ಸಿ.ಟಿ.ರವಿ v/s ಎಚ್.ಡಿ.ದೇವೇಗೌಡ ನಡುವೆ ವಾಕ್ಸಮರ
ಬೆಂಗಳೂರು, ಜೂನ್ 26 : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆ ನೀಡುವುದು ಉತ್ತಮ ಎಂದು ಸಲಹೆ ನೀಡಿದ್ದ ಬಿಜೆಪಿ ಶಾಸಕ ಸಿ.ಟಿ.ರವಿ ವಿರುದ್ಧ ಎಚ್.ಡಿ.ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದರು. 'ಅವರೇನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯರೇ?' ಎಂದು ಗೌಡರು ಪ್ರಶ್ನೆ ಮಾಡಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕರೇಗುಡ್ಡಕ್ಕೆ ಗ್ರಾಮ ವಾಸ್ತವ್ಯಕ್ಕೆ ಹೋಗುವಾಗ ಅವರನ್ನು ವೈಟಿಪಿಎಸ್ ಕಾರ್ಮಿಕರ ಸಂಘದ ಸದಸ್ಯರು ತಡೆದಿದ್ದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ಕುಮಾರಸ್ವಾಮಿ ಅವರು, 'ನರೇಂದ್ರ ಮೋದಿಗೆ ವೋಟ್ ಹಾಕ್ತೀರಿ. ಸಮಸ್ಯೆ ನಾನು ಬಗೆಹರಿಸಬೇಕಾ?' ಎಂದು ಪ್ರಶ್ನಿಸಿದರು.
ಮೋದಿಗೆ ಮತ ಹಾಕ್ತೀರಿ : ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಬಿಜೆಪಿ ಆಕ್ರೋಶ
ಎಚ್.ಡಿ.ಕುಮಾರಸ್ವಾಮಿ ಅವರ ಈ ಹೇಳಿಕೆಯನ್ನು ಕರ್ನಾಟಕದ ಬಿಜೆಪಿ ನಾಯಕರು ಖಂಡಿಸಿದರು. ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಕುಮಾರಸ್ವಾಮಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ, 'ಕುಮಾರಸ್ವಾಮಿ ಅವರು ರಾಜ್ಯ ಮತ್ತು ಅವರ ಆರೋಗ್ಯದ ಹಿತದೃಷ್ಟಿಯಿಂದ ರಾಜೀನಾಮೆ ನಿಡುವುದು ಉತ್ತಮ' ಎಂದು ಸಲಹೆ ನೀಡಿದರು.
ವೋಟು ಮೋದಿಗೆ ಹಾಕ್ತೀರಿ, ಸಮಸ್ಯೆ ನಾನು ಬಗೆಹರಿಸಬೇಕಾ?: ಪ್ರತಿಭಟನಾಕಾರರ ವಿರುದ್ಧ ಸಿಎಂ ಕಿಡಿ
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಈ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು. 'ಮುಖ್ಯಮಂತ್ರಿಗಳ ಆರೋಗ್ಯವನ್ನು ಬಿಜೆಪಿಯ ಸಿ.ಟಿ.ರವಿ ರಿಪೇರಿ ಮಾಡುತ್ತಾರೆಯೇ?' ಎಂದು ದೇವೇಗೌಡರು ಸಿ.ಟಿ.ರವಿ ಅವರನ್ನು ಪ್ರಶ್ನೆ ಮಾಡಿದರು.....
ಶಿವನಗೌಡರಿಂದ ನಮ್ಮ ಕುಟುಂಬ ಕಲಿಯಬೇಕಿಲ್ಲ: ಮುಖ್ಯಮಂತ್ರಿ ಕುಮಾರಸ್ವಾಮಿ
ಸಿ.ಟಿ.ರವಿ ಹೇಳಿದ್ದೇನು?
'ನೀವು ಹತಾಶರಾಗಿ ಈ ರೀತಿ ವರ್ತನೆ ಮಾಡುತ್ತಿದ್ದೀರಿ. ಇದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ನಿಮ್ಮ ಹಾಗೂ ರಾಜ್ಯದ ಆರೋಗ್ಯ ದೃಷ್ಟಿಯಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದು ಸೂಕ್ತ' ಎಂದು ಸಿ.ಟಿ.ರವಿ ಸಲಹೆ ನೀಡಿದರು.
ದೇವೇಗೌಡರ ತಿರುಗೇಟು
ಸಿ.ಟಿ.ರವಿ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಎಚ್.ಡಿ.ದೇವೇಗೌಡರು, 'ಸಿಎಂ ಆರೋಗ್ಯವನ್ನು ಬಿಜೆಪಿಯ ಸಿ.ಟಿ.ರವಿ ಅವರು ರಿಪೇರಿ ಮಾಡುತ್ತಾರಾ?. ಅವರೇನು ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಡಾಕ್ಟರಾ?. ಯಾಕೆ ಆ ರೀತಿ ಮಾತನಾಡುತ್ತಾರೋ ಗೊತ್ತಿಲ್ಲ' ಎಂದು ಹೇಳಿದರು.
ಫಲಿತಾಂಶದಿಂದ ಪಾಠ ಕಲಿತಿಲ್ಲ
'ಲೋಕಸಭಾ ಚುನಾವಣೆ ಫಲಿತಾಂಶದಿಂದ ಸಿಎಂ ಪಾಠ ಕಲಿತಿಲ್ಲ. ಸಿಂಗಲ್ ನಂಬರ್ ಸಹ ಅವರಿಗೆ ಬೇಕಾಗಿಲ್ಲ ಅಂತ ಅನ್ನಿಸುತ್ತಿದೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ತಮ್ಮ ಮಗನಿಗೆ ರಾಜೀನಾಮೆ ನೀಡುವ ಸಲಹೆ ನೀಡಲಿ. ಈ ಮೂಲಕ ರಾಜ್ಯದ ಜನರ ಹಿತ ಕಾಪಾಡಲಿ' ಎಂದು ಸಿ.ಟಿ.ರವಿ ಹೇಳಿದರು.
ಇದಕ್ಕೆ ಯಾರದ್ದೋ ಪ್ರೇರಣೆ ಇದೆ
ಸಿ.ಟಿ.ರವಿ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ದೇವೇಗೌಡರು, 'ಸಿಎಂ ಗ್ರಾಮ ವಾಸ್ತವ್ಯ ಸಹಿಸುವುದಕ್ಕೆ ಆಗದೆ ಅಡಚಣೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ರಾಯಚೂರು ಜಿಲ್ಲೆಯ ಕರೇಗುಡ್ಡ ಗ್ರಾಮಕ್ಕೆ ತಲುಪುವುದಕ್ಕೂ ಮೊದಲೇ ತಡೆದು ನಮ್ಮ ಕೆಲಸ ಮಾಡಿಕೊಡಿ ಎನ್ನುವುದು ಎಷ್ಟು ಸರಿ? ಇದಕ್ಕೆ ಯಾರದ್ದೋ ಪ್ರೇರಣೆ ಇದೆ' ಎಂದು ಹೇಳಿದರು.
ಸಿಎಂಗೆ ಅರ್ಹತೆ ಏನಿದೆ?
'ಮುಖ್ಯಮಂತ್ರಿಗಳಿಗೆ ಅಧಿಕಾರದಲ್ಲಿ ಮುಂದುವರೆಯುವ ಯೋಗ್ಯತೆ, ಅರ್ಹತೆ ಏನಿದೆ?. ಈ ಬಗ್ಗೆ ರಾಜ್ಯದ ಜನರಿಗೆ ಉತ್ತರ ಕೊಡಲಿ. ಇದು ಕರ್ನಾಟಕ ಸರ್ಕಾರ. ಕಾಂಗ್ರೆಸ್, ಜೆಡಿಎಸ್ ಸರ್ಕಾರ ಅಂತ ಇರುವುದಿಲ್ಲ. ಸಂವಿಧಾನದತ್ತವಾಗಿ ಸಿಎಂಗೆ ಅಧಿಕಾರ ನೀಡಲಾಗಿದೆ. ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಬೇಡಿ' ಎಂದು ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯರವರ ಷಡ್ಯಂತ್ರವಿದೆ
ಎಚ್.ಡಿ.ದೇವೇಗೌಡರು, 'ಸಿಎಂ ವಿನೂತನ ಗ್ರಾಮ ವಾಸ್ತವ್ಯ ಮಾಡುವುದಕ್ಕೆ ಹೊರಟಿದ್ದಾರೆ. ಅವರು ಜನರ ಸಮಸ್ಯೆ ಪರಿಹಾರ ಮಾಡುವುದಕ್ಕೆ ಹೋಗುತ್ತಿದ್ದಾರೆ. ಆದರೆ, ದಾರಿ ಮಧ್ಯೆ ಹೀಗೆ ಪ್ರತಿಭಟನೆ ಮಾಡಿದರೆ ಸಿಎಂ ಏನು ಮಾಡಬೇಕು. ಪ್ರತಿಭಟನೆಯನ್ನು ಉದ್ದೇಶಪೂರ್ವಕವಾಗಿ ಮಾಡುತ್ತಿದ್ದಾರೆ. ಇದರ ಹಿಂದೆ ಬಿಜೆಪಿಯವರ ಷಡ್ಯಂತ್ರವಿದೆ' ಎಂದು ದೇವೇಗೌಡರು ಆರೋಪಿಸಿದರು.