ಸೀಟು ಹಂಚಿಕೆ ಕಗ್ಗಂಟು : ತುರ್ತು ಸಭೆ ಕರೆದ ಕುಮಾರಸ್ವಾಮಿ
ಬೆಂಗಳೂರು, ಮಾರ್ಚ್ 13 : ಕಾಂಗ್ರೆಸ್-ಜೆಡಿಎಸ್ ನಡುವೆ ಸೀಟು ಹಂಚಿಕೆ ವಿಚಾರದಲ್ಲಿ ಇನ್ನೂ ಒಮ್ಮತ ಮೂಡಿಲ್ಲ. ಆದ್ದರಿಂದ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತುರ್ತು ಸಭೆಯಲ್ಲಿ ಬುಧವಾರ ಸಂಜೆ ಕರೆದಿದ್ದಾರೆ.
ಹಲವು ಕ್ಷೇತ್ರಗಳ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್-ಜೆಡಿಎಸ್ ನಡುವೆ ಒಮ್ಮತ ಮೂಡಿಲ್ಲ. 'ಮೈತ್ರಿ ಆಗಲಿಲ್ಲ ಎಂದರೆ ಫ್ರೆಂಡ್ಲಿ ಫೈಟ್' ಎಂದು ಕೆಲವು ದಿನಗಳ ಹಿಂದೆ ಎಚ್.ಡಿ.ರೇವಣ್ಣ ಹೇಳಿದ್ದರು. ಆದ್ದರಿಂದ, ಇಂದಿನ ಸಭೆ ಕುತೂಹಲಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ಜೊತೆಗಿನ ಮೈತ್ರಿ ಮುರಿಯುವ ಮಾತನಾಡಿದ ರೇವಣ್ಣ!
ಕೆಲವು ಆಪ್ತರಿಗೆ ಮಾತ್ರ ಇಂದಿನ ಸಭೆಗೆ ಎಚ್.ಡಿ.ಕುಮಾರಸ್ವಾಮಿ ಆಹ್ವಾನ ನೀಡಿದ್ದಾರೆ. ಸೀಟು ಹಂಚಿಕೆ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆಗೆ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಡ್ಯದ ಬಗ್ಗೆ ಗುಪ್ತಚರ ವರದಿ, ಜೆಡಿಎಸ್ ಹಾದಿ ಸುಲಭವಲ್ಲ!
ಸಭೆಯಲ್ಲಿ ಆಪ್ತ ನಾಯಕರ ಜೊತೆ ವಿವರವಾದ ಚರ್ಚೆ ನಡೆಸಿ ಎಚ್.ಡಿ.ಕುಮಾರಸ್ವಾಮಿ ಅವರು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಒಂದು ವೇಳೆ ಸೀಟು ಹಂಚಿಕೆ ವಿಚಾರ ಅಂತಿಮವಾಗದಿದ್ದರೆ ಮೈತ್ರಿ ಮುರಿದು ಬೀಳುವ ಸಾಧ್ಯತೆ ಇದೆ.
ಚುನಾವಣೆ ಸ್ಪರ್ಧಿಸಲು ಕಾಂಗ್ರೆಸ್ಗೆ ಷರತ್ತು ಹಾಕಿದ ದೇವೇಗೌಡ
ಸಿದ್ದರಾಮಯ್ಯ ಒಪ್ಪಿಗೆ ಇಲ್ಲ
ಹಾಸನ, ಮಂಡ್ಯ, ಶಿವಮೊಗ್ಗ ಕ್ಷೇತ್ರವನ್ನು ಕಾಂಗ್ರೆಸ್ ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಟ್ಟಿದೆ. ಆದರೆ, ಮೈಸೂರು-ಕೊಡಗು, ತುಮಕೂರು ವಿಚಾರದಲ್ಲಿ ಹಗ್ಗ-ಜಗ್ಗಾಟ ಮುಂದುವರೆದಿದೆ. ಮೈಸೂರು-ಕೊಡಗು ಕ್ಷೇತ್ರ ಬಿಟ್ಟುಕೊಡಲು ಸಿದ್ದರಾಮಯ್ಯ ಒಪ್ಪಿಗೆ ನೀಡುತ್ತಿಲ್ಲ.
ಕಾಂಗ್ರೆಸ್ ಒಪ್ಪಿಗೆ ಇಲ್ಲ
ಮೈಸೂರು-ಕೊಡಗು ಕ್ಷೇತ್ರದ ಬದಲು ತುಮಕೂರು ಕ್ಷೇತ್ರವನ್ನು ಕೊಡಿ ಎಂಬ ಜೆಡಿಎಸ್ ಬೇಡಿಕೆಗೆ ಒಪ್ಪಿಗೆ ಸಿಕ್ಕಿಲ್ಲ. ಚಿಕ್ಕಬಳ್ಳಾಪುರ, ಕೋಲಾರ ಕ್ಷೇತ್ರವನ್ನು ಬಿಟ್ಟುಕೊಡಲು ಕಾಂಗ್ರೆಸ್ ಹಿರಿಯ ನಾಯಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಸಭೆಯಲ್ಲಿ ವಿವರವಾದ ಚರ್ಚೆ
ಸೀಟುಗಳ ಹಂಚಿಕೆ ವಿಚಾರದಲ್ಲಿ ಸಿದ್ದರಾಮಯ್ಯ ಅವರೇ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂಬುದು ಎಚ್.ಡಿ.ಕುಮಾರಸ್ವಾಮಿ ಅವರ ಆಕ್ರೋಶಕ್ಕೆ ಕಾರಣವಾಗಿದೆ. ಆದ್ದರಿಂದ, ಆಪ್ತ ನಾಯಕರ ಸಭೆಯನ್ನು ಅವರು ಕರೆದಿದ್ದಾರೆ. ಮುಂದಿನ ನಡೆ ಬಗ್ಗೆ ವಿವರವಾದ ಚರ್ಚೆ ಸಭೆಯಲ್ಲಿ ನಡೆಯುವ ಸಾಧ್ಯತೆ ಇದೆ.
ಫ್ರೆಂಡ್ಲಿ ಫೈಟ್ ಮಾಡುತ್ತೇವೆ
ಕೆಲವು ದಿನಗಳ ಹಿಂದೆ ಮಾತನಾಡಿದ್ದ ಸಚಿವ ಎಚ್.ಡಿ.ರೇವಣ್ಣ ಅವರು, 'ರಾಷ್ಟ್ರದಲ್ಲಿ ಕೋಮುವಾದಿ ಶಕ್ತಿಗಳನ್ನು ದೂರವಿಡಲು ಕಾಂಗ್ರೆಸ್ ಜೊತೆ ಎಚ್.ಡಿ.ದೇವೇಗೌಡರು ಕೈ ಜೋಡಿಸಿದ್ದಾರೆ. 28 ಕ್ಷೇತ್ರದಲ್ಲಿ ಜಯಗಳಿಸುವ ಉದ್ದೇಶವಿದ್ದರೆ ಮೈತ್ರಿ ಮಾಡಿಕೊಳ್ಳಬೇಕು. ಇದಕ್ಕೆ ಕಾಂಗ್ರೆಸ್ ಒಪ್ಪಿಗೆ ಇಲ್ಲವಾದಲ್ಲಿ ಫ್ರೆಂಡ್ಲಿ ಫೈಟ್ ಮಾಡುತ್ತೇವೆ' ಎಂದು ಹೇಳಿದ್ದರು.