ಎಚ್.ವಿಶ್ವನಾಥ್ ಮನವೊಲಿಸುವ ದೇವೇಗೌಡರ ಪ್ರಯತ್ನಕ್ಕೆ ಫಲವಿಲ್ಲ?
ಬೆಂಗಳೂರು, ಜೂನ್ 18 : ಹುಣಸೂರು ಶಾಸಕ ಎಚ್.ವಿಶ್ವನಾಥ್ ಮನವೊಲಿಕೆ ಪ್ರಯತ್ನ ವಿಫಲವಾಗಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ವಾಪಸ್ ಪಡೆಯಲು ಅವರು ನಿರಾಕರಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಮಂಗಳವಾರ ಎಚ್.ಡಿ.ದೇವೇಗೌಡರ ಪದ್ಮನಾಭನಗರದ ನಿವಾಸದಲ್ಲಿ ಎಚ್.ವಿಶ್ವನಾಥ್ ಜೊತೆ ಸಭೆ ನಡೆಸಲಾಯಿತು. ಸಚಿವರಾದ ಸಾ.ರಾ.ಮಹೇಶ್, ಜಿ.ಟಿ.ದೇವೇಗೌಡ, ವಿಧಾನ ಪರಿಷತ್ ಸದಸ್ಯ ಮನೋಹರ್ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಜೆಡಿಎಸ್ ನಾಯಕರ ವಿರುದ್ಧ ಮತ್ತೆ ಎಚ್.ವಿಶ್ವನಾಥ್ ಗರಂ
ಎಚ್.ವಿಶ್ವನಾಥ್ ಅವರ ಜೊತೆಗೆ ಮಧ್ಯಾಹ್ನದ ಊಟ ಸವಿದ ದೇವೇಗೌಡರು ಬಳಿಕ ಅವರ ಜೊತೆ ಮಾತುಕತೆ ನಡೆಸಿದರು. ಊಟದ ಸಮಯದಲ್ಲಿಯೇ ಸಾ.ರಾ.ಮಹೇಶ್ ಅವರು ರಾಜೀನಾಮೆ ವಾಪಸ್ ಪಡೆಯುವ ಬಗ್ಗೆ ವಿಶ್ವನಾಥ್ ಅವರ ಬಳಿ ವಿಷಯ ಪ್ರಸ್ತಾಪಿಸಿದರು.
ತೀರ್ಮಾನ ಮರು ಪರಿಶೀಲಿಸಲು ಎಚ್.ವಿಶ್ವನಾಥ್ಗೆ ದೇವೇಗೌಡರ ಸಲಹೆ
'ಯಾವುದನ್ನೂ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡಿ. ನಿಮ್ಮ ಅನುಭವ, ಮಾರ್ಗದರ್ಶನ ಪಕ್ಷಕ್ಕೆ ಅಗತ್ಯವಿದೆ. ರಾಜೀನಾಮೆಯನ್ನು ವಾಪಸ್ ಪಡೆಯಿರಿ' ಎಂದು ಸಾ.ರಾ.ಮಹೇಶ್ ಮತ್ತು ಜಿ.ಟಿ.ದೇವೇಗೌಡ ಅವರು ಮನವಿ ಮಾಡಿದರು.
ರೆಕ್ಕೆ ಕತ್ತರಿಸಿದ ಹಳ್ಳಿ ಹಕ್ಕಿಯ ನೋವಿನ ಹಾಡು
'ನನಗೆ ವಿಶ್ರಾಂತಿ ನೀಡಿ. ಆರೋಗ್ಯದ ಹಿತದೃಷ್ಟಿಯಿಂದ ವಿಶ್ರಾಂತಿ ಬೇಕು. ದಯವಿಟ್ಟು ಒತ್ತಾಯ ಮಾಡಬೇಡಿ. ಕೆಲವು ಸಮಯಗಳ ಬಳಿಕ ನಿಮ್ಮ ಬಳಿ ಬರುವೆ' ಎಂದು ಎಚ್.ವಿಶ್ವನಾಥ್ ಅವರು ದೇವೇಗೌಡರಿಗೆ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಮಂಗಳವಾರ ಬೆಳಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ್ದ ಎಚ್.ವಿಶ್ವನಾಥ್ ಅವರು, 'ನನ್ನ ನಿರ್ಧಾರದಿಂದ ವಾಪಸ್ ಬರುವ ಪ್ರಶ್ನೆ ಇಲ್ಲ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜೀನಾಮೆ ವಾಪಸ್ ಪಡೆಯೋಲ್ಲ. ದೇವೇಗೌಡರಿಗೆ ರಾಜೀನಾಮೆ ಅಂಗೀಕಾರ ಮಾಡುವಂತೆ ಮನವಿ ಮಾಡುತ್ತೇನೆ' ಎಂದು ಹೇಳಿದ್ದರು.
ಜೂನ್ 4ರಂದು ಪತ್ರಿಕಾಗೋಷ್ಠಿ ನಡೆಸಿದ್ದ ಎಚ್.ವಿಶ್ವನಾಥ್ ಅವರು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಹಿನ್ನಡೆಯಿಂದಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದರು.
ಆದರೆ, ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ಜೆಡಿಎಸ್ ನಾಯಕರು ರಾಜೀನಾಮೆ ವಾಪಸ್ ಪಡೆಯಬೇಕು. ರಾಜ್ಯಾಧ್ಯಕ್ಷರಾಗಿ ನೀವು ಮುಂದುವರೆಯಬೇಕು ಎಂದು ಎಚ್.ವಿಶ್ವನಾಥ್ ಅವರನ್ನು ಒತ್ತಾಯಿಸಿದ್ದರು.