ಅತೃಪ್ತಿ ಶಮನಕ್ಕೆ ವಿದೇಶದಿಂದಲೇ ಸಿಎಂ ಕುಮಾರಸ್ವಾಮಿ ಸಾಹಸ
Recommended Video
ಬೆಂಗಳೂರು, ಜುಲೈ 2: ಇಬ್ಬರು ಕಾಂಗ್ರೆಸ್ ಶಾಸಕರ ದಿಢೀರ್ ರಾಜೀನಾಮೆಯಿಂದ ರಾಜ್ಯ ರಾಜಕೀಯದಲ್ಲಿ ಹೊಸ ಚಟುವಟಿಕೆಗಳು ಗರಿಗೆದರಿವೆ. ಇತ್ತ ಬಿಜೆಪಿ ಇನ್ನಷ್ಟು ಶಾಸಕರು ರಾಜೀನಾಮೆ ನೀಡಿದರೆ ಅವರನ್ನು ಬಿಜೆಪಿಗೆ ಸೆಳೆದು ಸರ್ಕಾರ ರಚನೆಗೆ ಪ್ಲ್ಯಾನ್ ರೂಪಿಸುತ್ತಿದ್ದರೆ, ಅತ್ತ ದೋಸ್ತಿ ಸರ್ಕಾರದ ನಾಯಕರು ಸರ್ಕಾರ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದೆ.
ಅಮೆರಿಕ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಅತೃಪ್ತರ ಮನವೊಲಿಕೆಗೆ ಸಪ್ತಸಾಗರದಾಚೆಯಿಂದಲೇ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ನಡೆಸುತ್ತಿದ್ದಾರೆ. ಕಾಂಗ್ರೆಸ್ನ ಸುಮಾರು ಏಳು ಮಂದಿ ಅತೃಪ್ತ ಶಾಸಕರಿಗೆ ಕುಮಾರಸ್ವಾಮಿ ಅವರು ಸೋಮವಾರವೇ ಕರೆ ಮಾಡಿ ಮಾತನಾಡಿದ್ದರು. ಬಳಿಕ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೆ ಕೂಡ ಕುಮಾರಸ್ವಾಮಿ ಕರೆ ಮಾಡಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಶಾಸಕರಿಗೆ ಎಚ್.ಡಿ.ಕುಮಾರಸ್ವಾಮಿ ಫೋನ್ ಕರೆ!
ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ರಾಜೀನಾಮೆ ಡ್ರಾಮಾ ಯಾವ ರೀತಿ ಮುಂದುವರಿಯಲಿದೆ ಎಂಬ ಕುತೂಹಲ ಮೂಡಿಸಿದೆ. ಕಾಂಗ್ರೆಸ್ನ ಶಾಸಕರಲ್ಲದೆ, ಜೆಡಿಎಸ್ನ ಕೆಲವು ಶಾಸಕರು ಕೂಡ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧರಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಸಮ್ಮಿಶ್ರ ಸರ್ಕಾರ ಸಂಕಟಕ್ಕೆ ಸಿಲುಕಿದೆ. ಅತೃಪ್ತ ಶಾಸಕರು ಹಲವು ಬಾರಿ ತಮ್ಮ ಬೇಸರವನ್ನು ಹೊರಹಾಕುತ್ತಿದ್ದರು. ಅವರನ್ನು ಸಂಪೂರ್ಣವಾಗಿ ಸಮಾಧಾನಗೊಳಿಸುವ ಪ್ರಯತ್ನ ನಡೆದಿರಲಿಲ್ಲ. ಈಗ ಆನಂದ್ ಸಿಂಗ್ ಮತ್ತು ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿರುವುದು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ರಾಜೀನಾಮೆ ಪರ್ವಕ್ಕೆ ನಾಂದಿ ಹಾಡಲಿದೆಯೇ ಎಂಬ ಪ್ರಶ್ನೆ ಮೂಡಿಸಿದೆ.
ಸಿದ್ದರಾಮಯ್ಯ ಜತೆ ಎಚ್ಡಿಕೆ ಮಾತುಕತೆ
ಅಮೆರಿಕ ಪ್ರವಾಸದಲ್ಲಿರುವ ಕುಮಾರಸ್ವಾಮಿ ಅವರು ಜುಲೈ 6ರಂದು ಮರಳಲಿದ್ದಾರೆ. ಆ ವೇಳೆಗೆ ರಾಜ್ಯ ರಾಜಕೀಯದಲ್ಲಿ ಭಾರಿ ಬದಲಾವಣೆಗಳಾಗಬಹುದು ಎನ್ನಲಾಗುತ್ತಿದೆ. ಈ ಸಾಧ್ಯತೆಗೆ ಆಸ್ಪದ ಕೊಡದಂತೆ ತಡೆಯಲು ಎಚ್ಡಿಕೆ ಅವರು ಸಿದ್ದರಾಮಯ್ಯ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ರಾಜ್ಯ ರಾಜಕೀಯದ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ್ದಾರೆ. ಕಾಂಗ್ರೆಸ್ನ ಪ್ರಭಾವಿ ನಾಯಕರಾಗಿರುವ ಸಿದ್ದರಾಮಯ್ಯ ಅವರ ಮಾತಿಗೆ ಶಾಸಕರು ಬೆಲೆ ನೀಡಲಿದ್ದಾರೆ ಎಂಬ ನಂಬಿಕೆಯಿಂದ ಅವರ ಮನವೊಲಿಸುವಂತೆ ಕುಮಾರಸ್ವಾಮಿ, ಸಿದ್ದರಾಮಯ್ಯ ಅವರನ್ನು ಕೋರಿದ್ದಾರೆ ಎನ್ನಲಾಗಿದೆ. ಸದ್ಯ ಸರ್ಕಾರ ಉಳಿಸಿಕೊಳ್ಳುವ ಜವಾಬ್ದಾರಿ ಸಿದ್ದರಾಮಯ್ಯ ಅವರ ಮೇಲೆಯೇ ಇದೆ. ಕುಮಾರಸ್ವಾಮಿ ಅವರು ಅಮೆರಿಕದಿಂದ ಬರುವವರೆಗೂ ಇಬ್ಬರು ಶಾಸಕರ ರಾಜೀನಾಮೆ ಅಂಗೀಕಾರವಾಗದಂತೆ ತಡೆಯಲು ಮತ್ತು ಎಲ್ಲ ಶಾಸಕರ ಮನವೊಲಿಕೆಗೆ ಸಿದ್ದರಾಮಯ್ಯ ಪ್ರಯತ್ನ ನಡೆಸಬೇಕಾದ ಹೊಣೆ ಹೊತ್ತಿದ್ದಾರೆ.
ರಮೇಶ್ ಹಿಂಬಾಲಿಸುತ್ತಾರೆಯೇ ಶಾಸಕರು?
ಆನಂದ್ ಸಿಂಗ್ ಅವರ ರಾಜೀನಾಮೆಗೆ ಜಿಂದಾಲ್ ಕಂಪೆನಿಗೆ ಭೂಮಿ ಪರಭಾರೆ ಮಾಡುವ ಕಾರಣ ನೀಡಲಾಗಿದೆ. ಆದರೆ, ರಮೇಶ್ ಜಾರಕಿಹೊಳಿ ಅವರ ರಾಜೀನಾಮೆಗೆ ಯಾವುದೇ ಕಾರಣ ನೀಡಿಲ್ಲ. ಹೀಗಾಗಿ ಇದು ಸರ್ಕಾರದ ವಿರುದ್ಧದ ಅಸಮಾಧಾನ ಹೊರಹಾಕುವ ನಡೆಯಾಗಿದ್ದು, ಇದಕ್ಕೆ ಇನ್ನೂ ಕೆಲವು ಶಾಸಕರು ಕೈಜೋಡಿಸಲಿದ್ದಾರೆ. ಜಾರಕಿಹೊಳಿ ಅವರ ಬಣದಲ್ಲಿ ಗುರುತಿಸಿಕೊಂಡಿರುವ ಅಥಣಿ ಶಾಸಕ ಮಹೇಶ್ ಕುಮಟಳ್ಳಿ, ಕಂಪ್ಲಿ ಶಾಸಕ ಗಣೇಶ್, ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ ಕೂಡ ಅವರನ್ನು ಅನುಸರಿಸಲಿದ್ದಾರೆ. ಇತ್ತ ಹಿರೇಕೆರೂರು ಶಾಸಕ ಬಿಸಿ ಪಾಟೀಲ್ ಮತ್ತು ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್ ಶಾಸಕ ಸ್ಥಾನ ತ್ಯಜಿಸಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ.
ಆಷಾಢದಲ್ಲೇ ಸರ್ಕಾರ ರಚನೆ ಬಿಜೆಪಿ ಕನಸು, ನನಸಾಗುವುದೇ?
ಸ್ಪೀಕರ್ ಅಂಗೀಕರಿಸುತ್ತಾರೆಯೇ?
ರಾಜೀನಾಮೆ ಅಂಗೀಕರಿಸುವ ಅಥವಾ ನಿರಾಕರಿಸುವ ಅಧಿಕಾರ ಸ್ಪೀಕರ್ ಅವರಲ್ಲಿದೆ. ಆದರೆ, ಸ್ಪೀಕರ್ ರಮೇಶ್ ಕುಮಾರ್ ಅವರು ಅತೃಪ್ತ ಶಾಸಕರ ಕೈಗೆ ಸಿಗುತ್ತಿಲ್ಲ. ಸದ್ಯ ಅವರು ಕೋಲಾರದಲ್ಲಿದ್ದಾರೆ. ಶಾಸಕರ ರಾಜೀನಾಮೆ ಪತ್ರ ಅವರ ಕೈಗೆ ಸಿಕ್ಕ ಬಳಿಕ ಅದನ್ನು ಪರಾಮರ್ಶಿಸಿ ಅವರಿಂದ ಕಾರಣಗಳನ್ನು ಪಡೆದ ಬಳಿಕ ರಾಜೀನಾಮೆ ಅಂಗೀಕರಿಸುವ ಕುರಿತ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ. ಸೋಮವಾರ ಆನಂದ್ ಸಿಂಗ್ ಅವರ ರಾಜೀನಾಮೆ ಕುರಿತಾದ ಪ್ರಶ್ನೆಗೆ, 'ನನಗೆ ಯಾವ ರಾಜೀನಾಮೆಯೂ ಬಂದಿಲ್ಲ' ಎಂದು ರಮೇಶ್ ಕುಮಾರ್ ಹೇಳಿದ್ದರು.
ಗೋಕಾಕ್ಗೆ ಸತೀಶ್ ಎಂಟ್ರಿ
ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ ಬೆನ್ನಲ್ಲೇ ಅಲ್ಲಿನ ಉಪಚುನಾವಣೆಗೆ ಸಿದ್ಧತೆ ನಡೆದಿದೆ. ಸಹೋದರ ರಮೇಶ್ ಜಾರಕಿಹೊಳಿ ಅವರ ಕ್ಷೇತ್ರವಾದ ಗೋಕಾಕ್ ರಾಜಕೀಯಕ್ಕೆ ಸತೀಶ್ ಜಾರಕಿಹೊಳಿ ಪ್ರವೇಶಿಸಿದ್ದಾರೆ. ಕಾಂಗ್ರೆಸ್ನ ಭದ್ರಕೋಟೆಯಾದ ಗೋಕಾಕ್ ಕ್ಷೇತ್ರವನ್ನು ಉಳಿಸಿಕೊಳ್ಳಲು ಮತ್ತು ರಮೇಶ್ ಅವರನ್ನು ಸೋಲಿಸಲು ಸತೀಶ್ ಅವರು ಈಗಾಗಲೇ ಸಿದ್ಧತೆ ಆರಂಭಿಸಿದ್ದಾರೆ. ಮತ್ತೊಬ್ಬ ಸಹೋದರ ಲಖನ್ ಜಾರಕಿಹೊಳಿ ಅವರನ್ನು ಗೋಕಾಕ್ ಕ್ಷೇತ್ರದ ಅಭ್ಯರ್ಥಿಯಾಗಿಸಲು ಸತೀಶ್ ಬಯಸಿದ್ದಾರೆ. ಅದರ ಜತೆಗೆ ರಮೇಶ್ ಜಾರಕಿಹೊಳಿ ಪಕ್ಷದಿಂದ ಹೊರಹೋದರೂ ಅವರ ಬೆಂಬಲಿಗ ಕಾಂಗ್ರೆಸ್ಸಿಗರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳಲು ಅವರು ತಂತ್ರಗಳನ್ನು ರೂಪಿಸಿದ್ದಾರೆ ಎನ್ನಲಾಗಿದೆ.