ಬೆಂಗಳೂರಿನ ರಸ್ತೆಗಳನ್ನು ಸರಿಪಡಿಸಬೇಕು ಎಂದರೆ ಪ್ರಧಾನಿ ಇಲ್ಲವೇ ರಾಷ್ಟ್ರಪತಿ ಬರಬೇಕಾ?
ಬೆಂಗಳೂರು, ಜೂ.23. ಬೆಂಗಳೂರಿನಲ್ಲಿ ರಸ್ತೆ ಸರಿ ಮಾಡೋಕೆ, ಸೌಕರ್ಯ ಅಭಿವೃದ್ಧಿಪಡಿಸೋಕೆ ಪ್ರಧಾನಿ, ಇಲ್ಲ ರಾಷ್ಟ್ರಪತಿ ಬರಬೇಕಾ ಎಂದು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಕೋರ್ಟ್ ಆದೇಶವಿದ್ದರೂ ನಗರದ ಬಡಾವಣೆಗೆ ಮೂಲಸೌಕರ್ಯ ಕಲ್ಪಿಸದ ಸರ್ಕಾರ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವನ್ನು (ಬಿಡಿಎ) ವಿರುದ್ಧ ನ್ಯಾಯಾಲಯ ಹರಿಹಾಯ್ದಿದೆ.
ಪಿ.ಮಂಜುಳಾ ಮತ್ತು ಶಾರದಮ್ಮ ಎಂಬುವರು ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಕೆಲ ನಿವೇಶನಗಳಿಗೆ ಒಳಚರಂಡಿ, ಕುಡಿಯುವ ನೀರಿನ ಸಂಪರ್ಕ ಮತ್ತು ರಸ್ತೆ ಸೌಲಭ್ಯ ಕಲ್ಪಿಸದ ಬಿಡಿಎ ಕ್ರಮದ ವಿರುದ್ಧ ದಾಖಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ಕುರಿತು ಹಿರಿಯ ನ್ಯಾಯಮೂರ್ತಿ ಬಿ.ವೀರಪ್ಪ ನೇತೃತ್ವದ ವಿಭಾಗೀಯಪೀಠ ವಿಚಾರಣೆ ನಡೆಸಿತು.
"ಪ್ರಧಾನಮಂತ್ರಿ ಮತ್ತು ರಾಷ್ಟ್ರಪತಿ ಆಗಾಗ್ಗೆ ಭೇಟಿ ನೀಡಿದರೆ ನಗರದ ರಸ್ತೆಗಳು ಉತ್ತಮಗೊಳ್ಳಬಹುದು. ಮೊನ್ನೆ ಪ್ರಧಾನಿ ಆಗಮಿಸಿದ್ದ ಹಿನ್ನೆಲೆಯಲ್ಲಿ 23 ಕೋಟಿ ಖರ್ಚು ಮಾಡಿ ನಗರದಲ್ಲಿ ಗುಂಡಿ ಮುಚ್ಚಲಾಗಿದೆ. ಪ್ರಧಾನಿ ನಗರಕ್ಕೆ ಭೇಟಿ ನೀಡಿದ ಪ್ರತಿ ಬಾರಿ ಬೇರೆ ಬೇರೆ ಮಾರ್ಗದಲ್ಲಿ ಸಂಚರಿಸಬೇಕು. ಆಗ ಅವರನ್ನು ಮೆಚ್ಚಿಸುವ ಹಾಳಾದ ರಸ್ತೆಗಳನ್ನು ಅಧಿಕಾರಿಗಳು ಸರಿಪಡಿಸುತ್ತಾರೆ ಅಲ್ಲವೇ'' ಎಂದು ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡಿತು.
ವಿಚಾರಣೆ ಬಳಿಕ ನ್ಯಾಯಾಲಯ ಎರಡು ವಾರದಲ್ಲಿ ಹೈಕೋರ್ಟ್ ಆದೇಶದಂತೆ ವಿಶ್ವೇಶ್ವರಯ್ಯ ಬಡಾವಣೆ ನಿವೇಶನಗಳಿಗೆ ಮೂಲ ಸೌಕರ್ಯ ಕಲ್ಪಿಸಬೇಕೆಂದು ನಿರ್ದೇಶಿಸಿ ವಿಚಾರಣೆ ಮುಂದೂಡಿತು.
ಪ್ರಕರಣದ ವಿವರ:
ಬಿಡಿಎ ಅಭಿವೃದ್ಧಿಪಡಿಸಿರುವ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಮಂಜುಳ ಮತ್ತು ಶಾರದಮ್ಮ 2156 ಮತ್ತು 2157 ಸಂಖ್ಯೆಯ ನಿವೇಶನಗಳನ್ನು ಹೊಂದಿದ್ದಾರೆ. ಕುಡಿಯುವ ನೀರು, ಒಳಚರಂಡಿ ಸಂಪರ್ಕ ಮತ್ತು ರಸ್ತೆ ಸೌಲಭ್ಯವನ್ನು ನಿವೇಶನ ಸಂಖ್ಯೆ 2153 ರವರೆಗೆ ಮಾತ್ರ ಕಲ್ಪಿಸಲಾಗಿದೆ. ಆದರೆ ಉಳಿದ ನಿವೇಶನಗಳಿಗೆ ಯಾವ ಸೌಲಭ್ಯ ಕಲ್ಪಿಸಿಲ್ಲ. ಇದರಿಂದ ತಾವು ಒಳಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ ಬಳಕೆ ಮಾಡಿಕೊಳ್ಳಲು ಆಗುತ್ತಿಲ್ಲ ಎಂದು ಆಕ್ಷೇಪಿಸಿ 2020ರಲ್ಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಆಗ ಬಿಡಿಎ, ಆದಷ್ಟು ಶೀಘ್ರ ಬಡಾವಣೆಯಲ್ಲಿ ಅರ್ಜಿದಾರರ ನಿವೇಶನಗಳಿಗೆ ಒಳಚರಂಡಿ, ಕುಡಿಯುವ ನೀರು ಸಂಪರ್ಕ ಮತ್ತು ರಸ್ತೆ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೈಕೋರ್ಟ್ಗೆ ಭರವಸೆ ನೀಡಿತ್ತು. ಅದನ್ನು ಪರಿಗಣಿಸಿದ್ದ ಹೈಕೋರ್ಟ್, ಎರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಬಿಡಿಎಗೆ 2020ರ ಅ.21ರಂದು ಆದೇಶಿಸಿತ್ತು. ಈ ಆದೇಶ ಪಾಲಿಸಿಲ್ಲ ಎಂಬುದಾಗಿ ಆಕ್ಷೇಪಿಸಿ ಅರ್ಜಿದಾರರು 2021ರ ಏಪ್ರಿಲ್ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಹೂಡಿದ್ದರು.
Recommended Video