ಎಸಿಬಿಗೆ ತನಿಖೆಯ ಎಬಿಸಿ ಗೊತ್ತಿಲ್ಲವೇ? ಹೈಕೋರ್ಟ್ ತಪರಾಕಿ
ಬೆಂಗಳೂರು,ಜು.28. ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪ ಪ್ರಕರಣದಲ್ಲಿ ತನಿಖೆಯಲ್ಲಿ ನಿಯಮಗಳನ್ನು ಪಾಲನೆ ಮಾಡದೆ ಲೋಪವೆಸಗಿದ್ದ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಗೆ ತನಿಖೆಯ ಎಬಿಸಿ ಗೊತ್ತಿಲ್ಲವೇ ಎಂದು ಹೈಕೋರ್ಟ ತಪರಾಕಿ ಹಾಕಿದೆ.
ತನಿಖೆಯಲ್ಲಿ ಕನಿಷ್ಠ ನಿಯಮಗಳನ್ನು ಪಾಲನೆ ಮಾಡದೆ. ಕಾನೂನಿನ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಇಂತಹ ಲೋಪಗಳನ್ನು ನೋಡಿ ಕಣ್ಮುಚ್ಚಿ ಕೂರಲಾಗುವುದಿಲ್ಲ ಎಂದು ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಕೆಪಿಟಿಸಿಎಲ್ ಇಇ ಕುಮಾರ್ ನಾಯ್ಕ್ ವಿರುದ್ಧದ ಆದಾಯ ಮೀರಿದ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿ, ಎಸಿಬಿ ತನಿಖಾ ವೈಖರಿಯನ್ನು ಕಟುವಾಗಿ ಟೀಕಿಸಿದೆ.
ಕೋರ್ಟ್ ಏನು ಹೇಳಿದೆ?
ತರಾತುರಿಯಲ್ಲಿ ಆದಾಯದ ಮೂಲ ವರದಿಯನ್ನು ತಯಾರಿಸಲಾಗಿದೆ. ಒಂದೇ ದಿನ ಅದು 24 ಗಂಟೆಗಳಲ್ಲೇ ಮೂಲ ವರದಿ ಹಾಗೂ ಎಫ್ಐಆರ್ ಎರಡನ್ನೂ ಸಿದ್ದಪಡಿಸಲಾಗಿದೆ. ಅಧಿಕಾರಿಯ ಸೇವಾವಧಿಯ ವಿವರವನ್ನೂ ನಮೂದಿಸಿಲ್ಲ. ಎಫ್ಐಆರ್ಗೆ ಮೊದಲು ಆ ಅಧಿಕಾರಿಯ ವಾರ್ಷಿಕ ಸಂಬಳ ಎಷ್ಟಿದೆ ಎಂಬುದನ್ನೂ ಪರಿಶೀಲನೆ ನಡೆಸಿಲ್ಲ. ಆಸ್ತಿಯ ವಾರ್ಷಿಕ ವರದಿಯನ್ನೂ ಪರಾಮರ್ಶಿಸಿಲ್ಲ ಎಂದು ಜಾಡಿಸಿದೆ.
ಅಲ್ಲದೆ, ಕಾನೂನಿನ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಇಂತಹ ಲೋಪವನ್ನು ನೋಡಿ ಕಣ್ಮುಚ್ಚಿ ಕೂರಲಾಗುವುದಿಲ್ಲ.ಇಂದೆಥಾ ಸಂಸ್ಥೆ ಎಂದು ಕಟು ಟೀಕೆ ಮಾಡಿದೆ.
ಅರ್ಜಿದಾರರ ಪರ ವಾದಿಸಿದ ವಕೀಲ ಕೆ.ಸತೀಶ್, "ಕಾನೂನು ಬಾಹಿರವಾಗಿ ಎಸಿಬಿ ತನಿಖಾ ಪ್ರಕ್ರಿಯೆ ನಡೆಸಿದೆ. ಆದಾಯದ ಮೂಲ ವರದಿಯಲ್ಲಿ ಆದಾಯಕ್ಕೂ ಮೀರಿದ ಆಸ್ತಿ ಶೂನ್ಯ ಎಂದಿದ್ದರೂ ಕೇಸ್ ಹೂಡಲಾಗಿದೆ. ಎಫ್ಐಆರ್ ಗೂ ಮೊದಲು ಎಸಿಬಿ ಪ್ರಾಥಮಿಕ ತನಿಖೆಯನ್ನೂ ನಡೆಸಿಲ್ಲ, ಎಸಿಬಿ ದಾಳಿ ನಡೆಸಿ ಮಾನಸಿಕ ಹಿಂಸೆ ನೀಡಿದೆ. ನಿಯಮಗಳನ್ನು ಪಾಲನೆ ಮಾಡಿಲ್ಲ. ಹಾಗಾಗಿ ಇಡೀ ಪ್ರಕರಣ ರದ್ದುಗೊಳಿಸಬೇಕು," ಎಂದು ಕೋರಿದ್ದರು. ಅವರ ವಾದವನ್ನು ಪುರಸ್ಕರಿಸಿದ ಹೈಕೋರ್ಟ್ ಎಸಿಬಿ ದಾಖಲಿಸಿದ್ದ
ಪ್ರಕರಣ ರದ್ದುಪಡಿಸಿ, ಎಸಿಬಿ ತನಿಖಾ ವೈಖರಿಯನ್ನು ಕಟು ಶಬ್ಧಗಳಲ್ಲಿ ತರಾಟೆಗೆ ತೆಗೆದುಕೊಂಡಿದೆ.
ಪ್ರಕರಣದ ಹಿನ್ನೆಲೆ :
ಆರ್ಟಿಒ ಹೆಚ್ಚುವರಿ ಆಯುಕ್ತ ಜ್ಞಾನೇಂದ್ರ ಕುಮಾರ್ ವಿರುದ್ಧ 2022ರ ಮಾ. 15ರಂದು ಆದಾಯಕ್ಕೂ ಮೀರಿದ ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣ ಬಂದಿತ್ತು. ಅದನ್ನು ಆಧರಿಸಿ ಎಸಿಬಿ ದಾಳಿ ನಡೆಸಿದ ವೇಳೆ ಮುನಾವರ್ ಪಾಷಾ ಎಂಬುವರ ಮನೆಯನ್ನೂ ಶೋಧಿಸಲಾಗಿತ್ತು. ಆ ವೇಳೆ ಲಭ್ಯವಾದ ಮಾಹಿತಿ ಆಧರಿಸಿ ಕೆಪಿಟಿಸಿಎಲ್ ಎಕ್ಸಿಕ್ಯೂಟಿವ್
ಇಂಜಿನಿಯರ್ ಕೆ.ಆರ್.ಕುಮಾರ್ ನಾಯ್ಕ್ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಕೇಸ್ ದಾಖಲಿಸಲಾಗಿತ್ತು. ಆದಾಯ ಮೀರಿ ಆಸ್ತಿ ಗಳಿಕೆ ಕೇಸ್ ಗಳಲ್ಲಿ ಮೊದಲು ಮೂಲ ವರದಿ (ಸೋರ್ಸ್ ರಿಪೋರ್ಟ್) ಸಿದ್ಧಪಡಿಸಬೇಕು. ನಂತರ ಅದನ್ನು ಆಧರಿಸಿ ಎಫ್ಐಆರ್ ದಾಖಲಿಸಬೇಕು.
ಆದರೆ, ಎಸಿಬಿ ಸಮರ್ಪಕ ಮೂಲ ವರದಿ ತಯಾರಿಸದೇ ಎಫ್ಐಆರ್ ದಾಖಲಿಸಿದ್ದರು. ಒಂದೇ ದಿನದಲ್ಲಿ ಮೂಲ ವರದಿ ಹಾಗೂ ಎಫ್ಐಆರ್ ದಾಖಲಿಸಿರುವ ಕ್ರಮ ಕಾನೂನುಬಾಹಿರವೆಂದು ಕೆ.ಆರ್.ಕುಮಾರ್ ನಾಯ್ಕ್ ಹೈಕೋರ್ಟ್ ಮೆಟ್ಟಿಲೇರಿದ್ದರು.