ಅಕ್ರಮ ಅಸ್ತಿ ಗಳಿಕೆ :ಶಾಸಕ ಸೋಮಣ್ಣ ವಿರುದ್ಧದ ತನಿಖೆಗೆ ತಡೆ
ಬೆಂಗಳೂರು, ಅಕ್ಟೋಬರ್ 07: ಮಾಜಿ ವಸತಿ ಸಚಿವ, ಹಾಲಿ ಶಾಸಕ ವಿ ಸೋಮಣ್ಣ ಅವರ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತನಿಖೆಗೆ ಹೈಕೋರ್ಟ್ ಗುರುವಾರ ತಡೆ ನೀಡಿದೆ.
ಈ ಹಿಂದೆ ಈ ಪ್ರಕರಣಕ್ಕೆ ಕುರಿತಂತೆ ತನಿಖೆ ನಡೆಸಿ ಡಿಸೆಂಬರ್ 17ರೊಳಗೆ ವರದಿ ಸಲ್ಲಿಸುವಂತೆ ಎಸಿಬಿಗೆ ಲೋಕಾಯುಕ್ತ ಕೋರ್ಟ್ ಆದೇಶಿಸಿತ್ತು.[ಅಕ್ರಮ ಆಸ್ತಿ ಗಳಿಕೆ: ವಿ ಸೋಮಣ್ಣ ಮೇಲಿರುವ ಆರೋಪಗಳು]
ಮೂಡಲಪಾಳ್ಯದ ರಾಮಕೃಷ್ಣ ಎಂಬುವರು ಸಲ್ಲಿಸಿದ ಪ್ರಕರಣ ರದ್ದು ಕೋರಿ ಸೋಮಣ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಪ್ರಕರಣದ ತನಿಖೆ ಹಾಗೂ ವಿಚಾರಣೆಗೆ ತಡೆ ನೀಡಿದೆ. ಜೊತೆಗೆ ದೂರುದಾರ ರಾಮಕೃಷ್ಣ ಮತ್ತು ಎಸಿಬಿಗೆ ನೋಟಿಸ್ ಜಾರಿ ಮಾಡಿದೆ.
ಚುನಾವಣಾ ಆಯೋಗ ಹಾಗೂ ಲೋಕಾಯುಕ್ತಕ್ಕೆ ಈ ಹಿಂದೆ ಸಲ್ಲಿಸಲಾದ ಆಸ್ತಿ ವಿವರಕ್ಕೂ ಇಂದಿನ ಆಸ್ತಿ ವಿವರಕ್ಕೂ ಶೇ205 ರಷ್ಟು ಏರಿಕೆ ಕಂಡು ಬಂದಿದೆ ಎಂದು ಕರ್ನಾಟಕ ಚುನಾವಣಾ ಕಾವಲು ನೀಡಿರುವ ಮಾಹಿತಿಯಂತೆ ಆರೋಪ ಹೊರೆಸಲಾಗಿತ್ತು.
ಕರ್ನಾಟಕ ಚುನಾವಣಾ ಕಾವಲು (ಕೆಇಡಬ್ಲ್ಯೂ) ಸಂಸ್ಥೆ 2004 ರಿಂದ 2008 ರ ತನಕದ ಅದಾಯ ಘೋಷಣೆ ಮಾಡಿದ ಅಂದಿನ ಶಾಸಕರ ಪಟ್ಟಿಯಲ್ಲಿ ವಿ. ಸೋಮಣ್ಣ ಅವರ ಹೆಸರು ಕೂಡಾ ಇತ್ತು. ಚರಾಸ್ತಿ 9.16 ಕೋಟಿ ಹಾಗೂ ಸ್ಥಿರಾಸ್ತಿ 1.83 ಕೋಟಿ ರು ಘೋಷಿತ ಆಸ್ತಿಯಾಗಿದೆ. ಈಗ ಈ ಮೊತ್ತ ಶೇ 205ರಷ್ಟು ಏರಿಕೆಯಾಗಿರುವುದು ಕಂಡು ಬಂದಿತ್ತು.