ಉಪಚುನಾವಣೆಯತ್ತ ಎಚ್ಡಿಕೆ ನಿರಾಸಕ್ತಿ ಬಿಜೆಪಿಗೆ ವರವಾಗುತ್ತಾ?
ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ನಡುವಿನ ರಾಜಕೀಯ ಜಟಾಪಟಿ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರ ನಿರಾಸಕ್ತಿ ಉಪಚುನಾವಣೆಯಲ್ಲಿ ಬಿಜೆಪಿಗೆ ಲಾಭವಾಗುವ ಎಲ್ಲ ಲಕ್ಷಣಗಳು ಕಂಡು ಬರತೊಡಗಿದೆ.
ತುಮಕೂರಿನ ಶಿರಾ ಮತ್ತು ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಉಪಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರಿಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಆದರೆ ಜೆಡಿಎಸ್ ನಾಯಕರು ಇದನ್ನು ಗಂಭೀರವಾಗಿ ಪರಿಗಣಿಸಿದಂತೆ ಕಂಡುಬರುತ್ತಿಲ್ಲ. ಹೀಗಾಗಿ ಇದರ ಲಾಭ ಬಿಜೆಪಿ ಪಡೆದುಕೊಳ್ಳಲು ಯತ್ನಿಸುತ್ತಿರುವಂತೆ ಗೋಚರಿಸುತ್ತಿದೆ.
ಆಡಳಿತ ಚುಕ್ಕಾಣಿ ಹಿಡಿಯಲು ಬಿಜೆಪಿ-ಜೆಡಿಎಸ್ ಮೈತ್ರಿ?
ಉಪಚುನಾವಣೆಯಿಂದ ಜೆಡಿಎಸ್ ಗೆ ಯಾವುದೇ ಲಾಭವಿಲ್ಲ ಎಂಬುದು ಗೊತ್ತೇ ಇದೆ. ಹೀಗಿರುವಾಗ ಬಿಜೆಪಿ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ಅವರು ಮೃದುಧೋರಣೆ ತೋರಿದಂತೆ ಭಾಸವಾಗುತ್ತಿದೆ. ಉಪಚುನಾವಣೆಯ ಕಾವು ಏರಿಕೆಯಾಗುತ್ತಿದ್ದರೂ ಅವರು ರಾಮನಗರ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತಾ ಕಾರ್ಯಕರ್ತರ ಸಭೆ ನಡೆಸುವುದರೊಂದಿಗೆ ಮುಂಬರುವ ಜಿಪಂ ಮತ್ತು ಗ್ರಾಪಂ ಚುನಾವಣೆಗೆ ಸಿದ್ಧತೆ ನಡೆಸಿದಂತೆ ಕಂಡು ಬರುತ್ತಿದೆ. ಅದರಲ್ಲೂ ರಾಮನಗರವನ್ನೇ ಟಾರ್ಗೆಟ್ ಮಾಡಿರುವುದನ್ನು ನೋಡಿದರೆ ಕನಕಪುರ ಬಂಡೆ ಡಿ.ಕೆ.ಶಿವಕುಮಾರ್ ಅವರಿಗೆ ಟಾಂಗ್ ಕೊಡುವಂತೆ ಕಾಣುತ್ತಿದೆ.
ಜೋಡೆತ್ತುಗಳೀಗ ರಾಜಕೀಯ ವೈರಿಗಳು
ಈ ಹಿಂದೆ ಕಾಂಗ್ರೆಸ್ನೊಂದಿಗೆ ಸಖ್ಯ ಬೆಳೆಸಿ ಜೆಡಿಎಸ್ ಮತ್ತು ಕಾಂಗ್ರೆಸ್ನ ಮೈತ್ರಿ ಸರ್ಕಾರ ರಚಿಸಿದ್ದ ವೇಳೆ ಜೋಡೆತ್ತುಗಳಾಗಿದ್ದ ಎಚ್.ಡಿ.ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ಅವರು ಸದ್ಯ ರಾಜಕೀಯ ವೈರಿಗಳಾಗಿದ್ದಾರೆ. ಸಮಯ ಸಿಕ್ಕಾಗಲೆಲ್ಲ ರಾಜಕೀಯವಾಗಿ ಒಬ್ಬರ ಮೇಲೆ ಒಬ್ಬರು ವಾಗ್ದಾಳಿ ನಡೆಸುತ್ತಲೇ ಬಂದಿದ್ದಾರೆ. ಉಪಚುನಾವಣೆ ಸಂದರ್ಭವೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ನಿಂದ ಆಗಿರುವ ಅನ್ಯಾಯದ ಬಗ್ಗೆ ಬಹಿರಂಗವಾಗಿಯೇ ಹೇಳುತ್ತಿರುವುದು ಕಾಂಗ್ರೆಸ್ಗೆ ಮುಳುವಾದರೂ ಅಚ್ಚರಿ ಪಡಬೇಕಾಗಿಲ್ಲ.
ರಾಮನಗರದಲ್ಲಿ ಪಕ್ಷ ಸಂಘಟನೆಯ ಸಂಕಲ್ಪ
ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಗುರಿಯಾಗಿಸಿಕೊಂಡು ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವನ್ನು ಸಂಘಟಿಸುವ ಸಂಕಲ್ಪ ತೊಟ್ಟಿರುವ ಕುಮಾರಸ್ವಾಮಿ ಅವರು ಚುನಾವಣೆ ಸಂದರ್ಭದಲ್ಲಿ ಏಕಾಏಕಿ ಕಾರ್ಯಕರ್ತರ ಬಳಿ ತೆರಳಿದರೆ ಗೊಂದಲವಾಗಬಹುದು ಎಂಬ ಕಾರಣಕ್ಕೆ ಹೋಬಳಿ ಮಟ್ಟದ ಕಾರ್ಯಕರ್ತರ ಸಭೆ ನಡೆಸುತ್ತಿರುವುದಾಗಿ ಹೇಳುತ್ತಿದ್ದರೂ ಅವರ ಉದ್ದೇಶವೇ ಬೇರೆ ಇದ್ದಂತೆ ಕಾಣುತ್ತಿದೆ.
ಇನ್ನೊಂದೆಡೆ ಬಿಜೆಪಿಯೊಂದಿಗೆ ದ್ವೇಷ ಕಟ್ಟಿಕೊಳ್ಳದಂತೆ ಕಾರ್ಯಕರ್ತರಿಗೆ ಕಿವಿ ಮಾತು ಹೇಳಿರುವ ಎಚ್ಡಿಕೆ ಕ್ಷೇತ್ರದ ಮತದಾರರು ಮತ್ತು ಪಕ್ಷದ ಕಾರ್ಯಕರ್ತರ ಹಿತದೃಷ್ಟಿಯಿಂದ ಬಿಜೆಪಿ ಸರಕಾರದೊಂದಿಗೆ ವಿರೋಧ ಕಟ್ಟಿಕೊಳ್ಳುವುದು ಬೇಡ. ತಮ್ಮ ಮನವಿಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಸಮರ್ಪಕವಾಗಿ ಸ್ಪಂದಿಸುತ್ತಿರುವುದರಿಂದ ಶಿಕ್ಷಕರ ಕೇತ್ರದ ಚುನಾವಣೆಯ ನೀತಿ ಸಂಹಿತೆ ಅಂತ್ಯಗೊಂಡ ಬಳಿಕ ರಾಮನಗರ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಲಿದ್ದಾರೆ ಎಂದಿರುವುದು ಬಿಜೆಪಿಯೊಂದಿಗೆ ಜೆಡಿಎಸ್ ಸಂಬಂಧ ಉತ್ತಮವಾಗಿದೆ ಎಂಬುದನ್ನು ತೋರಿಸಿಕೊಟ್ಟಿದೆ.
ಆರ್. ಆರ್. ನಗರ ಚುನಾವಣೆ; ಜೆಡಿಎಸ್ಗೆ ಮತ್ತೊಂದು ಹಿನ್ನಡೆ
"ಜೀವಮಾನದಲ್ಲಿ ಕಾಂಗ್ರೆಸ್ ನಂಬಲ್ಲ"
ಜೀವಮಾನದಲ್ಲಿ ಎಂದೂ ಕಾಂಗ್ರೆಸ್ ನಂಬೋದಿಲ್ಲ ಎಂಬುದಾಗಿ ಕಾರ್ಯಕರ್ತರ ಮುಂದೆ ಹೇಳಿಕೊಂಡಿರುವ ಕುಮಾರಸ್ವಾಮಿ ಅವರು ಕಾಂಗ್ರೆಸ್ನೊಂದಿಗೆ ಸರ್ಕಾರ ರಚಿಸಲು ಏಕೆ ಒಪ್ಪಿಕೊಂಡೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಸೋನಿಯಾ ಗಾಂಧಿ ಮತ್ತು ರಾಹುಲ್ಗಾಂಧಿ ಅವರು ದೇವೇಗೌಡರ ಜೊತೆ ಒಪ್ಪಂದ ಮಾಡಿಕೊಂಡ ಕಾರಣಕ್ಕೆ ಕಾಂಗ್ರೆಸ್ ಸಖ್ಯ ಬೆಳೆಸಿದೆ. ಆದರೆ ಅವರ ಮಾತು ಕೇಳಿ ಕೆಟ್ಟೆ. ಒಂದು ವೇಳೆ ಬಿಜೆಪಿ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದರೆ ಸರಕಾರ ಉರುಳುತ್ತಿರಲಿಲ್ಲ, ಐದು ವರ್ಷ ಸುಗಮವಾಗಿ ನಡೆಯುತ್ತಿತ್ತು ಎಂಬ ವಿಚಾರವನ್ನು ಹೊರಗೆಡವಿದ್ದಾರೆ.
Recommended Video
ಹೊಂದಾಣಿಕೆಯ ರಾಜಕಾರಣ ನಡೆಯುತ್ತಿದೆಯಾ?
ರಾಜ್ಯದಲ್ಲಿ ಸದ್ಯದ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿದರೆ ಜೆಡಿಎಸ್ ನ ಬಹುತೇಕ ನಾಯಕರು ಮೌನಕ್ಕೆ ಶರಣಾಗಿದ್ದಾರೆ. ಇನ್ನು ಕೆಲವು ನಾಯಕರು ಪಕ್ಷ ಬಿಟ್ಟು ಬೇರೆ ಪಕ್ಷದತ್ತ ಮುಖ ಮಾಡಿದ್ದರೆ, ಇದೀಗ ಸಕ್ರಿಯ ನಾಯಕರಾಗಿದ್ದ ಮಧು ಬಂಗಾರಪ್ಪ ಕೂಡ ಪಕ್ಷ ಬಿಡುವ ಸುದ್ದಿಗಳು ಕೇಳಿಬರುತ್ತಿವೆ. ಇನ್ನು ಇರುವ ನಾಯಕರು ಯಾರು ಕೂಡ ಸರ್ಕಾರದ ವಿರುದ್ಧ ಧ್ವನಿ ಎತ್ತುತ್ತಿಲ್ಲ. ಮೈಸೂರಿನಲ್ಲಿ ದಸರಾ ಉದ್ಘಾಟನೆ ವೇಳೆ ವೇದಿಕೆ ಹಂಚಿಕೊಂಡಿದ್ದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಹೊಗಳಿದ್ದು ನೋಡಿದರೆ ಹೊಂದಾಣಿಕೆ ರಾಜಕಾರಣ ನಡೆಯುತ್ತಿದೆಯಾ ಎಂಬ ಸಂಶಯ ಬರತೊಡಗಿದೆ. ಏನೇ ಆದರೂ ಇದರ ಪರಿಣಾಮ ಕಾಂಗ್ರೆಸ್ ಮೇಲೆಯೇ ಆಗಲಿದೆ ಎಂಬುದಂತು ಸತ್ಯ.