ಶಂಕರ್, ನಾಗೇಶ್ ಗೆ ಖಾತೆ ಹಂಚಿದ ಮುಖ್ಯಮಂತ್ರಿ ಕುಮಾರಸ್ವಾಮಿ
Recommended Video
ಬೆಂಗಳೂರು, ಜೂನ್ 24: ಸಂಪುಟ ವಿಸ್ತರಣೆ ಬಳಿಕ ಗ್ರಾಮ ವಾಸ್ತವ್ಯದಲ್ಲಿ ನಿರತರಾಗಿರುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಬಿಡುವು ಮಾಡಿಕೊಂಡು ನೂತನ ಸಚಿವರಿಬ್ಬರಿಗೆ ನಿಗದಿಯಂತೆ ಸೋಮವಾರಂದು ಖಾತೆ ಹಂಚಿಕೆ ಮಾಡಿದ ಆದೇಶಕ್ಕೆ ಸಹಿ ಹಾಕಿ, ನೂತನ ಸಚಿವರ ಖಾತೆ ಹಂಚಿಕೆ ಪಟ್ಟಿ ರಾಜ್ಯಪಾಲರಿಗೆ ಕಳಿಸಿದ್ದಾರೆ.
ಪಕ್ಷೇತರ ಶಾಸಕರಾದ ರಾಣೆಬೆನ್ನೂರಿನ ಶಾಸಕ ಆರ್.ಶಂಕರ್ ಹಾಗೂ ಮುಳಬಾಗಿಲಿನ ನಾಗೇಶ್ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ 10 ದಿನಗಳ ಬಳಿಕ ಕೊನೆಗೂ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ.
ಮಂಡ್ಯ ಸೋಲು: ಸಚಿವ ಪುಟ್ಟರಾಜುಗೆ ರಾಜ್ಯ ಸಂಪುಟದಿಂದ ಕೊಕ್?
ಸಂಪುಟ ಸೇರುವುದಕ್ಕೂ ಮುನ್ನ ರಾಣೇಬೆನ್ನೂರು ಶಾಸಕ ಶಂಕರ್ ಅವರು ತಮ್ಮ ಕೆಪಿಜೆಪಿ ಪಕ್ಷವನ್ನು ಕಾಂಗ್ರೆಸ್ ನಲ್ಲಿ ವಿಲೀನಗೊಳಿಸಿದರು. ಮುಳುಬಾಗಿಲಿನ ಶಾಸಕ ನಾಗೇಶ್ ಅವರು ಸಂಪುಟ ಸೇರಿದ್ದು, ಅಧಿಕಾರಿಯಾಗಿ ಅನುಭವ ಹೊಂದಿರುವುದರಿಂದ ಉತ್ತಮ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದರು.
ಶಾಸಕ ಸುಧಾಕರ್ ಗೆ ಕೊನೆಗೂ ನಿರೀಕ್ಷಿತ ಸ್ಥಾನ ಮಾನ ಕೊಟ್ಟ ಎಚ್ಡಿಕೆ
ಎಚ್ ಡಿ ಕುಮಾರಸ್ವಾಮಿ ಅವರು ಜೂನ್ 14ರಂದು ಸಂಪುಟ ವಿಸ್ತರಣೆ ಮಾಡಿ ಇಬ್ಬರು ಪಕ್ಷೇತರರನ್ನು ತಮ್ಮ ಸಂಪುಟಕ್ಕೆ ಸೇರಿಸಿಕೊಂಡಿದ್ದರು.
ಯಾರಿಗೆ ಯಾವ ಖಾತೆ?
ಸಚಿವ ಆರ್.ಶಂಕರ್ಅವರಿಗೆ ಪೌರಾಡಳಿತ ಖಾತೆ ಮತ್ತು ಎಚ್.ನಾಗೇಶ್ಅವರಿಗೆ ಸಣ್ಣ ಕೈಗಾರಿಕೆ ಖಾತೆಯನ್ನು ನೀಡಲಾಗಿದೆ. ಸಣ್ಣ ಕೈಗಾರಿಕೆ ಖಾತೆಯನ್ನು ಹೊಂದಿದ್ದ ಗುಬ್ಬಿ ಶಾಸಕ ಎಂ ಆರ್ ಶ್ರೀನಿವಾಸ್ ಅವರಿಗೆ ಪ್ರಾಥಮಿಕ ಶಿಕ್ಷಣ ಖಾತೆಯನ್ನು ನೀಡಲಾಗಿದೆ. ಕೊಳ್ಳೆಗಾಲ ಕ್ಷೇತ್ರದ ಬಿಎಸ್ಪಿ ಶಾಸಕ ಎನ್ ಮಹೇಶ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಶಿಕ್ಷಣ ಖಾತೆಯನ್ನು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ನಿಭಾಯಿಸುತ್ತಿದ್ದರು.
ಸಮನ್ವಯ ಸಮಿತಿಯಲ್ಲಿ ಚರ್ಚೆಯಾಗಿದೆಯೆ?
ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ನಾಯಕರ ಶಿಫಾರಸ್ಸು ಕೇಳದೆ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡು, ಇಬ್ಬರು ಪಕ್ಷೇತರರನ್ನು ಸಂಪುಟಕ್ಕೆ ಸೇರಿಸಿಕೊಂಡು ಸರ್ಕಾರವನ್ನು ಉಳಿಸಿಕೊಂಡಿರುವ ಕುಮಾರಸ್ವಾಮಿ ಅವರು ಕಾಂಗ್ರೆಸ್ ಅತೃಪ್ತರ ಉರಿಯನ್ನು ಇನ್ನಷ್ಟು ಹೆಚ್ಚಿಸಿದ್ದರು. ಈಗ ಸಂಪುಟ ಸೇರಿರುವ ನೂತನ ಸಚಿವರ ಖಾತೆ ಹಂಚಿಕೆ ವಿಷಯದಲ್ಲೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ಮಾಡದೆ ಖಾತೆ ಹಂಚುತ್ತಿದ್ದಾರೆ ಎಂಬ ಸುದ್ದಿಯಿದೆ. ಹೀಗಾಗಿ, ಕಾಂಗ್ರೆಸ್- ಜೆಡಿಎಸ್ ನಡುವಿನ ಮೈತ್ರಿ ನಡುವಿನ ಬಿರುಕು ಹೆಚ್ಚಾಗುವ ಸಾಧ್ಯತೆಯಿದೆ.
ಎರಡು ಪ್ರಮುಖ ಖಾತೆಗಳ ಹಂಚಿಕೆ
ಪ್ರಸ್ತುತ ಶಿಕ್ಷಣ ಖಾತೆ, ಪೌರಾಡಳಿತ ಖಾತೆ ಹಂಚಿಕೆಯಾಗಿರಲಿಲ್ಲ. ಇದರ ಜೊತೆಗೆ ಮುಖ್ಯಮಂತ್ರಿಗಳ ಅವರ ಬಳಿ ಇನ್ನು ಕೆಲವು ಖಾತೆಗಳಿವೆ. ಅಧಿಕಾರಕ್ಕೆ ಬಂದಾಗ ಒಟ್ಟು 11 ಖಾತೆಗಳನ್ನು ತಮ್ಮ ಬಳಿ ಇರಿಸಿಕೊಂಡಿದ್ದರು. ಈಗ ಎಚ್ಡಿ ರೇವಣ್ಣ, ಡಿಕೆ ಶಿವಕುಮಾರ್ ಅವರು ಎರಡು ಖಾತೆಗಳನ್ನು ನಿಭಾಯಿಸುತ್ತಿದ್ದಾರೆ. ಇವರಿಬ್ಬರ ಮೇಲಿನ ಹೆಚ್ಚುವರಿ ಜವಾಬ್ದಾರಿಯನ್ನು ಹೊಸ ಸಚಿವರಿಗೆ ಹಂಚುತ್ತಾರೋ ಅಥವಾ ಅವರ ಬೇಡಿಕೆಗೆ ತಕ್ಕಂತೆ ಖಾತೆ ನೀಡುತ್ತಾರೋ ಎಂಬ ಕುತೂಹಲ ಹೆಚ್ಚಾಗಿತ್ತು. ನಿರೀಕ್ಷೆಯಂತೆ ಖಾತೆ ಹಂಚಿಕೆ ಮಾಡಲಾಗಿದೆ.
ಯಾವ ಖಾತೆ ನಿರೀಕ್ಷೆ ಹೊಂದಿದ್ದರು.
ಮುಳುಬಾಗಿಲಿನ ಶಾಸಕ, ಸಚಿವ ನಾಗೇಶ್ ಅವರಿಗೆ ಡಿ.ಕೆ.ಶಿವಕುಮಾರ್ ಅವರ ಬಳಿ ಇರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡಬೇಕು ಎಂಬ ಚರ್ಚೆ ನಡೆದಿತ್ತು. ಆದರೆ, ನಾಗೇಶ್ ಅವರು ಪ್ರಾಥಮಿಕ ಶಿಕ್ಷಣ ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿದ್ದರು. ಸರ್ಕಾರಿ ಅಧಿಕಾರಿಯಾಗಿ ಅನುಭವ ಹೊಂದಿರುವುದರಿಂದ ಉನ್ನತ ಹುದ್ದೆಯ ನಿರೀಕ್ಷೆ ಹೊಂದಿದ್ದರು. ರಾಣೇಬೆನ್ನೂರು ಶಾಸಕ, ಸಚಿವ ಶಂಕರ್ ಅವರು ಈ ಹಿಂದೆ ನಿಭಾಯಿಸಿದ್ದ ಅರಣ್ಯ ಇಲಾಖೆಗೆ ಬೇಡಿಕೆ ಇಟ್ಟಿದ್ದರು. ಸದ್ಯ ಆ ಖಾತೆ ಈಗ ಸತೀಶ್ ಜಾರಕಿಹೊಳಿ ಬಳಿ ಇದೆ.