ಕೇರಳ ಗಡಿ ಸಂಚಾರ ನಿರ್ಬಂಧ: ಕೇಂದ್ರ ಸರ್ಕಾರಕ್ಕೂ ಹೈಕೋರ್ಟ್ ನೋಟಿಸ್
ಬೆಂಗಳೂರು, ಫೆ.26: ಕೋವಿಡ್ 19 ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲ್ಲೆಯಲ್ಲಿ ಕೇರಳ-ಕರ್ನಾಟಕ ಗಡಿಯಲ್ಲಿನ ಸಂಚಾರ ನಿರ್ಬಂಧ ವಿಧಿಸಿರುವುದನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಲಾಗಿದೆ. ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ, ಪ್ರತಿಕ್ರಿಯೆ ನೀಡುವಂತೆ ಆದೇಶಿಸಿದೆ.
ಕೇಂದ್ರ ಸರ್ಕಾರದ ಕೊವಿಡ್ 19 ಮಾರ್ಗಸೂಚಿ ಮತ್ತು ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆಯಲ್ಲಿ ಗಡಿ ಪ್ರದೇಶಗಳ ಜನರ ಓಡಾಟಕ್ಕೆ ನಿರ್ಬಂಧ ವಿಧಿಸುವುದಿಲ್ಲ. ಆದರೆ, ಆರ್ಟಿ-ಪಿಸಿಆರ್ ನೆಗೆಟಿವ್ ವರದಿ ಸಲ್ಲಿಸುವಂತೆ ನಿಯಮ ವಿಧಿಸಲಾಗಿದೆ ಹೀಗಾಗಿ, ಕರ್ನಾಟಕ ಸರ್ಕಾರದ ಆದೇಶ ವಜಾಗೊಳಿಸುವಂತೆ ಕೋರಲಾಗಿದೆ. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಮಾರ್ಚ್ 5ಕ್ಕೆ ಮುಂದೂಡಿದೆ.
ಕೇರಳ ಗಡಿ ಬಂದ್; ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
ಕರ್ನಾಟಕ- ಕೇರಳ ಗಡಿಯಲ್ಲಿರುವ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯಲ್ಲಿ ಜನತೆ ಪರವಾಗಿ ವಕೀಲ ಬಿ ಸುಬ್ಬಯ್ಯ ರೈ ಅವರು ಪಿಐಎಲ್ ಹಾಕಿದ್ದರು. ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ವಿಭಾಗೀಯ ಪೀಠವು ಅರ್ಜಿ ವಿಚಾರಣೆ ನಡೆಸಿದೆ.
ಎರಡು ರಾಜ್ಯದ ಜನತೆ ವ್ಯಾಪಾರ-ವಾಣಿಜ್ಯ ಚಟುವಟಿಕೆಗಳು, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕಾಗಿ ಪರಸ್ಪರ ಅವಲಂಬಿಸಿದ್ದಾರೆ. ಶೇ. 35 ರಿಂದ 40ರಷ್ಟು ಜನರು ದಿನನಿತ್ಯ ಗಡಿ ದಾಟಿ ಸಂಚರಿಸುತ್ತಿದ್ದಾರೆ. ಕೇರಳ-ಕರ್ನಾಟಕ ಗಡಿಯ ತಲಪ್ಪಾಡಿ, ನೆಟ್ಟಣಗೆ, ಮುದ್ನೂರು, ಮೊನಲಾ, ಸರಡಕ್ಕ ಮತ್ತು ಜಾಲ್ಸುರು ಪ್ರದೇಶಗಳಲ್ಲಿನ ಆರ್ಟಿ-ಪಿಸಿಆರ್ ನೆಗೆಟಿವ್ ವರದಿಗಳನ್ನು ಹೊಂದಿರುವ ಜನರ ಓಡಾಟಕ್ಕೆ ಅನುಮತಿ ನೀಡಲಾಗಿದೆ. ಉಳಿದ ಎಲ್ಲಾ ಚೆಕ್ಪೋಸ್ಟ್ಗಳನ್ನು ಬಂದ್ ಮಾಡಲಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಕರ್ನಾಟಕ ಸರ್ಕಾರದ ಆದೇಶದಂತೆ ಫೆಬ್ರವರಿ 18ರಂದು ಕಾಸರಗೋಡಿನಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಓಡಾಡುವವರಿಗೆ ನಿರ್ಬಂಧ ವಿಧಿಸಲಾಗಿದೆ. ಇದು ಆಕ್ಷೇಪಾರ್ಹವಾಗಿದ್ದು, ಕೊವಿಡ್ 19 ಮಾರ್ಗಸೂಚಿಗೂ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.