ಡೀಮ್ಡ್ ಫಾರೆಸ್ಟ್ ವ್ಯಾಖ್ಯಾನ ಒಪ್ಪಲಾಗದೆಂದು ಹೈಕೋರ್ಟ್ ಆದೇಶ
ಬೆಂಗಳೂರು, ಜೂ.26. ಅರಣ್ಯ ಸಂರಕ್ಷಣಾ ಕಾಯಿದೆ 1980ರಲ್ಲಿ 'ಡೀಮ್ಡ್ ಫಾರೆಸ್ಟ್' ಅಂಶವೇ ಪ್ರಸ್ತಾವವಾಗಿಲ್ಲ, ಹಾಗಾಗಿ ಆ ವ್ಯಾಖ್ಯಾನವನ್ನು ಒಪ್ಪಲಾಗದು ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಅಲ್ಲದೆ, ಹಿಂದಿನ ವಿಭಾಗೀಯಪೀಠದ ಆದೇಶದಂತೆ 'ಅರಣ್ಯ' ಮತ್ತು 'ಅರಣ್ಯ ಭೂಮಿ' ಎಂಬುದು ಕಾಯಿದೆಯಲ್ಲಿ ಉಲ್ಲೇಖವಿದೆ, ಆದರೆ ಡೀಮ್ಡ್ ಅರಣ್ಯ ಎಂಬ ಉಲ್ಲೇಖ ಕಾಯಿದೆಯಲ್ಲಿಲ್ಲ, ಕಲ್ಪನೆಯೇ ಇಲ್ಲ,ಹಾಗಾಗಿ ಅದನ್ನು ಅಂಗೀಕರಿಸಲು ಅಥವಾ ಮಾನ್ಯತೆ ನೀಡಲು ಸಾಧ್ಯವಿಲ್ಲವೆಂದು ವಿಭಾಗೀಯಪೀಠ ಆದೇಶಿಸಿದೆ.
ಚಿಕ್ಕಮಗಳೂರು ಜಿಲ್ಲೆಯ ಅರೆನೂರು ಗ್ರಾಮದ ಡಿ.ಎಂ.ದೇವೇಗೌಡ ಸಲ್ಲಿಸಿದ್ದ ಅರ್ಜಿಯನ್ನು ಅಲಿಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾ. ಅಶೋಕ್ ಕಿಣಗಿ ಅವರಿದ್ದ ವಿಭಾಗೀಯಪೀಠ ಈ ಆದೇಶವನ್ನು ನೀಡಿದೆ.
ಹೈಕೋರ್ಟ್ ಪುನರುಚ್ಚಾರ:
ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಪೀಠ, ಪ್ರಕರಣದಲ್ಲಿ ಅರ್ಜಿದಾರರ ಪರ ವಕೀಲರು ಮತ್ತು ಹೆಚ್ಚುವರಿ ಸರಕಾರಿ ವಕೀಲರು,ಇಬ್ಬರೂ ಧನಂಜಯ ಪ್ರಕರಣದಲ್ಲಿ ಹೈಕೋರ್ಟ್ ಈಗಾಗಲೇ ನೀಡಿರುವ ತೀರ್ಪಿಗೆ ಇದು ಒಳಪಡುತ್ತದೆಂದು ಹೇಳಿದ್ದಾರೆ. ಹಾಗಾಗಿ ಅರ್ಜಿಯನ್ನು ಪುರಸ್ಕರಿಸುತ್ತಿದ್ದೇವೆ ಎಂದು ಆದೇಶಿಸಿದೆ.
ಹೈಕೋರ್ಟ್ ವಿಭಾಗೀಯಪೀಠ 2019ರ ಜೂ. 12ರಂದು ಧನಂಜಯ ವರ್ಸಸ್ ಕರ್ನಾಟಕ ರಾಜ್ಯ ಪ್ರಕರಣದಲ್ಲಿ ಡೀಮ್ಡ್ ಫಾರೆಸ್ಟ್ ಕುರಿತಂತೆ ಸ್ಪಷ್ಟ ತೀರ್ಪು ನೀಡಿದೆ. ಹಾಗಾಗಿ ಮತ್ತೆ ಆ ವಿಚಾರದಲ್ಲಿ ನ್ಯಾಯಾಲಯ ವ್ಯಾಖ್ಯಾನ ನೀಡುವ ಅಗತ್ಯವಿಲ್ಲ. ಡೀಮ್ಡ್ ಫಾರೆಸ್ಟ್ ಹೆಸರಿನಲ್ಲಿ ಸರ್ಕಾರ ಅರಣ್ಯ ಪ್ರದೇಶಗಳಲ್ಲಿ ಇತರೆ ಚಟುವಟಿಕೆಗಳಿಗೆ ಅವಕಾಶ ನೀಡುವುದಕ್ಕೆ ಕಡಿವಾಣ ಬೀಳಲಿದೆ.
ಅರ್ಜಿದಾರರು ಕಲ್ಲು ಗಣಿಗಾರಿಕೆ ನಡೆಸಲು ಪರವಾನಗಿ ಕೋರಿ ಸಲ್ಲಿಸಿರುವ ಅರ್ಜಿಯನ್ನು ಎರಡು ತಿಂಗಳಲ್ಲಿ ಹೊಸದಾಗಿ ಪರಿಶೀಲಿಸುವಂತೆ ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ. ಒಂದು ವೇಳೆ ಸಕ್ಷಮ ಪ್ರಾಧಿಕಾರಕ್ಕೆ ಅರ್ಜಿದಾರರು ಕಲ್ಲುಗಣಿಗಾರಿಕೆಗೆ ಪರವಾನಗಿ ಕೋರಿರುವ ಪ್ರದೇಶ ಅರಣ್ಯ ಅಥವಾ ಅರಣ್ಯ ಪ್ರದೇಶ ಎಂದು ಕಂಡು ಬಂದರೆ, ಆಗ ಅರಣ್ಯ ಸಂರಕ್ಷಣಾ ಕಾಯಿದೆ 1980 ಸೆಕ್ಷನ್ 2ರ ಪ್ರಕಾರ ಕಂದ್ರ ಸರಕಾರದಿಂದ ಒಪ್ಪಿಗೆ ಪಡೆಯುವವರೆಗೆ ಪರವಾನಗಿ ಅಥವಾ ಗುತ್ತಿಗೆ ನೀಡಲಾಗದು ಎಂದೂ ಕೋರ್ಟ್ ಹೇಳಿದೆ.
ಸುಪ್ರೀಂಕೋರ್ಟ್ 1997ರಲ್ಲಿ'ಟಿ.ಎನ್.ಗೋದಾವರ್ಮನ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ'ಪ್ರಕರಣದಲ್ಲಿ ನೀಡಿರುವ ತೀರ್ಪಿನಂತೆ ಅರ್ಜಿದಾರರು ಕೋರಿರುವ ಭೂಮಿ ಅರಣ್ಯವೇ ಅಥವಾ ಅರಣ್ಯ ಪ್ರದೇಶವೇ ಎಂಬುದನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದೂ ಆದೇಶಿಸಿದೆ.
ಅರ್ಜಿದಾರರ ವಾದ:
ಅಲ್ಲದೆ, ಅರ್ಜಿದಾರರ ಅರ್ಜಿಯನ್ನು ಮರುಪರಿಶೀಲಿಸಿ ಯಾವುದೇ ನಿರ್ಧಾರ ಕೈಗೊಂಡರೂ ಸಹ ಅದನ್ನು ಅರ್ಜಿದಾರರ ಗಮನಕ್ಕೆ ತರಬೇಕು ಎಂದು ನ್ಯಾಯಾಲಯ ಸೂಚನೆ ನೀಡಿದೆ.
ಅರ್ಜಿದಾರರು ತಮ್ಮ ಭೂಮಿಯಲ್ಲಿ ಕಲ್ಲು ಗಣಿಗಾರಿಕೆಗೆ ಪರವಾನಗಿ ಕೋರಿದ್ದರು. ಆದರೆ ಚಿಕ್ಕಮಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ, ಪರವಾನಗಿ ನೀಡಲಾಗದು, ಅದು ಡೀಮ್ಡ್ ಅರಣ್ಯವಲ್ಲ ಎಂದು ಹಿಂಬರಹ ನೀಡಿದ್ದರು. ಅರ್ಜಿದಾರರು,ಅದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದರು.