ನಿರ್ಮಲಾನಂದರ ಸಮ್ಮುಖದಲ್ಲಿ ಚೆಲುವ- ಎಚ್ಡಿಕೆ ಹ್ಯಾಂಡ್ ಶೇಕ್
ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ, ಮಿತ್ರರಂತೂ ಅಲ್ವೇ ಅಲ್ಲ. ವಿರೋಧ ಪಕ್ಷದವರೂ ಮಿತ್ರರಾಗುತ್ತಾರೆ, ತಮ್ಮದೇ ಪಕ್ಷದವರ ಶತ್ರುಗಳಾಗುತ್ತಾರೆ. ಈ ರಾಜಕೀಯದ ಜಂಜಾಟದ ನಡುವೆ ಕಿವಿಗೆ ತೆನೆ ಇಟ್ಟುಕೊಳ್ಳುವವನು ಮಾತ್ರ ಜನಸಾಮಾನ್ಯ.
ದೇವೇಗೌಡ್ರಿಗೆ ವಯಸ್ಸಾಯಿತಾ, ಕುಮಾರಸ್ವಾಮಿ ಬಳಿ ಯಾವ ರಾಜಕೀಯ ಅಸ್ತ್ರವೂ ಇಲ್ವಾ ಅನ್ನುವಂತಿಲ್ಲ. ಯಾಕೆಂದರೆ ರಾಜ್ಯ ರಾಜಕಾರಣದಲ್ಲಿ ಯಾವಾಗ ಇವರು ಅದೇನು ಬಾಂಬ್ ಸಿಡಿಸುತ್ತಾರೋ ಅನ್ನೋ ಭಯ, ಕುತೂಹಲ ಎಲ್ಲರಲ್ಲೂ ಇದ್ದಿದ್ದೇ..
ಹಿರಿಯ ಮಗ ಕೂತಲ್ಲಿ ನಿಂತಲ್ಲಿ ರಾಹು ಗುಳಿಕಕಾಲ, ಹೋಮ ಹವನ ಅನ್ಕೊಂಡು ಇರ್ಬೇಕಾದ್ರೆ, ರಾಜಕೀಯದ ವಿಚಾರದಲ್ಲಿ ದೊಡ್ಡ ಗೌಡ್ರು ತನ್ನ ಉತ್ತರಾಧಿಕಾರಿಯಾಗಿ ನಂಬಿಕೊಂಡಿದ್ದು ಕುಮಾರಸ್ವಾಮಿಯವರನ್ನು.
ರಾಜ್ಯದ ಪ್ರಸಕ್ತ ಆಗುಹೋಗುಗಳನ್ನು ಅದರಲ್ಲೂ ಭ್ರಷ್ಟಾಚಾರ, ಡಿನೋಟಿಫಿಕೇಶನ್ ಬಗ್ಗೆ ಮತ್ತು ಅದಕ್ಕೆ ಸಂಬಂಧಪಟ್ಟ ದಾಖಲೆ ಕಲೆಹಾಕುವುದರಲ್ಲಿ ಕುಮಾರಸ್ವಾಮಿ ಅವರಷ್ಟು ಪ್ರಬುದ್ಧರು ರಾಜ್ಯ ರಾಜಕಾರಣದಲ್ಲಿ ಇನ್ನೊಬ್ಬರಿಲ್ಲ, ಒಂದು ರೀತಿ ಸಾಮಾಜಿಕ ಕಾರ್ಯಕರ್ತ ಎಸ್ ಆರ್ ಹಿರೇಮಠ ಅವರ ರೀತಿಯಲ್ಲಿ. (ಹೀರೇಮಠ ಸಂದರ್ಶನ)
ಕುಮಾರಸ್ವಾಮಿ ತನ್ನ ರಾಜಕೀಯ ಜೀವನದಲ್ಲಿ ಬಹಳವಾಗಿ ನೆಚ್ಚಿಕೊಂಡಿದ್ದು ಕುಟುಂಬ ಸದಸ್ಯದವರಿಂಗಿಂತಲೂ ಹೆಚ್ಚಾಗಿ ಮೂವರನ್ನು. ಅದು ಚೆಲವರಾಯಸ್ವಾಮಿ, ಜಮೀರ್ ಅಹಮದ್ ಖಾನ್ ಮತ್ತು ಮಾಗಡಿ ಶಾಸಕ ಬಾಲಕೃಷ್ಣ ಅವರನ್ನು.
ಆದರೆ ತಾನು ನಂಬಿದ್ದ ಮೂವರೂ ಕಾರಣಾಂತರದಿಂದ ಮುನಿಸಿಕೊಂಡಾಗ ಎಚ್ಡಿಕೆ ಹಿನ್ನಡೆ ಅನುಭವಿಸಿದ್ದಂತೂ ನಿಜ. ಈಗ ಮೂವರಲ್ಲಿ ಒಬ್ಬರು ಕುಮಾರಸ್ವಾಮಿ ಜೊತೆ ಆದಿಚುಂಚನಗಿರಿ ಸಂಸ್ಥಾನದ ನಿರ್ಮಲಾನಂದ ಶ್ರೀಗಳ ಸಮ್ಮುಖದಲ್ಲಿ ಒಂದಾಗಿದ್ದಾರೆ. ಮುಂದೆ ಓದಿ..
ನಿರ್ಮಾಲಾನಂದ ಶ್ರೀಗಳ ಸಮ್ಮುಖದಲ್ಲಿ ಕುಮಾರಸ್ವಾಮಿ
ಎಚ್ಡಿಕೆ ಪರಮಾಪ್ತ ಮೂವರ ಪೈಕಿ ಇನ್ನು ಉಳಿದ ಇಬ್ಬರು, ದೊಡ್ಡ ಗೌಡ್ರು ಹಾಕಿದ ಗೆರೆಯನ್ನು ದಾಟುವುದಿಲ್ಲ ಎನ್ನುವುದು ಜೆಡಿಎಸ್ ನಲ್ಲಿರೋ ಪ್ರತೀತಿ. ಒಕ್ಕಲಿಗ ಮಹಾಸಂಸ್ಥಾನದ ಆದಿಚುಂಚನಗಿರಿ ಬೆಂಗಳೂರು ಶಾಖಾ ಮಠದಲ್ಲಿ ನಿರ್ಮಾಲಾನಂದ ಶ್ರೀಗಳ ಸಮ್ಮುಖದಲ್ಲಿ ಎಚ್ಡಿಕೆ - ಚೆಲುವರಾಯಸ್ವಾಮಿ 'ಅಣ್ ತಮ್ಮಾ' ಅಂದಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಒಕ್ಕಲಿಗರು ಒಗ್ಗಟ್ಟಾಗಿರಬೇಕು
ಒಕ್ಕಲಿಗ ಸಮುದಾಯದವರು ತಮ್ಮ ತಮ್ಮಲ್ಲಿರುವ ಭಿನ್ನಾಭಿಪ್ರಾಯವನ್ನು ದೂರವಾಗಿಸಿ, ಒಗ್ಗಟ್ಟಾಗಿರಬೇಕು. ಒಕ್ಕಲಿಗ ಸಮುದಾಯದ ಮುಖಂಡರು ನಾನೊಂದು ತೀರ..ನೀನೊಂದು ತೀರವಾದರೆ ಸಮುದಾಯದಲ್ಲೂ ಒಡಕು ಮೂಡುತ್ತದೆ. ಇನ್ಮುಂದೆಯಾದರೂ ಜೊತೆಯಾಗಿ ಕೆಲಸ ಮಾಡಿ ಎಂದು ನಿರ್ಮಾಲಾನಂದ ಶ್ರೀಗಳು, ಕುಮಾರಸ್ವಾಮಿ ಮತ್ತು ಚೆಲುವರಾಯಸ್ವಾಮಿಯವರಿಗೆ ಬುದ್ದಿಮಾತನ್ನು ಹೇಳಿದ್ದಾರೆಂದು ಸುದ್ದಿಯಾಗಿದೆ. ಶ್ರೀಗಳ ಜೊತೆ ನಡೆದ ಕ್ಲೋಸ್ ಡೋರ್ ಮೀಟಿಂಗ್ ನಲ್ಲಿ ಚೆಲುವರಾಯಸ್ವಾಮಿ, ಕುಮಾರಸ್ವಾಮಿ ಮಾತ್ರ ಇದ್ದರು ಎನ್ನಲಾಗುತ್ತಿದೆ.
ದೂರವಾಗಿದ್ದ ಚೆಲುವರಾಯಸ್ವಾಮಿ
ಪಕ್ಷದ ಇತ್ತೀಚಿನ ಬೆಳವಣಿಗೆಯಿಂದ ಮತ್ತು ತಮ್ಮದೇ ಪಕ್ಷದ ಪ್ರಮುಖ ಮುಖಂಡರ ವರ್ತನೆಯಿಂದ ಚೆಲುವರಾಯಸ್ವಾಮಿ ಜೆಡಿಎಸ್ ಚಟುವಟಿಕೆಯಿಂದ ದೂರವಾಗಿದ್ದರು. ಲೋಕಸಭಾ ಚುನಾವಣೆಯ ನಂತರ ಚೆಲುವರಾಯಸ್ವಾಮಿ ಮತ್ತು ಜಮೀರ್ ಎರಡು ಬಾರಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದರು. ಇದರಿಂದ ಇಬ್ಬರೂ ಜೆಡಿಎಸ್ ನಿಂದ ಮತ್ತಷ್ಟು ದೂರವಾಗುತ್ತಿದ್ದಾರೆ ಎನ್ನಲಾಗುತ್ತಿತ್ತು.
ಚೆಲುವರಾಯಸ್ವಾಮಿ ಹೇಳಿದ್ದೇನು
ಕೆಲ ದಿನಗಳಿಂದ ರಾಜಕಾರಣದಿಂದ ದೂರವಿದ್ದದ್ದು ನಿಜ. ಅದಕ್ಕೆ ನನ್ನ ಮತ್ತು ಕುಮಾರಸ್ವಾಮಿ ನಡುವಣ ಸಂಬಂಧ ಹಳಸಿದೆ ಎಂದರ್ಥವಲ್ಲ. ಪಕ್ಷದ ಕಾರ್ಯಕ್ರಮಗಳಲ್ಲಿ ಕಾರಣಾಂತರದಿಂದ ಪಾಲ್ಗೊಳ್ಳಲು ಆಗಲಿಲ್ಲ. ನಮ್ಮ ಸಮುದಾಯದ ಏಳಿಗೆಗಾಗಿ ಶ್ರೀಗಳ ಮಾರ್ಗದರ್ಶನ ಪಡೆಯಲು ನಾನು ಮತ್ತು ಕುಮಾರಸ್ವಾಮಿ ಇಲ್ಲಿಗೆ ಬಂದಿದ್ದೇವೆಂದು ಚೆಲುವರಾಯಸ್ವಾಮಿ ಹೇಳಿದ್ದಾರೆ.
ಭಿನ್ನಮತ ಇದೆ ಎಂದು ಒಪ್ಪಿಕೊಳ್ಳಲು ಇಬ್ಬರೂ ತಯಾರಿಲ್ಲ
ಶ್ರೀಗಳ ಭೇಟಿಯ ನಂತರ ಚೆಲುವರಾಯಸ್ವಾಮಿ ಮತ್ತು ಕುಮಾರಸ್ವಾಮಿ ತಮ್ಮ ನಡುವೆ ಭಿನ್ನಾಭಿಪ್ರಾಯ ಇದೆ ಎಂದು ಒಪ್ಪಿಕೊಳ್ಳಲು ತಯಾರಿಲ್ಲ. ನಮ್ಮ ನಡುವೆ ಒಡಕು ಇಲ್ಲ. ಇದು ಅಂತೆಕಂತೆ ಸುದ್ದಿ, ಶ್ರೀಗಳನ್ನು ಭೇಟೀಯಾಗಲು ಇಲ್ಲಿಗೆ ಬಂದಿದ್ದೇವೆ ಎಂದು ಇಬ್ಬರು ಮುಖಂಡರು ಹೇಳಿಕೆ ನೀಡಿದ್ದಾರೆ. ಒಟ್ಟಿನಲ್ಲಿ ಶ್ರೀಗಳ ಭೇಟಿಯ ನಂತರ ಇಬ್ಬರೂ ಮುಖಂಡರ ನಡುವೆ ಮಂದಹಾಸ ಮೂಡಿದ್ದಂತೂ ನಿಜ.