ಚುನಾವಣೆ ಬಿಸಿ ನಡುವೆ ರಾಜ್ಯ ಸರ್ಕಾರಿ ನೌಕರರಿಗೆ ಭತ್ಯೆ ಹೆಚ್ಚಳ
ಬೆಂಗಳೂರು, ಮೇ 03: ಲೋಕಸಭೆ ಚುನಾವಣೆ 2019ರ ಸಂದರ್ಭದಲ್ಲಿ ಸುಮಾರು 9 ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ ಶುಭ ಸುದ್ದಿ ಸಿಕ್ಕ ಬೆನ್ನಲ್ಲೇ ರಾಜ್ಯ ಸರ್ಕಾರಿ ನೌಕರರಿಗೆ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಕರ್ನಾಟಕದ ರಾಜ್ಯಪಾಲರ ಆದೇಶ ಅನುಸಾರವಾಗಿ ಅವರ ಹೆಸರಿನಲ್ಲಿ ಸರ್ಕಾರದ ಆರ್ಥಿಕ ಇಲಾಖೆಯ ಅಧೀನ ಕಾರ್ಯದರ್ಶಿ ಬಿಎಸ್ ಸುವರ್ಣ ಅವರ ಸಹಿಯೊಂದಿಗೆ ಆದೇಶ ಹೊರಡಿಸಲಾಗಿದೆ.
ಕಳೆದ ಏಳು ವರ್ಷಗಳಿಂದ ಪರಿಷ್ಕರಣೆಯಾಗದ ಪ್ರಭಾರ ಭತ್ಯೆಯನ್ನು ಪರಿಷ್ಕರಿಸಿ ಕರ್ನಾಟಕ ಸರ್ಕಾರ ಆದೇಶ(ಸಂಖ್ಯೆ : ಎಫ್ ಡಿ 03, ಎಸ್ಆರ್ ಎಸ್ 2012) ಹೊರಡಿಸಿದೆ. ಕನಿಷ್ಠ ಹಂತದಲ್ಲಿ ಮೊದಲ ಮೂರು ತಿಂಗಳವರೆಗೆ ಶೇಕಡ 7.5 ಹಾಗೂ ನಂತರದ ಅವಧಿಗೆ ಶೇಕಡ 15ರ ದರದಲ್ಲಿ ಭತ್ಯೆಯನ್ನು ನಿಗದಿಪಡಿಸಲಾಗಿದೆ.
9 ಲಕ್ಷ ನೌಕರರಿಗೆ ಸಿಹಿ ಸುದ್ದಿ ನೀಡಿದ ಮೋದಿ ಸರ್ಕಾರ
ಸರ್ಕಾರಿ ನೌಕರರು ತಾವು ನಿರ್ವಹಿಸುತ್ತಿರುವ ಹುದ್ದೆಯ ಜೊತೆಗೆ ಹೆಚ್ಚುವರಿ ಹುದ್ದೆಯನ್ನು ನಿರ್ವಹಿಸಿದ ವೇಳೆ ಪ್ರಭಾರ ಭತ್ಯೆಯನ್ನು ನೀಡಲಾಗುತ್ತಿದ್ದು, ಪ್ರಭಾರ ಭತ್ಯೆ ಪರಿಷ್ಕರಣೆ ಕುರಿತ ಆದೇಶ ಆರ್ಥಿಕ ಇಲಾಖೆಯಿಂದ ಹೊರಬಿದ್ದಿದೆ.
ಎರಡು ಆದೇಶಗಳನ್ನು ಹೊರಡಿಸಲಾಗಿದ್ದು, ಆದೇಶ ಪ್ರತಿಯ ವಿವರ ಮುಂದಿದೆ...
ವೇತನಶ್ರೇಣಿಯ ಕನಿಷ್ಠ ಹಂತದ ಶೇಕಡಾ 7.5 ದರ ಪ್ರಭಾರ ಭತ್ಯೆ
ಸರ್ಕಾರಿ ಆದೇಶದಲ್ಲಿ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 32 ಮತ್ತು 68 ರಡಿಯಲ್ಲಿ ಸರ್ಕಾರಿ ನೌಕರರನ್ನು ಸ್ವತಂತ್ರ ಪ್ರಭಾರದಲ್ಲಾಗಲಿ ಅಥವಾ ತಮ್ಮ ಹುದ್ದೆಯ ಕರ್ತವ್ಯದ ಜೊತೆಗೆ ಬೇರೊಂದು ಹುದ್ದೆಯ ಹೆಚ್ಚಿನ ಪ್ರಭಾರದಲ್ಲಿರಿಸಿದಾಗ ಆ ಹುದ್ದೆಯ ವೇತನಶ್ರೇಣಿಯ ಕನಿಷ್ಠ ಹಂತದ ಶೇಕಡಾ 7.5 ದರ ಪ್ರಭಾರ ಭತ್ಯೆಯನ್ನಾಗಿ ನೀಡುವಲ್ಲಿ ದಿನಾಂಕ 01/04/2012ರಿಂದ ಜಾರಿಗೊಳಿಸಿ ಅವಕಾಶ ಕಲ್ಪಿಸಲಾಗಿದೆ.
07 ವರ್ಷಗಳಷ್ಟು ಹಿಂದಿನ ಅವಧಿಯಲ್ಲಿ ಪರಿಷ್ಕರಿಸಲಾಗಿದೆ
ಪ್ರಸ್ತುತ ರಾಜ್ಯದಲ್ಲಿ ಸರ್ಕಾರಿ ನೌಕರರು/ ಅಧಿಕಾರಿಗಳ ಕೊರತೆಯಿಂದಾಗಿ ಹಲವಾರು ಅಧಿಕಾರಿಗಳು ಒಂದಕ್ಕಿಂತ ಹೆಚ್ಚಿನ ಹುದ್ದೆಗಳಲ್ಲಿ ಅಧಿಕ ಪ್ರಭಾರ/ಸಮವರ್ತಿತ ಪ್ರಭಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ರೀತಿ ಹೆಚ್ಚಿನ ಕಾರ್ಯಭಾರದ ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಪ್ರಸ್ತುತ ನೀಡುತ್ತಿರುವ ಶೇ 7.5 ದರ ಪ್ರಭಾರ ಭತ್ಯೆ ಕಡಿಮೆ ಎಂದು ಅಧಿಕಾರಿಗಳಿಂದ ಅಭಿಪ್ರಾಯಗಳು ಕೇಳಿ ಬಂದಿರುತ್ತದೆ. ಇದಲ್ಲದೇ, ಈ ಆದೇಶವು 07 ವರ್ಷಗಳಷ್ಟು ಹಿಂದಿನ ಅವಧಿಯಲ್ಲಿ ಪರಿಷ್ಕರಿಸಲ್ಪಟ್ಟಿರುವುದಾಗಿದೆ. ಈ ಹಿನ್ನೆಲೆಯಲ್ಲಿ ಪ್ರಭಾರ ಭತ್ಯೆಯ ದರವನ್ನು ಪರಿಷ್ಕರಿಸುವ ಬಗ್ಗೆ ಪರಿಶೀಲಿಸಿ, ಮತ್ತೊಂದು ಆದೇಶ ನೀಡಿದೆ.
ಸರ್ಕಾರಿ ನೌಕರರಿಗೆ ಶುಭ ಸುದ್ದಿ, ಭತ್ಯೆಯಲ್ಲಿ 5 ಪಟ್ಟು ಹೆಚ್ಚಳ
ಆದೇಶ ಸಂಖ್ಯೆ ಎಫ್ ಡಿ 08 ಎಸ್ ಆರ್ ಎಸ್ 2018
ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 32 ಮತ್ತು 68 ರಡಿಯಲ್ಲಿ ಸರ್ಕಾರಿ ನೌಕರರನ್ನು ಸ್ವತಂತ್ರ ಪ್ರಭಾರದಲ್ಲಾಗಲಿ ಅಥವಾ ತಮ್ಮ ಹುದ್ದೆಯ ಕರ್ತವ್ಯದ ಜೊತೆಗೆ ಬೇರೊಂದು ಹುದ್ದೆಯ ಹೆಚ್ಚಿನ ಪ್ರಭಾರದಲ್ಲಿರಿಸಿದಾಗ ಆ ಹುದ್ದೆಯ ವೇತನಶ್ರೇಣಿಯ ಕನಿಷ್ಠ ಹಂತದಲ್ಲಿ ಮೊದಲ ಮೂರು ತಿಂಗಳ ವರೆಗೆ ಶೇ 7.5 ದರ ದಲ್ಲಿ ಆನಂತರದ ಮೂರು ತಿಂಗಳಿಗಿಂತ ಹೆಚ್ಚಿನ ಅವಧಿಗೆ ಶೇಕಡಾ 15 ದರದಲ್ಲಿ ಪ್ರಭಾರ ಭತ್ಯೆಯನ್ನು ನಿಗದಿಪಡಿಸಿ ಆದೇಶಿಸಿದೆ.
ಬಿಎಸ್ ಸುವರ್ಣ ಅವರು ಆದೇಶ ಹೊರಡಿಸಿದ್ದಾರೆ
ಸದರಿ ಪ್ರಭಾವ ವ್ಯವಸ್ಥೆಯು ಪ್ರಭಾರ ಹೊಂದಿರುವ ಒಂದು ಹುದ್ದೆಗೆ ಮಾತ್ರ ಅನ್ವಯಿಸತಕ್ಕದ್ದು ಮತ್ತು ಸದರಿ ದರಗಳು ಈ ಆದೇಶವನ್ನು ಹೊರಡಿಸಿದ ದಿನಾಂಕದಿಂದ ಜಾರಿಗೆ ಬರತಕ್ಕದ್ದು. ಕರ್ನಾಟಕ ನಾಗರೀಕ್ ಸೇವಾ ನಿಯಮಗಳಿಗೆ ಅವಶ್ಯಕ ತಿದ್ದುಪಡಿಯನ್ನು ಪ್ರತ್ಯೇಕವಾಗಿ ಹೊರಡಿಸಲಾಗುವುದು ಎಂದು ಕರ್ನಾಟಕದ ರಾಜ್ಯಪಾಲರ ಆದೇಶ ಅನುಸಾರವಾಗಿ ಅವರ ಹೆಸರಿನಲ್ಲಿ ಸರ್ಕಾರದ ಆರ್ಥಿಕ ಇಲಾಖೆಯ ಅಧೀನ ಕಾರ್ಯದರ್ಶಿ ಬಿಎಸ್ ಸುವರ್ಣ ಅವರು ಆದೇಶ ಹೊರಡಿಸಿದ್ದಾರೆ.