ಸಂಪುಟ ವಿಸ್ತರಣೆ : 6 ಸ್ಥಾನಕ್ಕೆ 16ಕ್ಕೂ ಅಧಿಕ ಆಕಾಂಕ್ಷಿಗಳು
ಬೆಂಗಳೂರು, ಜುಲೈ 13 : ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದ ಸಂಪುಟ ಸಚಿವ ವಿಸ್ತರಣೆಗೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ. ಬಜೆಟ್ ಅಧಿವೇಶನ ಮುಗಿಸಿಕೊಂಡ ಬಳಿಕ ಸಂಪುಟ ವಿಸ್ತರಣೆ ತಲೆಬಿಸಿಯಿಂದ ಮುಕ್ತಿ ಪಡೆಯಲು ಆಷಾಢ ಮಾಸ ನೆರವಿಗೆ ಬಂದಿದೆ.
ಸಂಪುಟ ವಿಸ್ತರಣೆ ದಿನಾಂಕ ಆಗಸ್ಟ್ 11ರ ನಂತರ ನಿಗದಿಯಾಗುವುದು ಪಕ್ಕಾ ಆಗಿದೆಯಾದರೂ, ಲಾಬಿ ಮಾಡುವುದಕ್ಕೇನು ಅಡ್ಡಿಯಿಲ್ಲ. ಕುಮಾರಸ್ವಾಮಿ ಸಂಪುಟದಲ್ಲಿ ಖಾಲಿ ಇರುವ 6 ಸ್ಥಾನಕ್ಕೆ 16ಕ್ಕೂ ಅಧಿಕ ಆಕಾಂಕ್ಷಿಗಳಿದ್ದಾರೆ. ಜುಲೈ 14ರಿಂದ ಆಗಸ್ಟ್ 11ರವರೆಗೆ ಆಷಾಢವಿದ್ದು, ಅಲ್ಲಿಯವರೆಗೂ ಸಂಪುಟ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಸಂಪುಟ ಸೇರುವ ಆಕಾಂಕ್ಷಿಗಳ ಆಸೆಯನ್ನು ಅದುಮಿಟ್ಟುಕೊಳ್ಳಬೇಕಾಗಿದೆ.
ಕುಮಾರಸ್ವಾಮಿ ಸಚಿವ ಸಂಪುಟದಲ್ಲಿ ಯಾರಿಗೆ ಯಾವ ಖಾತೆ?
ಆಷಾಢಕ್ಕೂ ಮುನ್ನವೇ ಸಂಪುಟ ಸೇರಬಲ್ಲ ಆಕಾಂಕ್ಷಿಗಳ ಪಟ್ಟಿ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್ ಸೂಚಿಸಿತ್ತು. ಆದರೆ, ಆಷಾಢದಲ್ಲಿ ಸಂಪುಟ ವಿಸ್ತರಣೆ ಮಾಡುವುದಕ್ಕೆ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ, ಎಚ್ ಡಿ ರೇವಣ್ಣ ಅವರು ಒಪ್ಪುವುದಿಲ್ಲ. ಇಂಥ ವಿಚಾರಗಳಲ್ಲಿ ತುಂಬಾ ಕಟ್ಟುನಿಟ್ಟು ಎಂದು ಪರಮೇಶ್ವರ್ ಅವರು ಹೈಕಮಾಂಡ್ಗೆ ವಿವರಿಸಿದ್ದಾರೆ. ಸದ್ಯಕ್ಕೆ ಸಿದ್ದರಾಮಯ್ಯ ಅವರಿಗೆ ಮಾತ್ರ ಹೈಕಮಾಂಡಿನಿಂದ ಬುಲಾವ್ ಬಂದಿದೆ. ಸಂಪುಟ ಸೇರಲು ಹಾತೊರೆಯುತ್ತಿರುವ ಹಿರಿಯ, ಕಿರಿಯ ಶಾಸಕರ ಪಟ್ಟಿ ಮುಂದಿದೆ.
ಹೊಸ ಸಚಿವರ ಅಧಿಕಾರ ಸ್ವೀಕಾರ ಸಮಾರಂಭ
ಕುಮಾರಸ್ವಾಮಿ ಮಂತ್ರಿಮಂಡಲದ ಅಂತಿಮ ಸುತ್ತಿನ ವಿಸ್ತರಣೆ ಏನಿದ್ದರೂ ಆಗಸ್ಟ್ 11ರ ನಂತರ ನಡೆಯಲಿದೆ. ಆದರೆ, ಅಲ್ಲಿ ತನಕ ಸಚಿವ ಸ್ಥಾನದ ಆಕಾಂಕ್ಷಿಗಳು ಮುಖ್ಯವಾಗಿ ಕಾಂಗ್ರೆಸ್ಸಿಗರು, ಅಧಿವೇಶನ ಮುಗಿಯುತ್ತಿದ್ದಂತೆ ಚಟುವಟಿಕೆ ಶುರು ಮಾಡಿಕೊಂಡಿದ್ದಾರೆ. ಜುಲೈ 23ರಂದು ದೆಹಲಿಯಲ್ಲಿ ನಡೆಯುವ ಸಭೆಯಲ್ಲಿ ಸಚಿವರು ಯಾರಾಗಬೇಕು? ನಿಗಮ ಮಂಡಳಿಗೆ ಯಾರು ಎಂಬುದು ನಿರ್ಧಾರವಾಗಲಿದೆ. ವಿಧಾನಪರಿಷತ್ನ ಎರಡು ಸ್ಥಾನಕ್ಕೂ ಸಹ ಚರ್ಚೆ ನಡೆಯುವ ಸಾಧ್ಯತೆ ಇದೆ.
ನಿರ್ಧರಿಸುವವರು ಯಾರು ಯಾರು?
ಕೆಪಿಸಿಸಿಯ ನೂತನ ಅಧ್ಯಕ್ಷ ದಿನೇಶ್ ಗುಂಡೂರಾವ್, ಉಪ ಮುಖ್ಯಮಂತ್ರಿ ಪರಮೇಶ್ವರ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಒಂದು ಸುತ್ತಿನ ಮಾತುಕತೆ ನಡೆಸಿ, ಅಂತಿಮ ಪಟ್ಟಿಯನ್ನು ತೆಗೆದುಕೊಂಡು ದೆಹಲಿಗೆ ತೆರಳಲಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜತೆ ಚರ್ಚೆ ನಡೆಸಿ, ಹೆಸರುಗಳನ್ನು ಅಂತಿಮಗೊಳಿಸುತ್ತಾರೆ.
ನಿಗಮ ಮಂಡಳಿ ಹಾಗೂ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿಯನ್ನು ಪರಿಶೀಲಿಸಿ, ಅಂತಿಮಗೊಳಿಸುವ ಹೊಣೆಯನ್ನು ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ಅವರಿಗೆ ನೀಡಲಾಗಿದೆ. ಶೀಘ್ರದಲ್ಲೇ ದೆಹಲಿಗೆ ಸಿದ್ದರಾಮಯ್ಯ ಅವರು ತೆರಳುತ್ತಿದ್ದಾರೆ.
ಸದ್ಯಕ್ಕೆ ಹಿರಿಯರಿಗೆ ಸಂಪುಟದಲ್ಲಿ ಸ್ಥಾನವಿಲ್ಲ!
ಸತೀಶ್ ಜಾರಕಿಹೊಳಿ ಸೇರಿ ಇಬ್ಬರು ಹಿರಿಯ ನಾಯಕರಿಗೆ ಎರಡು ವರ್ಷದ ಬಳಿಕ ನಡೆಸಬಹುದಾದ ಸಂಪುಟ ಪುನಾರಚನೆ ವೇಳೆ ಅವಕಾಶ ಸಿಗಲಿದೆ ಎಂದು ಹೈಕಮಾಂಡ್ ಹೇಳಿದೆ. ಹಿರಿಯ ಶಾಸಕರಾದ ಎಂ.ಬಿ.ಪಾಟೀಲ್, ರಾಮಲಿಂಗಾರೆಡ್ಡಿ, ತನ್ವೀರ್ ಸೇಠ್, ರೋಷನ್ ಬೇಗ್, ಶಾಮನೂರು ಶಿವಶಂಕರಪ್ಪ ಕೂಡ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದು, ಸದ್ಯಕ್ಕಂತೂ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳಿಲ್ಲ.
ಸಚಿವ ಸಂಪುಟದಲ್ಲಿ ಯಾರಿಗೆ
ಎಸ್.ಟಿ.ಸೋಮಶೇಖರ್, ಎಸ್.ಆರ್.ಪಾಟೀಲ್, ಲಕ್ಷ್ಮೀ ಹೆಬ್ಬಾಳ್ಕರ್, ಎಚ್.ಎಂ.ರೇವಣ್ಣ, ಬಿ.ಸಿ.ಪಾಟೀಲ್, ಎಂ.ಟಿ.ಬಿ.ನಾಗರಾಜ್, ಬಿ.ಕೆ.ಸಂಗಮೇಶ್, ಶಿವಳ್ಳಿ, ಪಿ.ಟಿ.ಪರಮೇಶ್ವರ್ ನಾಯ್ಕ್, ಎನ್.ಎ.ಹ್ಯಾರಿಸ್, ರೂಪಾ ಶಶಿಧರ್, ಶರಣ ಬಸಪ್ಪ ದರ್ಶನಾಪುರ, ಭೀಮಾ ನಾಯಕ್ ಅವರು ಸಚಿವ ಸ್ಥಾನ ಬಯಸಿದ್ದಾರೆ. ಹಲವು ಶಾಸಕರು ನಿಗಮ, ಮಂಡಳಿ ಸ್ಥಾನ ಬೇಡವೆ ಬೇಡ, ಸಚಿವ ಸ್ಥಾನವೆ ಬೇಕು ಎಂದು ವರಾತ ಹಿಡಿದಿರುವುದು ಕಾಂಗ್ರೆಸ್ ಮುಖಂಡರಿಗೆ ತಲೆನೋವಿನ ವಿಷಯವಾಗಿದೆ.
ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯ ಎಂಬ ಕೂಗು
ಕಾಂಗ್ರೆಸ್ -ಜೆಡಿಎಸ್ ದೋಸ್ತಿ ಸರ್ಕಾರದಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಸರಿಯಾದ ಮಾನ್ಯತೆ ಸಿಕ್ಕಿಲ್ಲ. ಕುಮಾರಸ್ವಾಮಿ ಅವರು ಮಂಡಿಸಿದ ಚೊಚ್ಚಲ ಬಜೆಟ್ ನಲ್ಲೂ ಅನ್ಯಾಯವಾಗಿದೆ ಎಂಬ ಕೂಗು ಬಲವಾಗಿ ಎದ್ದಿದೆ. ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಜನರ ಆಶೋತ್ತರಕ್ಕೆ ತಕ್ಕಂತೆ ಹೆಸರುಗಳನ್ನು ಆಯ್ಕೆ ಮಾಡಬೇಕಿದೆ.
ಅಲ್ಲದೆ, ಪ್ರಮುಖವಾಗಿ ಜಾತಿ ಲೆಕ್ಕಾಚಾರದಂತೆ ದಲಿತರಿಗೆ ಡಿಸಿಎಂ, ಒಕ್ಕಲಿಗರಿಗೆ ಪ್ರಮುಖ ಖಾತೆ, ಬ್ರಾಹ್ಮಣ ಸಮುದಾಯಕ್ಕೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಿದೆ. ಲಿಂಗಾಯತ/ವೀರಶೈವ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರಿಗೆ ಮನ್ನಣೆ ಸಿಗಬೇಕು ಎಂಬುದು ಈಗಿನ ಬೇಡಿಕೆಯಾಗಿದೆ.