ಇಬ್ಬರು ಸಚಿವರಿಗೆ ಖಾತೆ ಹಂಚಲು ಮುಹೂರ್ತ ನಿಗದಿಪಡಿಸಿದ ಸಿಎಂ
Recommended Video
ಬೆಂಗಳೂರು, ಜೂನ್ 23: ಸಂಪುಟ ವಿಸ್ತರಣೆಯಾದ ಬಳಿಕ ಗ್ರಾಮ ವಾಸ್ತವ್ಯಕ್ಕೆ ತೆರಳಿರುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಕೊನೆಗೂ ನೂತನ ಸಚಿವರುಗಳಿಗೆ ಖಾತೆ ಹಂಚಿಕೆ ಮಾಡಲು ಮುಹೂರ್ತ ನಿಗದಿ ಮಾಡಿದ್ದಾರೆ.
ಪಕ್ಷೇತರ ಶಾಸಕರಾದ ಎಚ್.ನಾಗೇಶ್ ಮತ್ತು ಆರ್.ಶಂಕರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡರೂ ಖಾತೆ ಹಂಚಿಕೆಯಾಗಿರಲಿಲ್ಲ. ಆದರೆ, ಈಗ ಸೋಮವಾರ(ಜೂನ್ 24)ದಂದು ಇಬ್ಬರಿಗೆ ಖಾತೆ ಹಂಚಿಕೆ ಮಾಡಲು ಕುಮಾರಸ್ವಾಮಿ ಅವರು ನಿರ್ಧರಿಸಿದ್ದಾರೆ.
ಇಬ್ಬರಿಗೂ ಯಾವ ಖಾತೆ ನೀಡಬೇಕು ಎಂಬುದು ಇನ್ನೂ ಅಂತಿಮವಾಗಿಲ್ಲ. ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯಕ್ಕೆ ತೆರಳುವ ಮುನ್ನಾ ಇಬ್ಬರೂ ಸಚಿವರಿಗೆ ಖಾತೆ ಹಂಚಿಕೆ ಮಾಡಿಯೇ ಹೋಗುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ, ಕುಮಾರಸ್ವಾಮಿ ಅವರು ಈ ಬಗ್ಗೆ ಆತುರ ತೋರಲಿಲ್ಲ. ಖಾತೆ ಹಂಚಿಕೆ ಬಗ್ಗೆ ಯಾರೊಬ್ಬರೂ ಒತ್ತಡ ಹೇರಿರಲಿಲ್ಲ.
ಸುಧಾಕರ್ ಗೆ ಕೊನೆಗೂ ನಿರೀಕ್ಷಿತ ಸ್ಥಾನ ಮಾನ ಕೊಟ್ಟ ಎಚ್ಡಿಕೆ
ಎಚ್ ಡಿ ಕುಮಾರಸ್ವಾಮಿ ಅವರು ಜೂನ್ 14ರಂದು ಸಂಪುಟ ವಿಸ್ತರಣೆ ಮಾಡಿ ಇಬ್ಬರು ಪಕ್ಷೇತರರನ್ನು ತಮ್ಮ ಸಂಪುಟಕ್ಕೆ ಸೇರಿಸಿಕೊಂಡಿದ್ದರು. ಸಂಪುಟ ಸೇರುವುದಕ್ಕೂ ಮುನ್ನ ರಾಣೇಬೆನ್ನೂರು ಶಾಸಕ ಶಂಕರ್ ಅವರು ತಮ್ಮ ಕೆಪಿಜೆಪಿ ಪಕ್ಷವನ್ನು ಕಾಂಗ್ರೆಸ್ ನಲ್ಲಿ ವಿಲೀನಗೊಳಿಸಿದರು. ಮುಳುಬಾಗಿಲಿನ ಶಾಸಕ ನಾಗೇಶ್ ಅವರು ಸಂಪುಟ ಸೇರಿದ್ದು, ಅಧಿಕಾರಿಯಾಗಿ ಅನುಭವ ಹೊಂದಿರುವುದರಿಂದ ಉತ್ತಮ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಇಬ್ಬರಿಗೂ ಈ ಸಮಯಕ್ಕೆ ಖಾತೆ ಹಂಚಿಕೆಯಾಗಿಲ್ಲ.
ಸಮನ್ವಯ ಸಮಿತಿಯಲ್ಲಿ ಚರ್ಚೆ ಬೇಡವೇ?
ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ನಾಯಕರ ಶಿಫಾರಸ್ಸು ಕೇಳದೆ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡು, ಇಬ್ಬರು ಪಕ್ಷೇತರರನ್ನು ಸಂಪುಟಕ್ಕೆ ಸೇರಿಸಿಕೊಂಡು ಸರ್ಕಾರವನ್ನು ಉಳಿಸಿಕೊಂಡಿರುವ ಕುಮಾರಸ್ವಾಮಿ ಅವರು ಕಾಂಗ್ರೆಸ್ ಅತೃಪ್ತರ ಉರಿಯನ್ನು ಇನ್ನಷ್ಟು ಹೆಚ್ಚಿಸಿದ್ದರು. ಈಗ ಸಂಪುಟ ಸೇರಿರುವ ನೂತನ ಸಚಿವರ ಖಾತೆ ಹಂಚಿಕೆ ವಿಷಯದಲ್ಲೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ಮಾಡದೆ ಖಾತೆ ಹಂಚುತ್ತಿದ್ದಾರೆ ಎಂಬ ಸುದ್ದಿಯಿದೆ. ಹೀಗಾಗಿ, ಕಾಂಗ್ರೆಸ್- ಜೆಡಿಎಸ್ ನಡುವಿನ ಮೈತ್ರಿ ನಡುವಿನ ಬಿರುಕು ಹೆಚ್ಚಾಗುವ ಸಾಧ್ಯತೆಯಿದೆ.
ಎರಡು ಪ್ರಮುಖ ಖಾತೆಗಳಿವೆ
ಪ್ರಸ್ತುತ ಶಿಕ್ಷಣ ಖಾತೆ, ಪೌರಾಡಳಿತ ಖಾತೆ ಖಾಲಿ ಇದೆ. ಇದರ ಜೊತೆಗೆ ಮುಖ್ಯಮಂತ್ರಿಗಳ ಅವರ ಬಳಿ ಇನ್ನು ಕೆಲವು ಖಾತೆಗಳಿವೆ, ಎಚ್ಡಿ ರೇವಣ್ಣ, ಡಿಕೆ ಶಿವಕುಮಾರ್ ಅವರು ಎರಡು ಖಾತೆಗಳನ್ನು ನಿಭಾಯಿಸುತ್ತಿದ್ದಾರೆ. ಹಾಗಾಗಿ ಈ ಇಬ್ಬರಿಗೆ ಯಾವ ಖಾತೆ ನೀಡುತ್ತಾರೆಂಬ ಕುತೂಹಲ ಇದೆ. ಇವರಿಬ್ಬರ ಮೇಲಿನ ಹೆಚ್ಚುವರಿ ಜವಾಬ್ದಾರಿಯನ್ನು ಹೊಸ ಸಚಿವರಿಗೆ ಹಂಚುತ್ತಾರೋ ಅಥವಾ ಅವರ ಬೇಡಿಕೆಗೆ ತಕ್ಕಂತೆ ಖಾತೆ ನೀಡುತ್ತಾರೋ ಕಾದು ನೋಡಬೇಕಿದೆ.
ಯಾವ ಖಾತೆ ನಿರೀಕ್ಷೆ ಹೊಂದಿದ್ದಾರೆ
ಮುಳುಬಾಗಿಲಿನ ಶಾಸಕ, ಸಚಿವ ನಾಗೇಶ್ ಅವರಿಗೆ ಡಿ.ಕೆ.ಶಿವಕುಮಾರ್ ಅವರ ಬಳಿ ಇರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡಬೇಕು ಎಂಬ ಚರ್ಚೆ ನಡೆದಿದೆ. ಆದರೆ, ನಾಗೇಶ್ ಅವರು ಪ್ರಾಥಮಿಕ ಶಿಕ್ಷಣ ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿದ್ದಾರೆ, ಸರ್ಕಾರಿ ಅಧಿಕಾರಿಯಾಗಿ ಅನುಭವ ಹೊಂದಿರುವುದರಿಂದ ಉನ್ನತ ಹುದ್ದೆಯ ನಿರೀಕ್ಷೆಯಲ್ಲಿದ್ದಾರೆ. ರಾಣೇಬೆನ್ನೂರು ಶಾಸಕ, ಸಚಿವ ಶಂಕರ್ ಅವರು ಈ ಹಿಂದೆ ನಿಭಾಯಿಸಿದ್ದ ಅರಣ್ಯ ಇಲಾಖೆಗೆ ಬೇಡಿಕೆ ಇಟ್ಟಿದ್ದಾರೆ ಎಂಬ ಸುದ್ದಿಯಿದೆ. ಸದ್ಯ ಆ ಖಾತೆ ಈಗ ಸತೀಶ್ ಜಾರಕಿಹೊಳಿ ಬಳಿ ಇದೆ.
ಸುಧಾಕರ್ ಗೆ ಮಂಡಳಿ ಅಧ್ಯಕ್ಷ ಸ್ಥಾನ
ಚಿಕ್ಕಬಳ್ಳಾಪುರದ ಶಾಸಕ ಡಾ. ಸುಧಾಕರ್ ಅವರಿಗೆ ಕೊನೆಗೂ ನಿರೀಕ್ಷಿತ ಸ್ಥಾನ ಮಾನ ಸಿಕ್ಕಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರನ್ನಾಗಿ ಡಾ.ಕೆ. ಸುಧಾಕರ್ ಅವರನ್ನು ನೇಮಕ ಮಾಡಲಾಗಿದೆ. ಜೊತೆಗೆ ಬಿಡಿಎ ಸೇರಿದಂತೆ ಇನ್ನಷ್ಟು ಇಲಾಖೆಗೆ ಮುಖ್ಯಸ್ಥರ ನೇಮಕವಾಗಿದೆ. ಈ ಮೂಲಕ ಅತೃಪ್ತರನ್ನು ಸಮಾಧಾನಪಡಿಸುವಲ್ಲಿ ಕುಮಾರಸ್ವಾಮಿ ಅವರು ತಕ್ಕಮಟ್ಟಿಗೆ ಯಶಸ್ವಿಯಾಗಿದ್ದಾರೆ.