ಬಡ ಯುವಕರ ನೆತ್ತರಿನ ಮೇಲೆ ಸುಖದಸೌಧ ಕಟ್ಟುತ್ತಿರುವ ಬಿಜೆಪಿಗೆ ಪಾಪಪ್ರಜ್ಞೆ ಇಲ್ಲ: ಎಚ್ಡಿಕೆ
ಬೆಂಗಳೂರು ಜುಲೈ 30: ಕಾರ್ಯಕರ್ತರನ್ನು 'ಮತೀಯ ವ್ಯಸನಿ'ಗಳನ್ನಾಗಿ ಮಾಡಿ ಸ್ವಾರ್ಥ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ರಾಜ್ಯ ಬಿಜೆಪಿಯ ಅಸಲಿ ಮುಖವಾಡ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆಯಿಂದ ಬಹಿರಂಗವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ಮಾಧ್ಯಮವರ ಮೇಲೆ ಹಲ್ಲೆ ಮಾಡಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಬಿಜೆಪಿ ವಿರುದ್ಧ ಕುಮಾರಸ್ವಾಮಿ ಸರಣಿ ಟ್ವಿಟ್ ಮಾಡಿದ್ದಾರೆ. ಕಂಡ ಕಂಡವರ ಬಡ ಮಕ್ಕಳ ಕಗ್ಗೊಲೆ, ಬಡ ಯುವಕರ ನೆತ್ತರಿನ ಮೇಲೆ ಸುಖದಸೌಧ ಕಟ್ಟುತ್ತಿರುವ ಬಿಜೆಪಿಗೆ ಪಾಪಪ್ರಜ್ಞೆ ಇಲ್ಲ. ಇದು ಅತ್ಯಂತ ಹೇಯ ಮತ್ತು ಪಾತಕ, ರಾಕ್ಷಸೀ ರಾಜಕಾರಣದ ಪರಾಕಾಷ್ಠೆ ಎಂದು ಅವರು ಖಾರವಾಗಿ ಬಿಜೆಪಿಯ ನಾಯಕರ ವರ್ತನೆ ಕುರಿತು ಜರಿದಿದ್ದಾರೆ.
ಬಿಜೆಪಿ ಯುವ ಮೋರ್ಚಾ ಕಾರ್ಯಾಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ವಿರೋಧಿಸಿ ಕೆಲವು ಬಿಜೆಪಿ ಕಾರ್ಯಕರ್ತರು ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿದ್ದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಕಾರ್ಯಕರ್ತರಲ್ಲಿ ಪ್ರಬುದ್ಧತೆ ಇಲ್ಲ. ಹೀಗಾಗಿ ಹತ್ಯೆ ಖಂಡಿಸಿ ರಾಜೀನಾಮೆ ನೀಡುತ್ತಿದ್ದಾರೆ. ಜತೆಗೆ ಪಕ್ಷದ ನಾಯಕರನ್ನು ಬೈಯುತ್ತಿದ್ದಾರೆ. ರಾಜೀನಾಮೆ ವಾಪಸ್ ಪಡೆಯಬೇಕು. ಬಿಜೆಪಿ ರಾಜ್ಯ ಘಟಕ ಒಂದೇ ವೇಳೆ ರಾಜೀನಾಮೆ ಸ್ವೀಕರಿಸಿದರೆ ಬೇರೆ ಕಾರ್ಯಕರ್ತರು ಬರುತ್ತಾರೆ. ಬಿಜೆಪಿಗೇನು ಕಾರ್ಯಕರ್ತರು ಸಿಗುವುದಿಲ್ಲವೇ ಎಂದು ಮನಬಂದಂತೆ ಹಗುರವಾಗಿ ಮಾತನಾಡಿದ್ದರು.
ಕೆ.ಎಸ್. ಈಶ್ವರಪ್ಪನವರ ಈ ಹೇಳಿಕೆ ವಿರುದ್ಧ ಹಾಗೂ ಕಾರ್ಯಕರ್ತರ ವಿಚಾರದ, ಕೊಲೆ ಪ್ರಕರಣಗಳಲ್ಲಿ ಬಿಜೆಪಿ ನಡೆದುಕೊಳ್ಳುವ ಕುರಿತು ಮಾಜಿ ಕುಮಾರಸ್ವಾಮಿ ಸರಣಿ ಟ್ವಟ್ ಮಾಡಿ ಕಿಡಿ ಕಾರಿದ್ದಾರೆ.
ಬಿಜೆಪಿಗೆ ಪಾಪಪ್ರಜ್ಞೆ ಇಲ್ಲ
ಬಡ ಯುವಕರ ನೆತ್ತರಿನ ಮೇಲೆ ಸುಖದಸೌಧ ಕಟ್ಟುತ್ತಿರುವ ಬಿಜೆಪಿಗೆ ಪಾಪಪ್ರಜ್ಞೆ ಇಲ್ಲ. ಸಹಪಾಠಿಯ ಕೊಲೆಯಾಗಿದ್ದಾರೆ. ಪ್ರತಿಯಾಗಿ ಮೃತನ ಆಪ್ತರು, ಇನ್ನಿತರ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ, ಅದು ಸಹಜ ಕೂಡ. ಆದರೆ ಆ ಕಾರ್ಯಕರ್ತರ ಆತ್ಮಸ್ಥೈರ್ಯವನ್ನೇ ಅಣಕಿಸುವ, ಅವರ ನೈತಿಕತೆಯನ್ನೇ ಶಂಕಿಸುವ ಈಶ್ವರಪ್ಪನವರ ಹೇಳಿಕೆಯಿಂದ ಬಿಜೆಪಿಯ ನೈಜ ಮುಖವಾಡ ಕಳಚಿದೆ ಎಂದರು.
|
ಕೊಲೆಗೆಡುವ ರಾಜಕಾರಣದಲ್ಲಿ ಈಶ್ವರಪ್ಪ ಪರಾಕಾಷ್ಠೆ ಮುಟ್ಟಿದ್ದಾರೆ
ಬಿಜೆಪಿಯ ಬಾವುಟ ಕಟ್ಟಲು, ಕರಪತ್ರ ಹಂಚಲು, ಮತ ಕೇಳಲು, ಟೆಂಟ್ ಹಾಕಲು, ಗೆದ್ದವರನ್ನು ಭುಜದ ಮೇಲೆ ಹೊತ್ತು ಮೆರವಣಿಗೆ ಮಾಡಲು ಇದೇ ಕಾರ್ಯಕರ್ತರು ಬೇಕು. ಇಂಥ ಯುವಕರಿಗೆ ನಾಯಕರಾದವರೇ ಧರ್ಮದ ಅಫೀಮಿನ ಅಮಲೇರಿಸಿ, ಅವರ ಜೀವಕ್ಕೆ ಸಂಚಕಾರ ತಂದೊಡುತ್ತಿದ್ದಾರೆ. ಆ ಯುವಕರ ಕುಟುಂಬಗಳನ್ನು ಬೀದಿಪಾಲು ಮಾಡುವ ಕಿರಾತಕ, ಕೊಲೆಗೆಡುಕ ರಾಜಕಾರಣದಲ್ಲಿ ಈಶ್ವರಪ್ಪನವರು ಪರಾಕಾಷ್ಠೆ ತಲುಪಿದಂತಿದೆ ಎಂದು ಬಿಜೆಪಿಯನ್ನು ಕುಮಾರಸ್ವಾಮಿ ದೂರಿದರು.
'ರಾಜೀನಾಮೆ ಒಪ್ಪಿದರೆ ನಿಮ್ಮ ಗತಿ ಏನು? ನಿಮ್ಮ ಜಾಗಕ್ಕೆ ಹೊಸಬರು ಬರುತ್ತಾರೆ. ಬಿಜೆಪಿಗೆ ಕಾರ್ಯಕರ್ತರು ಸಿಗುವುದಿಲ್ಲವೇ? ಯುವ ಮೋರ್ಚಾ ಕಾರ್ಯಕರ್ತರು ಈಗಷ್ಟೇ ಕಣ್ಣು ಬಿಡುತ್ತಿದ್ದಾರೆ. ಪಕ್ಷಕ್ಕೆ ಅವರ ಕೊಡುಗೆ ಏನು?' ಎಂದು ಪ್ರಶ್ನಿಸಿರುವ ಈಶ್ವರಪ್ಪ, ಸಭ್ಯ ರಾಜಕಾರಣದ ಎಲ್ಲೆ ಮೀರಿ ಅಹಂಕಾರ ಪ್ರದರ್ಶಿಸಿದ್ದಾರೆ. ಹಿಡಿತ ವಿಲ್ಲದ ನಾಲಿಗೆಯನ್ನು ಹರಿಬಿಟ್ಟಿದ್ದಾರೆ ಎಂದು ಕಿಡಿ ಕಾರಿದರು.
ರಾಜ್ಯ ಹಾಗೂ ದೇಶದಲ್ಲಿ ಬಿಜೆಪಿ ಎತ್ತ ಸಾಗುತ್ತಿದೆ ಎನ್ನುವುದಕ್ಕೆ ಮಾಜಿ ಸಚಿವ ಈಶ್ವರಪ್ಪನವರ ಹೇಳಿಕೆಯೇ ಸಾಕ್ಷಿ. ನೆತ್ತರಿನ ಸುಪ್ಪತ್ತಿಗೆಯ ಮೇಲೆ ಮೆರೆಯುತ್ತಿರುವ ಈಶ್ವರಪ್ಪ, ಶಿವಮೊಗ್ಗದಲ್ಲಿ ಹತ್ಯೆಗೀಡಾದ ಹರ್ಷನ ಕೊಲೆ ಸಂದರ್ಭದಲ್ಲಿ ವರ್ತಿಸಿದ ರೀತಿ ಬಗ್ಗೆ ಮತ್ತೆ ಹೇಳಬೇಕಿಲ್ಲ. ಆ ಬಗ್ಗೆ ಎಲ್ಲರಿಗೂ ಗೊತ್ತಿದೆ. ಕಾರ್ಯಕರ್ತರ ವಿರುದ್ಧ ಹಗುರವಾಗಿ ಮಾತನಾಡುವ ಮೂಲಕ ಈಶ್ವರಪ್ಪ ಬಿಜೆಪಿಯ ರಕ್ಕಸ ಮುಖವನ್ನು ಅನಾವರಣ ಮಾಡಿದ್ದಾರೆ ಎಂದು ಹೇಳಿದರು.
ಬಿಜೆಪಿಗೆ ಮೃತರ ಶಾಪ ತಟ್ಟುತ್ತದೆ
ಕಗ್ಗೊಲೆಯಾದ ಬಡ ಯುವಕರ ಆತ್ಮಘೋಷದ ಶಾಪ ಬಿಜೆಪಿಗೆ ತಟ್ಟದೆ ಇರದು. ರಾಜ್ಯವನ್ನು 'ಕಗ್ಗೊಲೆಗಳ ಕರ್ನಾಟಕ'ವನ್ನಾಗಿ ಮಾಡಿದ ಕುಖ್ಯಾತಿ ಬಿಜೆಪಿಗೆ ಸೇರುತ್ತದೆ. ಕಮಲದ ರೆಕ್ಕೆಗೆ ರಕ್ತದ ಕಲೆಗಳು ಅಂಟಿಕೊಂಡಿವೆ. ನೀವು ಸ್ವಾರ್ಥ ನಾಯಕರ ಗುಲಾಮರಲ್ಲ, ಇನ್ನಾದರೂ ಕೊಲೆಗೆಡುಕ ರಾಜಕೀಯ ಕರಾಳ ಮುಖವನ್ನು ಅರ್ಥ ಮಾಡಿಕೊಳ್ಳಿ ಎಂದು ಬಿಜೆಪಿ ಕಾರ್ಯಕರ್ತರಿಗೆ ಕುಮಾರಸ್ವಾಮಿ ಕಿವಿ ಮಾತು ಹೇಳಿದರು.
ಅಸಲಿ ರೂಪ ಮತ್ತೆ ಅನಾವರಣವಾಗಿದೆ
ವಿಧಾನಸಭೆಯ ಮಾಜಿ ಸಭಾಧ್ಯಕ್ಷರಾದ ರಮೇಶ್ ಕುಮಾರ್ ಅವರು ಕೋಲಾರದಲ್ಲಿ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಿರುವುದನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ. ಸಂವಿಧಾನದ ನಾಲ್ಕನೆ ಅಂಗ ಮಾಧ್ಯಮ ಎನ್ನುವುದು ಸ್ವಯಂ ಘೋಷಿತ ಸಂವಿಧಾನ ಪಂಡಿತರಿಗೆ ಗೊತ್ತಿಲ್ಲದಿರುವುದು ವಿಪರ್ಯಾಸ ಎಂದು ಅವರು ಲೇವಡಿ ಮಾಡಿದರು.
ನಾಲಿಗೆಯ ಮೇಲೆ ನಿಯಂತ್ರಣ ಇಲ್ಲದ ಈ ರಮೇಶ್ ಕುಮಾರ್ ಕಲಾಪದಲ್ಲೇ ಮಹಿಳೆಯರ ಬಗ್ಗೆ 'ಕೊಳಕು' ಹೇಳಿಕೆ ನೀಡಿದ್ದರು. ಸ್ವಾತಂತ್ರೋದ್ಯಾನದಲ್ಲಿ ನಾಯಕರ ಸಾಕ್ಷಿಯಾಗಿ ಕಾಂಗ್ರೆಸ್ ನಿಂದ ತಾವು 3-4 ತಲೆಮಾರುಗಳಿಗಾಗುವಷ್ಟು ಲೂಟಿ ಹೊಡೆದಿದ್ದೇವೆ ಎಂದು ಒಪ್ಪಿಕೊಂಡು ಅದರ ಲೆಕ್ಕ ಕೊಟ್ಟಿದ್ದರು. ಅಂತವರ ಅಸಲಿ ರೂಪ ಮತ್ತೆ ಅನಾವರಣವಾಗಿದೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Recommended Video