ಮತ್ತೊಮ್ಮೆ ಸಿಎಂ ಆಗಲು ದೇವಮೂಲೆಯ ಈ ಕ್ಷೇತ್ರದಿಂದ ಸ್ಪರ್ಧಿಸುತ್ತಾರಾ ಎಚ್ಡಿ ಕುಮಾರಸ್ವಾಮಿ?
ಬೆಂಗಳೂರು, ಮೇ 19: ರಾಜ್ಯ ವಿಧಾನಸಭೆಗೆ ಕೆಲವು ತಿಂಗಳು ಬಾಕಿ ಇರುವಾಗಲೇ ಯಾರು ಎಲ್ಲಿಂದ ಸ್ಪರ್ಧಿಸಬೇಕು ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಕೆಲವರಿಗೆ ಶಾಶ್ವತ ಕ್ಷೇತ್ರಗಳಿದ್ದರೆ, ಇನ್ನೂ ಕೆಲವರು ತಲಾಶೆ ಆರಂಭಿಸಿದ್ದಾರೆ. ಈಗ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮುಂದಿನ ಚುನಾವಣೆಗೆ ಎಲ್ಲಿಂದ ಸ್ಪರ್ಧಿಸುತ್ತಾರೆ ಎಂಬುದು ಮತ್ತೆ ಮುನ್ನೆಲೆಗೆ ಬಂದಿದೆ.
ಕುಮಾರಸ್ವಾಮಿ ಜೆಡಿಎಸ್ನ ಅಗ್ರಗಣ್ಯ ನಾಯಕ ಎಂಬುದುರಲ್ಲಿ ಎರಡು ಮಾತಿಲ್ಲ. ರಾಜ್ಯ ರಾಜಕಾರಣದಲ್ಲಿ ಜೆಡಿಎಸ್ ಪಕ್ಷವನ್ನು ಉಳಿಸಿಕೊಳ್ಳುವಲ್ಲಿ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂಬುದರಲ್ಲೂ ಎರಡು ಮಾತಿಲ್ಲ. ರಾಜಕೀಯ ಬಿಕ್ಕಟ್ಟುಗಳು ಸಂಭವಿಸಿದಾಗ ಜೆಡಿಎಸ್ ಗೆ ಅಧಿಕಾರ ದೊರೆಯುವಂತಹ ಪ್ರಸಂಗ ಬಂದರೆ, ಮುಖ್ಯಮಂತ್ರಿ ಸ್ಥಾನಕ್ಕೆ ಕುಮಾರಸ್ವಾಮಿ ಹೊರತುಪಡಿಸಿದರೆ ಮತ್ತೊಂದು ಹೆಸರೂ ಸಹ ಕಾಣಿಸದ ರೀತಿಯಲ್ಲಿ ಅವರ ಪ್ರಭಾವಳಿ ಇದೆ. ಅವರೇ ಹೇಳುವಂತೆ ಆಕಸ್ಮಿಕವಾಗಿ ರಾಜಕಾರಣಕ್ಕೆ ಬಂದರೂ ಸಹ ಯಾವುದೇ ಒಂದು ಕ್ಷೇತ್ರವನ್ನು ಕಾಯಂ ಮಾಡಿಕೊಂಡಿಲ್ಲ. ಈಗ 2023ರಲ್ಲಿ ಎದುರಾಗುವ ವಿಧಾನಸಭಾ ಚುನಾವಣೆಗೆ ಮತ್ತೊಮ್ಮೆ ಕ್ಷೇತ್ರ ಬದಲಾಯಿಸುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಮಾಗಡಿಗೆ ಬರುತ್ತಾರಾ ಕುಮಾರಸ್ವಾಮಿ?
ರಾಮನಗರದಿಂದ ಆಯ್ಕೆಯಾಗುವ ಎಚ್.ಡಿ. ಕುಮಾರಸ್ವಾಮಿ ಅವರು ಈ ಬಾರಿ ಮಾಗಡಿ ಕ್ಷೇತ್ರದಿಂದ ಆಯ್ಕೆ ಬಯಸಿದ್ದಾರೆ ಎಂದು ಹೇಳಲಾಗುತ್ತಿದೆ. 1998ರಲ್ಲಿ ಕನಕಪುರ ಲೋಕಸಭಾ ಕ್ಷೇತ್ರದಿಂದ ಮತ್ತು 1998ರಲ್ಲಿ ಸಾತನೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಬಳಿಕ 2004ರಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಮತ್ತು ಚನ್ನಪಟ್ಟಣ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಎರಡರಲ್ಲೂ ಜಯಗಳಿಸಿದ್ದರು. ಅದಾದ ನಂತರ ಚನ್ನಪಟ್ಟಣ ಕ್ಷೇತ್ರವನ್ನು ಉಳಿಸಿಕೊಂಡು, ರಾಮನಗರದಲ್ಲಿ ಪತ್ನಿ ಅನಿತಾ ಕುಮಾರಸ್ವಾಮಿ ಅವರಿಗೆ ಬಿಟ್ಟುಕೊಟ್ಟಿದ್ದರು. ಈಗ ಜೆಡಿಎಸ್ನ ಭದ್ರಕೋಟೆಯೂ ಆಗಿರುವ ಮಾಗಡಿಯತ್ತ ಮುಖ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಮಾಗಡಿಗೆ ಬರಲು ಕಾರಣವೇನು?
ಎಚ್ಡಿ ಕುಮಾರಸ್ವಾಮಿ ಅವರು ಮಾಗಡಿ ಕ್ಷೇತ್ರದಲ್ಲಿ ಸ್ಪರ್ಧಿಸಲು ಕಾರಣವೇನು ಎಂಬ ಕುತೂಹಲ ಇದ್ದೇ ಇದೆ. ಅದಕ್ಕೆ ಕಾರಣ ಕರ್ನಾಟಕ ಭೂಪಟದಲ್ಲಿ ದೇವಮೂಲೆಯಲ್ಲಿ ಇರುವಂತಹ ಮಾಗಡಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ ರಾಜ್ಯದ ಮುಖ್ಯಮಂತ್ರಿ ಆಗಬಹುದು ಎಂಬ ನಂಬಿಕೆ ಹೊಂದಿದ್ದಾರೆ. ಹೀಗಾಗಿ ಈ ಬಾರಿ ಅವರು ಮಾಗಡಿ ಕ್ಷೇತ್ರದತ್ತ ಹೊರಳಬಹುದು ಎಂಬ ಸುದ್ದಿ ಇದೆ.
ಮಾಗಡಿ ಜೆಡಿಎಸ್ಗೆ ಸುಲಭ ಕ್ಷೇತ್ರ:
ಮೊದಲಿನಿಂದಲೂ ಮಾಗಡಿ ಜೆಡಿಎಸ್ಗೆ ಸುಲಭವಾಗಿರುವಂತಹ ಕ್ಷೇತ್ರ. 2004ರಿಂದ ಅಲ್ಲಿ ಸತತವಾಗಿ ಜೆಡಿಎಸ್ ಗೆದ್ದು ಬರುತ್ತಿದೆ. ಎಚ್.ಸಿ. ಬಾಲಕೃಷ್ಣ ಅವರೇ ಅಲ್ಲಿ ಮೂರು ಅವಧಿಗೆ ಮುಖ್ಯಮಂತ್ರಿ ಆಗಿದ್ದರು. ಕಳೆದ ಚುನಾವಣೆಯಲ್ಲಿ ಬಾಲಕೃಷ್ಣ ಅವರು ಕುಮಾರಸ್ವಾಮಿ ಅವರೊಂದಿಗೆ ಮುನಿಸಿಕೊಂಡು ಕಾಂಗ್ರೆಸ್ ಸೇರಿದ್ದರು. ಅಲ್ಲಿ ಈ ಹಿಂದೆ ಕಾಂಗ್ರೆಸ್ನಲ್ಲಿ ಇದ್ದಂತಹ ಎ. ಮಂಜು ಜೆಡಿಎಸ್ ಟಿಕೆಟ್ ನೀಡಲಾಯಿತು. ಚುನಾವಣೆಯಲ್ಲಿ ಎ.ಮಂಜು ಸುಮಾರು 44 ಸಾವಿರ ಮತಗಳ ಅಂತದಲ್ಲಿ ಗೆದ್ದು ಮಾಗಡಿ ಜೆಡಿಎಸ್ನ ಭದ್ರನೆಲೆ ಎಂಬುದನ್ನು ಸಾಬೀತುಪಡಿಸಿದರು.
Recommended Video
ಮಾಗಡಿ ಕ್ಷೇತ್ರದಲ್ಲಿ ಹಾಲಿ ಶಾಸಕ ಎ.ಮಂಜು ಮತ್ತು ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರ ಜಟಾಪಟಿಯ ಮಧ್ಯೆಯೇ ಬಾಲಕೃಷ್ಣ ಅವರನ್ನು ಮರಳಿ ಜೆಡಿಎಸ್ಗೆ ಕರೆತರುವ ಪ್ರಯತ್ನ ನಡೆಯುತ್ತಿದೆ. ಈಗ ಕುಮಾರಸ್ವಾಮಿ ಅವರೇ ಮಾಗಡಿ ಕ್ಷೇತ್ರದತ್ತ ಒಲವು ತೋರುತ್ತಿದ್ದಾರೆ. ಆದರೆ, ಈ ಬಗ್ಗೆ ಊಹಾಪೋಹ ಇದೆ ಹೊರತು ಯಾವುದೂ ಅಂತಿಮವಾಗಿಲ್ಲ ಎಂದು ಪಕ್ಷದ ಮೂಲಗಳು ಹೇಳುತ್ತಿವೆ.