ಮೈತ್ರಿ ಸರ್ಕಾರಕ್ಕೆ 100 ದಿನ : ಮಾಡಿದ್ದೇನು?, ಮಾಡಬೇಕಿರುವುದೇನು?
Recommended Video
ಬೆಂಗಳೂರು, ಆಗಸ್ಟ್ 30 : 'ನಮ್ಮ ಸರ್ಕಾರ 100 ದಿನಗಳನ್ನು ಪೂರೈಸಿದೆ. ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ್ದೇನೆ. ಸರ್ಕಾರ ನಡೆಯುತ್ತಿರುವ ರೀತಿ ಬಗ್ಗೆ ಅವರು ತೃಪ್ತಿ ವ್ಯಕ್ತಪಡಿಸಿದ್ದಾರೆ' ಎಂದು ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಕರ್ನಾಟಕದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಆಗಸ್ಟ್ 30ಕ್ಕೆ 100 ದಿನಗಳನ್ನು ಪೂರೈಸಿದೆ. ನೂರು ದಿನಗಳಲ್ಲಿ ಯಾವುದೇ ಸರ್ಕಾರದ ಆಡಳಿವನ್ನು ಅಳೆಯಲು ಆಗುವುದಿಲ್ಲ. ಆದರೂ ಎಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರ ಹಲವಾರು ಸವಾಲುಗಳನ್ನು ಎದುರಿಸಿದೆ. ಸಾಧನೆಗಳನ್ನು ಮಾಡಿದೆ.
ಎಚ್.ಡಿ.ಕುಮಾರಸ್ವಾಮಿ ಸರ್ಕಾರ 3 ತಿಂಗಳಿನಲ್ಲಿ ಎದುರಿಸಿದ ಸವಾಲುಗಳು!
ಸಮ್ಮಿಶ್ರ ಸರ್ಕಾರವನ್ನು ನಡೆಸುವುದೇ ಒಂದು ದೊಡ್ಡ ಸವಾಲು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು 2018-19ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದಾರೆ. ರೈತರ ಸಾಲವನ್ನು ಮನ್ನಾ ಮಾಡಿದ್ದಾರೆ. ಕೊಡಗಿನಲ್ಲಿ ಉಂಟಾದ ಪ್ರಕೃತಿ ವಿಕೋಪವನ್ನು ಸಮರ್ಥವಾಗಿ ಎದುರಿಸಿದ್ದಾರೆ.
ಎಚ್.ಡಿ.ಕುಮಾರಸ್ವಾಮಿ ಸರ್ಕಾರ ಪತನವಾಗುವುದಿಲ್ಲ, 5 ಕಾರಣಗಳು!
ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಸರ್ಕಾರ ಪತನವಾಗಲಿದೆ ಎಂದು ಪ್ರತಿಪಕ್ಷ ಬಿಜೆಪಿ ಹೇಳುತ್ತಿದೆ. ಆದರೆ, ಐದು ವರ್ಷ ಪೂರ್ಣಗೊಳಿಸುತ್ತೇವೆ ಎಂದು ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ನೂರು ದಿನಗಳ ಆಡಳಿತ ಹೇಗಿತ್ತು...ಚಿತ್ರಗಳಲ್ಲಿ ಮಾಹಿತಿ
ಸಮ್ಮಿಶ್ರ ಸರ್ಕಾರಕ್ಕೆ ಶತದಿನ: ಬೆಳಗ್ಗೆದ್ದು ಯಾರ್ಯಾರ ನೆನೆದರು ಎಚ್ಡಿಕೆ?
ರೈತರ ಸಾಲ ಮನ್ನಾ
ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಎದುರಾದ ಮೊದಲ ಸವಾಲು ಸಾಲಮನ್ನಾ. ಇದು ಸಮ್ಮಿಶ್ರ ಸರ್ಕಾರದ ಮೊದಲ ಸಾಧನೆ.
ರೈತರ ಸಾಲ ಮನ್ನಾ ಬಗ್ಗೆ ಭಾರಿ ಚರ್ಚೆ ನಡೆಯಿತು. ಸಂಪೂರ್ಣ ಸಾಲಮನ್ನಾ ಮಾಡುವಂತೆ ಪ್ರತಿಪಕ್ಷಗಳು ಪಟ್ಟು ಹಿಡಿದವು. ರೈತರ ಜೊತೆ, ಬ್ಯಾಂಕ್ ಅಧಿಕಾರಿಗಳ ಜೊತೆ ನಿರಂತರ ಸಭೆ ನಡೆಯಿತು.
ಎಚ್.ಡಿ.ಕುಮಾರಸ್ವಾಮಿ ಅವರುಅವರು 2,14,488 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡನೆ ಮಾಡಿದರು. ಬಜೆಟ್ನಲ್ಲಿ 34 ಸಾವಿರ ಕೋಟಿ ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿದರು. ಕಳೆದ ವಾರ ರಾಷ್ಟ್ರೀಕೃತ ಬ್ಯಾಂಕ್ಗಳ ಸಾಲವನ್ನು ಮನ್ನಾ ಮಾಡಿದ್ದಾರೆ.
ರೈತರೊಂದಿಗೆ ನಾಟಿ
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರೈತರ ಸಾಲವನ್ನು ಮಾತ್ರ ಮನ್ನಾ ಮಾಡಲಿಲ್ಲ. ಮಂಡ್ಯ ಜಿಲ್ಲೆಯ ಸೀತಾಪುರ ಗ್ರಾಮದ ಹೊರವಲಯದಲ್ಲಿ ಜಮೀನಿನಲ್ಲಿ ರೈತರೊಂದಿಗೆ ಸೇರಿ ಭತ್ತ ನಾಟಿ ಮಾಡಿ ರೈತರಲ್ಲಿ ಆತ್ಮಸ್ಥೈರ್ಯ ತುಂಬಿದರು.
ನಿಮ್ಮ ಜೊತೆ ನಾವಿದ್ದೇವೆ, ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದರು. ಮುಖ್ಯಮಂತ್ರಿಗಳ ಈ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಯಿತು.
ರಾಜ್ಯದ ರೈತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಆಗಬೇಕಿತ್ತು. ಅಂಕಿ-ಅಂಶಗಳ ಪ್ರಕಾರ 2013ರ ಏಪ್ರಿಲ್ನಿಂದ 2017ರ ನವೆಂಬರ್ ತನಕ ರಾಜ್ಯದಲ್ಲಿ 3,515 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೊಡಗು ಪ್ರವಾಹ ನಿರ್ವಹಣೆ
ಮೇ ನಲ್ಲಿ ಕುಮಾರಸ್ವಾಮಿ ಅವರು ಅಧಿಕಾರ ವಹಿಸಿಕೊಂಡರು ಜೂನ್, ಜುಲೈ, ಆಗಸ್ಟ್ ತಿಂಗಳಿನಲ್ಲಿ ಭಾರಿ ಮಳೆ ಸುರಿಯಿತು. ಆಗಸ್ಟ್ನಲ್ಲಿ ಕೊಡಗಿನಲ್ಲಿ ಮಳೆ ಜೊತೆಗೆ ಗುಡ್ಡ ಕುಸಿದ ಉಂಟಾಯಿತು. ಸಾವಿರಾರು ಜನರು ಮನೆ ಕಳೆದುಕೊಂಡರು.
ಸರ್ಕಾರ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಗಳನ್ನು ಕೈಗೊಂಡಿತು. ಸಂತ್ರಸ್ತರಾದ ಜನರಿಗೆ ಸಂತ್ರಸ್ತ ಶಿಬಿರಗಳನ್ನು ತೆರೆಯಲಾಯಿತು.
ಕೊಡಗಿನಲ್ಲಿ ಸುಮಾರು 4000 ಕೋಟಿ ಹಾನಿಯಾಗಿದೆ ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. 740 ಮನೆಗಳು ಕುಸಿದಿವೆ. 3 ಸಾವಿರ ಕಿ.ಮೀ.ರಸ್ತೆಗಳು ಹಾನಿಯಾಗಿವೆ. ಮೊದಲ ಹಂತದಲ್ಲಿ ಸರ್ಕಾರ ಕೊಡಗು ಜಿಲ್ಲೆಗೆ 100 ಕೋಟಿ ರೂ. ಅನುದಾನ ಘೋಷಣೆ ಮಾಡಿದೆ.
ಕೊಡಗಿನಲ್ಲಿ ಆದ ಹಾನಿಗೆ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಸರ್ಕಾರ ನಿರ್ವಹಣೆ ಮಾಡಿದ ರೀತಿ ಪ್ರಶಂಸೆಗೆ ಕಾರಣವಾಗಿದೆ.
ಬರಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಿಲ್ಲ
ರಾಜ್ಯದಲ್ಲಿ ಒಂದು ಕಡೆ ಮಳೆಯಾಗುತ್ತಿದ್ದರೆ 13ಕ್ಕೂ ಹೆಚ್ಚು ಜಿಲ್ಲೆಗಳು ಬರಪೀಡಿತವಾಗಿವೆ. ಸರ್ಕಾರ ಬರಪೀಡಿತ ಜಿಲ್ಲೆಗಳನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂಬ ಆರೋಪಗಳು ಇವೆ. ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದ ಹಲವು ಜಿಲ್ಲೆಗಳಿಗೆ ಇನ್ನೂ ಭೇಟಿ ಕೊಟ್ಟಿಲ್ಲ.
ಬಜೆಟ್ ಮಂಡನೆ ಮಾಡಿದಾಗಲೂ ಇದು ಹಾಸನ, ಮೈಸೂರು, ಮಂಡ್ಯ, ರಾಮನಗರ ಬಜೆಟ್ ಎಂದು ಟೀಕಿಸಲಾಗಿತ್ತು, ಉತ್ತರ ಕರ್ನಾಟಕ ಭಾಗವನ್ನು ಸರ್ಕಾರ ಕಡೆಗಣಿಸಿದೆ ಎಂಬ ಆರೋಪಗಳು ಇಂದಿಗೂ ಕೇಳಿಬರುತ್ತಿವೆ.
ಹಲವು ತಾಲೂಕುಗಳನ್ನು ಬರಪಡೀತ ಎಂದು ಘೋಷಣೆ ಮಾಡಬೇಕಿದೆ. ಆ.31ರಂದು ಬರಪೀಡಿತ ತಾಲೂಕುಗಳ ಘೋಷಣೆಯಾಗಲಿದೆ ಎಂಬ ನಿರೀಕ್ಷೆ ಇದೆ.
ಬೊಕ್ಕಸ ತುಂಬಿಸುವ ಕೆಲಸ
ಎಚ್.ಡಿ.ಕುಮಾರಸ್ವಾಮಿ ಅವರು ಸುಮಾರು 43 ಸಾವಿರ ಕೋಟಿ ರೂ. ರೈತರ ಸಾಲವನ್ನು ಮನ್ನಾ ಮಾಡಿದ್ದಾರೆ. ಆದರೆ, ಅದನ್ನು ಸರಿದೂಗಿಸಲು ಸಂಪನ್ಮೂಲ ಸಂಗ್ರಹಿಸಬೇಕಿದೆ. ಸರ್ಕಾರದ ಅನಗತ್ಯ ವೆಚ್ಚಗಳಿಗೆ ಅವರು ಈಗಾಗಲೇ ಕಡಿವಾಣ ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಸರ್ಕಾರದ ಬೊಕ್ಕಸ ತುಂಬಿಸುವ ದೊಡ್ಡ ಸವಾಲು ಸರ್ಕಾರದ ಮುಂದಿದೆ.
ಜನತಾ ದರ್ಶನ
ಗ್ರಾಮ ವಾಸ್ತವ್ಯ ಮತ್ತು ಜನತಾ ದರ್ಶನ ಎಚ್.ಡಿ.ಕುಮಾರಸ್ವಾಮಿ ಅವರ ಜನಪ್ರಿಯ ಕಾರ್ಯಕ್ರಮಗಳು. ಹಿಂದೆ ಅವರು ಮುಖ್ಯಮಂತ್ರಿಯಾಗಿದ್ದಾಗ ಗ್ರಾಮ ವಾಸ್ತವ್ಯ ಆರಂಭಿಸಿದ್ದರು. ಈಗ ಪುನಃ ಗ್ರಾಮ ವಾಸ್ತವ್ಯ ಮಾಡುವುದಾಗಿ ಹೇಳಿದ್ದಾರೆ.
ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಪ್ರತಿನಿತ್ಯ ಸಾವಿರಾರು ಜನರು ಆಗಮಿಸುತ್ತಾರೆ. ಜನತಾ ದರ್ಶನದ ನಿರ್ವಹಣೆಗಾಗಿಯೇ ಕುಮಾರಸ್ವಾಮಿ ತಂಡವೊಂದನ್ನು ರಚನೆ ಮಾಡಿದ್ದಾರೆ. ಜನರ ಅಹವಾಲು ಆಲಿಸಿ, ಅವರ ಅರ್ಜಿಗಳನ್ನು ಈ ತಂಡದ ಅಧಿಕಾರಿಗಳು ಪಡೆಯುತ್ತಾರೆ.