ಪಠ್ಯ ಪುಸ್ತಕ ವಿವಾದ: ಒಂದೇ ವೇದಿಕೆಯಲ್ಲಿ ದೇವೇಗೌಡ ಮತ್ತು ಡಿಕೆಶಿ ಕಾಣಿಸಿಕೊಂಡಿದ್ದೇಕೆ?
ಬೆಂಗಳೂರು ಜೂ.23: ರಾಜ್ಯದಲ್ಲಿ ಪರಿಷ್ಕೃತ ಪಠ್ಯ ಪುಸ್ತಕ ಹಿಂಪಡೆಯುವಂತೆ ಆಗ್ರಹಿಸಿ ಸ್ವಾತಂತ್ರ್ಯ ಉದ್ಯಾನದಲ್ಲಿ ಜೂ.18ರಂದು ನಡೆದ ಪ್ರತಿಭಟನೆಯಲ್ಲಿ ಒಕ್ಕಲಿಗ ಸಮುದಾಯದ ರಾಜಕೀಯ ಮುಖಂಡರಾದ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಈ ಸಭೆ ಇದೀಗ ರಾಜಕೀಯ ಮತ್ತು ರಾಜಕೀಯೇತರ ಹೊಸ ಚರ್ಚೆಗಳ ಹುಟ್ಟಿಗೆ ಕಾರಣವಾಗಿದೆ.
ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಪರಿಷ್ಕರಿಸಿದ ಪಠ್ಯಪುಸ್ತಕವನ್ನು ಹಿಂಪಡೆದು ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿಗಳು ಪರಿಷ್ಕರಿಸಿದ್ದ ಹಳೆಯ ಪುಸ್ತಕಗಳನ್ನೇ ಮುಂದುವರಿಸುವಂತೆ ಆಗ್ರಹಿಸಿ ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ ಪ್ರತಿಭಟನಾ ಸಮಾವೇಶ ಹಮ್ಮಿಕೊಂಡಿತ್ತು.
ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜೆಡಿಎಸ್ ವರಿಷ್ಠ 90ರ ಆಸುಪಾಸಿನ ಎಚ್.ಡಿ.ದೇವೇಗೌಡ ಮತ್ತು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎನ್ನಲಾಗುತ್ತಿರುವ ಸುಮಾರು 60ರ ಹರೆಯದ ಕಾಂಗ್ರೆಸ್ ನ ಡಿ.ಕೆ.ಶಿವಕುಮಾರ್, ಹೋರಾಟಗಾರರಿಗೆ ನಮ್ಮ ಸದಾ ಬೆಂಬಲ ಇರಲಿದೆ ಎಂದು ಈ ಇಬ್ಬರು ಭಾಷಣದ ಮಾಡಿ ಪರಿಷ್ಕೃತ ಪಠ್ಯ ಹಿಂಪಡೆಯವಂತೆ ಆಗ್ರಹಿಸಿದ್ದರು.
ಒಕ್ಕಲಿಗರ ಬೆಂಬಲ ಸದೃಢ
ಒಕ್ಕಲಿಗ ಮುಖಂಡರ ಭಾಷಣ ವೇದಿಕೆಗೆ ಮಾತ್ರ ಸಿಮೀತವಾಗಿಲ್ಲ. ಒಕ್ಕಲಿಗರ ಮತಗಳು ಜೆಡಿಎಸ್ ಗೆ ಹಾಗೂ ಕಾಂಗ್ರೆಸ್ ಗೆ ಹಂಚಿವೆ. ದಕ್ಷಿಣ ಕರ್ನಾಟಕದಲ್ಲಿ ಒಕ್ಕಲಿಗರ ಬೆಂಬಲ ಈ ಇಬ್ಬರು ನಾಯಕರಿಗೆ ದೃಢವಾಗಿವೆ. ಉತ್ತರ ಕರ್ನಾಟಕದಲ್ಲಿ ಲಿಂಗಾಯತ ಮತಗಳು ಬಿಜೆಪಿ ಪಾಲಾಗಿವೆ. ಅಧಿಕಾರದ ದೃಷ್ಟಿಯಿಂದ ಬಿಜೆಪಿ ಒಕ್ಕಲಿಗರನ್ನು ಮತ್ತು ಕಾಂಗ್ರೆಸ್, ಜೆಡಿಎಸ್ ಹಿಂದುತ್ವ ಮತ್ತು ಲಿಂಗಾಯತ ಸಮುದಾಯದವರನ್ನು ರಾಜಕೀಯವಾಗಿ ಸೆಳೆಯುತ್ತಿದ್ದಾರೆ. ಇದಕ್ಕೆ ಜೆಡಿಎಸ್ ಭದ್ರಕೋಟೆ ಎನ್ನಲಾಗುವ ಹಳೆ ಮೈಸೂರು ಭಾಗದಲ್ಲಿ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿರುವ ಬಿಜೆಪಿ ರಾಜಕೀಯ ಚಟುವಟಿಕೆಗಳೆ ಸಾಕ್ಷಿಯಾಗಿದೆ.
ದೇವೇಗೌಡರ ಸ್ಥಾನ ತುಂಬುವವರು ಯಾರು?
ದೇವೇಗೌಡರನ್ನು ಒಕ್ಕಲಿಗ ಸಮುದಾಯದ ರಾಜಕೀಯ ಆಧಾರವೆಂದೇ ಭಾವಿಸಲಾಗುತ್ತದೆ. ಅವರ ನಂತರ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸ್ಥಾನ ತುಂಬಲಿದ್ದಾರೆ ಎಂದರೂ ಒಕ್ಕಲಿಗರ ಮತ್ತೊಬ್ಬ ಪ್ರಭಾವಿ ಮುಖಂಡ ಡಿ.ಕೆ.ಶಿವಕುಮಾರ್ ಆಸ್ಥಾನ ತುಂಬಲು ಹವಣಿಸುತ್ತಿದ್ದಾರೆ. ಅಲ್ಲದೇ ದೇವೇಗೌಡರ ಪರ್ಯಾಯ ನಾಯಕ ಕುಮಾರಸ್ವಾಮಿ ಎಂದು ಕಂಡು ಬಂದರೂ ದಕ್ಷಿಣ ಕರ್ನಾಟಕದಲ್ಲಿ ಡಿ.ಕೆ.ಶಿವಕುಮಾರ್ ಅವರು ಮುನ್ನೆಲೆಗೆ ಬರಲು ಯತ್ನಿಸುತ್ತಿದ್ದಾರೆ ಎಂಬ ಚರ್ಚೆಗಳು ಆರಂಭವಾಗಿವೆ.
ರಾಜ್ಯದಲ್ಲಿ ಯಾವುದೇ ಪಕ್ಷಗಳು ಅಧಿಕಾರಕ್ಕೆ ಬರಲು ಒಕ್ಕಲಿಗರ ಮತಗಳು ಮತ್ತು ಲಿಂಗಾಯತ ಸಮುದಾಯದ ಮತಗಳು ನಿರ್ಣಾಯಕ ಪಾತ್ರ ವಹಿಸುತ್ತವೆ ಎನ್ನಲಾಗುತ್ತದೆ. ಈ ಮತಗಳ ಹಂಚಿಕೆಯಾಗುತ್ತಿರುವ ಕಾರಣದಿಂದಲೇ 2004, 2008 ಹಾಗೂ 2018 ರಾಜ್ಯ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಲಭ್ಯ ಬಹುಮತ ದೊರೆತಿಲ್ಲ ಎಂದು ಹೇಳಬಹುದು.
ಪರಿಷ್ಕೃತ ಪಠ್ಯದಲ್ಲಿನ ಅಪಮಾನ ಖಂಡನೀಯ
ಅಂದು ಪ್ರತಿಭಟನಾ ಸಭೆಯಲ್ಲಿ ರೋಹಿತ್ ಚಕ್ರತೀರ್ಥ ಅವರಿದ್ದ ಸಮಿತಿ ಪರಿಷ್ಕರಿಸಿದ ಪಠ್ಯದಲ್ಲಿ ನಾಡಿನ ಹಾಗೂ ಒಕ್ಕಲಿಗರ ಐಕಾನ್ ಆದ ರಾಷ್ಟ್ರಕವಿ ಕುವೆಂಪು ಅವರಿಗೆ ಅಪಮಾನ ಮಾಡಲಾಗಿದೆ ಎಂದು ಒಕ್ಕಲಿಗ ಇನ್ನಿತರ ಸಮುದಾಯದ ಮಠಾಧೀಶರು ಖಂಡಿಸಿದ್ದರು. ಶರಣ ಬಸವಣ್ಣ, ದಾರ್ಶನಿಕರಾದ ಕನಕದಾಸ, ಶಿಶುನಾಳ ಷರಿಫ, ಅಕ್ಕಮಹಾದೇವಿ, ದಲಿಯ ಸಾಹಿತಿಗಳನ್ನು ಅವಮಾನಿಸಲಾಗಿದೆ. ಇದನ್ನು ಸಹಿಸುವುದಿಲ್ಲ. ನಾಡಿನ ಪರಂಪರೆ, ಧರ್ಮ, ಭಾಷೆಯನ್ನು ರಕ್ಷಿಸಬೇಕು. ಮಹನೀಯರಿಗೆ ಗೌರವ ಕೊಡಬೇಕು ಎಂದು ಗುಡುಗಿದ್ದರು. ನಂತರ ಪರಿಷ್ಕೃತ ಪಠ್ಯದ ಪ್ರತಿ ಹರಿದು ಆಕ್ರೋಶ ಹೊರಹಾಕಿದ್ದರು.
ಹಳೆ ಪಠ್ಯ ಮುಂದುವರಿಸಲು ಆಗ್ರಹ: ಇದೇ ವೇಳೆ ಮಾತನಾಡಿದ್ದ ದೇವೇಗೌಡರು, ಪರಿಷ್ಕೃತ ಪಠ್ಯದ ವಿರುದ್ಧದ ಹೋರಾಟದಲ್ಲಿ ರಾಜಕೀಯ ಅನಗತ್ಯ. ಹೋರಾಟಗಾರರಿಗೆ ನಮ್ಮ ಬೆಂಬಲ ಸದಾ ಇರಲಿದೆ ಎಂದಿದ್ದರು. ಪ್ರತಿಭಟನಾಕಾರರು ಸರ್ಕಾರಕ್ಕೆ ನೀಡುವಂತೆ ತಮ್ಮ ಹಕ್ಕೋತ್ತಾಯವನ್ನು ದೇವೇಗೌಡರ ಬಳಿ ಸಲ್ಲಿಸಿದ್ದರು. ಈ ಹಕ್ಕೋತ್ತಾಯದ ಜತೆಗೆ ದೇವೇಗೌಡರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದರು. ನಾಡಗೀತೆಗೆ ಅಪಮಾನ ಮಾಡಿದವರನ್ನು ಪಠ್ಯ ಪರಿಷ್ಕರಣಾ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದೇ ಸರ್ಕಾರದ ಮೊದಲ ತಪ್ಪು. ಪರಿಷ್ಕರಣೆಯಲ್ಲಿ ರಾಷ್ಟ್ರಕವಿ ಕುವೆಂಪು ಅವರ ಅಧ್ಯಾಯ ತೆಗೆದು ಹಾಕಲಾಗಿದೆ. ಕುವೆಂಪು ಸೇರಿದಂತೆ ಅನೇಕ ಮಹನೀಯರಿಗೆ ಅಪಮಾನ ಮಾಡಲಾಗಿದೆ. ಪರಿಷ್ಕೃತ ಪಠ್ಯದಲ್ಲಿ ಸಾಕಷ್ಟು ತಪ್ಪುಗಳಿವೆ, ಹೀಗಾಗಿ ಸರ್ಕಾರ ಹಳೆಯ ಪಠ್ಯವನ್ನೇ ಮುಂದುವರಿಸಬೇಕೆಂದು ಪತ್ರದಲ್ಲಿ ಒತ್ತಾಯಿಸಿದ್ದರು.
ಒಕ್ಕಲಿಗರನ್ನು ಒಗ್ಗೂಡಿಸಿದ ಪ್ರತಿಭಟನೆ
ಪರಿಷ್ಕೃತ ಪಠ್ಯ ವಿರುದ್ಧ ಜೂ.18ರ ಪ್ರತಿಭಟನಾ ಸಮಾವೇಶ ಒಕ್ಕಲಿಗ ಸಮುದಾಯ ಹಾಗೂ ಒಕ್ಕಲಿಗ ಮುಖಂಡರನ್ನು ಮತ್ತಷ್ಟು ಹತ್ತಿರವಾಗಿಸಿದೆ. ವರ್ಷಗಳ ಹಿಂದೆ ಕಾಂಗ್ರೆಸ್ ನಲ್ಲಿದ್ದ ಮಾಜಿ ಮುಖ್ಯಮಂತ್ರಿ ಎಸ್. ಎಂ.ಕೃಷ್ಣ ದೇವೇಗೌಡರ ಸ್ಥಾನ ತುಂಬಲು ಹವಣಿಸುತ್ತಿರುವ ಡಿ.ಕೆ.ಶಿವಕುಮಾರ್ ಅವರಿಗೆ ಸವಾಲಾಗಿದ್ದರು. ಇದೀಗ ಆ ಸಮಸ್ಯೆ ದೂರಾಗಿದೆ ಎನ್ನಲಾಗುತ್ತಿದೆ.
ಡಿಕೆಶಿ-ದೇವೇಗೌಡ ಮುಖಾಮುಖಿ ಆಗಿಲ್ಲ!
ಯಾವುದೇ ಚುನಾವಣೆಗಳಲ್ಲಿ ಎಚ್.ಡಿ.ದೇವೇಗೌಡ ಅವರನ್ನು ಡಿ.ಕೆ.ಶಿವಕುಮಾರ್ ಸೋಲಿಸಿಲ್ಲವಾದರೂ 2004ರ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ವಿರುದ್ಧ ಪ್ರತಿಸ್ಪರ್ಧಿಯನ್ನು ಬೆಂಬಲಿಸಿದ್ದರು. ನಂತರ ರಾಮನಗರ, ಹಾಸನದಲ್ಲಿ ಜೆಡಿಎಸ್ ಪ್ರಬಲವಾದರೆ, ಕನಕಪುರ, ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಡಿ.ಕೆ.ಶಿವಕುಮಾರ್ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡರು. ಜೆಡಿಎಸ್ ಬಲಾಡ್ಯವಿರುವ ಮಂಡ್ಯ, ಮೈಸೂರು ಭಾಗದಲ್ಲಿ ಒಕ್ಕಲಿಗ ನಾಯಕನಾಗಿಯೇ ಡಿ.ಕೆ.ಶಿವಕುಮಾರ್ ಹಿಡಿತ ಸಾಧಿಸುವ ಪ್ರಯತ್ನಲ್ಲೂ ಇದ್ದಾರೆ.