ತಮಿಳುನಾಡಿಗೆ ಮೇಕೆದಾಟು ಯೋಜನೆ ವಿರೋಧಿಸುವ ಹಕ್ಕು ಇಲ್ಲ: ಎಚ್ಡಿ ದೇವೇಗೌಡ
ಬೆಂಗಳೂರು, ಫೆಬ್ರವರಿ 9: ಮೇಕೆದಾಟು ಯೋಜನೆ ವಿರೋಧಿಸುವ ಹಕ್ಕು ತಮಿಳುನಾಡಿಗೆ ಇಲ್ಲ ಎಂದು ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಹೇಳಿದ್ದಾರೆ.
ನದಿ ನೀರನ್ನು ಡೆಲ್ಟಾ ಪ್ರದೇಶಕ್ಕೆ ಮೀಸಲಿಟ್ಟಿದ್ದರೂ, 2007ರ ಕಾವೇರಿ ಜಲ ನ್ಯಾಯಮಂಡಳಿ ತೀರ್ಪಿಗೆ ವಿರುದ್ಧವಾದ ತಮಿಳುನಾಡು ಹೊಸ ಶುಷ್ಕ ವಲಯಗಳಿಗೆ ಹರಿಸುತ್ತಿದೆ ಎಂದು ಆರೋಪಿಸಿದರು. ಅಲ್ಲದೆ, ರಾಜ್ಯದ ಕುಡಿಯುವ ನೀರಿನ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಮೇಕೆದಾಟು ಯೋಜನೆಗೆ ಅನುಮತಿ ನೀಡಲು ವಿಳಂಬ ನೀತಿ ಅನುಸರಿಸುತ್ತಿದೆ ಎಂದು ದೂರಿದರು.
ಕುಡಿಯುವ ನೀರಿನ ಯೋಜನೆಗಳ ನೆಪದಲ್ಲಿ ಹಲವು ನೀರಾವರಿ ಯೋಜನೆಗಳನ್ನು ಜಾರಿಗೆ ತಂದಿರುವ ತಮಿಳುನಾಡಿಗೆ ಕುಡಿಯುವ ನೀರಿಗಾಗಿ ಮೀಸಲಾದ ಮೇಕೆದಾಟು ಸಮತೋಲನ ಜಲಾಶಯಕ್ಕೆ ಕರ್ನಾಟಕ ತನ್ನ ಭೂಪ್ರದೇಶದಲ್ಲಿ ಯೋಜನೆ ರೂಪಿಸಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸುವ ನೈತಿಕ ಹಕ್ಕು ಇಲ್ಲ' ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಕಾವೇರಿ ಜಲವಿವಾದ ನ್ಯಾಯಮಂಡಳಿಯು 2007ರಲ್ಲೇ ನೀರಿನ ಹಂಚಿಕೆ ಮಾಡಿ ಐತೀರ್ಪು ಹೊರಡಿಸಿದೆ. ನಂತರ ಸುಪ್ರೀಂ ಕೋರ್ಟ್ ಬೆಂಗಳೂರಿನ ಜನತೆಗೆ ಕುಡಿಯಲು ಕೇವಲ 4.50 ಟಿಎಂಸಿ ಅಡಿ ನೀರನ್ನು ಹಂಚಿಕೆ ಮಾಡಿದೆ. 2011ರಲ್ಲಿ 85 ಲಕ್ಷದಷ್ಟಿದ್ದ ಬೆಂಗಳೂರಿನ ಜನಸಂಖ್ಯೆ ಇದೀಗ 1.30 ಕೋಟಿಗೆ ಹೆಚ್ಚಳವಾಗಿದ್ದು, ಯೋಜನೆಗೆ ಅನುಮತಿ ನೀಡಬೇಕು ಎಂದು ಮನವಿ ಮಾಡಿಕೊಂಡರು.
ಬಜೆಟ್ನಲ್ಲಿ ಘೋಷಣೆಯಾಗಿರುವ ನದಿ ಜೋಡಣೆ ಯೋಜನೆಗಳ ಕುರಿತು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ ದೇವೇಗೌಡ ಅವರು, ತಮಿಳುನಾಡು ಕಾವೇರಿ-ವೈಗೈ-ಗುಂಡಾರ್ ನದಿಗಳ ಜೋಡಣೆ ಯೋಜನೆಗೆ ಮುಂದಾಗಿದೆ. ಈ ಮೂಲಕ ಮೆಟ್ಟೂರಿನಿಂದ ನೀರನ್ನು ತೆಗೆದು ಸೇಲಂ ಜಿಲ್ಲೆಗೆ ಅನುಕೂಲ ಮಾಡಿಕೊಡಲು ಮುಂದಾಗಿದೆ.
ನಮ್ಮ ರಾಜ್ಯದಲ್ಲಿ ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಪರಸ್ಪರ ಬಡಿದಾಡುತ್ತಿದೆ. ಆದರೆ, ತಮಿಳುನಾಡಿನಲ್ಲಿ ಎಐಡಿಎಂಕೆ ಮತ್ತು ಡಿಎಂಕೆ ತಮ್ಮ ರಾಜ್ಯದ ಕಾರಣಕ್ಕಾಗಿ ಒಂದಾಗಿವೆ.