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.
ಪ್ರಯಾಣದರ ಕಡಿತಗೊಳಿಸಿದ ಕೆಎಸ್ಆರ್ಟಿಸಿ
ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿಯೇ ಈ ನೌಕರರನ್ನು ಸರ್ಕಾರಿ ನೌಕರರೆಂದು ಮಾನ್ಯತೆ ನೀಡಲು ಉದ್ದೇಶಿಸಲಾಗಿತ್ತು. ಅದನ್ನು ತಮ್ಮ ನೇತೃತ್ವದ ಸಮ್ಮಿಶ್ರ ಸರ್ಕಾರದ ಬಜೆಟ್ ಮಂಡನೆ ವೇಳೆ ಘೋಷಿಸಲು ತೀರ್ಮಾನಿಸಲಾಗಿತ್ತು. ಆದರೆ ಸರ್ಕಾರ ಪತನವಾಗಿದ್ದರಿಂದ ಅದು ಸಾಧ್ಯವಾಗಿರಲಿಲ್ಲ. ಈಗ ನೀವಾದರೂ ಅದನ್ನು ಪೂರೈಸಿ ಎಂದು ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ಸರ್ಕಾರಿ ನೌಕರಿಯ ಮಾನ್ಯತೆ ಇಲ್ಲ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಅದರ ಅಧೀನ ಸಂಸ್ಥೆಗಳಾದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗಳಲ್ಲಿ (ಬಿಎಂಟಿಸಿ) ಸಾವಿರಾರು ನೌಕರರು ಸರ್ಕಾರಿ ನೌಕರಿಯ ಮಾನ್ಯತೆ ಇಲ್ಲದೆ, ಸೂಕ್ತ ವೇತನ ಸವಲತ್ತುಗಳಿಲ್ಲದೆ ಕರ್ತವ್ಯ ನಿರ್ವಹಿಸುತ್ತಿರುವುದು ತಮಗೂ ತಿಳಿದಿರುವ ಸಂಗತಿಯಾಗಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಕುಟುಂಬಗಳು ಸಂಕಷ್ಟದಲ್ಲಿವೆ
ಸಾರಿಗೆ ಸಂಸ್ಥೆಗಳಲ್ಲಿ ಅತ್ಯಂತ ನಿಷ್ಠೆ, ಪ್ರಾಮಾಣಿಕವಾಗಿ ದುಡಿಯುತ್ತಿರುವ ನೌಕರರ ಶ್ರಮಕ್ಕೂ ಅವರಿಗೆ ನೀಡುತ್ತಿರುವ ವೇತನ ಸವಲತ್ತುಗಳಿಗೂ ಅಜಗಜಾಂತರ ವ್ಯತ್ಯಾಸಗಳಿವೆ. ಈ ನೌಕರರ ಕುಟುಂಬಗಳು ಕಷ್ಟದಲ್ಲೇ ಬದುಕುತ್ತಿವೆ. ಈ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ಸೂಕ್ತ ವೇತನ ನಿಗದಿ ಮಾಡುವ ಕುರಿತು ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಬಿಎಸ್ವೈ ಸರಕಾರ ಅಧಿಕಾರಕ್ಕೆ ಬರಲು ಎಚ್ಡಿಕೆ ಕಾರಣ: ಸಿಎಂ ಪುತ್ರ ವಿಜಯೇಂದ್ರ ಹೇಳಿಕೆ
ರಾಜಕೀಯ ವಿಪ್ಲವದಲ್ಲಿ ನೀವು ಸಿಎಂ ಆದಿರಿ
ಅಲ್ಲದೇ, ಈ ವಿಷಯವನ್ನು ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಸಹ ಉಲ್ಲೇಖಿಸಲಾಗಿತ್ತು. ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿದ್ದಂತೆ ನಾನು ರೈತರ ಸಾಲ ಮನ್ನಾ, ಪೊಲೀಸರ ವೇತನ ಹೆಚ್ಚಿಸುವ ಔರಾದ್ಕರ್ ವರದಿ ಜಾರಿಯಂತಹ ಕೆಲಸಗಳನ್ನು ನನ್ನ ಅಧಿಕಾರಾವಧಿಯ ಮೊದಲ ವರ್ಷದಲ್ಲಿಯೇ ಮಾಡಿದ್ದೆ. ಸಾರಿಗೆ ನೌಕರರನ್ನು ಪೂರ್ಣ ಪ್ರಮಾಣದ ಸರ್ಕಾರಿ ನೌಕರರನ್ನಾಗಿ ಮಾಡಲು ಸಿದ್ಧತೆ ಮಾಡಿಕೊಂಡಿದ್ದೆ. ಅಷ್ಟರೊಳಗೆ ಸಂಭವಿಸಿದ ರಾಜಕೀಯ ವಿಪ್ಲವಗಳಲ್ಲಿ ತಾವು ಮುಖ್ಯಮಂತ್ರಿಯಾಗಿದ್ದೀರಿ ಎಂದು ಪತ್ರದಲ್ಲಿ ಬರೆದಿದ್ದಾರೆ.
ನಾನೇ ಆ ಕೆಲಸ ಮಾಡುತ್ತಿದ್ದೆ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ನಾನು ಈ ವರ್ಷದ ಆಯವ್ಯಯದಲ್ಲಿಯೇ ಈ ಕೆಲಸ ಮಾಡುವವನಿದ್ದೆ. ಈಗ ಬಜೆಟ್ ಮಂಡಿಸುತ್ತಿರುವ ತಾವಾದರೂ ಈ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ಅವರಿಗೆ ಸೂಕ್ತ ವೇತನ ಹಾಗೂ ಸವಲತ್ತುಗಳನ್ನು ಆಯವ್ಯಯದಲ್ಲಿ ಘೋಷಿಸಿ ಈ ನೌಕರರ ಬದುಕನ್ನು ಹಸನಾಗಿಸಬೇಕೆಂದು ಈ ಮೂಲಕ ಕೋರುತ್ತೇನೆ ಎಂದು ಕುಮಾರಸ್ವಾಮಿ ಪತ್ರದಲ್ಲಿ ತಿಳಿಸಿದ್ದಾರೆ.